ಭಾನುವಾರ, ನವೆಂಬರ್ 4, 2012

ಮೊದಲ ಓದು ಕುರಿತ ಪುಸ್ತಿಕೆ ಎದುರು ಕುಳಿತು



ಕುಂದಾಪುರದ ತಿಂಗಳ ಬೆಳಕು ಪ್ರಕಾಶನ ಇದೇ ವರ್ಷ  ಹರಿಯಪ್ಪ ಪೇಜಾವರರ ನೆನದದ್ದು ಹೆಚ್ಚಾಗಿ ಕವನ ಸಂಕಲನ ಕುರಿತು ಬಂದ ಪತ್ರಗಳು ಮತ್ತು ಪತ್ರಿಕಾ ವಿಮರ್ಶೆಗಳನ್ನು ಸಂಗ್ರಹಿಸಿ `ಪೇಜಾವರ ಕವಿತೆಗಳು ಪ್ರತಿಕ್ರಿಯೆ' ಎಂಬ ಹೆಸರಿನಲ್ಲಿ ಪ್ರಕಟ ಪಡಿಸಿದೆ. ಈ ನಲವತ್ತು ಪುಟಗಳ ಪುಸ್ತಿಕೆಯ ಬೆಲೆ ಇಪ್ಪತ್ತು ರೂಪಾಯಿಗಳಿವೆ. ಬೆನ್ನಿನ ಪುಟದಲ್ಲಿ ಸ.ರಘುನಾಥ, ಮುದ್ದು ಮೂಡುಬೆಳ್ಳೆ, ಅರವಿಂದ ನಾಡಕರ್ಣಿ, ಡಾ. ರಾಮಚಂದ್ರ ದೇವ, ಕೆ.ಸತ್ಯನಾರಾಯಣ, ಆರ್ಕೆ ಮಣಿಪಾಲ, ಡಾ.ರಹಮತ್ ತರೀಕೆರೆ, ಜಿ. ರಾಜೀವ, ಆನಂದ ಝಂಜರವಾಡ, ಕಿರಣ, ಎಚ್.ಎಸ್.ವೆಂಕಟೇಶಮೂರ್ತಿ, ಜಾನಕಿ, ಆಲ್ಮನೆ ರಘುಪತಿ, ಡಾ.ಎಸ್.ಬಿ.ಕಾಸರಗೋಡು, ಡಾ.ಸೀ. ಹೊಸಬೆಟ್ಟು, ಬಿ.ಕೆ.ರವಿಚಂದ್ರನಾಥ, ಶಶಿಧರ ಹೆಮ್ಮಾಡಿ, ಜಯಂತ್ ಕಾಯ್ಕಿಣಿ, ಮತ್ತು ಬಿ.ಜನಾರ್ಧನ್ ಭಟ್ ಇವರ ಹೆಸರುಗಳಿದ್ದು. ಈ ಪುಸ್ತಿಕೆಯಲ್ಲಿ ಇವರ ಪತ್ರ ಬರಹಗಳನ್ನು ಬಳಸಿಕೊಳ್ಳಲಾಗಿದೆ. ಇವನ್ನು ಪ್ರಬುದ್ಧ ವಾಚಕರು ಅನುಭವಿಸಿದ ಪೇಜಾವರ ಕವಿತೆಗಳ ಭಿನ್ನ ದೃಷ್ಟಿಕೋನಗಳು ಎಂದು ಹೇಳಬಹುದು. ಸಾಮಾನ್ಯ ಓದುಗರು ಈ ರಚನೆಗಳನ್ನು ಅರಿಯುವಲ್ಲಿ ಮತ್ತು ಅನುಭವಿಸುವಲ್ಲಿ ಹೆಚ್ಚು ನಿಕಟತೆಯನ್ನು ಇಲ್ಲಿನ ಪತ್ರ ಮತ್ತು ಪತ್ರಿಕಾ ಬರಹಗಳು ಉಂಟುಮಾಡಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಅದರೊಂದಿಗೆ ಇಲ್ಲಿನ ಪ್ರೌಢ ಓದುಗರ ಓದು ಯಾವುದೇ ಇತಿಮಿತಿಗೆ ಒಳಪಟ್ಟಿಲ್ಲ್ಲವೆಂದು ಹೇಳಲುಬರುವುದಿಲ್ಲ. ಇದು ಸಾಮಾನ್ಯ  ಓದುಗರಿಗೆ ತನ್ನ ಬುದ್ಧಿಭಾವಗಳ ಗ್ರಹಿಕೆಯ ಮಿತಿಯಲ್ಲಿ ತನ್ನದೆ ರೀತಿಯಲ್ಲಿ ಈ ರಚನೆಗಳ ಒಳಹೊಕ್ಕಲು ಸಾಧ್ಯವಾಗದಂತೆಯೂ ಮಾಡಬಹುದು. ಇದರಿಂದ ಓದುಗನೊಬ್ಬ ಮುಕ್ತವಾಗಿ ತಮ್ಮ ಮನಸ್ಸು ತೆರೆದಿಟ್ಟು ಇಲ್ಲಿನ ರಚನೆಗಳು ಕಟ್ಟಿಕೊಡುವ ಅನುಭವಕ್ಕೆ ತೆರೆದುಕೊಳ್ಳುವ ಸ್ಥಿತಿಗೆ ಅಡ್ಡಿಯುಂಟಾಗಲೂಬಹುದು. ಹೀಗೆ ಸಾಮಾನ್ಯ ಓದುಗನಿಗೆ ಇದರಿಂದ ಲಾಭ ನಷ್ಟಗಳೆರಡೂ ಇರುವಂತೆ ಕಾಣುತ್ತದೆ.
ಮೂಲ ಪುಸ್ತಕವನ್ನೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೆಣಗಾಡಬೇಕಾದ ಸ್ಥಿತಿ ಸದ್ಯ ಕನ್ನಡದಲ್ಲಿದೆ, ಪುಸ್ತಕ ಮಾರಾಟದ ಪರ್ಯಾಯ ವ್ಯವಸ್ಥೆಯಾಗಿ ಗ್ರಂಥಾಲಯದ ಸಗಟು ಖರೀದಿಯನ್ನು ಏರ್ಪಾಟು ಮಾಡಿಕೊಳ್ಳಲಾಗಿದೆ. ಅಂಥದ್ದರಲ್ಲಿ ಪುಸ್ತಕದ ಮೊದಲ ಓದಿನ ಅಭಿಪ್ರಾಯಗಳನ್ನು ಕನ್ನಡದ ಓದುಗರು ಹಣ ಕೊಟ್ಟು ನಿಜವಾಗಿ ಓದುವ ಸ್ಥಿತಿ ತಲುಪಿದ್ದಾರೆಯೆ? ಚಿಂತಿಸಬೇಕಿದೆ.
ಯಾವುದೇ ಒಂದು ಕೃತಿ ಕುರಿತು ವಿಚಾರ ಸಂಕಿರಣ ನಡೆದರೆ, ವಿಮರ್ಶಾ ಸಂಕಲನ ಪ್ರಕಟವಾದರೆ ಅದರಲ್ಲಿ ಅಂಥ ವಿಶೇಷವೇನೂ ಇರಲು ಸಾಧ್ಯವಿಲ್ಲ. ಆದರೆ ಒಂದು ಕೃತಿ ಪ್ರಕಟವಾದಾಗ ಅದರ ಮೊದಲ ಓದಿನಲ್ಲಿ ವ್ಯಕ್ತವಾದ ಅಥವಾ ಹಂಚಿಕೊಂಡ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಂದು ಪುಸ್ತಿಕೆಯಾಗಿ ಪ್ರಕಟವಾದಲ್ಲಿ ಅದು ಏನೋ ವಿಚಿತ್ರವೆನಿಸದೆ ಇರದು. ಇದುವರೆಗೆ ಪ್ರಕಟವಾದ ಕೃತಿಯೊಂದರ ಬಗ್ಗೆ ವ್ಯಕ್ತವಾದ ಅಭಿಪ್ರಾಯಗಳನ್ನು ಪ್ರಕಟವಾದ ಹೊಸ ಪುಸ್ತಕದ ಕೊನೆಯಲ್ಲಿ ಒಂದು ಹಿಡಿ ರೂಪದಲ್ಲಿ ಪ್ರಕಟಿಸುವ ಕ್ರಮ ಈಗಾಗಲೇ ರೂಢಿಯಲ್ಲಿದೆ. ಇದು ಕನ್ನಡ ಪುಸ್ತಕಗಳಲ್ಲಿ ಕಾಣುವ ರೀತಿ-ರಿವಾಜು ಎಂದು ಹೇಳಬಹುದು. ಇಂಗ್ಲಿಶ್ ಪುಸ್ತಕಗಳನ್ನು ಪರಿಶೀಲಿಸಿದರೆ ಅಲ್ಲಿ ಅನುಬಂಧದ ರೂಪದಲ್ಲಿ ಮೂಲ ಬರಹಕ್ಕೆ ಪೂರಕವಾದ ಬರವಣಿಗೆಯನ್ನು ನೂರು ನೂರೈವತ್ತು ಪುಟಗಳವರೆಗೂ ನೀಡಿದ ಸಂದರ್ಭಗಳಿವೆ. ಅದು ಅವರ ಅಧ್ಯಯನ ಆಸಕ್ತಿಯ ಸ್ವರೂಪ ಮತ್ತು ವಿಷಯ ಕುರಿತು ಗಂಭೀರವಾಗಿ ಒಳಹೊಕ್ಕ ರೀತಿಯನ್ನು ಕಾಣಿಸುತ್ತದೆ. ಆದರೆ ಕನ್ನಡ ಪುಸ್ತಕಗಳಲ್ಲಿ ಲೇಖಕ ತನ್ನ ಓದುಗ ವಲಯದ ಮೇಲೆ ಪ್ರಭಾವ ಬೀರುವ ಮತ್ತೊಂದು ಮಾರ್ಗವಾಗಿ ಕಂಡುಕೊಂಡದ್ದಾಗಿದೆ - ಅಭಿಪ್ರಾಯಗಳನ್ನು ಒಂದು ಕಡೆ ನೀಡುವ ರೀತಿ . ಅದರೆ ಒಂದು ಕೃತಿಯ ಬಗ್ಗೆ ವಿಚಾರ ಸಂಕಿರಣವಾಗಲೀ ವಿಮರ್ಶಾ ಸಂಕಲನವಾಗಲೀ ಪ್ರಕಟವಾದಾಗ ಅದು ಲೇಖಕ ಓದುಗರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾದಿಯಾಗಿದ್ದರೂ ಅದರಲ್ಲಿ ಲೇಖಕನ ಪಾತ್ರ ಗೌಣವಾಗಿರುತ್ತದೆ ಮತ್ತು ಓದುಗರ ಪಾತ್ರ ಮುಖ್ಯವಾಗಿರುತ್ತದೆ. ಆದರಿಲ್ಲಿ ಓದುಗ ಮತ್ತು ಲೇಖಕನ ಪಾತ್ರ ವ್ಯತಿರಿಕ್ತ ಸ್ಥಿತಿಯಲ್ಲಿರುವುದರಿಂದ ಅಸಹಜವೆನಿಸಲು ಕಾರಣವಾಗಿದೆಯೆ? ಹೌದು ಇದೇಕೆ ಅಸಹಜ?
ಹರಿಯಪ್ಪ ಪೇಜಾವರ ಅವರ `ನೆನದದ್ದು ಹೆಚ್ಚಾಗಿ' ಕವನ ಸಂಕಲನದಲ್ಲೆ ಈ ವಿಷಯ ಕುರಿತು `ವಿಮರ್ಶಾಸಕ್ತ ಕವಿ' ಎಂಬ ರಚನೆಯೊಂದು ಹೀಗಿದೆ-
0
ಅಷ್ಟೇನೂ ಮುಖ್ಯ ಕವಿಯಲ್ಲದ ಆತ
ತನ್ನ ಪುಸ್ತಕಕ್ಕೆ
ಖ್ಯಾತ ಕವಿಯೊಬ್ಬರಿಂದ ಹಿನ್ನುಡಿಯನ್ನೂ
ಖ್ಯಾತ ವಿಮರ್ಶಕರೊಬ್ಬರಿಂದ ಮುನ್ನುಡಿಯನ್ನೂ ಬರೆಸಿದ.
ಆಮೇಲೆ ತುಂಬ ಖರ್ಚು ಮಾಡಿ
ಪುಸ್ತಕದ ಮುಖಪುಟಕ್ಕೆ
ವ್ಯಾನ್ ಗೋ ಚಿತ್ರ ಹಾಕಿಸಿ
ಪತ್ರಿಕೆಗಳ `ಪುಸ್ತಕಾಲೋಕನ'ಕ್ಕೆ ಕಳಿಸಿದ.
ನಂತರ ಅತ್ಯುತ್ಸಾಹದಿಂದ ಅದನ್ನು
ಕನ್ನಡದ ಬೇರೆ ಬೇರೆ ವಿಮರ್ಶಕರಿಗೆ
ಗೌರವಪೂರ್ವಕವಾಗಿ ರವಾನಿಸಿ
ತುಂಬ ಆಸೆಯಿಂದ ಅವರ ಪ್ರತಿಕ್ರಿಯೆಗೆ ಕಾದರೆ
ಯಾವ ಪರಿಚಿತ ವಿಮರ್ಶಕನಾಗಲೀ
ಯಾವ ಪರಿಚಿತ ಲೇಖಕನಾಗಲೀ
ಆ ಬಗ್ಗೆ ಏನಾದರೂ ಬರೆಯುವುದಿರಲಿ
ಅದು ತಲುಪಿದ ಬಗ್ಗೆ  ಸಾ
ಒಂದು ಗೀರು ಬರೆಯದಿದ್ದುದು ಕಂಡು
ತೀರ ನಿರಾಶನಾದ.

ಮುಂದೆ ಎಷ್ಟೋ ದಿನಗಳ ನಂತರ
ಈ ಸದರಿ ವಿಮರ್ಶಕರಲ್ಲಿ ಕೆಲವರು ಅಲ್ಲಲ್ಲಿ
ಬೇರೆ ಬೇರೆ ಸೆಮಿನಾರುಗಳಲ್ಲಿ ಸಿಕ್ಕು
ಈತ ಆಶೆಯಿಂದ ಅತ್ತ ಧಾವಿಸಿದರೆ
ಅವರು ಬೇರೆಲ್ಲೊ ಕೈಯೆತ್ತಿ
ಯಾರಿಗೋ ನಮಸ್ಕರಿಸಿ
ಈತನನ್ನು ಉಪಾಯವಾಗಿ ನಿವಾರಿಸಿಕೊಂಡರು
ತಪ್ಪಿಸಲಾಗದೆ ಸಿಕ್ಕಿದ ಇನ್ನು ಕೆಲವರಲ್ಲಿ
ಈತ ನನ್ನ ಪುಸ್ತಕ ಸಿಕ್ಕಿತೆ ಎಂದು ವಿಚಾರಿಸಿ
ಅದರ ವಿಮರ್ಶೆಗೆ ಕಾದರೆ ಅವರು
`ಹೌದು ಥ್ಯಾಂಕ್ಸ್' ಎಂದು ನಂತರ
`ತುಂಬ ಖರ್ಚಾಗಿರಬೇಕಲ್ಲ-ಕಷ್ಟ ಕಷ್ಟ'
ಎಂದು ವಿನಾಕಾರಣ ಸಹಾನುಭೂತಿ ತೋರಿಸಿದರು
ಇನ್ನು ಕೆಲವರು ಈತ ವಿಚಾರಿಸುವ ಮೊದಲೇ
ಬಹಳ ಚೆನ್ನಾಗಿದೆ ಎಂದು ಬಿಟ್ಟು
ಎದುರಿನ ರಸ್ತೆಯ ಬಿಸಿಲನ್ನು ದಿಟ್ಟಿಸಿದರು
ಈತ ಚೆನ್ನಾಗಿದೆ ಅಂದರೇನರ್ಥ ಎಂದು
ಗುಟ್ಟಿನಲ್ಲಿ ಅವರ ಮುಖ ನೋಡಿದರೆ
ಅಲ್ಲಿ ಹೆಪ್ಪುಗಟ್ಟಿರುವ ಮೌನ
ತನ್ನ ಬಗ್ಗೆ ಹೊಗಳಿಕೆಗೆ ತೀರ ಬೇರಾದುದನ್ನು
ಹೇಳುತ್ತಿದೆ ಅನ್ನಿಸಿ

ತನ್ನ ಪುಸ್ತಕವ ಬಯ್ಯುವುದಕ್ಕಾದರೂ
ಇವರು ಬಾಯಿ ಬಿಡಬಾರದೆ
ಎಂದು ಖಿನ್ನನಾದ.
0
ಆರಂಭಿಕ ಲೇಖಕನೊಬ್ಬ ತನ್ನ ಬರಹದ ಶಕ್ತಿಯನ್ನು ಹೆಚ್ಚಿಸುವ ಬಗೆಯಲ್ಲಿ ತೊಡಗಿಸಿಕೊಳ್ಳದೆ ಕೀರ್ತಿಯ ಬೆನ್ನು ಹತ್ತಿ ಅನುಭವಿಸಿದ ದಾರುಣ ಅನುಭವದ ಚಿತ್ರವಿದು. ಕೀರ್ತಿಯನ್ನು ಲೇಖಕ ಅರಸಿಹೋಗುವಂಥದ್ದಲ್ಲ, ಅದು ಲೇಖಕನನ್ನು ತಡಕಿ ಬರುವಂಥದ್ದಾಗಿರಬೇಕು ಎಂಬ ಪರೋಕ್ಷ ಧ್ವನಿಯಿದೆ ಇಲ್ಲಿ. ಇದು ಸದ್ಯದ ಕನ್ನಡ ಸಾಹಿತ್ಯ ವಲಯದಲ್ಲಿರುವ ಪ್ರವೃತ್ತಿಯನ್ನೂ ಬರಹಗಾರ/ವಿಮರ್ಶಕರ ಮನೋಭಾವವನ್ನೂ ಹಿಡಿದುಕೊಟ್ಟಿದೆ. ಕವಿಯ ಕೀರ್ತಿಯ ಹಂಬಲ ಈಡೇರಿದಲ್ಲಿ ಅವನಿಗೆ ಸಾರ್ಥಕ್ಯದ ಭಾವ ಮೂಡುತ್ತದೆ, ಹಿತಕರವಾದ ಸುಖಭಾವ ಉಂಟಾಗುತ್ತದೆ, ಅಹಂ ಸಂತೃಪ್ತವಾಗುತ್ತದೆ, ಸ್ವರತಿ-ಸಂಪ್ರೀತಿ ತಣಿಯುತ್ತದೆ. ಇಂಥ ಕೀರ್ತಿಯ ಹಂಬಲ ವ್ಯಕ್ತಿಗತವಾದುದು, ಕಲೆಯ ಸಾರ್ಥಕತೆ ಸಾಮೂಹಿಕ ಜೀವನಕ್ಕೆ ಸಂಬಂಧಿಸಿದುದು. ಕಲೆಯ ಸಾರ್ಥಕತೆ ಸಾಧಿತವಾಗದ ಕೀರ್ತಿಯ ಹಂಬಲದಿಂದ ಅಹಿತವೇ ಹೆಚ್ಚು. ಹಾಗಾಗಿ ಕವಿ ಕಲಾವಿದರ ವೈಯಕ್ತಿಕ ಪ್ರತಿಷ್ಟೆಯ ಕೀರ್ತಿ ಹಂಬಲ ದುಷ್ಪರಿಣಾಮವನ್ನೆ ಹೊತ್ತು ತರುತ್ತದೆ. ಏಕೆಂದರೆ ಅದು ವೈಯಕ್ತಿಕ ಆಸೆ ಆಕಾಂಕ್ಷೆ ಸಾಧಿಸಿಕೊಳ್ಳುವ ಕ್ರಮ. ಆದರೆ ಕವಿ ಕೀರ್ತಿಯ ಬಗ್ಗೆ ನಿರಾಸಕ್ತನಾಗಿದ್ದು ತನ್ನ ಸಾಧನೆಯ ಗರಿಮೆಯನ್ನು ಗಳಿಸುತ್ತ ಹೋದಲ್ಲಿ ಆಗದು ಓದುಗ ಸಮುದಾಯ ಅವನ ಕೃತಿಯಿಂದ ಬೌದ್ಧಿಕ-ವೈಚಾರಿಕ ಮಟ್ಟ ಬೆಳೆಸಿಕೊಳ್ಳುವ ಮೂಲಕ ತಮ್ಮ ಜೀವನ ಮಟ್ಟ ಎತ್ತರಿಸಿಕೊಳ್ಳುವ ಹಾದಿಯಲ್ಲಿ ತೋರುವ ಪ್ರೀತಿಗೆ ಪಾತ್ರನಾಗುವ ಕ್ರಮವಾಗಿರುತ್ತದೆ.
ಆದರೂ ಯಾವುದೇ ಲೇಖಕ ತನ್ನ ಪಾಡಿಗೆ ತಾನು ಬರೆಯಲು ಸಾಧ್ಯವಿಲ್ಲ. ತನ್ನ ಕೃತಿ ಕುರಿತು ಸಹೃದಯ ಓದುಗರು ಆಡುವ ಮಾತು ಬರಹಗಾರನೊಬ್ಬನನ್ನು ಚಿಮ್ಮು ಹಲಗೆಯಂತೆ ಮೇಲಕ್ಕೆ ಏರಿಸಬಲ್ಲದು, ಅವನ ಉತ್ಸಾಹವನ್ನು ಹೆಚ್ಚಿಸಬಲ್ಲದು ಎಂಬುದೆಲ್ಲ ಸತ್ಯವೆ. ಇದು ಖಂಡಿತ ಅತ್ಯಗತ್ಯ ಕೂಡ. ಆದರೆ ಲೇಖಕ ಅದರಲ್ಲಿಯೆ ತಾನು ಮೈ ಮರೆಯುವಂತಿಲ್ಲ. ಅದು ಕವಿ/ಕಲಾವಿದ/ಸಾಧಕನನ್ನು ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವಂತೆ ಮಾಡಬಲ್ಲುದು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕಾವ್ಯ ಪ್ರಯೋಜನ ಕುರಿತು ಕೀರ್ತಿ, ಸಂಪತ್ತು, ಸ್ಥಾನ-ಮಾನ(ಸಮ್ಮಾನ)ಗಳೆ ಕಾವ್ಯದ ಉಪಯೋಗಗಳು ಎಂದೂ ಹೇಳಲಾಗಿದೆ. ಇವೆಲ್ಲ ಕವಿಯ ಜೀವನದಲ್ಲಿ ದೊರಕಬೇಕಾದ ಲೌಕಿಕ ಲಾಭಗಳೇ ಎಂಬಲ್ಲಿ ಸಂದೇಹವಿಲ್ಲ. ಆದರೂ ಇದರಿಂದಲೇ ಕವಿ ಕಲಾವಿದರು ಹಾದಿ ತಪ್ಪಿರುವುದು ಕೂಡ ಅಷ್ಟೇ ನಿಜ. ಹೀಗಿದ್ದರೂ ಬರಹಗಾರನಾದವನು ಅವನ್ನು ಅರಸುವಂತಿಲ್ಲ, ಅಪೇಕ್ಷೆ ಪಡುವಂತಿಲ್ಲ, ಬೆನ್ನು ಹತ್ತುವಂತಿಲ್ಲ. ಅವು ತಾನೇ ಒದಗಿಬಂದಲ್ಲಿ ಒಪ್ಪತಕ್ಕದ್ದೆ ಹೊರತು ಅನ್ಯ ದಾರಿಯಿಲ್ಲ. ಈ ಕುರಿತು ಕವಿಯಾದವನು ನಿರಾಸಕ್ತನೂ ನಿರಾಪೇಕ್ಷಿತನೂ ಆಗಿರಬೇಕು. ಹೊಗಳಿಕೆ ಯಾವ ಮನುಷ್ಯನನ್ನು ತಾನೇ ಖುಷಿ ಪಡಿಸದೆ ಇರಬಲ್ಲದು? ಕೀರ್ತಿ ಯಾವ ಸಾಧಕನನ್ನು ತಾನೇ ಬೀಗದಂತೆ ಇರಿಸಬಲ್ಲದು? ಹಾಗಾಗಿದು ಮನುಷ್ಯ ದೌರ್ಬಲ್ಯವಲ್ಲದೆ ಬೇರೆಯಲ್ಲವೆಂದೇ ಹೇಳಬೇಕು. ಈ ಪುಸ್ತಿಕೆಯ ಸ್ವರೂಪಕ್ಕೂ ಕವಿಗೆ ಹಿಡಿದಿರುವ ಕೀರ್ತಿಶನಿಗೂ ನಿಕಟ ಸಂಬಂಧವಿದೆ. ಒಬ್ಬ ಸಾಧಕ/ಕಲಾವಿದ ಈ ಬಗ್ಗೆ ನಿರಾಸಕ್ತನಾಗದಿದ್ದಲ್ಲಿ ಪರಿಣಾಮ ಏನಾಗುತ್ತದೆ ಎಂದು ತಿಳಿಯುವಲ್ಲಿ ಕಲಾಕೃತಿ ಮಟ್ಟದ ಎರಡು ನಿದರ್ಶನಗಳು ನಮ್ಮ ಮುಂದಿವೆ. 1. ಶೇಕ್ಸ್ಪಿಯರ್ನ ಕಿಂಗ್ ಲಿಯರ್ ನಾಟಕ. 2. ಬೆಳದಿಂಗಳ ಬಾಲೆ ಕನ್ನಡ ಚಿತ್ರ.      
ಲಿಯರ್ ದೇಶದ ಒಬ್ಬ ದೊರೆಯಾಗಿ, ರಾಜಕಾರ್ಯ ನಿಪುಣನಾಗಿ, ಫ್ಯೂಡಲ್ ವ್ಯವಸ್ಥೆಯ ಅಧಿಪತಿಯಾಗಿ, ದೇಶ ಮತ್ತು ಕುಟುಂಬ ರಕ್ಷಣೆಯ ಹೊಣೆಯನ್ನು ಹೊತ್ತವನು. ಹೊಗಳಿಕೆಯ ಮಾತುಗಳನ್ನರಸಿ ಹೊರಟ ಲಿಯರ್ ನಿಗೆ ಪ್ರೀತಿ-ವಂಚನೆ, ವಾಸ್ತವ-ಅವಾಸ್ತವ, ಸತ್ಯ-ಸುಳ್ಳು, ಕಪಟತನ-ಮುಗ್ಧತನಗಳ ನಡುವೆ ವ್ಯತ್ಯಾಸ ಅರಿಯಲಾಗದ ಹಂತ ಒದಗುತ್ತದೆ. ಅದರ ಪರಿಣಾಮವಾಗಿ ಆತನ ಜೀವನವೆ ದುರಂತದತ್ತ ಜಾರಿಕೊಳ್ಳುತ್ತದೆ. ಅವನ ದೌರ್ಬಲ್ಯವನ್ನು ಆತನ ಹಿರಿಯ ಹೆಣ್ಣುಮಕ್ಕಳು ತಮ್ಮ ಸ್ವಹಿತಾಸಕ್ತಿ ಸಾಧಿಸಲು ಮೆಟ್ಟಿಲನ್ನಾಗಿ ಮಾಡಿಕೊಳ್ಳುತ್ತಾರೆ. ತಮ್ಮ ತಂದೆಯ ವ್ಯಕ್ತಿತ್ವವನ್ನು ದುರುಪಯೋಗ ಪಡಿಸಿಕೊಳ್ಳುವುದಲ್ಲದೆ ಆತನ ಕೊರತೆಯನ್ನು ಎಲ್ಲರಿಗೂ ಎದ್ದು ಕಾಣುವಂತೆ ಮಾಡುತ್ತಾರೆ. ಲಿಯರ್ ತನ್ನ ಜೀವನದಲ್ಲಿ ದಾರುಣತೆ ಮತ್ತು ದುರಂತತೆ ಒಡಮೂಡಲು ಹೊಗಳಿಕೆಯ ಮಾತುಗಳಿಗೆ ಮನಸೋತದ್ದೇ ಕಾರಣವಾಗುತ್ತದೆ. ಆದರೆ ವಾಸ್ತವದಲ್ಲಿ ಕವಿಯ ಸೋಲಿಗೆ ಕವಿಯೆ ಹೊಣೆಗಾರನೂ ಕಾರಣನೂ ಆಗಿರಬಾರದಲ್ಲವೆ? ಆಗವನು ಏನನ್ನು ಸಾಧಿಸಲಾರನಲ್ಲವೆ?
ಬೆಳದಿಂಗಳ ಬಾಲೆ ಚಿತ್ರದ ನಾಯಕ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್. ಆತನೊಬ್ಬ ಕ್ರೀಡಾ ಕ್ಷೇತ್ರದ ಅಸಾಮಾನ್ಯ ಸಾಧಕ. ಆದರೂ ಆತ ಮೈಮರೆತು ತನ್ನ ಅಭಿಮಾನಿಯನ್ನರಸಿ ಬೆನ್ನು ಹತ್ತುತ್ತಾನೆ. ಅವನಲ್ಲಿ ಅಭಿಮಾನಿಯ ಮೋಹ ಎಷ್ಟು ಅಡರುತ್ತದೆ ಎಂದರೆ ಅವನಿಗೆ ತನ್ನ ಸಾಧಕ ಕ್ಷೇತ್ರವನ್ನೆ ಗೌಣವಾಗಿ ಕಂಡರಸುವ ಮತ್ತು ಅಭಿಮಾನಿಯ ಸಂಗವೇ ಪ್ರಮುಖವಾಗುವ ಭ್ರಮಾಲೋಕ ಉಂಟಾಗುತ್ತದೆ. ಸಾಧಕನ ಜೀವನದಲ್ಲಿ ಇದು ವ್ಯತಿರಿಕ್ತ ಸ್ಥಿತಿ. ಸಾಧಿತ ಸ್ಥಿತಿಯಿಲ್ಲದೆ ಮೆಚ್ಚುಗರೂ ಅಭಿಮಾನಿಗಳೂ ಇರಲು ಸಾಧ್ಯವಿಲ್ಲ. ಈ ಸೂಕ್ಷ್ಮವನ್ನು ಅರಿಯಲಾಗದ ನಾಯಕ ಚಲನಚಿತ್ರದ ಕೊನೆಗೆ ತನ್ನ ಸಾಧಿತ ಸ್ಥಿತಿಯನ್ನೂ ಅಭಿಮಾನಿಯನ್ನೂ ಕಳೆದುಕೊಂಡು ದುರಂತದ ಆಳದಲ್ಲಿ ಬಿದ್ದಿರುತ್ತಾನೆ. ಸಾಧಕ ನಾಯಕನ ಈ ಸ್ಥಿತಿಗೆ ಅವನು ಮಾರುಹೋದ ತನ್ನ ಅಭಿಮಾನಿ ಕುರಿತ ಮೋಹವೆ ಕಾರಣವೆಂಬುದನ್ನು ಚಿತ್ರ ಮನಗಾಣಿಸುತ್ತದೆ. ಒಂದು ಅತ್ಯುತ್ತಮ ಕವಿತೆಯನ್ನು ಈ ಭುವನದ ಭಾಗ್ಯವೆಂದು ಭಾವಿಸಲಾಗುತ್ತದೆ. ಕವಿಯೊಬ್ಬ ಅದನ್ನು ಸಾಧಿಸಬೇಕಾದರೆ ಆತ ತನ್ನ ಸರ್ವ ಶಕ್ತಿಯನ್ನಷ್ಟೇ ಅಲ್ಲದೆ ತನ್ನ ಜೀವಮಾನವನ್ನೂ ಸವೆಸಬೇಕಲ್ಲವೆ? ತನ್ನ ಸಾಧನೆಯ ಕಠಿಣ ಮತ್ತು ಗಂಭೀರ ಸವಾಲು ಅರಿಯದೆ ಅದನ್ನು ತೊರೆದು ಕೀರ್ತಿಯನ್ನು ಹಂಬಲಿಸಿ ಹಾದಿತಪ್ಪಿ ನಡೆದರೆ ಸವಾಲು ಸ್ವೀಕರಿಸುವ ಬಗೆಯಾದರೂ ಯಾವುದು? ಸಾಧಿಸುವುದಾದರೂ ಹೇಗೆ?
ಇಂಥದೇ ಎಳೆಯೊಂದು ಲಾರ್ಡ್ ಟೆನಿಸನ್ ನ ದೀರ್ಘ ಕವಿತೆ ದಿ ಲೇಡಿ ಆಫ್ ಶಾಲೆಟ್ ನಲ್ಲೂ ಇದೆ. ಗಾಜಿನ ಮನೆಯೊಳಗಿನ ಸಾಧಕ ಜಗತ್ತು ಮತ್ತು ಅದರಾಚೆಗಿನ ವಾಸ್ತವ ಜಗತ್ತು ಬೇರೆ ಬೇರೆ. ಸಾಧಕ ವಾಸ್ತವ ಜಗತ್ತಿನ ಸಮಸ್ತ ಸಂಗತಿಗಳ ಮಧ್ಯೆ ಇದ್ದರೂ ಅವನ್ನು ಕಂಡು ಅನುಭವಿಸುತ್ತಿದ್ದರೂ ವಾಸ್ತವ ಜಗತ್ತಿನ ಭಾಗವಾಗಿರುವುದಿಲ್ಲ. ಸಾಧಕ ಜಗತ್ತ್ತಿಗೆ ಅಗತ್ಯವಾದ ಎಲ್ಲ ಸತ್ವವನ್ನು ವಾಸ್ತವ ಜಗತ್ತಿನಿಂದಲೆ ಪಡೆದುಕೊಂಡರೂ ವಾಸ್ತವ ಜಗತ್ತಿನೊಂದಿಗೆ ವೈಯಕ್ತಿಕ ಸಂಪರ್ಕವಿರಿಸಿಕೊಳ್ಳುವಂತಿಲ್ಲ. ಹಾಗೆ ಆತನೇನಾದರೂ ವಾಸ್ತವ ಜಗತ್ತಿಗೆ ಕಾಲಿಟ್ಟಲ್ಲಿ ದುರಂತ ಸಂಭವಿಸದೆ ಇರುವುದಿಲ್ಲ. ಈ ಮಾತಿಗೆ ಕಾಕತಾಳೀಯವಾಗಿಯೋ ಅನಿವಾರ್ಯವಾಗಿಯೋ ಅನಿರೀಕ್ಷಿತವಾಗಿಯೋ ಕವಿತೆಯಲ್ಲಿ ದುರಂತದ ಛಾಯೆ ವ್ಯಾಪಿಸಿಕೊಳ್ಳುವುದನ್ನು ಕವಿತೆ ಬಣ್ಣಿಸಿದೆ. ಸಾಧಕನಿಗೆ ಸಾಧಕ ಜಗತ್ತು ಹೊರತುಪಡಿಸಿ ಅನ್ಯ ಜಗತ್ತಿಲ್ಲವೆಂಬುದನ್ನು ಕಾಣಿಸುತ್ತದೆ.
ಕನ್ನಡ ಚಲನಚಿತ್ರ ರಂಗ ಕಂಡ ಅತ್ಯಂತ ಜನಪ್ರಿಯ ನಾಯಕ ನಟ ರಾಜಕುಮಾರ್ ತಮ್ಮ ಸಿನಿಮಾ ನೋಡುಗರನ್ನು `ಅಭಿಮಾನಿ ದೇವರು' ಎಂದು ಕರೆದು ತಮ್ಮ ಅಭಿಮಾನಿಗಳೊಂದಿಗೆ ಗೌರವಾನ್ವಿತ ಅಂತರ ಕಾಪಾಡಿಕೊಂಡಿದ್ದನ್ನು ಕಾಣುತ್ತೇವೆ. ಇದರಿಂದ ಅವರಿಗೆ ಅಭಿಮಾನಿಗಳ ಬಗ್ಗೆ ನಿರಾಸಕ್ತರಾಗಿ ನಟನೆಯಲ್ಲಿ ಪಾತ್ರಕ್ಕೆ ಜೀವ ತುಂಬುವ ಕಾರ್ಯಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಯಿತು ಮಾತ್ರವಲ್ಲ ಆ ಅಭಿಮಾನಿ ದೇವರುಗಳಿಂದ ಎದುರಾಗುವ ಬಾಲಿಶವಾದ ಮುಜುಗರವನ್ನು ನಿಯಂತ್ರಿಸಲೂ ಸಾಧ್ಯವಾಯಿತು. ಇದು ಸಾಧನೆಯ ಹಾದಿಯಲ್ಲಿ ಕೀರ್ತಿ ಆಭಿಮಾನಗಳು ಇದ್ದೂ ಇಲ್ಲದ ಅಥವಾ ಅವಕ್ಕೆ ಅಂಟಿಯೂ ಅಂಟಿಕೊಂಡಿರದ ಮಾನಸಿಕ ಸ್ಥಿತಿಯನ್ನು ಸಾಧಕನಾದ ಕವಿ/ಕಲಾವಿದ ಪಡೆದುಕೊಳ್ಳುವ ಅಗತ್ಯವನ್ನು ಕಾಣಿಸುತ್ತದೆ.
ಸಾಧಕತನ ಎಂಬುದು ಸಾಧಕನ ಮನೋಪ್ರವೃತ್ತಿಯಲ್ಲದೆ ಬೇರೆಯಲ್ಲ. ಅದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಸಾಧಕನಾದವನು ಸದಾ ತನ್ನ ಸಾಧಿಸಬೇಕಾದ ಸಿದ್ಧಿಯ ಕಡೆ ಪೂರ್ಣ ತೊಡಗಿಸಿಕೊಂಡಿರುತ್ತಾನೆ. ಸಾಧಕರಲ್ಲದವರ ಕಣ್ಣಲ್ಲಿ ಆತ ಕೇವಲ ಬೆರಗು ಹುಟ್ಟಿಸಿ ತನ್ನ ಬಗ್ಗೆ ಅಭಿಮಾನ ತಳೆಯುವಂತೆ ಮಾಡುವ ಕ್ರಮದಲ್ಲಲ್ಲ. ಕವಿ/ಬರಹಗಾರ ಅದವನು ಉಳಿದವರಿಗೆಲ್ಲ ತಮ್ಮ ಜೀವನದಲ್ಲಿ ಕನಸು, ಆದರ್ಶ, ಆನಂದ ಕಟ್ಟಿಕೊಳ್ಳಲು ಮನೋಶಕ್ತಿ ವಿತರಿಸುವ ಹಂಚಿಕೆದಾರ. ಅವನು ತನ್ನ ಈ ಕಾರ್ಯಶಕ್ತಿಯ ಕುಂದುಕೊರತೆಯ ಬಗ್ಗೆ ಸದಾ ಕಾಲ ವಿವೇಚಿಸುವುದರಲ್ಲಿ, ಈ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸದಾ ಕಾಲ ಮಗ್ನನಾಗಿರುವಲ್ಲಿ ಮತ್ತು ಆ ಮೂಲಕ ಸಮಾಜದ ವೈಚಾರಿಕ ಮತ್ತು ವಾಸ್ತವ ಜಗತ್ತಿನ ಸ್ಥಿತಿ ಸುಧಾರಣೆಗೆ ಪ್ರಾಮಾಣಿಕವಾಗಿ ಸದಾ ಕಾಲ ತೊಡಗಿಸಿಕೊಂಡಿರುವಲ್ಲಿ ಖುಷಿ ಕಾಣುತ್ತಾನೆ. ಕವಿಯ ಅಹಂಕಾರ ತಣಿಸುವ ಮತ್ತು ಅವನ ಸ್ವರತಿ ಸಂಪ್ರೀತಿಯನ್ನು ಉದ್ದೀಪಿಸುವ ಕೇವಲ ಹೊಗಳಿಕೆ, ಕೀರ್ತಿ ಮತ್ತು ಅಭಿಮಾನಗಳಿಗೆ ತನ್ನನ್ನೆ ತಾನು ತೆತ್ತುಕೊಳ್ಳುವುದಿಲ್ಲ ಅಥವಾ ಅಂಥ ವಿಚಾರಗಳಿಗೆ ಮಣಿಯುವುದಿಲ್ಲ. ಹಾಗಾಗಿ ಅವನಿಗೆ ನೀಡಲಾಗುವ ಗೌರವ, ಸನ್ಮಾನ, ಪ್ರಶಸ್ತಿ, ಬಹುಮಾನ, ಪದವಿ, ಬಿರುದುಗಳು ಇತರರು ತನ್ನ ಬಗ್ಗೆ ತೋರುವ ಭಾವಾಭಿವ್ಯಕ್ತಿಯೆ ಹೊರತು ಅದೇ ತನ್ನ ಜೀವಮಾನ ಸಾಧನೆಯಲ್ಲ ಎಂಬ ಅರಿವು ಇರುತ್ತದೆ. ನೊಂದವನ ಕಣ್ಣಲ್ಲಿ ನಲಿವಿನ ನಗು ಹುಟ್ಟಿಸುವ ಕವಿ/ಕಲಾವಿದನ ಕಾರ್ಯಕ್ಕೆ ಯಾವ ಕೀರ್ತಿ ಪತಾಕೆಗಳು, ಯಾವ ಬಿರುದು ಬಹುಮಾನಗಳು ಸಮಾನ? ಕತ್ತಲಾಗಸದಲ್ಲಿ ಮಿನುಗುವ ಭರವಸೆಯ ಬೆಳ್ಳಿಚುಕ್ಕಿಗೆ ಉಂಟೆ ಮತ್ತೊಂದು ಸರಿಸಾಟಿ?  ಕೀರ್ತಿ, ಬಿರುದು ಬಹುಮಾನಗಳಿಗಾಗಿನ ಹಂಬಲಿಕೆ ಮತ್ತು ಬಾಳಿನಲ್ಲಿ ಬೆಳಕಿನ ಭರವಸೆ ನೀಡುವ ಆತ್ಮವಿಶ್ವಾಸ ಇವೆರಡರ ನಡುವಿನ ಅಂತರ ಅದೆಷ್ಟು ಅಗಾಧ!
ಮಾನವ ದೌರ್ಬಲ್ಯದ ಅಗಾಧತೆ, ಕ್ರೌರ್ಯತೆ, ಭೀಕರತೆಯನ್ನು ಇಡಿ ಮಾನವ ಜನಾಂಗಕ್ಕೆ ಮನವರಿಕೆ ಮಾಡಿಕೊಡುವ ಅರಿವಿನ ಹಾದಿಯಲ್ಲಿ ಇರುವವರೆ ಅಂಥ ಒಣ ಹೆಮ್ಮೆಯ ಮಾನವ ದೌರ್ಬಲ್ಯದ ಪ್ರಪಾತಕ್ಕೆ ಬೀಳಲು ಮುಂದಾದಲ್ಲಿ, ಆಗ ಅದಕ್ಕಾಗಿ ಮರುಗುವುದನ್ನು ಬಿಟ್ಟು, ಮಾನವನ ನಿಡಿದಾದ ದುರಂತ ಹಾದಿಯ ಕಂಡು ನಿಟ್ಟುಸಿರು ಬಿಡುವುದನ್ನು ಬಿಟ್ಟು, ದಿಗ್ ಭ್ರಮಿತನಾಗುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ? ಓದುಗ ಎಂಬ ಸಮುದಾಯ ಹಿತದೃಷ್ಟಿಗಿಂತ ಲೇಖಕ ಎಂಬ ವೈಯಕ್ತಿಕ ಹಿತದೃಷ್ಟಿ ಮುಂಚೂಣಿಯಲ್ಲಿರುವಾಗ ಬೇರೇನು ಮಾಡಲು ಸಾಧ್ಯ?

ಸೋಮವಾರ, ಅಕ್ಟೋಬರ್ 29, 2012

ಮುನ್ನುಡಿಯೆ ಪುಸ್ತಕದ ಮೂಲ ಬರಹವಾದ ಸೋಜಿಗದ ಸುತ್ತ


ವಸಂತ ಬನ್ನಾಡಿಯವರು ಈ ವರ್ಷದ ಆರಂಭದಲ್ಲಿ 'ಇಗೋ ಅರಿವೆ' ಎಂಬ ತಮ್ಮ ಇತ್ತೀಚಿನ ಕವನ ಸಂಕಲನವೊಂದನ್ನು ಕಳಿಸಿಕೊಟ್ಟರು. ಅದರಿಂದ ನನಗೆ ಅಚ್ಚರಿಯೂ ಸಂತೋಷವೂ ಅಯಿತು. ಕನ್ನಡದ ಬರಹಗಾರರ ಸಮುದಾಯದಲ್ಲಿ ನಾನು ಗುರುತಾದವನೇನಲ್ಲ. ಬರಹಗಾರ, ಚಿಂತಕ ಎಂದು ತೋರಿಸಿಕೊಳ್ಳುವುದು, ಯಾವುದಾದರೂ ಗುಂಪುಗಳಲ್ಲಿ ಗುರುತಿಸಿಕೊಳ್ಳುವುದು, ಆ ಗುಂಪು ಮುಗುಮ್ಮಾಗಿ ನಡೆಸುವ ಲಾಬಿಯ ಭಾಗವಾಗುವುದು - ಈ ಯಾವುದನ್ನೂ ನಾನು ರೂಢಿಸಿಕೊಳ್ಳಲಿಲ್ಲ. ಒಡಹುಟ್ಟಿದವರ ವಂಚಕತನದಿಂದಾಗಿ ನನಗೆ ಹೊಟ್ಟೆ ತುಂಬಿಸಿಕೊಳ್ಳಲು ನಡೆಸುವ ಹೋರಾಟವೆ ಜೀವನದ ರೂಪುರೇಷೆಯಾಗಿದೆ. 1991-96ರ ನಡುವೆ ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಶಿವಪ್ರಕಾಶರು ನನ್ನನ್ನು ತಮ್ಮ ಒಡನಾಟದಲ್ಲಿಲ್ಲಿರಿಸಿಕೊಂಡಿದ್ದರು. ಆಗ ಅವರೊಮ್ಮೆ ಸಮಾನ ಆಸಕ್ತರೂ ಪರಸ್ಪರ ಹಿತೈಷಿಗಳೂ ಆದ ನಮ್ಮ ಸ್ನೇಹ ವಲಯದ ಗುರುತಿನಲ್ಲಿರುವ ಬೆರಳೆಣಿಕೆಯ ಕೆಲವರು ಕೂಡಿ ಅಭಿನವ ಎಂಬ ಹೆಸರಿನಲ್ಲಿ ಸಂಘಟಿತ ಬರಹ ಮಾಡೋಣವೆಂದು ಸೂಚಿದ್ದರು. ನಾನಿದ್ದು, ಯಾವುದೇ ಹೆಸರಿನಲ್ಲಿ ರಾಜಕಾರಣ ಮಾಡಲು ನನಗೆ ಇಷ್ಟವಿಲ್ಲ. ನೀವು ಹಾಗೆ ಮಾಡಿದ್ದಲ್ಲಿ ನಾನು ನಿಮ್ಮೊಂದಿಗೆ ಇರುವುದಿಲ್ಲವೆಂದು ಪಟ್ಟೆನೆ ಹೇಳಿದ್ದೆ. ಗೌರವ ಪ್ರತಿಯೊಂದು ತಲುಪಿದಾಗ ನನಗೇಕೆ ಅಚ್ಚರಿ ಮತ್ತು ಸಂತೋಷವಾಯಿತೆಂದು ವಿವರಿಸುತ್ತಿರುವಾಗಲೆ ಅದೇಕೋ ಈ ಸಂಗತಿ ನೆನಪಾಯಿತು. ನನಗೆ ಸರಿ ಕಂಡದ್ದನ್ನು ಬರೆಯುವುದು. ಬರೆದದ್ದನ್ನು ಯಾವುದಾದರೂ ಪತ್ರಿಕೆಗೆ ಕಳಿಸುವುದು ಮತ್ತು ನನ್ನ ಪಾಡಿಗೆ ಇದ್ದುಬಿಡುವುದು ನನ್ನ ರೀತಿ. ಒಬ್ಬೊಂಟಿ ಇದ್ದವನಿಗೆ ಯಾರೋ ಹಾದಿಹೋಕನೊಬ್ಬ ಅಡ್ಡ ನಿಲ್ಲಿಸಿ ಮಾತನಾಡಿಸಿದರೆ ಸಂತೋಷವಾಗುವುದಿಲ್ಲವೆ? ಹಾಗಾಯಿತು ನನಗೆ.
ವಸಂತ ಬನ್ನಾಡಿಯವರ ಹೆಸರನ್ನು ಅಲ್ಲಲ್ಲಿ ಕೇಳಿದ್ದೆ, ವಿಶೇಷವಾಗಿ ಶಬ್ದಗುಣ ಪತ್ರಿಕೆಯ ಮೂಲಕ ಅವರು ನನ್ನಲ್ಲಿ ಮರೆಯದಂತಾದರು. ನನಗೆ ಕಾವ್ಯ ಎಂದರೆ - ಮಹಾಕಾವ್ಯದ ಬೃಹತ್ ಚಿತ್ರವೆ ಕಣ್ಣಮುಂದೆ ನಿಲ್ಲುತ್ತದೆ, ಅದಕ್ಕಿಂತ ಭಾವಗೀತಾತ್ಮಕವಾದ ಸಣ್ಣ ರಚನೆಗಳೇ -ತುಂಬಾ ಇಷ್ಟ. ಅದರ ಸವಿಯನ್ನು ರೂಢಿಸಿದ್ದು ನನ್ನ ತಂದೆಯವರು. ಬರಗಾಲದಲ್ಲಿದ್ದ ನನಗೆ ಹೊಸ ಸಂಕಲನ ದೊರೆತದ್ದು ಸಂತೋಷವಾಗಲು ಮತ್ತೊಂದು ಕಾರಣವಾಗಿತ್ತು. ವಿಶೇಷವೆಂದರೆ ಬನ್ನಾಡಿಯವರು ಅದರೊಂದಿಗೆ ಇನ್ನೊಂದು ಪುಸ್ತಿಕೆಯನ್ನೂ ಇರಿಸಿದ್ದರು. ಅದು ಕವನ ಸಂಕಲನದಲ್ಲಿದ್ದ ಮುನ್ನುಡಿ ರೂಪದ ಬರಹವೆ ಆಗಿತ್ತು. ಇದೇನೋ ಹೊಸ ಬಗೆಯಾಗಿ ವಿಶೇಷವಾಗಿ ಕಂಡಿತು. ಅದನ್ನವರು ಮುನ್ನುಡಿಗೆ ಬದಲಾಗಿ ಬರೆದ ಲೇಖನವೆಂಬ ಉಪಶೀರ್ಷಿಕೆಯೊಂದಿಗೆ ಪ್ರಕಟಿಸಿದ್ದರು. ಸಾಮಾನ್ಯವಾಗಿ ನನಗೆ ಹಿನ್ನುಡಿ ಮುನ್ನುಡಿ ಬೆನ್ನುಡಿಗಳಿಗಿಂತ ನೇರ ಕವಿತೆಗಳಿಗೆ ಹೋಗಲು ಇಷ್ಟ. ಆದರೂ ಕವಿತೆಗಳನ್ನು ಓದಲು ಪ್ರಯತ್ನ ಪಡುತ್ತಲೇ ಮುನ್ನುಡಿ ರೂಪದ ಕಾವ್ಯ ಸ್ವರೂಪ ಕುರಿತು ಅಥವಾ ಅದರ ಸಂದರ್ಭ ಕುರಿತು ಇದ್ದಿರಬಹುದೆಂದು ಭಾವಿಸಿದ್ದ ಅವರ ಬರಹವನ್ನೂ ನೋಡತೊಡಗಿದೆ. ಒಮ್ಮ ಆರಂಭಿಸಿದೊಡನೆಯೆ ಒಂದೇ ಓಟದಲ್ಲಿ ಸಾಗಿ ಮುಗಿಸುವ ವರೆಗೂ ಬಿಡದೆ ಓದಿಸಿಕೊಂಡಿತು. "ನೆರೂಡ ಮತ್ತು ಬ್ರೆಕ್ಟ್ ಎಂಬ 'ಕೇತುಗ್ರಸ್ತ'ರೂ ಅನಂತಮೂರ್ತಿ ಪ್ರಣೀತ 'ಕಲಬೆರಕೆ ಸಾಹಿತ್ಯ ವಿಮರ್ಶೆ' ಎಂಬ ಶ್ರೇಣೀಕೃತ ವ್ಯವಸ್ಥೆಯೂ" ಎಂಬ ಹೆಸರಿನ ಆ ಪುಸ್ತಿಕೆ ಕುರಿತೆ ಬರೆಯಬೇಕೆಂದು ಅಂದಿನಿಂದ ಕಾಡಿದ್ದು ಇಂದು ಬರಹ ರೂಪ ಪಡೆಯುತ್ತಿದೆ.
00
ಶ್ರೇಷ್ಟತೆಯ ಹಣೆಪಟ್ಟಿ ಮತ್ತು ಅದರಿಂದ ದೊರಕುವ ಸ್ಥಾನಮಾನಗಳನ್ನು ನಿರ್ಲಕ್ಷಿಸಿದಾಗಲೇ ಲೇಖಕನೊಬ್ಬ ಚೈತನ್ಯಪೂರ್ಣವಾಗಿ ಮರುಹುಟ್ಟು ಪಡೆಯಬಲ್ಲನೆಂಬುದು ಬನ್ನಾಡಿ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮನ್ನು ಘಾತಿಸಿ ವಿಚಲಿತಗೊಳಿಸಿದ ಅಂಶಗಳನ್ನು ಹೀಗೆ ದಾಖಲಿಸಿದ್ದಾರೆ-
ಜ್ಞಾನಪೀಠಪ್ರಶಸ್ತಿ ಪಡೆದ ಕಂಬಾರರು ಬಿಜೆಪಿ ಸರಕಾರ ನೀಡಿದ ಲಕ್ಷಾಂತರ ರೂಪಾಯಿಗಳ ಕೊಡುಗೆಯನ್ನು ಯಾವ ಮಾತಿಲ್ಲದೆ ಪಡೆದದ್ದು.
ಇನ್ಫೋಸಿಸ್ ಮೂರ್ತಿ ಅವರ ಮೀಸಲಾತಿ ವಿರೋಧವನ್ನು ಮೌನವಾಗಿ ಅನಂತಮೂರ್ತಿ ಆಲಿಸಿದ್ದು. ಪ್ರಾದೇಶಿಕ ಭಾಷೆಯಲ್ಲೆ ಪ್ರಾಥಮಿಕ ಶಿಕ್ಷಣ ಪರವಾದ ವಾದದಲ್ಲಿ ತನಗಿಂತ ಇನ್ಫೋಸಿಸ್ ಮೂರ್ತಿ ಹೆಚ್ಚು ಪರಿಣಾಮಕಾರಿ ಎಂದು ಅನಂತಮೂರ್ತಿ ಅಭಿಪ್ರಾಯ ತಳೆದಿದ್ದು. ಕಾರ್ಪೋರೇಟ್ ರ ವಿರುದ್ಧ ಸಮಾಜವಾದಿ ಅನಂತಮೂರ್ತಿ ಮಾತು ಸೋತಂತೆ ಕಂಡಿದ್ದು.
ಕಂಬಾರರು ಪೇಜಾವರ ಶ್ರೀಗಳ ಕಾಲಿಗೆ ನಮಸ್ಕಾರ ಮಾಡುವುದು. ಕುವೆಂಪು ಹಾಗೆ ಕಂಬಾರ ಒಬ್ಬ ಶೂದ್ರ ಲೇಖಕನೆಂಬ ಒಪ್ಪಿತ ಜಾತಿ ಶ್ರೇಣೀಕರಣ ನೆಲೆಯಲ್ಲಿ ಸಾಮಾಜಿಕವಾಗಿ ಹೆಮ್ಮೆ ಪಟ್ಟಿದ್ದು.  ಕಂಬಾರ ತಮ್ಮನ್ನು ಎಡ ಬಲ ಪಂಥಗಳಿಗೆ ಕಟ್ಟಿ ಹಾಕಿಕೊಳ್ಳಲು ನಿರಾಕರಿಸಿರುವುದು.
ಇದು ಕಂಬಾರ ಮತ್ತು ಅನಂತಮೂರ್ತಿ ಅವರ ಅಸೂಕ್ಷ್ಮತೆ ಎಂಬುದು ಲೇಖಕರ ಗ್ರಹಿಕೆ. ಇದನ್ನು ಜೊತೆಗಾರರು ಒಪ್ಪಿ ಮುಂದುವರೆಸಬೇಕೆಂಬ ಅಘೋಷಿತ ವಾತಾವರಣ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸೃಷ್ಟಿಯಾಗಿರುವುದು. ಪ್ರಭುತ್ವ ಮತ್ತು ಎಡವಾದ ವಿರೋಧಿ ನಿಲುವಿನ ಕಾರಂತರು ತಮ್ಮ ಕೊನೆಗಾಲದಲ್ಲಿ ರಾಮಜನ್ಮ ಭೂಮಿ ಪರ ದನಿಯೆತ್ತಿದ್ದರಿಂದ ಬಲಪಂಥೀಯರು ಪ್ರತಿವರ್ಷ ಕಾರಂತರ ಹೆಸರಿನಲ್ಲಿ ಉತ್ಸವ ಸಂಘಟಿಸುತ್ತಿರುವುದು ಇದಕ್ಕೆ ಕಾರಣ ಎಂಬುದು ಬನ್ನಾಡಿ ದೃಷ್ಟಿ.
ಎಡಪಂಥೀಯ ಲೇಖಕರನ್ನು ಕೇತುಗ್ರಸ್ತರೆಂದು ಕರೆಯುವ ಅನಂತಮೂರ್ತಿ ಬಲಪಂಥೀಯ ಚಿದಾನಂದಮೂರ್ತಿಗೆ ಗೌರವ ಡಾಕ್ಟರೇಟ್ ನೀಡುವಲ್ಲಿ ತಕರಾರು ತೆಗೆದ ರಾಜ್ಯಪಾಲರ ವಿರುದ್ಧ ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಪ್ರತಿಭಟಿಸಿದ್ದು ಮತ್ತು ಮುಖ್ಯಮಂತ್ರಿಗಳ ಅಕ್ರಮ ಗಣಿಗಾರಿಕೆ ವಿರುದ್ಧ ಸಿಟ್ಟು ಕಾರಿದ್ದವರು ವಿಶ್ವ ಕನ್ನಡ ಸಮ್ಮೇಳನಲ್ಲಿ ಅದೇ ಮುಖ್ಯಮಂತ್ರಿ ಪಕ್ಕ ನಾಚಿ ವಿನಯದಿಂದ ನಿಂತಿದ್ದು. ಸಾಹಿತ್ಯ ವಲಯದ ಅಭಿಮಾನಿಗಳ ಕಣ್ಣಲ್ಲಿ ಬೌದ್ಧಿಕ ಪ್ರಭಾವ ಬೀರುವಂಥ ಅನಂತಮೂರ್ತಿ ಅವರ ಸದಾ ಅನ್ ಪ್ರಿಡಕ್ಟಬಲ್ ನಡೆ ಕೂಡ ಪ್ರಿಡಕ್ಟಬಲ್ ಆಗಿರುವುದು.
ಇದರ ಆರಂಭ ನವೋದಯದ ಎದುರು ನವ್ಯದ ಬರಹಗಾರರು ತಮ್ಮ ಅನುಕೂಲವಾದಿ ನಿಲುವಿಗೆ ತಕ್ಕ ಎಕ್ಲೆಕ್ಟಿಕ್ ಧೋರಣೆ ಅನುಸರಿಸಿದ ಅರವತ್ತರ ದಶಕದಲ್ಲೆ ಶುರುವಾದದ್ದು. ಇದರಿಂದ ಎಲ್ಲ ವಿಚಾರಧಾರೆಗಳನ್ನು ಮುಸುಕು ಮಾಡಿ ತಮ್ಮನ್ನು ತಾವೆ ಸ್ಥಾಪಿಸಿಕೊಳ್ಳುವ ಅವಕಾಶ ಪಡೆದದ್ದು. ಈ ಕಾರ್ಯ ವಿಧಾನದಿಂದ ಅಡಿಗ ಮತ್ತು ಅನಂತಮೂರ್ತಿ ನವ್ಯದ ಮುಖ್ಯ ಬರಹಗಾರರಾಗಿ ಹೊರಹೊಮ್ಮಿದ್ದು. ಅನಂತಮೂರ್ತಿಯವರ ಅನುಕೂಲವಾದಿ ಎಕ್ಲೆಕ್ಟಿಕ್ ವಿಧಾನದಲ್ಲಿ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯದ ಆಧುನಿಕ ಜಗತ್ತಿನ ಬಹುಮುಖ್ಯ ಚಿಂತಕರು, ಕಲಾವಿದರು ಮತ್ತು ರಾಜಕಾರಣಿಗಳೆಲ್ಲ ಅತಾರ್ಕಿಕವಾಗಿ ಸ್ಥಾನ ಪಡೆಯುವುದು. ರಾಹುಗ್ರಸ್ತನಾದ ಎಸ್ ಎಲ್ ಭೈರಪ್ಪ ಗಿರೀಶ್ ಕಾಸರವಳ್ಳಿಯಿಂದ ರಾಹುಮುಕ್ತನಾಗುವುದು. ಎಡವಾದಿ ಬರಹಗಾರರು ಕೇತುಗ್ರಸ್ತರಾಗುವುದು. ಇವೆಲ್ಲ ಯಾರನ್ನೋ ಎತ್ತಿಹಿಡಿಯಲು ಮತ್ತು ಇನ್ಯಾರನ್ನೋ ಬದಿಗೊತ್ತಲು ಉದ್ದೇಶಪೂರ್ವಕವಾಗಿ ಬಳಕೆಯಾಗಿ ನೇತಾತ್ಮಕ ಪರಿಣಾಮ ಹೊಂದಿರುವುದು. ಸೃಜನಶೀಲತೆ ಚೌಕಟ್ಟಿನಲ್ಲಿ ಬಲಪಂಥೀಯತೆ ಮತ್ತು ಶ್ರೇಷ್ಟತೆಯ ಪರಿಕಲ್ಪನೆಗಳನ್ನು ಮುಂದುಮಾಡುವಲ್ಲಿ ಎಲಿಯಟ್ ನನ್ನು ಬಳಸಿಕೊಳ್ಳುವುದು. ಈ ಮೂಲಕ ತಾವು ಕೆಲವರು ಮಾತ್ರ ಶ್ರೇಷ್ಟ ಮತ್ತು ಎತ್ತರದ ಬರಹಗಾರರೆಂದು ಬಿಂಬಿಸಿರುವುದು ಮತ್ತು ಅಂಥ ಭ್ರಮೆಯನ್ನು ರೂಢಿಸುವ ಅಭಿಮಾನಿಗಳನ್ನು ಪೋಷಿಸಿರುವುದು. ಇಂಥ ಪ್ರಾಮಾಣಿಕವಾದ  ಅಪ್ರಾಮಾಣಿಕತೆ ಮತ್ತು ಠಕ್ಕಿನ ಪ್ರೌಢವಿಮರ್ಶೆ ಒಳಗೊಂಡ ವಿಮರ್ಶಕರ ಪುಡಾರಿ ರಾಜಕಾರಣ ಕುರಿತು ತೇಜಸ್ವಿ ಎತ್ತಿದ ದನಿಗೆ ಕಿವಿಗೊಡದೆ ಅದೇ ವರಸೆ ಹೂಡಿರುವುದು. ಎಡವಾದಿ ಬರಹಗಾರರನ್ನು ಕನ್ನಡಕ್ಕೆ ಪರಿಚಯಿಸುವಾಗ ತಾವು ಸ್ವತಹ ಎಡವಾದಿಗಳಾಗಿ ನಂಬಿಸುವುದು ಮತ್ತು ಆ ಬರಹಗಾರರನ್ನು ಮತ್ತೆ ಕಣ್ಣಿಗೆ ಕಾಣದಂತೆ ಕಡೆಗಣಿಸುವ ಸೂಕ್ಷ್ಮ  ವಿಮರ್ಶಕರಾಗಿರುವುದು. ತೋರಿಕೆಗೆ ಯಾವಪಂಥಕ್ಕೂ ಸೇರದ, ಅಧಿಕಾರದ ಭಾಗವಾದ ಈ  ಪಂಥವನ್ನು ಬಲಪಡಿಸಲು ಕಮ್ಯುನಿಷ್ಟರು, ಸೋಶಲಿಸ್ಟರು, ಎಡಪಂಥೀಯರು, ಬಲಪಂಥೀಯರು ಜೊತೆಗೂಡಿ ಶ್ರಮಿಸುತ್ತಿರುವುದು.  .       
ಅರವತ್ತರ ದಶಕದಲ್ಲಿ ಕುವೆಂಪು ಎದುರು ಅಡಿಗರನ್ನು ಅತಿಶ್ರೇಷ್ಟ ಕವಿಯೆಂದು ಸ್ಥಾಪಿಸಿದ ಅನಂತಮೂರ್ತಿ ತಮ್ಮ ಅನುಕೂಲವಾದಿ ಎಕ್ಲೆಕ್ಟಿಕ್ ಧೋರಣೆಗೆ ತಕ್ಕಂತೆ ಈಗ ಕುವೆಂಪು ಅವರನ್ನು ಮಹಾಕವಿಯಾಗಿ ಬಿಂಬಿಸುತ್ತಿರುವುದು. ಅಡಿಗರನ್ನು ಒಪ್ಪಿದ್ದ ಲಂಕೇಶ್ ಮತ್ತು ತೇಜಸ್ವಿ ಮುಂದೆ ಅವರಿಂದ ಪೂರ್ತಿ ಕಳಚಿಕೊಂಡರೂ ಅನಂತಮೂರ್ತಿ ಹಠಕ್ಕೆ ಬಿದ್ದು ಅಡಿಗರ ಬಗ್ಗೆ ಬರೆದದ್ದು. ಎಡವಾದಿ ಮತ್ತು ಎಡವಾದಿಯಲ್ಲದ ಬ್ರೆಕ್ಟ್ ಮತ್ತು ರಿಲ್ಕ್ ಇಬ್ಬರೂ ಪಾಶ್ಚಾತ್ಯ ಮತ್ತು ಪೌರ್ವಾತ್ಯರಲ್ಲಿ ಅತ್ಯಗತ್ಯವೆಂದು ಅದೇ ನೆಲೆಯಲ್ಲೇ ಪ್ರತಿಪಾದಿಸಿದ್ದು. ಹಾಗಾಗಿ ರಿಲ್ಕೆ ಹೇಳುವಂತೆ ಕನ್ನಡದ ಹೊಸ ಬರಹಗಾರರು ಸಾಹಿತ್ಯ ವಿಮರ್ಶೆಯನ್ನು ಅತಿ ಕಡಿಮೆ ಓದಬೇಕು. ಏಕೆಂದರೆ ಇಂದು ವಿಮರ್ಶೆ ಅಪಕಲ್ಪನೆಯನ್ನು ಹಬ್ಬಿಸುವಂತದ್ದು, ತಮಗೆ ಬೇಕಾದ ಅರ್ಥವನ್ನು ಹೊರಡಿಸುವಂಥದ್ದು, ಆಯ್ದ ಕೆಲವರನ್ನು ವಿಮರ್ಶಾತೀತರೆಂದು ಬಿಂಬಿಸುವಂಥದ್ದು, ತಮಗೆ ಬೇಕಾದವರನ್ನು ಸ್ಥಾಪಿಸಿಕೊಳ್ಳುವ ಹುನ್ನಾರದ್ದು, ಸಂಸ್ಕೃತಿಯ ಧಾರ್ಷ್ಟ್ಯ ಮೆರೆಸುವಂಥದ್ದು, ಲೇಖಕರನ್ನೂ ಕೃತಿಗಳನ್ನೂ ಶ್ರೇಣೀಕರಣಕ್ಕೊಳಪಡಿಸುವಂಥದ್ದು. ಇಂಥ ವಿಮರ್ಶಾ ಪರಂಪರೆಯನ್ನು ರೂಢಿಸಿದ ಅಡಿಗ ಮತ್ತು ಅನಂತಮೂರ್ತಿ ನವೋದಯದ ಮುಖ್ಯ ಬರಹಗಾರರ ಓದಿನಿಂದ ವಿಮುಖವಾಗಲು ಕಾರಣರಾದದ್ದು.
ಹುಸಿ ಕ್ರಾಂತಿಕಾರರಾದ ಅಡಿಗ, ಅನಂತಮೂರ್ತಿ ಎತ್ತಿ ಹಿಡಿದಿದ್ದೆಲ್ಲ ಆರ್ಷೇಯ ತತ್ವಗಳೇ, ಉಳಿಸಿಕೊಂಡಿದ್ದೆಲ್ಲ ಬಹುಸಮುದಾಯ ಪರ ಆಶೋತ್ತರ ವಿರೋಧಿ ಪೇಜಾವರರ ಬಾಂಧವ್ಯವೇ. ಹಾಗಾಗಿ ಕುವೆಂಪು ಅವರ ಮಲೆಗಳಲಿ ಮದುಮಗಳು ಅನಂತಮೂರ್ತಿಗೆ ಕೇಂದ್ರ ಪ್ರಜ್ಞೆಯಿಲ್ಲದೆ ವಿವರಗಳಲ್ಲಿ ಸೊಕ್ಕಿಬಿಡುವ ಕಾದಂಬರಿಯಾಗಿದ್ದರೆ ಅಡಿಗರ ನಮ್ಮ ಸಂಸ್ಕೃತಿ ಅತ್ಯುತ್ಸಾಹ ಹುಟ್ಟಿಸುತ್ತದೆ. ಇದರಿಂದಾಗಿ ಲಂಕೇಶ್ ದೃಷ್ಟಿಯಲ್ಲಿ ಅನಂತಮೂರ್ತಿ ವಿಮರ್ಶೆ ಗುಂಪುಗಾರಿಕೆ, ಜಾತಿ, ಅಹಂಕಾರ, ಸ್ವಪ್ರದರ್ಶನ ಮುಂತಾದ್ದರ ಜೊತೆಗೆ ಗಣ್ಯತೆಯ ಆಶೀರ್ವಾದ ರೂಪದಲ್ಲಿ ಇರುವುದರಿಂದ ಪ್ರಶ್ನಾರ್ಹವಾಗಿ ಕಂಡಿದೆ.
ಆದರೂ ಕೃತಿಶ್ರೇಣಿ ಕಟ್ಟುವ ಕೆಲಸ ಭರದಿಂದ ಸಾಗಿದೆ. ಲೇಖಕರದೊಂದು ವರ್ಗ ಒಳ್ಳೆಯ ಮನುಷ್ಯನೋ ಒಳ್ಳೆಯ ಲೇಖಕನೋ ಆಗುಳಿಯಲು ಪಣ ತೊಟ್ಟುನಿಂತಿದೆ. ಇದರ ಭಾಗವಾಗಿ ಝೆನ್ ತಾವೋ ಫಿಲಾಸಫಿಗಳಿಗಾಗಿ ತವಕ ಕಾಣಿಸಿಕೊಂಡಿದೆ. ಜಗತ್ತಿನ ಸಜ್ಜನರೇ ಆಗಿ ಅಥವಾ ಸಜ್ಜನರಂತೆ ನಟಿಸುತ್ತಿರುವ ಇವರಿಗೆ ಬಿಕ್ಕಟ್ಟಿನ ನಡುವೆ ಬದುಕಿ ಬರೆದ ಬರಹಗಾರರು ಯಾರೂ ಅರ್ಥವಾಗದೆ ಹೋಗಿದ್ದಾರೆ.
ಇದು ಲೇಖಕನ ಚೈತನ್ಯಪೂರ್ಣ ನಡೆಯಾಗಿರದೆ ಹುಸಿ ಪರಿಕಲ್ಪನೆಯ ಶ್ರೇಷ್ಟತೆಯ ಹಣೆಪಟ್ಟಿ ಮತ್ತು ಅದರಿಂದ ದೊರಕುವ ಸ್ಥಾನಮಾನಗಳಿಗಾಗಿ ನಡೆಯುತ್ತಿರುವ ಹುನ್ನಾರವಾಗಿದೆ ಎಂಬುದು ಬನ್ನಾಡಿ ಆತಂಕವಾಗಿದೆ.
00
ಅಷ್ಟರಲ್ಲಿ ಈ ಸಲದ 'ಸಂಕ್ರಮಣ'ದಲ್ಲಿ "ಅನಂತಮೂರ್ತಿ ಮತ್ತು ಸಾಂಸ್ಕೃತಿಕ ರಾಜಕಾರಣ" ಎಂಬ ಹೆಸರಿನಲ್ಲಿ ಇದೇ ಬರಹದ ಆಯ್ದ ಭಾಗ ಪ್ರಕಟವಾಗಿದೆ.  ಈ ಶೀರ್ಷಿಕೆಯನ್ನು ಬನ್ನಾಡಿಯವರೇ ನೀಡಿದರೊ ಸಂಪಾದಕ ಚಂಪಾ ನೀಡಿದರೊ ಗೊತ್ತಿಲ್ಲ. ಈ ಬರಹ ನೆಪ ಮಾತ್ರಕ್ಕೆ ಕಂಬಾರ ಮತ್ತು ವಿಶೇಷವಾಗಿ ಅನಂತಮೂರ್ತಿ ಅವರು ಸಾಹಿತ್ಯ ವಲಯವನ್ನೂ ಅದರಿಂದ ಮರುರೂಪ ಪಡೆಯುತ್ತಿರುವ ಸಾಂಸ್ಕೃತಿಕ ಪರಿಸರವನ್ನೂ ಮುನ್ನಡೆಸುತ್ತಿರುವ ಬಗೆ ಯಾವುದೆಂದು ಕಾಣಿಸುತ್ತದೆ. ನವೋದಯ ಸಾಹಿತ್ಯಕ್ಕೆ ಇದಿರಾಗಿ ನವ್ಯದ ಮುಂಚೂಣಿ ಲೇಖಕರು ಶುರು ಮಾಡಿದ ಗುಂಪುಗಾರಿಕೆ ಮತ್ತು ಲಾಬಿಯ ಪ್ರಸ್ತಾಪ ಮುಂದಿಟ್ಟುಕೊಂಡು  ಈ ಬರಹವನ್ನು 'ಸಾಂಸ್ಕೃತಿಕ ರಾಜಕಾರಣ' ಎಂಬ ಪಾರಿಭಾಷಿಕ ಪದಗಳನ್ನು ಬಳಸಿಕೊಂಡಿದೆ. ಅಲ್ಲದೆ ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಮೇಲುವರ್ಗ ಪರವಾದ ತಂತ್ರೋಪಾಯಗಳನ್ನು ಸಾಹಿತ್ಯ ವಲಯದಲ್ಲಿ ಮೇಲುವರ್ಗದಿಂದ ಬಂದ ಲೇಖಕರ ಪರವಾಗಿ ಹೇಗೆ ಬಳಸಿದೆ ಎಂದೂ ವಿವರಿಸಲು ಪ್ರಯತ್ನಿಸಿದೆ. ಇದರ ಚಾಲಕ ಬಿಂದುವಾಗಿ ಅನಂತಮೂರ್ತಿಯವರನ್ನು ಪರಿಷ್ಕೃತ ಶೀರ್ಷಿಕೆ ಕಾಣಿಸಿದೆ. ಈ ಹಿನ್ನೆಲೆಯಲ್ಲಿ 'ಸಾಂಸ್ಕೃತಿಕ ರಾಜಕಾರಣ' ಎಂಬ ಪದಗಳನ್ನು ಬಳಸಿ ಈ ಬರಹದ ಕೇಂದ್ರಬಿಂದುವಾಗಿ ನೋಡಲು ಬಯಸಲಾಗಿದೆ. ಇದರ ನೋಟವೇ ಭಾರತೀಯ ಅಥವಾ ಕನ್ನಡ ಸಮಾಜದ ಸಮಗ್ರ ಜೀವನದ ರೂಪುರೇಷೆಯ ತಂತ್ರೋಪಾಯಗಳು ಎಂದಾಗುತ್ತದೆ. ಮೇಲುವರ್ಗದ ಲೇಖಕರ ಪರವಾದ ತಂತ್ರೋಪಾಯಗಳನ್ನು ರೂಪಿಸಿದ ಬಗೆಗಳ ಕುರಿತು ಮಾತ್ರ ಒಂದು ಮಟ್ಟಿಗೆ ವಿವರಗಳಿವೆ. ಇದು ಬಹು ಸಮುದಾಯ ಕೇಂದ್ರಿತ ಸಮಾಜ ಏಕ ಸಮುದಾಯ ನಿಷ್ಟವಾಗಿ ತರತಮ ಶ್ರೇಣಿಯಲ್ಲಿರಬೇಕೆಂಬ ಏಕ ಸಮುದಾಯ ಕೇಂದ್ರಿತ ಹಿತಾಸಕ್ತಿಯಾಗಿದೆ. ಇದರೊಂದಿಗೆ  ಬಹುಸಮುದಾಯ ನಿಷ್ಟ ಕೊಳುಕೊಡೆಗಳೆಲ್ಲ ಸಮಾನ ಏಕ ಸಾಮಾಜಿಕ ನೆಲೆಯಲ್ಲಿ ಬಲಗೊಂಡು ಭದ್ರಗೊಳ್ಳಬೇಕಾದ ಸರ್ವ ಸಮುದಾಯ ನಿಷ್ಟ ಹಿತಾಸಕ್ತಿ ಕೂಡ ಅಷ್ಟೇ ಮುಖ್ಯವಾಗಿದೆ. 
ಬನ್ನಾಡಿಯವರ ಬರಹ ಮೊದಲ ಹಂತವನ್ನು ಮಾತ್ರ ಗಮನ ಸೆಳೆಯಲು ಪ್ರಯತ್ನಿಸಿದೆ. ಸಾಹಿತ್ಯ ವಲಯದ ಸಾಹಿತ್ಯೇತರ ಬೆಳವಣಿಗೆ ಕುರಿತು ಬನ್ನಾಡಿ ಬರಹ ಎತ್ತಿದ ಪ್ರಮುಖ ಪ್ರಶ್ನೆಗಳ ಪ್ರಾಮುಖ್ಯತೆ ಮನವರಿಕೆಯಾಗಲು ನಂತರದ ಹಂತವೂ ಚಾಲ್ತಿ ಪಡೆಯಬೇಕಿದ್ದು ಅದರ ಕೊರತೆಯಿಂದ ಲೇಖಕರು ಡಿಸ್ಟರ್ಬ್ ಆಗಿರುವಂತೆ ಕಾಣುತ್ತದೆ. ಇದು ಬಹು ಸಮುದಾಯ ಕೇಂದ್ರಿತ ಆಸಕ್ತಿಯಿಂದ ಹುಟ್ಟಿದುದು ಎಂದು ಹೇಳಬಹುದು.
00   
ನನ್ನ ಈ ಮೇಲ್ ಗೆ ಆಗಾಗ ಗೊತ್ತು ಗುರಿ ಇಲ್ಲದೆ ಹಲವಾರು ಮೇಲ್ ಸಂದೇಶಗಳು ಬರುತ್ತಿರುತ್ತಿವೆ. ಅವುಗಳಲ್ಲಿ ಜಾಗತಿಕ ಪ್ರಮಾದಗಳು ಎಂಬ ಹೆಸರಿನ ಇತ್ತೀಚಿನ ಮೇಲ್ ಒಂದು ಗಮನ ಸೆಳೆಯಿತು. ಅದು ಹೀಗಿದೆ. "ಜಾಗತಿಕ ಪ್ರಮಾದಗಳು 1. ದುಡಿಯದೆ ಗಳಿಸುವ ಸಂಪತ್ತು 2. ಮನಸ್ಸಾಕ್ಷಿ ಇಲ್ಲದ ಸಂತೋಷ 3. ನಡತೆಗೆಟ್ಟ ಜ್ಞಾನ 4. ನೈತಿಕತೆ ಇಲ್ಲದ ವ್ಯಾಪಾರ 5. ಮಾನವೀಯತೆ ಇಲ್ಲದ ವಿಜ್ಞಾನ 6. ತ್ಯಾಗವಿಲ್ಲದ ಪೂಜೆ 7. ತತ್ವವಿಲ್ಲದ ರಾಜಕೀಯ 8. ಜವಾಬ್ದಾರಿ ಇಲ್ಲದ ಹಕ್ಕು". ಈ ಮಾತುಗಳು ಮಾನವನ ಸಾಧಕ ವಿವೇಕ ಪ್ರಜ್ಞೆ ಹಿಡಿಯಬೇಕಾದ ಕಠಿಣ ಸೂಕ್ಷ್ಮ ಹಾದಿಯ ಸ್ವರೂಪ ಚಹರೆಯಾಗಿವೆ. ಪ್ರಾಮಾಣಿಕವಾದ ಅಪ್ರಾಮಾಣಿಕತೆಯನ್ನು ಬಿಚ್ಚಿನೋಡಬೇಕಾದಲ್ಲಿ ಇಂಥ ಮಾತುಗಳು ಆಧಾರವಾಗಲಿವೆ.  
00
ನಾನು ಅನಂತಮೂರ್ತಿಯವರನ್ನು ಮೊದಲು ಕಂಡದ್ದು 1980ರಲ್ಲಿ. ಆಗವರು ಮಹಾರಾಜ ಕಾಲೇಜಿನ ಕ್ಯಾಂಟೀನಲ್ಲಿ ತಮ್ಮ ಸ್ನೇಹಿತರೆದುರು ಕುಳಿತು ಎಂದೆಂದೂ ಮುಗಿಯದ ಕತೆಯ ಗಹನತೆಯನ್ನು ಒಪ್ಪಿಸುವಲ್ಲಿ ಮುಳುಗಿದ್ದಂತೆ ಇತ್ತು. ಆ ಹೊತ್ತಿಗಾಗಲೇ ನಾನು  ಅವರ ಸಂಸ್ಕಾರ ಓದಿದ್ದೆ ಮತ್ತು ಘಟಶಾದ್ಧ ನೋಡಿದ್ದೆ. ಬರಹಗಾರನೊಬ್ಬ ಮೈಮರೆತು ತನ್ನ ಬರವಣಿಗೆಯ ಯಾವುದೇ ಅಂಶವನ್ನು ಕೃತಿಯ ಹೊರಗೆ ಪ್ರಬಲವಾಗಿ ಪ್ರತಿಪಾದಿಸುವುದೋ ಒಪ್ಪಿಸುವುದೋ ಮಾಡಬೇಕೆ? ಎಂದೆನಿಸಿ ನನಗಾಗ ವಿಚಿತ್ರವೆನಿಸಿತ್ತು. ಅದೇ ವರ್ಷ ನಾನವರನ್ನು ಅವರ ವಿಭಾಗದ ಕೊಠಡಿಯಲ್ಲಿ ಕಂಡು ಅವಸ್ಥೆ ಕುರಿತು ಮಾತಾಡಿದೆ. ಅವರನ್ನು ಅವರ `ಅಭಯ' ಮನೆಯಲ್ಲಿ ಸಂಜೆ ನಾಲ್ಕರ ಹೊತ್ತಲ್ಲಿ ಕಂಡಾಗ ಮಹಾನ್ ಲೇಖಕನ ವಿಶಿಷ್ಟ ಸರಳ ಜೀವನ ಬಿಂಬಿತವಾಗುವ ವಿನ್ಯಾಸ ಸಹಜವಾಗಿರದೆ ಉದ್ದೇಶಪೂರ್ವಕವಾಗಿ ಸಾಧಿಸಿದಂತೆ ಇತ್ತು. ಅನಂತಮೂರ್ತಿ ಮಹಾನ್ ವ್ಯಕ್ತಿತ್ವವೊಂದನ್ನು ಆವಾಹಿಸಿಕೊಂಡು ನಟಿಸುತ್ತಿದ್ದುದು ಅವರ ಪ್ರತಿಯೊಂದು ಮಾತಿನ ರೀತಿ, ದೈಹಿಕ ಭಾಷೆ ನುಡಿಗೊಡುತ್ತಿತ್ತು. ಏನೂ ಅಲ್ಲದ ಪ್ರಾಣಿಯೊಂದು ತಾನು ಹುಲಿಯೆಂದು ನಂಬಿಸಿ ನಟಿಸುತ್ತಿರುವಂತೆ ಇತ್ತು ಅದು. ತನ್ನ ಸಹಜ ಶಕ್ತಿಯನ್ನು ನಿರಾಕರಿಸಿ ಅದಕ್ಕೂ ಹೆಚ್ಚಿನವನೆಂದು ತೋರಿಸಿಕೊಳ್ಳುವ `ಸಾಮಾನ್ಯನಂತೆ ಈ ನಾನು' ಎಂಬ ಈಗೋ ಪ್ರದರ್ಶನವಾಗಿತ್ತು. ಮತ್ತೊಮ್ಮೆ ರಾತ್ರಿ 8-30ರ ಹೊತ್ತಿನಲ್ಲಿ ಹೋಗಿದ್ದೆ. ಮಹಡಿಯ ಮೇಲೆ ಕುಳಿತು ಸೋಮಯಾಜಿ ಮತ್ತಿತರರೊಂದಿಗೆ ಗುಂಡು ಹಾಕುತ್ತಿದ್ದರು. ನಾನು ಮೇಲೆ ಹೋದಂತೆಯೆ ಹಿ ಕೇಮ್ ಅಂದ ಹಾಗಾಯಿತು. ಕೂಡಲೇ ಅಲ್ಲಿದ್ದ ಆಪ್ತವಾಗಿ ಹರಟುತ್ತಿದ್ದ ಸದರ ವಾತಾವರಣ ಮಾಯವಾಗಿತ್ತು. ಅಸಹಜವಾದ ಗಂಭೀರ ಮೌನ ಆವರಿಸಿತ್ತು. ಆ ಕೃತಕತೆ ಒಳಹೊರಗು ಬೇರೆಯಾದ ಕಪಟ ಸಾನಿಧ್ಯವನ್ನು ಸಾರುತ್ತಿತ್ತು. ಕಮಟು ವಾಸನೆ ಮೂಗಿಗಡರಿತು. ಅದೇ ಕೊನೆ ಮತ್ತೆ ಕಾಣಲು ಹೋಗಲಿಲ್ಲ.
ಅನಂತಮೂರ್ತಿ ಕನ್ನಡ ಮತ್ತು ಕನ್ನಡ ನಾಡು ಕುರಿತ ಸಮಸ್ತ ವಿಚಾರಗಳಲ್ಲಿ ವೇದಿಕೆ ಹತ್ತಿದ್ದಾರೆ. ಅವರದು ಈ ಎಲ್ಲ ವಿಚಾರಗಳಲ್ಲಿ ತಮ್ಮ ಪ್ರಾಮಾಣಿಕ ಅಭಿಪ್ರಾಯ ಸಲಹೆ ಸೂಚನೆ ನೀಡುವ ಪ್ರಯತ್ನ ಮಾಡಿದ್ದಾರೊ ಇಲ್ಲವೋ ಅದು ಬೇರೆ ಮಾತು. ಅದಕ್ಕಿಂತ ಅವರ ಮಾತು ತಮ್ಮ ಹೆಗ್ಗಳಿಕೆ ಮೆರೆಯುವ ಮತ್ತು ಒಪ್ಪಿಸುವ ಪ್ರಬಲ ವಿಧಾನ ಮಾದರಿಯಲ್ಲಿರುವುದೆ ಹೆಚ್ಚು. 
00
ಸಂಸ್ಕಾರ ಪ್ರಗತಿಪರ ವಿಚಾರಧಾರೆ ಪ್ರತಿಪಾದಿಸುವ ಕಾದಂಬರಿಯೆಂದೆ ಪ್ರಸಿದ್ಧ. ಅವರು ಈ ಕಾದಂಬರಿ ಬರೆದದ್ದು ಮಾತ್ರ ತಾವು ಮದುವೆಯಾಗುವ ಮುನ್ನ ಅಥವಾ ನಂತರದ ವರ್ಷದಲ್ಲಿ ಎಂಬುದು ಸ್ಪಷ್ಟವಿದೆ. ಅನಂತಮೂರ್ತಿ ಇಷ್ಟ ಪಟ್ಟಿದ್ದು ಮತ್ತು ಮದುವೆಯಾದದ್ದು ಕ್ರಿಶ್ಚಿಯನ್ ಕುಟುಂಬದ ಎಸ್ತರ್ ಅವರನ್ನು ಎಂಬುದು ಲೋಕಕ್ಕೆ ತಿಳಿದ ವಿಚಾರವೆ. ಸಂಪ್ರದಾಯಸ್ಥ ಶಿವಳ್ಳಿ ವೈಷ್ಣವ ಬ್ರಾಹ್ಮಣ ಕುಟುಂಬದಿಂದ ಬಂದ ಅನಂತಮೂರ್ತಿ ಆ ಸಮುದಾಯದ ಸಮರ್ಥ ಪುರುಷ ಪ್ರತಿನಿಧಿ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ತಮ್ಮ ಇಷ್ಟಾರ್ಥ ಸಾಧನೆಯ ಹಾದಿಯಲ್ಲಿ ಇಡೀ ಸ್ವಕುಲ ಸಮುದಾಯವನ್ನು ಎದುರಿಸಬೇಕಾದ ಸಂದರ್ಭ ಅವರಿಗೆ ಎದುರಾಯಿತು. ಅವರು ಅದನ್ನು ಎದುರಿಸಿದ ಬಗೆ ಮಾತ್ರ ಬೇರೆ ಬಗೆಯದು ಅಷ್ಟೇ. ಆಗ ಅವರಿಗೆ ತಮ್ಮ ಸಂಪ್ರದಾಯಸ್ಥ ಬ್ರಾಹ್ಮಣ ಸಮುದಾಯದ ಕರ್ಮಠ ಆಚಾರ ವಿಚಾರಗಳಲ್ಲಿ ಅಡಗಿರುವ ಕುಂದುಕೊರತೆಗಳು ಹೇಗೆ ಮಾನವ ಜನಾಂಗದೆದುರು ತಲೆತಗ್ಗಿಸುವಂಥಾದ್ದಾಗಿವೆ ಎಂದು ಕಂಡಿತು. ಅಷ್ಟೇಅಲ್ಲ ಆ ಸಮುದಾಯದ ಒಳಗಿನ ವ್ಯಕ್ತಿಯಾಗಿ, ಆ ಸಮುದಾಯ ಹೆಮ್ಮೆ ಪಡುವ ರೀತಿಯಲ್ಲಿ ಸುಧಾರಣೆಗೆ ಒಳಪಡಿಸುವ ಕ್ರಮವನ್ನೂ ಕೈಗೆತ್ತಿಕೊಂಡರು. ಆದರೆ ಅದನ್ನು ವಾಸ್ತವ ಜೀವನದಲ್ಲಿ ಅವರು ಪ್ರಯೋಗಕ್ಕೆ ಒಳಪಡಿಸಲಿಲ್ಲ. ಅದಕ್ಕೆ ಬಹುಶಹ ಸಂಪ್ರದಾಯಸ್ಥ ಬ್ರಾಹ್ಮಣ ಸಮಾಜದಿಂದ ಎದುರಾಗುವ ಪ್ರತಿರೋಧವನ್ನು ಎದುರಿಸಲು ಸಾಧ್ಯವಿಲ್ಲವೆಂಬ ವಾಸ್ತವ ಸತ್ಯದ ಮನವರಿಕೆ ಅವರಿಗಿದ್ದಿರಬಹುದು. ಅವರ ತುರ್ತು ಸಮಾಜ ಸುಧಾರಣೆ ಮಾಡುವುದು ಆಗಿರದೆ ಇದ್ದದ್ದು ಮತ್ತೊಂದು ಕಾರಣವೂ ಅಗಿದ್ದಿಬಹುದು. ಹಾಗಾಗಿ ಕಲ್ಪಿತ ಸಂಗತಿಗಳ  ನಿರೂಪಣೆಯೆಂದು ಸ್ವಸಮರ್ಥನೆಗೆ ಗಟ್ಟಿನೆಲವಾದ ಮತ್ತು ಎದುರಾಳಿಗಳಿಂದ ತಪ್ಪಿಸಿಕೊಳ್ಳಲು ಸುಲಭ ಜಾರುಬಂಡೆಯಾದ ಬರಹದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆ ಹೊತ್ತಿಗಾಗಲೇ ಶಿವಮೊಗ್ಗ ಜಿಲ್ಲೆ ಸಮಾಜವಾದಿ ಚಳವಳಿಯಿಂದ ಪ್ರಗತಿಪರ ವಿಚಾರ ಪ್ರತಿಪಾದಿಸುವ ಪ್ರದೇಶವಾಗಿ ಹೊರಹೊಮ್ಮಿತ್ತು. ತಮ್ಮ ಈ ನಡೆ ಜಿಲ್ಲೆಯ ಮತ್ತು ನಾಡಿನ ಎಲ್ಲ  ಪ್ರಗತಿಪರ ಚಿಂತಕರು ಮತ್ತು ಸಮಾಜವಾದಿ ಗುಂಗಿನಲ್ಲಿರುವರನ್ನು ತನ್ನ ಬೆಂಬಲಿಗರನ್ನಾಗಿ ಮಾಡುತ್ತದೆ ಎಂದು ಕೂಡ ಅವರ ಅರಿವಿಗೆ ತೋರಿತ್ತು. ಅಲ್ಲದೆ ತನ್ನ ಸ್ವಹಿತಾಸಕ್ತಿ ಸಾಧನೆಗಾಗಿ ತನ್ನ ಸಮುದಾಯದ ವಿರುದ್ಧ ವೈಚಾರಿಕವಾಗಿ ಬಂಡೇಳುವುದರಿಂದ ತಾನೊಬ್ಬ ಪ್ರಾಮಾಣಿಕವಾದ ಅಪ್ರಾಮಾಣಿಕನೆಂದು ಬಿಂಬಿತನಾಗದೆ ಒಬ್ಬ ಪ್ರಗತಿಪರ ಚಿಂತಕನಾಗಿ ಹೊರಹೊಮ್ಮಲು ಸಾಧ್ಯವೆಂಬ ಹೊಳಹು ಅವರನ್ನು ಸಂಸ್ಕಾರ ಬರೆಯುವ ಹಾದಿಯಲ್ಲಿ ಮುನ್ನೆಡೆಸಿತು. ಸಣ್ಣ ಕತೆಯ ರೂಪದಲ್ಲಿ ಘಟಶ್ರಾದ್ಧವೂ ರೂಪ ತಳೆಯಿತು. ಅನಂತಮೂರ್ತಿಯವರು ಅಂದುಕೊಂಡ ಹಾಗೆಯೇ ಎಲ್ಲವೂ ತಾಳೆ ಬಿದ್ದಿದ್ದರಿಂದ ಅವರ ಮದುವೆಗೆ ತಮ್ಮ ಕುಟುಂಬದೊಳಗೆ ವೈಯಕ್ತಿಕ ಮಟ್ಟದಲ್ಲಿ ವಿರೋಧಗಳು ಉಂಟಾಗಿದ್ದಿರಬಹುದೆ ಹೊರತು ಸಂಪ್ರದಾಯಸ್ಥ ಬ್ರಾಹ್ಮಣ ಸಮುದಾಯ ಅವರ ವಿರುದ್ಧ ತೊಡೆತಟ್ಟಿ ನಿಲ್ಲಲು ಯಾವ ವೈಚಾರಿಕ ಬಲವೂ ಇಲ್ಲದಂತಾಯಿತು.. ಹಾಗಾಗಿಯೆ ಅನಂತಮೂರ್ತಿ ತಮ್ಮ ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸಿದ ಪ್ರಗತಿಪರ ವಿಚಾರಗಳು ಮೂಲದಲ್ಲಿಯೆ ಆಗಲೀ ನಂತರದಲ್ಲಿಯೆ ಆಗಲೀ ಧಾರ್ಮಿಕ ಪ್ರತಿವಾದಿತನದ ರೂಪವನ್ನೂ ಪಡೆಯಲಿಲ್ಲ. ಅದು ಸಮಾಜ ಸುಧಾರಣೆಯ ಸುಳ್ಳುಬರುಕಿಯೇ ಹೊರತು ಅದರ ಗಂಭೀರ ಸ್ವರೂಪ ಪಡೆದುಕೊಳ್ಳಲಾಗಲಿಲ್ಲ. ಇದರಿಂದಾಗಿ ಈ ವಿಚಾರಗಳು ಅವರ ಬೌದ್ಧಿಕ ಬೆಳವಣಿಗೆಯಲ್ಲಿ ಯಾವ ನೆಲೆಯನ್ನೂ ಪಡೆದುಕೊಳ್ಳದಿರುವುದು ಅಚ್ಚರಿಯಾಗುವುದಿಲ್ಲ. ಇದು ನಿಜ ಕ್ರಾಂತಿಯಲ್ಲ ಹುಸಿ ಕ್ರಾಂತಿ ಎಂಬುದನ್ನು ಅವರ ಭಾರತಿಪುರ ಕಾದಂಬರಿಯ ವಸ್ತು ನಿರ್ವಹಣ ಕ್ರಮದಲ್ಲೆ ನಿರೂಪಿತವಾಗಿರುವುದು ಈಗಾಗಲೇ ಚರ್ಚಿತವಾಗಿರುವ ವಿಷಯವೇ ಆಗಿದೆ. ತಮ್ಮ ಮೊದಲ ಕಾದಂಬರಿಯೆಂದು ಹೇಳಿಕೊಂಡಿರುವ ಮತ್ತು ಇತ್ತೀಚೆಗಷ್ಟೆ ಪ್ರಕಟವಾಗಿರುವ ಕಾದಂಬರಿಯಲ್ಲಿ ತಮ್ಮ ವೈಯಕ್ತಿಕ ಜೀವನದ ಈ ಕಾಲ ಘಟ್ಟದ  ತಾಕಲಾಟಗಳ ಎಳೆ ಇರುವುದೆಂದು ಹೇಳಲಾಗಿದೆ. ಈ ಕೃತಿಯೇಕೆ ಬರೆದ ವರ್ಷದಲ್ಲೆ ಪ್ರಕಟವಾಗಲಿಲ್ಲೆಂಬುದು ಈ ಹಿನ್ನೆಲೆಯಲ್ಲಿಯೆ ನೋಡಬೇಕು.
 
ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಳವಳಿಯಿಂದ ಹುಟ್ಟಿದ ಜನನಾಯಕ ಗೋಪಾಲಗೌಡರ ಜೀವನ ಸಾಧನೆ ಬಿಂಬಿಸುವ ಕಾದಂಬರಿಯೆಂದು ಅವಸ್ಥೆ ಕುರಿತು ಹೇಳಲಾಗಿದೆ. ಅದು ಗೋಪಾಲಗೌಡರ ಜೀವನವನ್ನು ಚಿತ್ರಿಸುತ್ತದೆಯೋ ಅವರ ಜೀವನದ ವಿಕೃತ ರೂಪವನ್ನು ಕಟ್ಟಿಕೊಡುತ್ತದೆಯೋ? ಲಕ್ವ ಹೊಡೆದ ನಾಯಕನ ಸ್ಥಿತಿ ಸಮಾಜವಾದಿ ಚಳವಳಿ ಮತ್ತು ಅದರ ವಿಚಾರಧಾರೆಗಳು ತಲುಪಿದ ರೋಗಗ್ರಸ್ತವಾದ  ಅಸಹಾಯಕ ಸ್ಥಿತಿಯನ್ನು ಬಿಂಬಿಸುತ್ತದೆ. ಎಡವಾದಿ ಕಾರ್ಯಕರ್ತರು ಮತ್ತು ಸಂಘಟನೆಯ ದಾರುಣ ಸ್ಥಿತಿಯ ಚಿತ್ರಣ ಆ ಕುರಿತ ಲೇಖಕರ ಸಹಾನುಭೂತಿ ಯಾರ ಪರವೆಂದು ನಿರೂಪಿಸುತ್ತದೆ. ಅಲೌಕಿಕ ಶಕ್ತಿಯ ಮುದುಕನೊಬ್ಬನ ಪಾತ್ರ ಚಿತ್ರಣದ ಮುಂದೆ ನಾಯಕನ ಪಾತ್ರ ಚಿತ್ರಣ ಪೇಲವವಾಗಿದೆ. ನಾಯಕ ಮತ್ತು ಆತನ ಸಂಪರ್ಕಕ್ಕೆ ಬರುವ ಹೆಣ್ಣಿನ ಪಾತ್ರದೊಂದಿಗೆ ನಡೆಯುವ ವೈಯಕ್ತಿಕ ಜೀವನದ ವಿವರಗಳು ಲೇಖಕರು ತಮ್ಮ ತೆವಲುಗಳನ್ನು ನಾಯಕನಿಗೆ ಆರೋಪಿಸಿ ಚಿತ್ರಿಸಿದಂತೆ ಇದೆ. ಇದು ಗೋಪಾಲಗೌಡರ ವ್ಯಕ್ತಿತ್ವಕ್ಕೆ ಮಸಿ ಬಳಿದ ರೀತಿಯಲ್ಲದೆ ಬೇರೆಯಲ್ಲ. ತಮ್ಮ ಭವ ಕಾದಂಬರಿಯ ಮೂಲಕ ಅನಂತಮೂರ್ತಿಯವರಂತೂ ವೈಯಕ್ತಿಕ ತೀಟೆ ತೆವಲುಗಳನ್ನು ಕಾದಂಬರಿ ಹೆಸರಿನಲ್ಲಿ ಬರೆದುಕೊಂಡಿರುವ ಎಸ್ ಎಲ್ ಭೈರಪ್ಪ ಅವರಿಗೆ ಯಾವ ರೀತಿಯಲ್ಲೂ ಅಸಮಾನರೆಂದು ಹೇಳಲು ಬರುವುದಿಲ್ಲ.
00
ಬನ್ನಾಡಿ ನಿರೂಪಿಸಿರುವ ಅನಂತಮೂರ್ತಿಯವರ ಸಾಂಸ್ಕೃತಿಕ ವಲಯದ ಪಾತ್ರವಾಗಲೀ ಅವರ ವೈಯಕ್ತಿಕ ಜೀವನದ ಪಾತ್ರವಾಗಲೀ ಅವರು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿರುವ ವಿಚಾರಗಳಾಗಲೀ  `ಪ್ರಾಮಾಣಿಕವಾದ ಅಪ್ರಾಮಾಣಿಕತೆ'ಯೇ ಆಗಿದೆ. ಅನಂತಮೂರ್ತಿ ಅಭಿವ್ಯಕ್ತಿಸಿರುವ ಸಮುದಾಯ ಪರವಾದ  ಹಿತಾಸಕ್ತಿಗಳೆಲ್ಲ ಕೊನೆ ಕಂಡಿರುವುದು ಸ್ವಹಿತಾಸಕ್ತಿಯಲ್ಲಿಯೆ ಎಂಬುದು ಸಾಧಿತವಾಗಬೇಕಾದ ಪ್ರಮೇಯವಾಗುಳಿದಿಲ್ಲ. ಅನಂತಮೂರ್ತಿಯವರು ತಮ್ಮ ಗುರಿ ಸಾಧನೆಗೆ ಬಳಸುವ ವಿಧಾನ ಕ್ರಮ ಮತ್ತೊಬ್ಬರನ್ನು ದಾರಿತಪ್ಪಿಸಿ ವೈಯಕ್ತಿಕ ಸ್ವಾರ್ಥ ಸಾಧಿಸುವ ಬಳಸು ಮಾರ್ಗವಾಗಿದೆ. ಅದು ಮುಖವಾಡ ಧರಿಸಿದ ಮಾದರಿಯದು. ಸುಳ್ಳು ಬುರುಕಿ ಹಾಕಿಕೊಂಡಿರುವ ಸೋಗು ಸಂಸ್ಕೃತಿಯ ರೀತಿಯದೂ ಆಗಿದೆ. ಈ ಸೋಗು ಸಂಸ್ಕೃತಿ ತನ್ನ ಕಪಟತನ, ತರತಮ ನೀತಿ, ಶ್ರೇಷ್ಟ-ನೀಚ ಕಲ್ಪನೆ ಮಾತ್ರವಲ್ಲದೆ ಅನ್ಯ ಸಮುದಾಯಗಳ ಸಾಮರ್ಥ್ಯವನ್ನು ತಾನು ಕದಿಯುತ್ತ ಅನ್ಯ ಸಮುದಾಯದ ದೌರ್ಬಲ್ಯವನ್ನು ತಾನೇ ಹೆಚ್ಚಿಸುತ್ತ  ಎಲ್ಲ ಕಾಲಗಳಲ್ಲೂ ಬಹುಸಮುದಾಯಗಳ ಮೇಲೆ `ಪ್ರಾಮಾಣಿಕವಾದ ಅಪ್ರಾಮಾಣಿಕತನ'ದಿಂದ ಸವಾರಿ ಮಾಡಿಕೊಂಡು ಬಂದಿರುವ ಮೇಲು ಸಮುದಾಯದ ಕೇಂದ್ರ ಬಿಂದುವಾಗಿದೆ. ಅದರ ಮೂಲದಿಂದ ಬಂದಿರುವ ಅನಂತಮೂರ್ತಿ ಅದರ ಪ್ರತಿನಿಧಿ ಮತ್ತು ಪ್ರತೀಕವಾಗಿರುವುದು ಬೆರಗೇನೂ ಅಲ್ಲ. ಅನಂತಮೂರ್ತಿ ಕಾಲದಿಂದ ಕಾಲಕ್ಕೆ ಮಂಡಿಸಿದ ನಡತೆಗೆಟ್ಟ ಹುಸಿ ವಿಚಾರ ಚಿಂತನೆಗಳನ್ನು ಮಾನ್ಯ ಮಾಡುತ್ತ ಅವರನ್ನು ಅವರ ಸೋಗು ಸಂಸ್ಕೃತಿಯ ಹಿರಿಮೆಗಾಗಿ ಸೋಗು ಸಂಸ್ಕೃತಿಯೆಂದು ಅರಿಯದೆ ಮಣೆ ಹಾಕುತ್ತ ಬಂದಿರುವ ನಾವಷ್ಟೇ ಮೂರ್ಖರೂ ದಡ್ಡರೂ ಆಗಿರುವುದು; ಅಷ್ಟೇ ಅಲ್ಲ ಕುವೆಂಪು ಅಥವಾ ಕಂಬಾರರನ್ನು ಒಬ್ಬ ಶೂದ್ರ ಲೇಖಕನೆಂದು ಹೆಮ್ಮೆ ಪಡುವಷ್ಟೇ ದಾರುಣವೂ ದುರಂತವೂ ಆಗಿದೆ.
          
      

ಬುಧವಾರ, ಸೆಪ್ಟೆಂಬರ್ 19, 2012

ಷಾಜಹಾನ್ ರ ಬುರ್ಖಾದೊಳಗಿನ ಪ್ರತಿರೋಧ 'ನಖಾಬ್'ನ ಕನ್ನಡದನುವಾದ ಕುರಿತು



ಜಾಗತಿಕ ಸಾಹಿತ್ಯದಲ್ಲಿ ಧಾರ್ಮಿಕ ಪಠ್ಯಗಳು ಅತಿ ಹೆಚ್ಚು ಅನುವಾದವಾಗಿವೆ. ನಂತರದಲ್ಲಿ ಶೇಕ್ಸ್ ಪಿಯರ್ ನ ನಾಟಕಗಳು ನಿಲ್ಲುತ್ತವೆ. ಆ ನಂತರದ ಸಾಲಿನಲ್ಲಿ ಧಾರ್ಮಿಕ ಪ್ರತಿವಾದಿಯಾದ ಉಮರ್ ಖಯ್ಯಾಮ್ ನ ರುಬಾಯತ್ ಗಳೂ ಅನುವಾದವಾಗಿರುವುದು ಅದರ ಜನಪ್ರಿಯತೆಯ ಸೂಚಕವಾಗಿದೆ. ಸಮುದಾಯವೊಂದರ ಒಳಗಿನ ವ್ಯಕ್ತಿಯಾಗಿ ತನ್ನ ಸಮುದಾಯದ ನಂಬಿಕೆ ಆಚಾರ ವಿಚಾರಗಳ ಇತಿಮಿತಿಯನ್ನು ಅರಿತು ಅದನ್ನು ಮುರಿಯಲು ಅಥವಾ ಅದರಾಚೆಗೆ ವಿಸ್ತರಿಸಲು ಉಮರ್ ಖಯ್ಯಾಮ್ ಪ್ರಯತ್ನಪಟ್ಟಿದ್ದಾನೆ. ಹಾಗಾಗಿ ಆತ ತನ್ನ ಜೀವಿತ ಕಾಲದಲ್ಲಿ ಕವಿಯಾಗಿ ಮಾನ್ಯತೆ ಪಡೆಯದಿದ್ದರೂ ಆತನ ನಿಲುವು ಮಾನವ ಜೀವಿತದ ಚಿಂತನೆಯ ಭಾಗವಾಗಲು ಸಾಧ್ಯವಾಗಿದೆ. ಬೌದ್ಧಿಕ ಜಗತ್ತಿನ ಇತಿಹಾಸದಲ್ಲಿ ಇಂಥವರು ತಮ್ಮ ಜೀವಿತದ ಕಾಲಾವಧಿಯಲ್ಲಿ ಜ್ಞಾನದ ಸೀಮೋಲ್ಲಂಘನೆ ಮಾಡಲು ಹೆಣಗಿದ ಸಾಹಸಿಗರಾಗಿ ಪ್ರತ್ಯೇಕವಾಗಿ ನಿಲ್ಲುತ್ತಾರೆ.
ಧಾರ್ಮಿಕ ಪ್ರತಿವಾದಿಗಳಂತೆ ಕಾಣುವ ಸಲ್ಮಾನ್ ರಶ್ದೀ ಅವರ ಸೆಟಾನಿಕ್ ವರ್ಸಸ್ ಅಗಲೀ ತಸ್ಲಿಮಾ ನಸ್ರೀನ್ ಅವರ ಲಜ್ಜಾ ಆಗಲೀ ಹೆಚ್ಚು ಜನರ ಗಮನ ಸೆಳೆದದ್ದು ಇವು ಹೊಂದಿರುವ ಧಾರ್ಮಿಕ ನೆಲೆಯನ್ನು ಕಡೆಗಣಿಸಬೇಕಾದ ಆಶಯ ಕುರಿತು ಪುರೋಹಿತ ವರ್ಗದಿಂದ ಉಂಟಾದ ಪ್ರತಿಭಟನೆಯಿಂದಾಗಿ. ಕನ್ನಡದಲ್ಲಿ ಸಂಸ್ಕಾರ, ಘಟಶ್ರಾದ್ಧ ಮೊದಲಾದ ಕಥನ ಕ್ರಮದ ಮೂಲಕ ಈ ಸಾಲಿನಲ್ಲಿ  ಅನಂತಮೂರ್ತಿ ಗುರುತಿಸಿಕೊಂಡರೂ ಅವರು ಧಾರ್ಮಿಕ ಪ್ರತಿವಾದಿಯೇನಲ್ಲ.
ಭಾರತದ ಸಂತ ಪರಂಪರೆಯನ್ನು ಇದೇ ಸಾಲಿನಲ್ಲಿಟ್ಟು ನೋಡಬಹುದು. ಆದರೆ ಅವರ ಕೊಡುಗೆ ಬೌದ್ಧಿಕ ಸಾಹಸಕ್ಕಿಂತ ಧರ್ಮದ ಅಧಿಕಾರಿಶಾಹಿ ನೆಲೆಯನ್ನು ಕಡೆಗಣಿಸಿ ಕಂಡಿತು. ಭಕ್ತಿ ಕಲ್ಪನೆಯ ಮೂಲಕ ಸಾಮರಸ್ಯದ ಕಡೆಗೆ ಗಮನ ಕೇಂದ್ರೀಕರಿಸಿತು. ಅಲ್ಲದೆ ಅದರ ಕ್ರಾಂತಿಕಾರಿ ಸಾಮಾಜಿಕ ಆಶಯಗಳು ಧಾರ್ಮಿಕ ಅಧೀನತೆಯಲ್ಲಿಯೇ ಮೂಡಿತು. ಆದ್ದರಿಂದ ಜ್ಞಾನದ ನಿರಂಕುಶತ್ವ ಸಾಧಿಸಲಾಗದೆ ಧರ್ಮ ರಾಜಕಾರಣದ ಭಾಗವಾಯಿತು. ಸಾಧಿತವಾದ ಅಷ್ಟಿಷ್ಟು ಬೌದ್ಧಿಕ ಸಾಧನೆಯೂ ಇದರಿಂದ ಮಸುಕಾಯಿತು.
ಇಲ್ಲಿ ನಾನು ಹೇಳುತ್ತಿರುವುದು ಸಮುದಾಯವೊಂದಕ್ಕೆ ಸೇರಿದ ಲೇಖಕ ತನ್ನ ಸಮುದಾಯದ ಆಲೋಚನಾ ಮತ್ತು ಭಾವನಾ ಸ್ಥರಗಳನ್ನು ಪರಿಷ್ಕರಿಸುವ ಕಾರ್ಯವೆ ಸಮುದಾಯ ಮಟ್ಟದಲ್ಲಿ ಸವಾಲಿನದೂ ವ್ಯಕ್ತಿ ಮಟ್ಟದಲ್ಲಿ ತನ್ನನ್ನೇ ತಾನು ತಿದ್ದಿಕೊಂಡು ಹೊಸ ಮನುಷ್ಯನಾಗುವ ಬಗೆಯದೂ ಆಗಿರುತ್ತದೆ ಎಂದು.
ಬಹು ಸಮುದಾಯಗಳ ಸಮಾಜವಿರುವ ಭಾರತದಲ್ಲಿ ಸಮುದಾಯದೊಳಗಿನ ಈ ಬೆಳವಣಿಗೆ ಆ ಸಮುದಾಯದ ಆಲೋಚನೆಯ ಮಂತು ಕಡೆದು ಮತ್ತಷ್ಟು ವಿವೇಕವನ್ನು ಹೆಚ್ಚಿಸುತ್ತದೆ.
ಡಿವಿಜಿ ಉಮರನನ್ನು ಕನ್ನಡಕ್ಕೆ ತಂದಾಗ ಜೀವನವನ್ನು ಧಾರ್ಮಿಕ ನಂಬಿಕೆಯ ಚೌಕಟ್ಟಿನಾಚೆ ನಿಂತು ಶುದ್ಧ ಸಾಮಾಜಿಕ ನೆಲೆಯ ವಾಸ್ತವಿಕ ದೃಷ್ಟಿಕೋನದಿಂದ ನೋಡಲು ಉದ್ದೀಪಿಸಿತು. ಅಲ್ಲದೆ ಪಾರಂಪರಿಕ ಮೌಲ್ಯಗಳ ಪ್ರತಿಪಾದಕರಂತೆ ಕಾಣುವ ಸ್ವತಹ ಡಿವಿಜಿಯವರನ್ನೆ ಮಂಕುತಿಮ್ಮನ ಕಗ್ಗದೆಡೆಗೆ ಸೆಳೆಯಿತು. 'ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ' ಎಂದು ಉದ್ಗಾರ ತೆಗೆಯುವಂತೆ ಮಾಡಿ ಪಾರಂಪರಿಕ ಜೀವನ ಮೌಲ್ಯ ಕಲ್ಪನೆಯೊಂದಿಗೆ ನಿರೀಶ್ವರವಾದಿ ತಾತ್ವಿಕತೆಯನ್ನು ಬೆರೆಸುವಂತೆ ಮಾಡಿತು. ಅಂದರೆ ಹೊರ ಸಮುದಾಯವೊಂದರ ಆಲೋಚನಾ ಕ್ರಮದೊಂದಿಗೆ ನಡೆಸಿದ ಮುಖಾಮುಖಿಯಿಂದಾಗಿ ತನ್ನ ಸಮುದಾಯದ ಚಿಂತನಾಕ್ರಮದಲ್ಲಿ ಬೆಳವಣಿಗೆ ತರಲು ಸಾಧ್ಯವಾಯಿತು. ಭಿನ್ನ ಸಮುದಾಯಗಳ ನಡುವಿನ ಅಸ್ತಿತ್ವದ ಪ್ರಶ್ನೆಯಾಗಲೀ ರಾಜಕಾರಣದ ಪ್ರಶ್ನೆಯಾಗಲೀ ಅಡ್ಡಗೋಡೆಯಾಗಿ ಮುಂದುಮಾಡಿಕೊಳ್ಳದೆ ಒಟ್ಟಾರೆಯಾಗಿ ಮಾನವನ ಮನಸ್ಸು ಅರಳಿಸುವ ಕ್ರಮದಲ್ಲಿ ಸಾಗಿದ ಕಾರ್ಯವಿಧಾನವಿದು.                  
ಆದರೆ ಒಂದು ಸಮುದಾಯದ ಅರೆಕೊರೆಗಳನ್ನು ಕುರಿತು ಮತ್ತೊಂದು ಸಮುದಾಯದ ಲೇಖಕ ದನಿಯೆತ್ತಿದರೆ ಅಲ್ಲಿ ಅನಗತ್ಯ ಸ್ವಸಮರ್ಥನೆ ಮತ್ತು ಪರರ ಖಂಡನೆ ವಸ್ತುವೂ ವಿಧಾನವೂ ಆಶಯವೂ ಆಗಿ ಕಾರ್ಯನಿರ್ವಹಿಸುತ್ತದೆ. ಕ್ರಮೇಣ ಅದು ಭೌತಿಕ ಸಂಘರ್ಷಕ್ಕೂ ಮೂಲವಾಗಬಹುದು. ಇಂಥದ್ದೊಂದು ಎಳೆಯೂ ಪ್ರಸ್ತುತ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ 'ಪ್ರತಿ ಸಂಸ್ಕೃತಿ' ಚಿಂತನಾ ಕ್ರಮದಲ್ಲಿ ಅಪ್ರಧಾನವಾಗಿ ಕಾರ್ಯಪ್ರವೃತ್ತವಾಗಿದೆ.
ಈಗ ಆಂಧ್ರದ ಮುಸ್ಲಿಂ ಮಹಿಳೆ ಷಾಜಹಾನ್ ತೆಲುಗಿನಲ್ಲಿ ಪ್ರಕಟಿಸಿದ ಕವನ ಸಂಕಲನದ ಕನ್ನಡ ಅನುವಾದವನ್ನು ಗೆಳೆಯ ಸ.ರಘುನಾಥ ಹೊರತಂದಿದ್ದಾರೆ. 'ಉಮರನ ಒಸಗೆ'ಯಂತೆ ಇಲ್ಲಿಯೂ ಲೇಖಕ ಮತ್ತು ಅನುವಾದಕ ಭಿನ್ನ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಈ ಇಬ್ಬರ ವಸ್ತು ಆಶಯ ವಿಧಾನಗಳು ಹೇಗೆ ಕೆಲಸ ಮಾಡಿವೆ ಎಂಬುದು ಕುತೂಹಲಕಾರಿ. 
ವಿಶ್ವದ ಪ್ರಮುಖ ಧರ್ಮಗಳಲ್ಲಿ ಇಸ್ಲಾಂ ಧರ್ಮ ಮಾತ್ರ ಹೆಣ್ಣಿನ ಮೇಲೆ ಹೆಚ್ಚು ನಿರ್ಬಂಧಗಳನ್ನು ಹೇರದೆ ಅವಳಿಗೆ ಸ್ವಾತಂತ್ರ್ಯವನ್ನು ನೀಡಿ ಉದಾರವಾಗಿ ನಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇಂಥ ಅಭಿಪ್ರಾಯಗಳ ವಿರುದ್ಧ ಸೆಡ್ಡುಹೊಡೆದು ನಿಂತಿರುವ ಷಾಜಹಾನ್ ಹೇಳುತ್ತಾಳೆ:
ಹುಟ್ಟಿದಂದಿನಿಂದ ಚಾಂದನಿಯ ರುಚಿಯರಿಯದೆ
ಮಳೆಯ ರುಚಿ ತಿಳಿಯದೆ
ವಸಂತದ ರುಚಿಯನ್ನೂ ನೋಡದೆ ಬೆಳೆದು
ನಿರ್ಬಂಧಗಳ ಸರಹದ್ದುಗಳಲ್ಲಿ ಗುಲಾಮಳಾಗಿ ಬೆಳೆದ ಹೆಣ್ಣು (ಪರದೆ ಸರಿಸಿ ನೋಡು)
ಮುಸ್ಲಿಂ ಮಹಿಳೆ ಹಲವು ನಿರ್ಬಂಧಗಳ ನಡುವೆ ಬಂಧಿಯಾಗಿದ್ದಾಳೆ. ಆಕೆ ಸ್ವಂತಿಕೆಯೆ ಇಲ್ಲದ ಗುಲಾಮಳು. ಮಾನವ ಪ್ರಕೃತಿಯ ಮಗುವಾಗಿದ್ದರೂ ಆಕೆ ನಿಸರ್ಗದೊಂದಿಗೆ ಸಂಪರ್ಕ ಪಡೆದಿಲ್ಲ. ಹಾಗಾಗಿ ಅನ್ಯಳಾಗಿ ಅನಾಥಳಾಗಿ ಬೆಳೆದಿದ್ದಾಳೆ. ಪ್ರಕೃತಿಯಲ್ಲಿನ ಬದಲಾವಣೆಗಳು ಮಾನವನಲ್ಲಿ ಉಂಟುಮಾಡುವ ಅಚ್ಚರಿ, ವಿಸ್ಮಯ, ಬೆರಗುಗಳ ಸಂಸರ್ಗದಿಂದ ದೂರವಾಗಿ ನಲಿವು ಕಾಣದ ಸೆರೆಯಲ್ಲಿ ಉಳಿದಿದ್ದಾಳೆ.
ಜೀವನ ಸಂಗಾತಿಯಾಗಿ ಅರ್ಧಾಂಗಿಯಾದ ಗಂಡಸು ಆಕೆಯ ಮೋಹದಲ್ಲಿ ತನ್ನನ್ನೆ ಮರೆತುಬಿಟ್ಟಿದ್ದಾನೆ, ತನ್ನ ಹಿತಾಸಕ್ತಿಯಲ್ಲಿ ಮುಳುಗಿಹೋಗಿದ್ದಾನೆ. ಅವನಿಗೆ ಹೆಣ್ಣಿನ ಮನದಾಳದಲ್ಲಿ ಮಡುಗಟ್ಟಿರುವ ದುಃಖದ ಸೆಲೆಯನ್ನು ಅರಿಯುವ ನಿವಾರಿಸುವ ಕಣ್ಣಿಲ್ಲ. ಇಂಥ ಇಂಗಿತವನ್ನು ಹೇಳುವ ಈ ಕ್ರಮದಲ್ಲಿ ಹೊಸತನವಿದೆ.   
ಕಾಡಿಗೆ ಕಣ್ಣಿನಮಲಿನಲ್ಲಿ ತಣಿವ ಒಬ್ಬನೂ
ಕಾಡಿಗೆಯ ಮರೆಯ ಕಣ್ಣೀರ ಸ್ಪರ್ಶಿಸುವುದಿಲ್ಲ (ಅನಾರ್ಕಲಿ)
ಸಹಜೀವಿಯಾದ ಗಂಡಸು ಅಕೆಯನ್ನು ಕಡೆಗಣಿಸಿ ನೋಡುತ್ತಿರುವ ಸಮಸ್ಯೆ ಇಂದಿನ ಹೊಸ ತಲೆಮಾರಿಗೆ ಸೀಮಿತವಲ್ಲ. ಅದು ತನಗಿಂತ ಹಿಂದಿನ ಮತ್ತು ಹಿರಿಯ ತಲೆಮಾರಿನಿಂದ ಬಳುವಳಿ ಬಂದದ್ದು ಎಂಬುದನ್ನು ಈ ಕೆಳಗಿನ ಸಾಲುಗಳು ಹೇಳುತ್ತಿವೆ.
ದಾರಿದ್ರ್ಯದ ಮಕಮಲ್ಲಿನಲ್ಲಿ ಸುತ್ತಿ ನಿನ್ನ ನವಾಬ
ಇನಾಮು ಕೊಡುತ್ತಿರುವನಲ್ಲಮ್ಮ
*
ಅಬ್ಬಜಾನನ ಬಡೀ ಬೀವಿಯಾಗಿ
ಬದುಕಿನ ಅಲ್ಬಮ್ಮಿನಲ್ಲಿಟ್ಟ ನಿನ್ನ
ಭಗ್ನ ಚಿತ್ರವನ್ನು ನೋಡುತ್ತ
*
ಅವನ ಚಟಗಳ ಆಸಿಡ್ಡಿನಲ್ಲಿ ಅದ್ದಿ ಎತ್ತಿದ
ಅಸ್ಥಿ ಪಂಜರದಂತೆ
*
ಕಣ್ಣ ಜಲಾಶಯಗಳಲ್ಲಿ ತೇಲಾಡುವ
ಮೂಳೆಗಳ ನಿನ್ನ ರೂಪ (ಭಾವಚಿತ್ರ)
ಯಾರಿಗೆ ಆಗಲೀ ತಾಯಿ ಎಂಬುದು ಅಭಿಮಾನದ ವಸ್ತು. ಅಂಥ ತಾಯಿ ಜೀವ ಕೂಡ ತಂದೆ/ಗಂಡಸಿನ ಹಲವು ಹೆಂಗಸರಲ್ಲಿ ಒಬ್ಬಳಾಗಿದ್ದಾಳೆ. ಅವನ ಮೂಗಿನ ನೇರದಲ್ಲಿ ಜೀವನ ರೂಪಿಸಿಕೊಂಡು ಜೀವಚ್ಛವದಂತಾಗಿದ್ದಾಳೆ. ಹಿಂದಿನ ಈ ಜೀವನ ಕ್ರಮದ ನಿದರ್ಶನಗಳು ಮುಂದಿನ ಜನತೆಯ ಜೀವನ ಕ್ರಮವನ್ನು ನಿರ್ಧರಿಸುತ್ತದೆ. ಅಂದರೆ ಹೊಸ ಪೀಳಿಗೆಯ ಯುವತಿಯರು ಪುರುಷ ಅಧೀನತೆ ಮೀರಬಾರದೆಂದು ಇದುವರೆಗೂ ನಡೆದು ಬಂದ ಸಂಪ್ರದಾಯ ಸೂಚಿಸುತ್ತಿದೆ. ಇದರಿಂದ ಆಧುನಿಕ ಮಹಿಳೆಯರ ಉಸಿರು ಕಟ್ಟುತ್ತಿದೆ.
ಅನಾಚೂನವಾಗಿ ನಡೆಸಿಕೊಂಡು ಬಂದಿರುವ ಹೆಣ್ಣಿನ ಕತ್ತು ಹಿಸುಕಿದಂಥ ಈ ಸಂಪ್ರದಾಯ, ಪದ್ಧತಿಗಳನ್ನು ಹೀಗೆಯೇ ಮುನ್ನಡೆಸಬೇಕೆಂಬ ಸಮುದಾಯದ ಇಂಗಿತವೆ ಮಾನವ ಜೀವಿಯ ಆಜನ್ಮವಾದ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಸಂಪ್ರದಾಯದ ಇತಿಮಿತಿಗಳು ಅರಿವಿಗೆ ಬರುತ್ತದೆ.       
ನನ್ನನ್ನು ಕೊಂದು ಮೂಕಿಯಂತೆ ಉಳಿಸಬೇಕೆಂಬ
ಎಲ್ಲರ ಹುನ್ನಾರಿಗೆ ಬಿದ್ದು ಬಿದ್ದು ನಗುತ್ತಿರುವೆ (ದಡ್ಡಿ)
ಮನುಷ್ಯ ನಿರ್ಮಿತ ಕಟ್ಟುಪಾಡುಗಳು ಮನುಷ್ಯನನ್ನೆ ಕಟ್ಟಿಹಾಕಬಲ್ಲವು; ಜೀವ ವಿರೊಧಿಯಾಗಿ ಪರಿಣಮಿಸಬಲ್ಲವು. ಈ ಎಲ್ಲ ಕಟ್ಟುಪಾಡುಗಳು ಮಾನವ ಜಾರಿಗೆ ತಂದ ಕಲ್ಪನಾ ಮೌಲ್ಯಗಳಷ್ಟೆ ಎಂಬ ಅರಿವು ಕವಯತ್ರಿಯದು. ಹಾಗಾಗಿಯೆ ಸಂಪ್ರದಾಯದ ಬಿಗಿ ನಿಲುವು ನಗೆಪಾಟಲಿನದಾಗಿ ಕಂಡಿದೆ.
ಮತ ಧರ್ಮಗಳ ಸೀಮೆ ಸೀಳಿ ಹೊರ ಬಂದಿರುವ ಕವಯತ್ರಿಯ ಶುದ್ಧ ಮಾನವ ಪ್ರೀತಿಗೆ ಸಮುದಾಯದಲ್ಲಿ ಬೆಂಬಲದ ಬಲವಿಲ್ಲ. ಈ ಅನುಭವವನ್ನು ಸಿರಿತನ-ಬಡತನ, ದರ್ಪ-ಅಸಹಾಯಕತೆ, ಅಟ್ಟಹಾಸ-ಪೆಚ್ಚುಮುಖಗಳ ವೈರುಧ್ಯದ ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ. 
ಅವರ ಉರ್ದು ಜರಿ ಸಮೂಹಗಳ ಫಳಫಳ ಮಿಂಚುಗಳ
ಮುಂದೆ
ನನ್ನ ಧ್ವನಿ ಕಾಟನ್ ಸೀರೆಯಾಗಿ ಪೆಚ್ಚುಪೆಚ್ಚಾಗಿ(ಲದ್ದಾಫ್ನಿ)
ಜೀವ ಪ್ರೀತಿ ಪರವಾದ ದನಿ ಅಸಹಾಯವಾಗಿದ್ದರೂ ಧೃತಿಗೆಟ್ಟ ಸ್ಥಿತಿಯಲ್ಲಿಲ್ಲ. ಹಾಗಾಗಿ ಪುರೋಹಿತಶಾಹಿ ಮತ್ತು ಪುರುಷಶಾಹಿ ಕುರಿತ ಭಿನ್ನಾಭಿಪ್ರಾಯ ಅಸಹನೆಯಾಗಿ ಗಟ್ಟಿಗೊಳ್ಳುತ್ತದೆ.
ಪೊದೆ ಗಡ್ಡಗಳು, ಬಿಳಿ ಟೋಪಿಗಳು
ಪೈಜಾಮ ಕುರ್ತಾಗಳು, ಐದು ಬಾರಿ ನಮಾಜು
ಅಯ್ಯಾ, ನೀವೆಲ್ಲ ಪವಿತ್ರ ಮೂರ್ತಿಗಳು
ಪವಿತ್ರ ಅಚಾರಗಳನ್ನು ಕಾಪಾಡುವ ದರ್ವಾಜಗಳು
*
ಇಷ್ಟವಿರದಿದ್ದರು ನಿನ್ನೊಡಗೂಡಿ ಸಂಸಾರ ಹೂಡಿದ್ದಕ್ಕೆ
ಕಾಲು ಹಿಡಿದ ಈ ಕೈಗಳೇ
ಹೌದು ಈ ಕೈಗಳೇ
ಮುಷ್ಟಿ ಬಿಗಿಯುತ್ತಿವೆ! (ಖಬರ್ದಾರ್)
ಸಂಪ್ರದಾಯದ ಕಟ್ಟುಗಳು ಬಿಗಿಗೊಂಡಂತೆಲ್ಲ ಅಸಹನೆ ಪ್ರತಿರೋಧವಾಗಿ ಮಾರ್ಪಾಟುಹೊಂದುತ್ತದೆ. ಅದು ಪುರೋಹಿತಶಾಹಿ ಮತ್ತು ಪುರುಷಶಾಹಿಯ ಕೈಯಲ್ಲಿ ಅನುಭವಿಸಿದ ಕ್ರೂರ ದೌರ್ಜನ್ಯದಲ್ಲಿ ನಲುಗಿದ ನೋವಿನ ನೆನಪುಗಳನ್ನು ದಟ್ಟಗೊಳಿಸುತ್ತದೆ. 
ನೋವುಗಟ್ಟಿದ ಬಾಸುಂಡೆಗಳು
ಬಿಕ್ಕುವ ಕೊರಳು.......ಖಿಜಾ
ಅಮ್ಮೀ ಪುಟ್ಟು(ತಿಂಡಿ) ನಕ್ಕೋ ಅಮ್ಮೀ
ಅಮ್ಮೀ  ಪುಟ್ಟು ನಕ್ಕೋ ಅಮ್ಮೀ (ಪುಟ್ಟು)
ಮುಗ್ಧ ಮಗುವಿನ ಸಹಜವಾದ ಸಣ್ಣ ಪುಟ್ಟ ಬಾಯಿರುಚಿಯ ಆಸೆಗಳನ್ನು ಪೂರೈಸಿ ಈಡೆರಿಸಲಾಗದಂಥ, ತನ್ನ ಆರ್ಥಿಕ ಅಸಹಾಯಕತೆಯನ್ನು ಮರೆಮಾಚಿರುವ ಅಧಿಕಾರಿಶಾಹಿ ತನ್ನ ದಮನಕಾರಿ ನೀತಿಯಿಂದ ಅದನ್ನು ಮಣಿಸುತ್ತದೆ, ದಾನವನಾಗಿ ಮರುಹುಟ್ಟು ಪಡೆಯುತ್ತದೆ.
ದಮನಿತ ಸ್ಥಿತಿಯಲ್ಲಿರುವ ಮಾನವ ಜೀವಿಗಳು ಘನತೆಯನ್ನು ಕಳೆದುಕೊಂಡು ಬಿಡುತ್ತಾರೆ. ಅವರು ಮತ್ತೊಬ್ಬರ ಹಂಗಿನಲ್ಲಿ, ಆ ಮತ್ತೊಬ್ಬರ ಗುರಿ, ಉದ್ದೇಶಗಳನ್ನು ಸಾಧಿಸುತ್ತ ಅವರಿಗೆ ಬಲಿಯಾಗುವಂಥ ಸ್ವಾತಂತ್ರ್ಯಹೀನ ಪಶು ಪಕ್ಷಿಗಳಂತೆ ಸ್ವಂತಿಕೆಯ ಆಲೋಚನಾ ಬಲವಿಲ್ಲದ ಕುರುಡರಾಗುತ್ತಾರೆ.
ರೊಪ್ಪದಲ್ಲಿ ದನಗಳು
ಫಾರಮ್ಮಿನಲ್ಲಿ ಕೋಳಿ
ಕತ್ತಲ ದೊಡ್ಡಿಗಳಲ್ಲಿ ನಾವು !
*
ಎತ್ತಿನ ಮೂತಿಯ ಕುಕ್ಕೆಯಂತೆ
ಗಾಳಿ ತೆಗೆದುಕೊಳ್ಳುವ ಸ್ವೇಚ್ಛೆಯೂ ಇರದ ಪರದೆಗಳು (ಖೌಸೆಖಿಜಾ)
ಮುಸ್ಲಿಂ ಮಹಿಳೆಯರು ಅಂಥಸ್ಥಿತಿಯಲ್ಲಿರುವರೆಂದು ಮರುಕ ಪಡಲಾಗಿದೆ. ಪರದೆಗಳು, ಬುರ್ಖಾಗಳನ್ನು ಯಾವುದೇ ಜೀವಿ ತನ್ನ ಹುಟ್ಟಿನಿಂದ ತಾನು ಜೀವಿಸಲು ತನ್ನ ಆಜನ್ಮ ಹಕ್ಕಾಗಿ ಪಡೆದಿರುವ ಸಹಜ ಸ್ವಾತಂತ್ರ್ಯವನ್ನು ಕಸಿದಿರುವ ಸೂಚಕವಾಗಿ ಕಾಣಿಸಲಾಗಿದೆ. ಇಂಥ ಮುಸ್ಲಿಂ ಮಹಿಳೆಯರ ಬದುಕು ನಿರ್ದಿಷ್ಟ ಉದ್ದೇಶ, ಗುರಿ ಇಲ್ಲದೆ ನಿರುಪಯೋಗವಾಗಿದೆ.   
ಮಣ್ಣ ಗೋಡೆಗಳಮೇಲೆ ಜೊಂಡು ಮೊಳೆತಿದೆ
ನಮ್ಮ ಬದುಕುಗಳಂತೆ
*
ನಮ್ಮ ದಾದಿಮಾ ರಂಜನಿನ ದಿನ
ಹೊಸ ಸೀರೆ ಉಟ್ಟಂತೆ ಕಂಗೊಳಿಸುತ್ತಿತ್ತು ಮನೆ. (ಚಿಹ್ನೆ)
ಹಳೆ ಬಟ್ಟೆ ಹರಿದು ಹೊಸ ಬಟ್ಟೆ ಧರಿಸುವುದು ದಿನನಿತ್ಯದ ಸಾಮಾನ್ಯ ವಿಷಯವಾಗಿದ್ದರೂ ಅದು ಇಂಥವರ ಬಾಳಿನಲ್ಲಿ ವಿಶೇಷ ಅರ್ಥ ಪಡೆದು ದಾರುಣತೆಯ ರೂಪ ಧರಿಸುತ್ತದೆ. ಹಾಗಾಗಿ ಕವಯತ್ರಿ ಪುರೋಹಿತಶಾಹಿ ಮತ್ತು ಪುರುಷಶಾಹಿಯೊಂದಿಗಿನ ಮುಸ್ಲಿಂ ಮಹಿಳೆಯರ ಸಂಬಂಧವನ್ನು ಪ್ರಿಯೆ-ಪ್ರಿಯತಮ ಸಂಬಂಧದಲ್ಲಿರಿಸಿ ಪ್ರಿಯೆಯಾಗಿ ಹೀಗೆ ಕೇಳಿದ್ದಾಳೆ. 
ನೀನಿತ್ತ ಬರದ ಕಹಿ ಅನುಭವಗಳನ್ನು
ಯಾವ ಅಂಚೆಯಲ್ಲಿ ಪ್ಯಾಕು ಮಾಡಿ ಕಳುಹಿಸಲಿ
*
ಪ್ರತಿ ಬಾರಿಯೂ ಬಾನ ಸೀಳಿಕೊಂಡು ಹಾರುವ
ನೀನೊಮ್ಮೆ ಹಿಂದಿರುಗಿ ನೋಡು
ಕಿಟಕಿಯಾಚೆ ಶೂನ್ಯ ತುಂಬಿಕೊಂಡ ಇನ್ನೊಂದು ಬಾನು
ದಾರಿದ್ರ್ಯ (ಇನ್ನೊಂದು ಆಕಾಶ)
ಭಾರತೀಯ ಮುಸ್ಲಿಂ ಮಹಿಳೆಯರು ಅರಬ್ ಮುಸ್ಲಿಮ್ ಪುರುಷರಿಗೆ ಭೋಗದ ಮತ್ತು ಮೋಜಿನ ವಸ್ತು ಆಗಿರುವುದು ಕೂಡ ಇದೇ ವ್ಯಾಪ್ತಿಯಲ್ಲಿ ಸೇರಿದೆ. ಪುರುಷರ ಸ್ವಾತಂತ್ರ್ಯ ಮತ್ತು ಮಹಿಳೆಯರ  ಸ್ವಾತಂತ್ರ್ಯಹೀನತೆಯನ್ನು ಅರಬ್ ಪುರುಷರ ಸಿರಿವಂತಿಕೆ ಮತ್ತು ಭಾರತೀಯ ಮುಸ್ಲಿಂ ಮಹಿಳೆಯರ ದಾರಿದ್ರ್ಯದೊಂದಿಗೆ ಸಮೀಕರಿಸಲಾಗಿದೆ. ಮಾನವನ ಬದುಕಿನಲ್ಲಿನ ಸ್ತ್ರೀಪುರುಷರ ನಡುವಿನ ತಾರತಮ್ಯ  ಅಪರಿಮಿತವಾಗಿ ಬೆಳೆದಿದೆಯೆಂದೂ ಕಾಣಿಸಿದೆ.
ರಾಷ್ಟ್ರದಲ್ಲಿಯೊ ಅಂತಾರಾಷ್ಟ್ರದಲ್ಲೊ
ಏನೇ ನಡೆದರೂ ಹಠಾತ್ತಾಗಿ ನನ್ನ ಪರಿಸರದಲ್ಲಿ
ನಾನು ಅಪರಿಚಿತನಾಗುತ್ತೇನೆ (ಅಪರಿವಿತ)
ಇದರಿಂದ ಭಾರತೀಯ ಮುಸ್ಲಿಂ ಮಹಿಳೆ ಅಸ್ತಿತ್ವವಿಲ್ಲದವಳಾಗಿ ಉಳಿದಿದ್ದಾಳೆಂಬ ಆಕ್ರೋಶ ಮನೆಮಾಡಿದೆ. ಏಕೆಂದರೆ ಹೆಣ್ಣಿನ ಅಸ್ತಿತ್ವಹೀನತೆ ಅವಳ ಮೇಲಿನ ಆಕ್ರಮಣ, ಕ್ರೌರ್ಯ, ದೌಜರ್ನ್ಯಗಳನ್ನು ಸುಲಭಗೊಳಿಸಿದೆ.
ಬಟ್ಟೆ ಹರಿದು ಚಿಂದಿ ಮಾಡಿದಂತೆ
ನಮ್ಮ ದೇಹವನ್ನು ಹರಿದು ಹಾಕುತ್ತಿದ್ದಾರೆ (ಒಂಟಿ ಕಫನ್)
ಹೀಗಾಗಿ ಇವರು ದುಃಖದ ತಳ ಮುಟ್ಟಿದ ವ್ಯಕ್ತಿಗಳಾಗಿ ತಮ್ಮ ಶೋಷಕರ ಸಂಪೂರ್ಣ ಪರಿಚಯದ ಹಿನ್ನೆಲೆಯಲ್ಲಿ ತಾತ್ವಿಕವಾಗಿ ಮಾತನಾಡುತ್ತಾರೆ ಕೂಡ. ಕವಯತ್ರಿ ಅಂಥ ಮಾತುಗಳಿಗೆ ಬಾಯಿಯಾಗಿದ್ದಾಳೆ ಇಲ್ಲಿ.
ಹೆಣ್ಣಿಗೆ ಗಂಡಿನ ಬೆತ್ತಲೆ ಎಷ್ಟು ಹಳೆಯದೊ
ಅರಾಜಕತೆ, ಅಮಾನುಷತೆ, ಕ್ರೂರತ್ವವೂ ಅಷ್ಟೇ ಹಳತು.
*
ಹೆಣ್ಣಲ್ಲದೆ ಗಂಡನ್ನು ಕ್ಷಮಿಸುವರು ಯಾರು?
ಎಂದೆಂದಿಗು ಜಗತ್ತು
ನನ್ನ ಮೊಲೆ ಕುಡಿವ ಹಸುಗೂಸು (ಭ್ರಷ್ಟ ಲೋಕ)
ಪುರೋಹಿತಶಾಹಿ ಮತ್ತು ಪುರುಷಶಾಹಿಗಳು ಅಧಿಕಾರಶಾಹಿ ನಾಣ್ಯದ ಎರಡು ಮುಖಗಳಾಗಿ ಇಲ್ಲಿ ಪರಿಣಮಿಸಿವೆ. ಅದರ ಎಲ್ಲ ಬಲಗಳನ್ನು ಜೀವನಾನುಭವದಲ್ಲಿ ಮಿತಿಗೆ ಒಳಪಡಿಸಿದೆ ಮತ್ತು ಅದನ್ನು ನಕಾರಾತ್ಮಕ ಚೌಕಟ್ಟಿಗೆ ಅಳವಡಿಸಲಾಗಿದೆ. ಅಧಿಕಾರಕ್ಕಿಂತ ಅನುಭವ ಮಾನವನನ್ನು ಮಾಗಿಸುವ ಕ್ರಮವನ್ನೂ ಹೇಳಿದೆ. ಅಲ್ಲದೆ ಹೆಣ್ಣಿನ ಕ್ಷಮಾಗುಣ ಮತ್ತು ಪೋಷಕ ಶಕ್ತಿಯ ಮುಂದೆ ಗಂಡಿನ ಎಲ್ಲ ಅಧಿಕಾರ ಶಕ್ತಿಗಳು ಕಳೆಗುಂದುವ ಸಾರ್ವಕಾಲಿಕ ಸಂಗತಿಯನ್ನು ಮನಗಾಣಿಸಿ ಅಭಿವ್ಯಕ್ತಿಸಿದೆ. ಈ ಮೂಲಕ ಇಂದಿನ ಸ್ತ್ರೀವಾದಿ ಮನೋ ಧರ್ಮದ ಪ್ರತಿಪಾದನೆಯನ್ನು ಮಾಡಿದೆ. ಅಲ್ಲದೆ ಪ್ರಕೃತಿಯಲ್ಲಿ ಜೀವ ಜನಾಂಗಗಳು ಸತತವಾಗಿ ಮುಂದುವರೆಯುವಲ್ಲಿ ಸ್ತ್ರೀ ವಹಿಸುವ ಹಿರಿಯ ಪಾತ್ರದ ಮಹತ್ವದ ಗುಣ ಲಕ್ಷಣಗಳನ್ನು ಎತ್ತಿ ಹೇಳಿದೆ.  ಅದರೂ ಸ್ತ್ರೀ ಪುರುಷ ಸಂಬಂಧ ಮತ್ತು ಅಸ್ತಿತ್ವಗಳ ಸ್ವರೂಪದ ಬಗ್ಗೆ ಆರೋಗ್ಯಕರವಾಗಿ ಕಂಡಿದೆ ಮತ್ತು ಕಾಣಿಸಿದೆ.    
ಸಕ್ಕರೆ ಉಂಡೆಯಲ್ಲಿನ
ಕಡಲೆಪಪ್ಪಿನಂತೆ
ಅವರೂ ನಾವು
*
ಅಲಾಯಿಬಲಾಯಿ ತೆಗೆದುಕೊಳ್ಳುವ
ದಗರ್ಾಗಳು
ಆಕಾಶದಲ್ಲೆಲ್ಲ ಕಾಣಿಸುತ್ತವೆ (ದರ್ಗಾ ದಾರಿಗೆ ಮೈಲಿಗೆ ಇಲ್ಲ)
ಸ್ತ್ರೀ ಪುರುಷ ಸಂಬಂಧ ಪರಸ್ಪರ ಅವಲಂಬಿತ ಮತ್ತು ಸ್ನೇಹಮಯ ಎಂಬ ತನ್ನ ಧೋರಣೆಯಿಂದ ಪುರುಷ ನಿರ್ಮಿತವಾದ ಅಧಿಕಾರ ಸ್ಥಾಪಿಸುವ ಎಲ್ಲ ಸಾಮಾಜಿಕ ಜೀವನ ಮೌಲ್ಯಗಳನ್ನು ಗಾಳಿಗೆ ತೂರಿದೆ ಮತ್ತು ಅವನ್ನು ಮರುಕಟ್ಟಿಕೊಟ್ಟಿದೆ. 
ಈ ತೆಲುಗು ಕವಿತೆಗಳು ಆಂಧ್ರ ಸಾಹಿತ್ಯ ಸಂದರ್ಭಕ್ಕೆ ಅನುಗುಣವಾಗಿ ಮೈ ತಳೆದಿದ್ದರೂ ಕನ್ನಡದ ಸಂದರ್ಭದಲ್ಲೂ ತಾಜಾತನದಿಂದ ಕೂಡಿವೆ. ಹೀಗಿದ್ದರೂ ತೆಲುಗು ಮತ್ತು ಕನ್ನಡ ಸಾಹಿತ್ಯ ಸಂದರ್ಭಗಳು ಒಂದೇ ಅಲ್ಲ. ವಿಶೇಷವಾಗಿ ತೆಲುಗಿನಲ್ಲಿ ಶ್ರೀಶ್ರೀ ಮತ್ತು ಕನ್ನಡದಲ್ಲಿ ಅಡಿಗರು ತಮ್ಮ ಕೃತಿಗಳ ಮೂಲಕ ರೂಪಿಸಿದ ಮನಸ್ಥಿತಿ ಒಂದೇ ಎಂದು ಹೇಳಲುಬರುವುದಿಲ್ಲ. ಆದರೂ ಇವೆರಡೂ ಭಾಷೆಗಳಲ್ಲಿ ಅಲ್ಲದೆ ಇಡೀ ಭಾರತೀಯ ಸಾಹಿತ್ಯದ ಆಧುನಿಕ ಸಂದರ್ಭದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯ ಹಾಗೂ ಸ್ತ್ರೀ ವಾದದಂಥ ಆಧುನಿಕ ವಿಚಾರಧಾರೆಗಳು ಏಕ ಪ್ರಕಾರವಾಗಿ ಪ್ರಭಾವಿತವಾಗಿರುವುದು ಬೇರೆ.  
ಷಾಜಹಾನರು ತಮ್ಮ ಅನುಭವ ವಿಚಾರವನ್ನು ಕವಿತೆಯನ್ನಾಗಿಸುವ ಕ್ರಮದಲ್ಲಿ ತಮ್ಮ ಕಾವ್ಯದ ಆಶಯ ಮತ್ತು ವಿಧಾನವನ್ನು ಒಂದಾಗಿ ಹೊಸೆದಿದ್ದಾರೆ. ಹಾಗಾಗಿ ಅವರು ನೀಡಿರುವ ಚಿತ್ರಗಳು ಅನುಭವ ಮೂಲದಿಂದ ಬಂದಿರುವುದು ಓದುಗರ ಗಮನಕ್ಕೆ ಥಟ್ಟನೆ ಬರುತ್ತದೆ. ಕಾವ್ಯವನ್ನು ಸಾಮಾನ್ಯವಾಗಿ 'ನುಡಿಗೆಟ್ಟ ನುಡಿ' ಎಂದು ಹೇಳಲಾಗುತ್ತದೆ. ಇಲ್ಲಿ 'ಜೀವನಗೆಟ್ಟ ಜೀವನ'ವೆ ಮೈತಳೆದಿರುವುದರಿಂದ 'ಜೀವನಗೆಟ್ಟ ಜೀವನ' 'ನುಡಿಗೆಟ್ಟ ನುಡಿ'ಯಾಗಿ ಮೈಪಡೆದಿದೆ. ಹಾಗಾಗಿಯೆ ಓದುಗನಿಗೆ ತಾಜಾತನ ದಟ್ಟವಾಗಿ ಅನುಭವಕ್ಕೆ ಬರುತ್ತದೆ. ಇಲ್ಲಿನ ನುಡಿಚಿತ್ರಗಳು ಅಲಂಕಾರವಾಗಿ ಮೂಡದೆ ಜೀವಾನಾನುಭವದ ಭಾಗವಾಗಿ ಜೀವ ತಳೆದಿವೆ, ತಮ್ಮ ಸಾಚಾತನದಿಂದ ಅನುಭವದ ಆಳಕ್ಕೆ ಓದುಗನನ್ನು ಕೈ ಚಾಚಿ ಸೆಳೆಯುತ್ತವೆ.
ಒಂದು ಭಾಷಾ ಸಂಸ್ಕೃತಿಗೆ 'ಅಪರಿಚಿತ'ವಾದ ಕೃತಿಯನ್ನು 'ಸುಪರಿಚಿತ'ವನ್ನಾಗಿ ಮಾಡುವುದೆ ಅನುವಾದ ಎಂದು ಹೇಳಲಾಗಿದೆ. ಹಾಗಾಗಿಯೆ ಅನುವಾದಗಳು ರೂಪಾಂತರ, ಭಾಷಾಂತರ, ಪ್ರೇರಣೆ, ಮರುಬರವಣಿಗೆ ಮೊದಲಾದ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿವೆ. ಅದೇನೆ ಇರಲಿ, ಉಭಯಭಾಷಾ ಕವಿಗಳೆಂದು ಒಪ್ಪಿತರಾಗಿರುವ ಮಿತ್ರರಾದ ಸ. ರಘುನಾಥ ಅವರ ಶ್ರಮ ಈ ನಿಟ್ಟಿನಿಂದ ಯಶಸ್ಸು ಕಂಡಿದೆ. ಆದರೂ ಕಾವ್ಯ ಸೌಷ್ಟವದಲ್ಲಿ ಸಡಿಲತೆ ಮತ್ತು ವೈಚಾರಿಕತೆಯ ಭಾರ ಈ ಸಂಕಲನದಲ್ಲಿ ಓದುಗನನ್ನು ವಿಕರ್ಷಿಸುವ ಅಂಶಗಳು ಎಂದೇ ಹೇಳಬೇಕು. ಇದು ಮೂಲ ಕಾವ್ಯದಲ್ಲಿರುವ ದೋಷವೋ ಅನುವಾದದಲ್ಲಿ ಉಂಟಾದ ದೋಷವೋ ತಿಳಿಯದು. ಅನುವಾದಕರು ಮೂಲಕ್ಕೆ ತೋರಿರುವ ನಿಷ್ಟತೆ ಮತ್ತು ತೆಗೆದುಕೊಂಡಿರುವ ಸ್ವಾತಂತ್ರ್ಯವನ್ನು ಉಭಯ ಭಾಷಾ ಪರಿಣತರು ಪರಿಶೀಲಿಸಬೇಕು. ಹಾಗೆಯೇ ಅನುವಾದವನ್ನು ಒಂದು 'ಓದು', 'ವ್ಯಾಖ್ಯಾನ' ಎಂದೂ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ "ನಿರ್ಬಂಧಿತ ಸಮುದಾಯದ ಯಾತನಾಮಯ ಬದುಕಿನ ಎಳೆಗಳು" ಆಗಿ ಕಂಡಿರುವ ಈ ಸಂಕಲನವನ್ನು ಅನುವಾದಕರು "ಇಲ್ಲಿನ ಸಂವೇದನೆ ಮುಸ್ಲಿಂ ಸ್ತ್ರೀ ಸಂವೇದನೆ ಎಂಬುದನ್ನು ಪ್ರತ್ಯೇಕಿಸಿ ನೋಡದಿದ್ದರೆ, ಕೆಲವು ಸಾಂಸ್ಕೃತಿಕ ಅಂಶಗಳ ಭಿನ್ನತೆಯನ್ನು ಪಕ್ಕಕ್ಕಿಟ್ಟರೆ ಇಡೀ ಸ್ತ್ರೀ ವರ್ಗದ ಸಂವೇದನೆಯೇ ಆಗಿದೆ" ಎಂದು ಕನ್ನಡಕ್ಕೆ ತಂದಿದ್ದಾರೆ. ಅಂದರೆ ಈ ಅನುವಾದಕ್ಕೆ ಅದರ ಸಮುದಾಯ ನಿಷ್ಟ ಪ್ರತ್ಯೇಕ ವಿಶಿಷ್ಟ ಅಂಶಗಳಿಗಿಂತ ಸಾಮಾನ್ಯೀಕರಣ ಅಂಶಗಳು ಮುಖ್ಯವಾಗಿದೆ. ಬಹುಶಹ ಸ್ತ್ರೀ ವಾದಿ ವಿಚಾರಧಾರೆಗೆ ನಮ್ಮ ಕಾಲದಲ್ಲಿ ದೊರೆತಿರುವ ಮನ್ನಣೆಯೆ ಕಾರಣವಾಗಿ, ಓದುಗರ ಆಸಕ್ತ ವಿಷಯವಾದ ಸ್ತ್ರೀ ಸಂವೇದನೆಯ ಭಾಗವಾಗಿ ಮಾತ್ರ ಪ್ರಸ್ತುತ ಕೃತಿಯನ್ನು ಅನುವಾದ ಮಾಡಲಾಗಿದೆ.   
ಸಮಕಾಲೀನ ಸಂದರ್ಭದಲ್ಲಿ  ಸ್ತ್ರೀವಾದಿ ವಿಚಾರಧಾರೆಯ ಹಿನ್ನೆಲೆಯಿಂದ ತಮ್ಮ ಕೃತಿಯಲ್ಲಿ ಷಾಜಹಾನ್ ಧಾರ್ಮಿಕ ಪ್ರತಿವಾದಿಯಾಗಿಯೆ ತಮ್ಮ ಗಟ್ಟಿ ದನಿಯನ್ನು ಎತ್ತಿದ್ದಾರೆ. ಆದರೂ ಧಾರ್ಮಿಕ ಹಿನ್ನೆಲೆಯಲ್ಲಿ ವಿವಾದಕ್ಕೆ ಗುರಿಯಾಗದೆ ಉಳಿದಿದ್ದಾರೆ. ಹನ್ನೊಂದನೆಯ ಶತಮಾನದಲ್ಲಿ ಜೀವಿಸಿದ್ದ ಉಮ್ಮರ್ ಖಯ್ಯಾಮ್ ತನ್ನ ಕಾಲಾವಧಿಯಲ್ಲಿ ಹಲವು ಜ್ಞಾನಶಾಖೆಗಳಲ್ಲಿ ಪರಿಣತ ಪಡೆದು ಮಾನ್ಯನಾಗಿದ್ದ ವಿದ್ವಾಂಸ. ಆತ ಬಹುಶಹ ತನ್ನ ಧರ್ಮದ ಮೊತ್ತಮೊದಲ ಧಾರ್ಮಿಕ ಪ್ರತಿವಾದಿಯಾಗಿದ್ದಿರಬಹುದು. ಆತನ ಈ ಪ್ರತಿವಾದಿತನವನ್ನು ಅವನ ರುಬಾಯತ್ ಗಳು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದ ಕಾರಣದಿಂದಲೋ ಏನೋ ತನ್ನ ಕಾಲದಲ್ಲಿ ಪರ್ಷಿಯಾದಲ್ಲಿ ಆತ ಕವಿಯೆಂದು ಮಾನ್ಯನಾಗಿರಲಿಲ್ಲ. ಹೀಗಿದ್ದರೂ ಉಮರ್ ಖಯ್ಯಾಮ್ ಗೂ ಷಾಜಹಾನ್ ಗೂ ಎಲ್ಲೂ ತಾಳೆ ಹಾಕಲು ಸಾಧ್ಯವಿಲ್ಲ. ಈ ಇಬ್ಬರನ್ನು ಕನ್ನಡಕ್ಕೆ ಅನುವಾದ ಮಾಡಿದವರು ಮಾತ್ರ ಆ ಮತ ವಿಚಾರಗಳಿಗೆ ಅನ್ಯವಾದ ಸಮುದಾಯಕ್ಕೆ ಸೇರಿದವರು ಎಂಬುದು ಕಾಕತಾಳೀಯವಷ್ಟೆ. ಡಿವಿಜಿಯವರು ಉಮರನ ಒಸಗೆ ಪ್ರಕಟಿಸಿದಾಗ ಅದು ಕನ್ನಡಕ್ಕೊಂದು ಹೊಸದನಿಯನ್ನು ಪರಿಚಯಿಸಿತ್ತು. ಅದೇ ಮಾತು ನಖಾಬ್ ಅನುವಾದಕ್ಕೆ ಅನ್ವಯವಾಗುವುದಿಲ್ಲ. ಅನುಭವ ನಿಷ್ಟ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯನ್ನು ಹೊರತುಪಡಿಸಿ ಅದು ಪ್ರತಿಪಾದಿಸುವ ವಿಚಾರಧಾರೆ ಹೊಸತೇನಲ್ಲ. ಹಾಗಾಗಿ ಡಿವಿಜಿಯವರಂತೆ ಸ. ರಘುನಾಥರ ಬೆಳವಣಿಗೆ ಪೂರಕವೋ ಅಲ್ಲವೋ ಎಂಬುದನ್ನು ಕಾದು ನೋಡಬೇಕಾಗಿಲ್ಲ.     

ಷಾಜಹಾನರ ನಖಾಬ್, ಕನ್ನಡಕ್ಕೆ: ಸ. ರಘುನಾಥ, ವಿಹಾ ಪುಸ್ತಕ, ಬೆಂಗಳೂರು, ಪುಟ-64, ಮೊ.ಮು-2011, ಬೆಲೆ ರೂ-50.

ಬುಧವಾರ, ಮೇ 16, 2012

ಭೋಜನಶಾಲಾ ಮತ್ತು ವೈಭವೀಕರಣ

ಕರ್ನಾಟಕದ ಗತವನ್ನು ವೈಭವೀಕರಿಸುವ ಪ್ರಕ್ರಿಯೆಯೊಂದು ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಭಾವನಾತ್ಮಕ ಪೂರ್ವಭಾವಿ ನೆಲೆಯನ್ನು ಒದಗಿಸಿದ್ದು ಇಂದು ಇತಿಹಾಸದ ಭಾಗವಾಗಿದೆ. ಭಾರತೀಯ ಪುನರುತ್ಥಾನ ಕಾಲದಲ್ಲಿ ಭಾರತೀಯರು ಅನಾಗರಿಕರು, ಆಳ್ವಿಕೆಗೆ ಒಳಪಡಲು ಅರ್ಹರು ಎಂಬ ವಸಾಹತುಶಾಹಿ ಹುಟ್ಟಿಹಾಕಿದ ವಾದಕ್ಕೆ ಪ್ರತಿಯಾಗಿ ಅನ್ಯ ಸಂಸ್ಕೃತಿಗಳ ದಾಳಿಗಳ ಪೂರ್ವದಲ್ಲಿ ಭಾರತ ಉನ್ನತ ಸಂಸ್ಕೃತಿಯನ್ನು ಹೊಂದಿತ್ತ್ತು ಎಂದು ಪ್ರತಿಪಾದಿಸಲು ಪೂರ್ವವನ್ನು ವೈಭವೀಕರಿಸಿ ಮರುಕಟ್ಟಿದ ರೀತಿ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಿರುವಂತೆ ತೋರುತ್ತದೆ.  ಭಾರತೀಯ ಸಂದರ್ಭದಲ್ಲಿ 'ವೈಭವೀಕರಣ' ಅನ್ಯ ಸಂಸ್ಕೃತಿಗೆ ಸೆಡ್ಡು ಹೊಡೆಯಲು ಬಳಕೆಯಾಗಿದ್ದರೆ, ಕರ್ನಾಟಕದ ಸಂದರ್ಭದಲ್ಲಿ ಬೇರೆ ಬೇರೆ ಪ್ರಾಂತಗಳ ಆಡಳಿತಗಳಡಿ ಹರಿದು ಹಂಚಿಹೋಗಿದ್ದ ಕನ್ನಡದ ಜನ ಮತ್ತು ಪ್ರದೇಶಗಳನ್ನು ಕನ್ನಡ ಹಿತಾಸಕ್ತಿಯ(?) ಆಡಳಿತದ ಅಡಿಯಲ್ಲಿ ಒಗ್ಗೂಡಿಸುವ ಚಳವಳಿಗೆ ವೈಚಾರಿಕ ನೆಲೆ ಒದಗಿಸುವ ಪರಿಕರವಾಗಿ ಬಳಕೆಯಾಗಿರುವಂತಿದೆ. ಆದರೂ ಈ ಎರಡೂ ಸಂದರ್ಭದಲ್ಲಿ ಮೈದೋರಿದ ಸಾಂಸ್ಕೃತಿಕ ರಾಜಕಾರಣ ಒಂದೇ ಬಗೆಯದಾಗಿ ಇರುವಂತೆ ಕಂಡುಬರುತ್ತದೆಯೆ? ಬಹು ಸಮುದಾಯಗಳ ಸಮಾಜದಲ್ಲಿ ನಿರ್ದಿಷ್ಟ ಸಮುದಾಯವೊಂದು ತನ್ನ ಹಿತಾಸಕ್ತಿ ಕೇಂದ್ರಿತ ತತ್ವ ಧೋರಣೆಯನ್ನು ಪ್ರತಿಪಾದಿಸಲು ಮತ್ತು ಈ ಧೋರಣೆಯ ನಕಾರಾತ್ಮಕ ಪರಿಣಾಮಗಳನ್ನು ಸಕಾರಾತ್ಮಕವಾಗಿ ಬಿಂಬಿಸಲು ವೈಭವೀಕರಣದ ಚಿಂತನಾಕ್ರಮವನ್ನು ಬಳಕೆಗೆ ತಂದಿತೆ? ಇದು ಅಧ್ಯಯನಗಳಿಂದ ಸ್ಪಷ್ಟವಾಗಬೇಕಾದ ಅಂಶವಾಗಿದೆ.

ವೈಭವೀಕರಣ

ಈ ಚಿಂತನಾ ಕ್ರಮ ಭಾರತ ಮತ್ತು ಕರ್ನಾಟಕದ ಸಂದರ್ಭದಲ್ಲಿ ಮೈ ಪಡೆದುಕೊಂಡಿದ್ದಾದರೂ ಹೇಗೆ ಎಂಬುದನ್ನು ಸೂಚಿಸಲು ಮೇಲಿನ ಆರಂಭಿಕ ಮಾತುಗಳನ್ನು ಆಡಬೇಕಾಯಿತು. ಏಕೆಂದರೆ ವಿಜಯನಗರಕ್ಕೆ ಸಂಬಂಧಪಟ್ಟ ಇತಿಹಾಸ ಮತ್ತು ಸ್ಮಾರಕಗಳಿಗೂ 'ವೈಭವೀಕರಣ' ಚಿಂತನೆಯ ಪರಿಕರ ಬಳಕೆಯಾಗಿರುವಂತಿದೆ. ವಿಜಯನಗರ ಸಾಮ್ರಾಜ್ಯದ ಅಧಿಕಾರ ಕೇಂದ್ರವಿದ್ದ ಅಂದಿನ ಪ್ರದೇಶವಿಂದು 'ಹಾಳು ಹಂಪೆ' ಎಂದು ಪ್ರಸಿದ್ಧಿಪಡೆದಿದೆ. ಈ ಜೋಡಿಪದಗಳು ಪ್ರಸ್ತುತ ಸ್ಥಿತಿ ಕುರಿತು ಕೊರಗನ್ನೂ ಅದರ ಪೂರ್ವದ ಸ್ಥಿತಿ ಕುರಿತು ವೈಭವೀಕೃತ ಹೆಮ್ಮೆಯ ಕಲ್ಪನೆಯನ್ನೂ ಕಟ್ಟಿಕೊಡುತ್ತವೆ. ಇತಿಹಾಸದ ಪುಟಗಳು ಕೂಡ 'ವೈಭವ'ದ ಕನ್ನಡಿಯ ಮೂಲಕವೇ ಹಿಂದಿನ ಸ್ಥಿತಿಗತಿಗಳನ್ನು ಕಾಣಿಸಲು ಮತ್ತು ತಕ್ಕ ಸಾಕ್ಷ್ಯಾಧಾರಗಳನ್ನು ಕಟ್ಟಿಕೊಡಲು ಸಕಲ ಪ್ರಯತ್ನಪಟ್ಟಿರುವಂತೆ ಕಾಣುತ್ತದೆ. ಸಾಮ್ರಾಜ್ಯದ ನಿರ್ದಿಷ್ಟ ಅವಧಿಯಲ್ಲಿ ಅರಮನೆ ಹೊಂದಿದ್ದ ಸಂಪತ್ತಿನ ವೈಭವವನ್ನು ಇಡೀ ಸಾಮ್ರಾಜ್ಯದ ಸುಖ ಸಂಪತ್ತಿನ ವೈಭವವಾಗಿ ಭಾವಿಸುವಂತೆ ಕಾಣಿಸಲಾಗುತ್ತದೆ. ಹಿಂದೂ ಧರ್ಮದ ಶೈವ ಮತ್ತು ವೈಷ್ಣವ ಶಾಖೆಗಳ ಹಿರಿಮೆಯನ್ನು ವಿಜಯನಗರ ಸಾಮ್ರಾಜ್ಯದೊಂದಿಗೆ ಸಮೀಕರಿಸುವ ಇತಿಹಾಸದ ನಿರೂಪಣೆಗಳು, ಸಂಗಮ ವಂಶದ ಎರಡನೆಯ ವಿರೂಪಾಕ್ಷ 1470ರಲ್ಲಿ ತುಂಗಭದ್ರೆಯ ವರೆಗೂ ತನ್ನನ್ನು ಹಿಮ್ಮೆಟ್ಟಿಸಿಕೊಂಡು ಬಂದ ಬಹಮನಿ ಸುಲ್ತಾನ ಮೂರನೆಯ ಮಹಮದ್ ಶಾ ಲಷ್ಕರ್ ನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟು ರಾಜಿ ಮೂಲಕ ತನ್ನ ರಾಜ್ಯ ಭದ್ರ ಮಾಡಿಕೊಂಡ ಸಂಗತಿಯನ್ನು ಮುಂಚೂಣಿಗೆ ತರುವುದೆ ಇಲ್ಲ. ತಾಳಿಕೋಟೆ ಯುದ್ಧದಲ್ಲಿ ಎಡಪಾರ್ಶ್ವದಲ್ಲಿ ತಿರುಮಲನೂ ಮಧ್ಯದಲ್ಲಿ ರಾಮರಾಯನೂ ಬಲಪಾರ್ಶ್ವದಲ್ಲಿ ವೆಂಕಟಾದ್ರಿಯೂ ವಿಜಯನಗರ ಸೈನ್ಯದ ದಂಡನಾಯಕರಾಗಿದ್ದು(ಸಿವೆಲ್ ಪು.209), ವೈರಿಪಡೆಗಳು ರಾಮರಾಯನ ತಲೆ ಕಡಿದ ನಂತರ ಉಳಿದಿಬ್ಬರು ದಂಡನಾಯಕರು ಸೈನ್ಯವನ್ನು ಮುನ್ನಡೆಸದೆ ವಿಜಯನಗರಕ್ಕೆ ಒಂದೇ ಉಸಿರಲ್ಲಿ ಓಡಿಬಂದು ಅರಮನೆಯ ಚರ ಸಂಪತ್ತನ್ನು ಪೆನುಗೊಂಡೆಗೆ ಲೂಟಿ ಮಾಡಿಕೊಂಡು ಹೋದ ಬಗ್ಗೆಯಾಗಲೀ ಈ ಮೂಲಕ ವೈರಿಪಡೆಗಳಿಂದ ಒಳಗೊಂಡು ಹಲವು ಬಗೆಗಳಲ್ಲಿ ಲೂಟಿ-ದರೋಡೆ ಪ್ರಕ್ರಿಯೆಗೆ ಮತ್ತು ವಿಜಯನಗರದ ಅರಾಜಕತೆಗೆ ನಾಂದಿ ಹಾಡಿದ ಬಗ್ಗೆಯಾಗಲೀ ಚಕಾರವೆತ್ತದೆ ವಿಜಯನಗರದ ನಾಶವನ್ನು ಬಹಮನಿ ಸೈನಿಕರ ತಲೆಗೆ ಕಟ್ಟಿಬಿಡಲಾಗಿದೆ. ಇಂಥ ಎಲ್ಲ ಸಂಗತಿಗಳ ಹಿಂದೆ 'ವೈಭವೀಕರಣ'ದ ಪರಿಕರವೆ ಕಾರ್ಯನಿರ್ವಹಿಸಿದೆ ಎನ್ನಬೇಕು. ಐತಿಹಾಸಿಕ ಅಂಶಗಳ ಸೂಕ್ಷ್ಮ ಹಾಗೂ ಸಮಗ್ರ ಪರಿಶೀಲನೆಯಿಂದ ವಿಜಯನಗರದ ಇತಿಹಾಸಕ್ಕೂ 'ವೈಭವೀಕರಣ' ಚಿಂತನೆಗೂ ನಂಟಿರುವುದು ತಿಳಿಯಬಹುದು. ಅಷ್ಟೇ ಅಲ್ಲ ಇಂದಿನ ಹಂಪಿಯಲ್ಲಿರುವ ಸ್ಮಾರಕಗಳೂ ಅವಶೇಷಗಳೂ ಈ ಪ್ರಕ್ರಿಯೆಯಿಂದ ಹೊರತಾಗಿರುವಂತೆ ಕಾಣುವುದಿಲ್ಲ. 

ಉಗ್ರ ನರಸಿಂಹ

ವಿಜಯನಗರದ ಅವನತಿಯ ಕಾಲಾವಧಿಯಲ್ಲಿ ಉಗ್ರ ನರಸಿಂಹ ವಿಗ್ರಹ ಹಾಳಾಯಿತೆಂದು ಹೇಳಲಾಗುತ್ತದೆ. ಇದರ ಅವಶೇಷಗಳ ಜೋಡಣೆ ಮತ್ತು ಸಂರಕ್ಷಣೆ ಕುರಿತ ಪ್ರಕರಣವನ್ನೆ 'ವೈಭವೀಕರಣ' ಚಿಂತನೆಗೆ ನಿದರ್ಶನಾರ್ಥವಾಗಿ ನೋಡಬಹುದು. ಹಂಪಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೌದ್ಧ, ಜೈನ, ಶೈವ, ವೈಷ್ಣವ ಮತಧರ್ಮಗಳ ಕೇಂದ್ರ ಮಾತ್ರವಾಗಿರದೆ ಎಲ್ಲ ಕಾಲಗಳಲ್ಲಿ ಸ್ತ್ರೀ ದೈವಾರಾಧನೆಯ ಕೇಂದ್ರವೂ ಆಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಂಬಂಧಪಟ್ಟ ಇಲಾಖೆಗಳಲ್ಲಿದ್ದ ಅಧಿಕಾರಿಗಳು ತಮ್ಮ ನಿರ್ದಿಷ್ಟ ಮತ ಧರ್ಮದ ದೈವವನ್ನು ಹಂಪಿಯ ಪ್ರಾತಿನಿಧಿಕ ದೈವವನ್ನಾಗಿ ಮುಂಚೂಣಿಗೆ ತರುವ ಅವಸರದಲ್ಲಿ, ಒಡೆದು ಹೋಗಿದ್ದ ನರಸಿಂಹ ವಿಗ್ರಹದ ಸಂರಕ್ಷಣಾ ಕಾರ್ಯವನ್ನು ಮೊದಲ ಆದ್ಯತೆಯ ಮೇಲೆ ಕೈಗೆತ್ತಿಕೊಂಡರು, ಮುರಿದ ಕಾಲುಗಳನ್ನು ಅಡ್ಡಪಟ್ಟಿ ಕೊಟ್ಟು ನಿಲ್ಲಿಸಿ ಉಗ್ರ ನರಸಿಂಹನೆಂದು ಹೆಸರಿಸಿದರು, ಹಂಪಿಯೆಂದರೆ ಉಗ್ರ ನರಸಿಂಹ ಮತ್ತು ಕಲ್ಲಿನ ರಥ ಎನ್ನುವಷ್ಟರ ಮಟ್ಟಿಗೆ ಅವನ್ನು ಪ್ರಸಿದ್ಧಿ ಪಡಿಸಿದರು. ಕಾಲಾನಂತರದಲ್ಲಿ ಶಿವರಾಮ ಕಾರಂತರು ಹಂಪಿಗೆ ಭೇಟಿ ನೀಡಿ ಉಗ್ರ ನರಸಿಂಹನ ಕುರಿತು ತಮ್ಮ ತಕರಾರು ತೆಗೆದರು. ಸೌಂದರ್ಯ ಪ್ರಜ್ಞೆ ಮತ್ತು ವಿವೇಚನೆ ಇಲ್ಲದೆ ಶಾಂತ ಮುಖಮುದ್ರೆಯ ಲಕ್ಷ್ಮೀನರಸಿಂಹ ವಿಗ್ರಹಕ್ಕೆ ಅಡ್ಡಪಟ್ಟಿ ಕೊಟ್ಟು ಸಂರಕ್ಷಣೆಯ ಹೆಸರಿನಲ್ಲಿ ವಿಕಾರಗೊಳಿಸಿರುವುದಲ್ಲದೆ ಉಗ್ರ ನರಸಿಂಹನೆಂದು ಪ್ರಚುರಪಡಿಸಿದ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ಕಾರಂತರ ವಾದಕ್ಕೆ ಪೂರಕವಾಗಿ ನರಸಿಂಹ ವಿಗ್ರಹದ ಎಡತೊಡೆಯ ಮೇಲೆ ಆಸೀನಳಾಗಿದ್ದ ಲಕ್ಷ್ಮೀ ವಿಗ್ರಹದ ಕೈಯೊಂದು ಬೆನ್ನ ಹಿಂಭಾಗಕ್ಕೆ ಆಸರೆಗಾಗಿ ಚಾಚಿಕೊಂಡಿದ್ದು, ಮುರಿದುಹೋದ ಅದರ ಮುಂದಿನ ಭಾಗ ಇಂದಿಗೂ ಹಾಗೆಯೇ ಉಳಿದಿದೆ.  ಕಾರಂತರ ಅಭಿಪ್ರಾಯ ವ್ಯಾಪಕ ಮನ್ನಣೆಗೆ ಪಾತ್ರವಾಯಿತು. ಇಲಾಖೆಯ ವಿಕೃತರೂಪ ಶಾಶ್ವತವಾಗಿ ಉಳಿದುಹೋಯಿತು. ಈ ಎಲ್ಲ ಅವಾಂತರಗಳಿಗೆ ಮೂಲಬೀಜ ಸ್ವಮತ ಕುರಿತ ಅಂಧಾಭಿಮಾನ ಮತ್ತು ಸ್ವಮತದ ದೈವವನ್ನು ಪ್ರಸ್ತುತ ಸಮಾಜದಲ್ಲಿ ಪ್ರಭಾವಿಯನ್ನಾಗಿಯೂ ಉನ್ನತಸ್ಥಿತಿಯಲ್ಲಿಯೂ ಇರಿಸಬೇಕೆನ್ನುವ ಹುಚ್ಚುಸಾಹಸ ಮಾತ್ರ. ಇಲ್ಲಿ ಇತಿಹಾಸ ನಿಷ್ಟೆಯಾಗಲೀ ಆ ಮೂಲಕ ಒಂದು ಕಾಲಘಟ್ಟದ ಸಾಂಸ್ಕೃತಿಕ ಸ್ಥಿತಿಗತಿಯ ಸಂರಕ್ಷಣೆಯಾಗಲೀ ಎಲ್ಲವೂ ಶೂನ್ಯಸ್ಥಿತಿ ತಲುಪಿತ್ತು ಎಂಬುದು ಬೇರೆ ಮಾತು. ಪ್ರಾಚ್ಯ ವಸ್ತುಗಳ ಸಂರಕ್ಷಣೆಯ ಸಂದರ್ಭದಲ್ಲಿ ವೈಭವೀಕರಣ ಪ್ರಕ್ರಿಯೆ ಕಾರ್ಯಗತಗೊಂಡ ಸ್ವರೂಪಕ್ಕೆ ಇದೊಂದು ಉತ್ತಮ ಪ್ರಕರಣವಾಗಿದ್ದು, ಭೋಜನಶಾಲಾ ಸ್ಮಾರಕವನ್ನು ಕೂಡ ಇದೇ ಹಿನ್ನೆಲೆಯಲ್ಲಿ ಪರಿಶೀಲಿಸಬಹುದು.

ಭೋಜನಶಾಲಾ

ಕಮಲಾಪುರದಿಂದ ಹಂಪಿಗೆ ಹೋಗುವ ರಸ್ತೆಯಲ್ಲಿ ಕೋಟೆಗೋಡೆ, ರಾಣಿ ಸ್ನಾನಗೃಹ ದಾಟಿ ಮುಂದೆ ಹೋದಲ್ಲಿ ಅಂದರೆ ಕಮಲಾಪುರದಿಂದ ಒಂದು ಕಿ.ಮೀ. ನಂತರದಲ್ಲಿ ರಸ್ತೆಯ ಎಡಗಡೆಗೆ ಭೋಜನಶಾಲಾ ಎಂಬ ಬೋರ್ಡ್ (ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ) ಇತ್ತು. (ಈಗ ಬೋರ್ಡ್ ಹಾಕಲು ಹೊಸ ಕಂಬ ನೆಡಲಾಗಿದೆ. ಬೋರ್ಡ್ ಇಲ್ಲ.) ಅದರ ಪಕ್ಕದಲ್ಲಿ ರಸ್ತೆಯಿಂದ ಸುಮಾರು ನೂರಿಪ್ಪತ್ತು ನೂರನಲವತ್ತು ಅಡಿಗಳ ದೂರದ ವರೆಗೆ ಗ್ರಾನೈಟ್ ಕಲ್ಲಿನಿಂದ ಕಟ್ಟಿದ, ಇಬ್ಬರು ಓಡಾಡಬಹುದಾದಷ್ಟು ಅಗಲವಿರುವ ನಾಲೆಯೊಂದು ಚಾಚಿಕೊಂಡಿದೆ. ಕೆಳಗೂ ಗ್ರಾನೈಟ್ ಕಲ್ಲು ಹಾಸಿರುವುದನ್ನು ಗುರುತಿಸಬಹುದು. ನಾಲೆಯ ಎರಡೂ ಬದಿಯ ಕಲ್ಲು ದಂಡೆಯ ಮೇಲೆ ಜೋಡಿಸಿದ ಕಪ್ಪು ಕಲ್ಲು ಚಪ್ಪಡಿಗಳ ಮೇಲೆ ಕೆತ್ತಿದ ಬಾಳೆ ಎಲೆ ಹಾಗೂ ಗುಂಡಗಿನ ಊಟದ ತಟ್ಟೆ ಮತ್ತು ಅದರ ಸುತ್ತ ಸಣ್ಣ ಬಟ್ಟಲುಗಳ ಆಕಾರಗಳು ಪ್ರವಾಸಿಗರ ಕುತೂಹಲವನ್ನು ಸೆಳೆಯುತ್ತವೆ. ರಸ್ತೆಯಂಚಿನ ಅರಂಭದಲ್ಲಿ ಅಂಥ ಕಪ್ಪು ಚಪ್ಪಡಿ ಕಲ್ಲುಗಳನ್ನು ಮಕಾಡೆ ಹಾಕಿದಂತಿದ್ದು ಅದರ ಮೇಲೆ ಯಾವುದೇ ಕೆತ್ತನೆಯ ಚಿತ್ತಾರ ಕಂಡುಬರುವುದಿಲ್ಲ. ಸುಮಾರು ಎರಡೂವರೆ ಅಡಿ ಅಗಲ ಮತ್ತು ಏಳೆಂಟು ಆಡಿ ಉದ್ದದ ಅಂಥ ಒರಟು ಚಪ್ಪಡಿ ಕಪ್ಪುಕಲ್ಲುಗಳು ಎರಡೂ ದಂಡೆಯ ಮೇಲೆ ಸುಮಾರು ಎರಡು ಮೂರು ಇರಬಹುದು. ರಸ್ತೆಯಿಂದ ಸುಮಾರು ಮೂವತ್ತು ನಲವತ್ತು ಅಡಿಗಳಲ್ಲಿ ನಾಲೆ ಸುಮಾರು 70 ಡಿಗ್ರಿಗಳಲ್ಲಿ ಎಡಕ್ಕೆ ತಿರುಗುತ್ತದೆ. ಹಾಗೆಯೆ ಮುಂದೆ ಹೋದಲ್ಲಿ ಊಟದ ತಟ್ಟೆಗಳು ಕೆತ್ತಿದ ಕಪ್ಪು ಕಲ್ಲಿನ ಚಪ್ಪಡಿಗಳು ಇಲ್ಲವಾಗಿ, ಕೇವಲ ಗ್ರಾನೈಟ್ ಕಲ್ಲಿನ ನಾಲೆ ಮುಂದುವರೆಯುತ್ತದೆ. ಈ ಗ್ರಾನೈಟ್ ಕಲ್ಲುಗಳ ಮೇಲೂ ಅಲ್ಲಲ್ಲಿ ಕೆತ್ತನೆ ಮಾಡಿದ್ದು ಆಕಾರಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಕೆಲವು ಕಡೆ ಊಟದ ತಟ್ಟೆಯಾಕಾರ ಕೆತ್ತಿರುವ ಗ್ರಾನೈಟ್ ಕಲ್ಲುಗಳನ್ನು ನಾಲೆ ದಂಡೆಯ ಕಟ್ಟಡಕ್ಕೆ ಬಳಸಿರುವುದು ಕಂಡುಬರುತ್ತದೆ. ಈ ನಾಲೆ ಮುಗಿಯುವಲ್ಲಿ ಸೈಜುಗಲ್ಲುಗಳ ರಾಸಿ ಬಿದ್ದಿದೆ. ನಾಲೆಯ ಎರಡೂ ದಂಡೆಗಳಿಂದ ಅದರ ಹಿಂಭಾಗಕ್ಕೆ ಹತ್ತು ಅಡಿಗಳವರೆಗೆ ಕಲ್ಲುಕಟ್ಟಿ ವೇದಿಕೆಯಂತೆ ಎತ್ತರಿಸಲಾಗಿದೆ. ಬಟ್ಟ ಬಯಲಲ್ಲಿ, ನಾಲೆಯ ಮೇಲಿರುವ ಕಲ್ಲು ತಟ್ಟೆಗಳು ಯಾವ ಬಗೆಯ ಭೋಜನ ಶಾಲೆ ಆಗಿರಬಹುದು ಎಂಬ ಅನುಮಾನ ಈ ಸ್ಮಾರಕವನ್ನು ನೋಡುತ್ತಿರುವಂತೆ ಯಾವ ಪ್ರವಾಸಿಗನಿಗೂ ಕಾಡದೆ ಇರದು. ಊಟದ ಕಲ್ಲಿನ ತಟ್ಟೆಗಳಿರುವ ನಾಲೆ ರಸ್ತೆಯಂಚಿನಲ್ಲಿ ಇದ್ದಕ್ಕಿದ್ದಂತೆ ಕೊನೆಗೊಂಡಂತೆ ಭಾಸವಾಗುತ್ತದೆ. ಸ್ವಲ್ಪ ಎಚ್ಚರದಿಂದ ಗಮನಿಸಿದರೆ ಬ್ರಿಟಿಷರು ಕಮಲಾಪುರದಿಂದ ಹಂಪಿಗೆ ಹೊಸ ರಸ್ತೆ ಮಾಡುವ ಸಂದರ್ಭದಲ್ಲಿ ಇಂದಿನ ರಸ್ತೆಯ ಭಾಗದಲ್ಲಿ ಮುಂದುವರೆದಿದ್ದ ಕಲ್ಲಿನ ಊಟದ ತಟ್ಟೆಗಳ ನಾಲೆಯನ್ನು ಅಗೆದು ನಾಶಪಡಿಸಿರಬಹುದಾದ ಸಾಧ್ಯತೆ ಗೋಚರಿಸುತ್ತದೆ. ಬಟ್ಟ ಬಯಲಿನಲ್ಲಿ ಊಟದ ತಟ್ಟೆಗಳನ್ನು ಕೆತ್ತಿರುವ ಕಪ್ಪು ಕಲ್ಲಿನ ಚಪ್ಪಡಿ ಹಾಸಿದ ನಾಲೆಗೆ ಭೋಜನ ಶಾಲೆ ಎಂದು ಕರೆದಿರುವುದು, ಏಕೆ? ಇದು ಕೇವಲ ಕೆತ್ತನೆ ವಿಶೇಷವೇ ಅಥವಾ ಈ ಕಲ್ಲಿನ ತಟ್ಟೆಗಳ ಮೇಲೆ ಊಟಕ್ಕೆ ಬಡಿಸಲಾಗುತ್ತಿತ್ತೆ? ಹಾಗಿದ್ದಲ್ಲಿ ಬಟ್ಟ ಬಯಲಲ್ಲಿ ಊಟ ಮಾಡುತಿದ್ದ ಜನವರ್ಗ ಯಾವುದು? ಭೋಜನ ಶಾಲೆಯ ನುಡಿಗಟ್ಟು ನೀಡುವ ಭವ್ಯ ಮತ್ತು ವೈಭವದ ಕಲ್ಪನೆ ಮತ್ತು ಬೋಳುಬೋಳಾದ ಕಲ್ಲಿನ ಊಟದ ತಟ್ಟೆಗಳ ನಾಲೆ ಇರುವ ಸ್ಥಿತಿಯ ವೈರುಧ್ಯದ ನಡುವೆ ಇದ್ದಿರಬಹುದಾದ ವಾಸ್ತವ ಯಾವುದು? ಮೂಲ ಸ್ಥಿತಿ ಮತ್ತು ಕಾಲಾಂತರದಲ್ಲಿ ಬದಲಾದ ಸ್ಥಿತಿ- ಇವುಗಳ ನಡುವಿನ ಸಂಬಂಧ ಮತ್ತು ಸ್ವರೂಪಗಳು ಯಾವ ಬಗೆಯವು? 

ರಸ್ತೆಯ ಆಚೆಗೆ ಆದರೆ ಸ್ವಲ್ಪ ಮುಂದಕ್ಕೆ ಮಂಟಪದ ಆಕಾರವುಳ್ಳ ಒಂದು ಕಟ್ಟಡ ಇಂದಿಗೂ ಸುಭದ್ರವಾಗಿದೆ. ಕಲ್ಲಿನ ತೊಟ್ಟಿ/ಗಚ್ಚು ಇರುವ ಅದನ್ನು ನೀರಿನ ಅರವಂಟಿಗೆ ಎಂದು ಹೇಳಲಾಗುತ್ತದೆ.  ಈ ಕಟ್ಟಡ ಕಟ್ಟಿದ ಕಾಲಕ್ಕೆ ಸುಂದರವಾಗಿದ್ದಿಬಹುದು. ಆದರೆ ಅದನ್ನು ನೀರಿನ ಅರವಂಟಿಗೆಗಾಗಿಯೆ ಕಟ್ಟಿಸಲಾಗಿತ್ತು ಎನ್ನುವುದಾದರೆ ಈಗಲೂ ಭವ್ಯವಾಗಿ ಕಾಣುತ್ತದೆ. ಅರಮನೆಗೆ ಹೋಗಿಬರಲು ಸಣ್ಣ ಬಾಗಿಲೊಂದು ಸ್ವಲ್ಪ ದೂರದಲ್ಲೆ ಇದ್ದು ಅರಮನೆಗೆ ಅಂಟಿಕೊಂಡಂತಿರುವ, ಅರಮನೆಯ ಅಕ್ಕಪಕ್ಕದ ಈ ಜಾಗ ಸಾಮಾನ್ಯ ಜನರಿಗೆ ನಿರ್ಬಂಧಿತ ಪ್ರದೇಶವಾಗಿರುವಂತೆ ಕಾಣುತ್ತದೆ. ಇನ್ನೂ ಹೊರನಾಡ ಅಗುಂತುಕ ಪ್ರವಾಸಿಗರಿಗಂತೂ ಇಲ್ಲಿಗೆ ಖಂಡಿತ ಪ್ರವೇಶವಿರಲಾರದು. ಹಾಗಿದ್ದಲ್ಲಿ ಇಲ್ಲಿನ ನೀರಿನ ಅರವಂಟಿಗೆ ಯಾರಿಗಾಗಿ ಕಟ್ಟಿಸಿದ್ದಿರಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. ಇಟ್ಟಿಗೆ ಗೋಡೆಯದು ಇದ್ದಿರಬಹುದಾದ ಐದಾರು ಕಂಬಗಳನ್ನೊಳಗೊಂಡು ಹಲವು ಕಮಾನುಗಳುಳ್ಳ ಈ ಕಟ್ಟಡವನ್ನು ದಾಟಿ ಬೇಲಿಯ ಒಳಗೆ ಹೋದರೆ ಕಲ್ಲು ಮಣ್ಣಿನ ಸಣ್ಣ ಪುಟ್ಟ ಗುಡ್ಡೆಗಳು, ಕಲ್ಲು ಮಳ್ಳು, ಮುಳ್ಳುಗಿಡಗಳನ್ನು ಒಳಗೊಂಡು ಇತರ ಎಲ್ಲ ಬಗೆಯ ಸಣ್ಣ ಪುಟ್ಟ ಗಿಡಗಳು ವ್ಯಾಪಿಸಿಕೊಂಡಿವೆ. ಸ್ಥಳಮೂಲ ಬಲ್ಲವರೊಂದಿಗೆ ಮುಂದೆ ಹೋದಲ್ಲಿ ಅಕ್ಕಪಕ್ಕದಲ್ಲೆ ಅಳವಡಿಸಿದ್ದ ಐದಾರು ಇಂಚು ಅಗಲದ ಸುಟ್ಟ ಮಣ್ಣಿನ ಪೈಪುಗಳ ಮುಂಭಾಗದ ಅವಶೇಷ ಅಲ್ಲಿ ಕಂಡುಬರುತ್ತದೆ. ಹಾಗೆಯೆ ರಸ್ತೆಗೆ ಪರ್ಯಾಯವಾಗಿ ಮುಂದುವರೆದಲ್ಲಿ ಗಾರೆಯಿಂದ ಮಾಡಿದ ದೊಡ್ಡ ತೊಟ್ಟಿಯೊಂದು ಕಣ್ಣಿಗೆ ಬೀಳುತ್ತದೆ. ಅದಕ್ಕೆ ಕಮಲಾಪುರದ ದಿಕ್ಕಿನಲ್ಲಿ ಮೇಲೆ ಹೇಳಿದಂತೆ ಎರಡು ಪೈಪುಗಳು ಅಳವಡಿಕೆಯಾಗಿದ್ದು ಅದರ ವಿರುದ್ದ ದಿಕ್ಕಿನಲ್ಲಿ ಸಮಾನ ಅಂತರದ ನಡುವೆ ಇರುವ ನಾಲ್ಕು ಪೈಪುಗಳ ಬಾಯಿಗಳಿವೆ. ಬಹುಶಹ ಇದೊಂದು ಅರಮನೆಗೆ ನೀರು ವ್ಯವಸ್ಥೆ ಮಾಡುವ ನಿಯಂತ್ರಕ ಕೊಠಡಿಯಾಗಿದ್ದಿರಬಹುದೆಂಬ ಊಹೆ ತಜ್ಞ ಸ್ನೇಹಿತರದ್ದಾಗಿದೆ. ಪಯಸ್ ಸೂಚಿಸಿರುವಂತೆ ಹಣ್ಣಿನ ತೋಟಕ್ಕೆ ನೀರು ಒದಗಿಸುವ ಹಾಗೂ ಅರಮನೆಗೆ ನೀರು ಒದಗಿಸುವ ನೀರು ನಿಯಂತ್ರಕ ವ್ಯವಸ್ಥೆಯ ಭಾಗವಾಗಿ ಅರವಂಟಿಗೆ ಕಟ್ಟಡ ಮತ್ತು ಊಟದ ಕಲ್ಲಿನ ತಟ್ಟೆಗಳು ಕೆತ್ತಿರುವ ನಾಲೆ ಸೇರಿರಬಹುದೆ ಎಂಬ ಪ್ರಶ್ನೆ ಕೇಳಿಕೊಳ್ಳುವಂತೆ ಇದೆ. ಈ ಮೂರೂ ಅವಶೇಷಗಳು ಒಂದು ವ್ಯವಸ್ಥೆಗೆ ಸೇರಿದ್ದೊ ಅಥವಾ ಬೇರೆ ಬೇರೆ ವ್ಯವಸ್ಥೆಗಳು ನೆಲೆಗೊಂಡ ಏಕ ಪ್ರದೇಶವಾಗಿತ್ತೋ ನಿರ್ದಿಷ್ಟವಾಗಿ ಏನೂ ಹೇಳಲಾಗದು.

ಈ ಕುರಿತು ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವರನ್ನು ವಿಚಾರಿಸಬಹುದು. ಅವರ ಪ್ರಕಾರ ಭೋಜನಶಾಲೆಯೆಂದು ಸೂಚಿಸಿರುವ ನಾಲೆ ಕಮಲಾಪುರದ ಕೆರೆಯಿಂದ ನೀರು ಹರಿಯುವ ನಾಲೆಯಾಗಿತ್ತು, ಊಟದ ತಟ್ಟೆ ಕೆತ್ತಿರುವ ಕಪ್ಪು ಕಲ್ಲಿನ ಚಪ್ಪಡಿಗಳು ಆನೆಗೊಂದಿ ಮತ್ತು ಹಂಪಿಯ ಅರಮನೆ ಆವರಣದ ಸುತ್ತಲ ಇತರ ಸ್ಥಳಗಳಲ್ಲಿ ಕೂಡ ಕಂಡುಬರುತ್ತವೆ; ಗ್ರಾನೈಟ್ ಕಲ್ಲಿನಿಂದ ಕಟ್ಟಿದ ನಾಲೆ ಮೇಲಿರುವ ಊಟದ ತಟ್ಟೆಯ ಕಲ್ಲುಗಳು ಮೊದಲಿಗೆ ಅದೇ ಪ್ರದೇಶದಲ್ಲಿ ಇತರ ಕಡೆಗಳಲ್ಲಿದ್ದು ಅವನ್ನು ತಂದು ಇಲ್ಲಿ ಸಣ್ಣ ಕಲ್ಲುಕೊಟ್ಟು ಜೋಡಿಸಲಾಗಿದೆ; ಸಾಮ್ರಾಜ್ಯದ ಕಾಲದಲ್ಲಿ ಗಣ್ಯ ಅತಿಥಿಗಳನ್ನು ಉಪಚರಿಸಲು ಭೋಜನಶಾಲೆ ಎಂಬ ಪ್ರತ್ಯೇಕ ಕಟ್ಟಡವೊಂದು ಅರಮನೆಯ ಆವರಣದೊಳಗೊ ಹೊರಗೊ ಇದ್ದಿರಬಹುದಾಗಿದ್ದು ಅದು ಎಲ್ಲಿತ್ತೆಂಬ ಸುಳಿವು ಈಗ ಯಾರಿಗೂ ತಿಳಿಯದಾಗಿದೆ.

ಈ ವಿವರಗಳು ವಾಸ್ತವ ಸ್ಥಿತಿಗತಿಗಳಿಗೆ ಹತ್ತಿರವೆಂದು ತಿಳಿಯುವುದಾದಲ್ಲಿ, ಭೋಜನಶಾಲೆಗೂ ಊಟದ ತಟ್ಟೆ ಕೆತ್ತಿರುವ ಕಪ್ಪು ಕಲ್ಲಿನ ಚಪ್ಪಡಿಗಳಿಗೂ ಅವು ಇರುವ ಗ್ರಾನೈಟ್ ಕಲ್ಲಿನಿಂದ ಕಟ್ಟಿದ ನಾಲೆಗೂ ಪರಸ್ಪರ ಯಾವ ಸಂಬಂಧವೂ ಇಲ್ಲ ಎನ್ನುವ ಸಂಗತಿ ತಿಳಿದುಬರುತ್ತದೆ. ಅಲ್ಲದೆ ನಾಲೆಗೂ ಅರವಂಟಿಗೆ ಮಂಟಪಕ್ಕೂ ಈಗ ಅವಶೇಷವಾಗಿರುವ ಮತ್ತು ನೀರು ವಿತರಣ ವ್ಯವಸ್ಥೆಯ ನಿಯಂತ್ರಕ ಕಟ್ಟಡವಿದ್ದಿರಬಹುದಾದ ಅದರ ಹತ್ತಿರದ ಕಟ್ಟಡಕ್ಕೂ ಪರಸ್ಪರ ಸಂಬಂಧವಿರುವ ಸಾಧ್ಯತೆಗಳು ಗೋಚರಿಸುತ್ತದೆ. ಹಾಗಿದ್ದಲ್ಲಿ ಕಲ್ಲಿನ ಊಟದ ತಟ್ಟೆಗಳ ಸಾಲಿಗೆ ಭೋಜನ ಶಾಲೆ ಎಂದು ಹೆಸರು ಬಂದದ್ದಾದರೂ ಏಕೆ? ಹೇಗೆ?
ಕುತೂಹಲದ ಅಂಶವೆಂದರೆ, ಅಲ್ಲಿಂದ ಸುಮಾರು ನೂರು ಇನ್ನೂರು ಅಡಿ ಮುಂದೆ ರಸ್ತೆಯಲ್ಲಿ ಹೋದರೆ ಮಾವಿನ ಮರಗಳಿಂದ ಆವೃತ್ತವಾದ ಪ್ರವೇಶ ದ್ವಾರವೊಂದು ಕಣ್ಣಿಗೆ ಬೀಳುತ್ತದೆ. ಈ ಕಲ್ಲಿನ ಕಟ್ಟಡ ಸಾಮ್ರಾಜ್ಯವೊಂದರ ಯಾವುದೇ ಸಾಮಾನ್ಯ ಪ್ರವೇಶ ದ್ವಾರದಂತೆ ಇದ್ದಿರಬಹುದಾದರೂ ಇಂದಿಗೆ ದೊಡ್ಡದಾಗಿಯೆ ಕಾಣುತ್ತದೆ. ಅರಮನೆ ಆವರಣದ ಕೋಟೆ ಗೋಡೆಯ ಎದುರಿಗೆ ಇಂಥ ಪ್ರವೇಶ ದ್ವಾರದ ನಿರ್ಮಾಣ ಯಾವ ಉದ್ದೇಶಕ್ಕಾಗಿ ನಡೆದಿದೆ ಎಂಬುದು ಕೌತುಕವೂ ನಿಗೂಢವೂ ಆಗಿ ಕಾಣುತ್ತದೆ. ಇಲ್ಲಿಂದ ಎಲ್ಲಿಗೆ ದಾರಿಯಿತ್ತೊ ತಿಳಿಯದು. ಈಗಂತೂ ಈ ಜಾಗ ದೊಡ್ಡ ಮಾವಿನ ಮರಗಳಿಂದ ಆವೃತ್ತವಾಗಿದ್ದು, ಹೂವಿನ ದ್ವಾರವೆಂದು ಕರೆಯುತ್ತಾರೆ. ಆ ದ್ವಾರದ ಕಾವಲು ಮನೆಗಂಟಿಕೊಂಡಂತೆ ಇರುವ ದೇವರಗೂಡಿನಲ್ಲಿ ಅಂದಾಜು ಒಂದಡಿ ಅಗಲ ಮತ್ತು ಎರಡೂವರಡಿ ಎತ್ತರದ ಕಲ್ಲೊಂದಿದ್ದು, ಹರಿಷಿಣ ಕುಂಕುಮಗಳಿಂದ ಸಾರಿಸಿದಂತೆ ಅದರ ಮೇಲೆ ಕೇಸರಿ ಮತ್ತು ಹಳದಿ ಬಣ್ಣಗಳು ತುಂಬಿಹೋಗಿದೆ. ಅದರ ಆಕಾರ ಏನೂ ಸರಿಯಾಗಿ ಕಾಣದಂತಿದೆ. ಈ ಕುರಿತು ಸ್ಥಳಿಯರನ್ನು ಕೇಳಿದಲ್ಲಿ ಅವರಿದನ್ನು ಹೂವಿನವ್ವ ಎಂದೆನ್ನುತ್ತಾರೆ. ಈ ದೈವದ ಮೂಲ ಹೆಸರು ಏನೆಂದು ಕೇಳಿದರೆ ಗೊತ್ತಿಲ್ಲವೆನ್ನುತ್ತಾರೆ. ಗೆಳೆಯರಿಂದ ತಿಳಿದುಬಂದ ವಿಷಯವೆಂದರೆ, ಈ ಜಾಗ ಈಗಲೂ ಹೂಗಾರರಿಗೆ ಸೇರಿದುದಾಗಿದೆ.

ಈ ಎಲ್ಲ ಗೊಂದಲ, ಅಸ್ಪಷ್ಟತೆ ಮತ್ತು ನಿರ್ದಿಷ್ಟ ಸಂಬಂಧಗಳಿಲ್ಲದ ಮಾಹಿತಿಗಳ ನಡುವೆ ನಾನೊಮ್ಮೆ  ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಸದಾನಂದ ಕನವಳ್ಳಿ ಅನುವಾದಿತ ರಾಬರ್ಟ್ ಸಿವೆಲ್ ನ ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ (2010 ಆವೃತ್ತಿ) ಓದುತ್ತಿದ್ದೆ. ಬಹುಶಃ ಕ್ರಿ.ಶ.1520-21ರಲ್ಲಿ ಬರೆದುದೆಂದು ಹೇಳಲಾದ ಡೊಮಿಂಗೊ ಪಯಸ್ ನ ಕಥನದಲ್ಲಿ ಕೆಲವು ವಿವರಗಳನ್ನು ಪುಟ.262ರಲ್ಲಿ ಓದಿ ಅಚ್ಚರಿಪಟ್ಟೆ. ಅದು ಹೀಗಿದೆ -

ರಾಜ ತನ್ನ ಅರಮನೆಯ ಹತ್ತಿರವೇ ತೆಂಗಿನ ತೋಪು ಮತ್ತು ಇತರ ಸಂಪದ್ಭರಿತ ಹಣ್ಣಿನ ಗಿಡಗಳನ್ನು ಹೊಂದಿದ್ದಾನೆ. ಮೂರರ ವಾಸಸ್ಥಾನದ ಕೆಳಗಡೆ ಒಂದು ಚಿಕ್ಕನದಿಯಿದೆ. ಅದರ ಈ ಬದಿಗೆ ಅನೇಕ ಹಣ್ಣಿನ ತೋಟಗಳು ಮತ್ತು ಅನೇಕ ಹಣ್ಣಿನ ಗಿಡಗಳುಳ್ಳ ತೋಟಗಳು ಇವೆ. ಅವುಗಳಲ್ಲಿ ಬಹುಮಟ್ಟಿಗೆ ಇರುವುದು ಮಾವು, ಅಡಿಕೆ, ಹಲಸು ಮತ್ತು ಅನೇಕ ನಿಂಬೆ, ಕಿತ್ತಲೆ ಗಿಡಗಳು. ಅವುಗಳೋ ಒಂದಕ್ಕೊಂದು ಎಷ್ಟು ಗುತ್ತಾಗಿ ಬೆಳೆದಿವೆಯೆಂದರೆ ಅದು ದಟ್ಟ ಅರಣ್ಯದಂತೆ ತೋರುತ್ತದೆ. ಮತ್ತು ಅಲ್ಲಿ ಬಿಳಿದ್ರಾಕ್ಷಿಗಳೂ ಉಂಟು. ನಗರದಲ್ಲಿರುವ ನೀರೆಲ್ಲ ಪ್ರಥಮ ಸುತ್ತಿನ ಗೋಡೆಯ ಹೊರಗೆ ಇರುವ ನಾನು ಹೇಳಿದ ಎರಡು ಕೆರೆಗಳಿಂದ ಬರುತ್ತದೆ.

ಇದರಿಂದ ಕೃಷ್ಣದೇವರಾಯನ ಕಾಲದಲ್ಲಿ ಅರಮನೆಯ ಅಗತ್ಯಗಳಿಗಾಗಿ ಅರಮನೆಗೆ ಹೊಂದಿಕೊಂಡಂತೆ ಮತ್ತು ಚಿಕ್ಕ ನದಿಯ ನಡುವೆ ದೊಡ್ಡದೊಂದು ಹಣ್ಣಿನ ತೋಟವೊಂದಿತ್ತು, ಚಿಕ್ಕ ನದಿಯ ಕೆಳಗೆ ಮೂರರ ವಾಸಸ್ಥಾನವಿತ್ತು ಎಂಬ ವಿಷಯಗಳು ತಿಳಿದುಬರುತ್ತದೆ. ಇದರ ಬಗ್ಗೆ ಕುತೂಹಲ ಹುಟ್ಟಿ ಈ ಪ್ರದೇಶ ಎಲ್ಲಿ ಬರಬಹುದೆಂದು ಹುಡುಕಲು ಪ್ರಯತ್ನಪಟ್ಟೆ. ಕಮಲಾಪುರ-ಹಂಪಿ ರಸ್ತೆಯಲ್ಲಿ ಮೊದಲಿಗೆ ಸಿಗುವ ಕೋಟೆ ಆಂಜನೇಯ ಗುಡಿ ಎಡಗಡೆಗೆ ಗದ್ದೆಗಳಿಗೆ ಹೋಗುವ ರಸ್ತೆಯಿದೆ. ಅದರ ಬೆನ್ನು ಹತ್ತಿ ಹೋದಾಗ ಸುಮಾರು ಒಂದು ಕಿ.ಮೀ ನಂತರ ರಸ್ತೆ ಬಲಗಡೆಗೆ ತಿರುಗುತ್ತದೆ. ಆನಂತರ ಸುಮಾರು ಒಂದೂವರೆ ಕಿ.ಮೀ. ಕ್ರಮಿಸಿದ ನಂತರ ಮತ್ತೆ ಬಲಗಡೆಗೆ ತಿರುವು ಪಡೆದು ಸ್ವಲ್ಪ ಮುಂದೆ ಹೋಗಿ, ಎಡಕ್ಕೆ ತಿರುಗಿ ನಡೆದು, ಬಲಕ್ಕೆ ಮುಂದುವರೆದರೆ ಹಳ್ಳವೊಂದು ಸಿಗುತ್ತದೆ. ಅದನ್ನು ದಾಟಿ ಕಾಲುಹಾದಿಯಲ್ಲಿ ಸುಮಾರು ದೂರ ಸಾಗಿದರೆ ಅದು ಅಕ್ಕತಂಗಿ ಗುಂಡುಕಲ್ಲಿನಿಂದ ಕಡ್ಡಿರಾಂಪುರಕ್ಕೆ ಹೋಗುವ ರಸ್ತೆಗೆ ತಲುಪುತ್ತದೆ. ನಾನು ಕ್ರಮಿಸಿದ ಹಾದಿಯನ್ನು ಗಮನಿಸಿದಾಗ ಆಂಜನೇಯ ಗುಡಿಯಿಂದ ಹಳ್ಳದವರೆಗೆ ಕೋಟೆ ಮೇಲಿನ ಹಾದಿಯಾಗಿದೆ. ಉದ್ದಕ್ಕೂ ಕೋಟೆಗೋಡೆಯ ಕಲ್ಲುಗಳನ್ನು ಕಾಣಬಹುದು. ಕಮಲಾಪುರ - ಹಂಪಿ ಟಾರ್ ರಸ್ತೆಯ ಎಡಗಡೆಯಲ್ಲಿ ಉದ್ದಕ್ಕೂ ಕೋಟೆಗೋಡೆಯೊಂದು ಸಾಗುವುದನ್ನು ಗಮನಿಸಬಹುದು. ಆಂಜನೇಯ ಗುಡಿಯಿಂದ ಗದ್ದೆ ರಸ್ತೆ, ಹಳ್ಳ, ಕಡ್ಡಿರಾಂಪುರ ರಸ್ತೆ ಮೂಲಕ ಅಕ್ಕತಂಗಿ ಗುಂಡುಕಲ್ಲು ಮತ್ತು ಅಲ್ಲಿಂದ ಆಂಜನೇಯ ಗುಡಿಗೆ ಸುಮಾರು 7-8 ಕಿ.ಮೀ. ವ್ಯಾಪ್ತಿಯ ಪ್ರದೇಶ ಡೊಮಿಂಗೊ ಪಯಸ್ ಸೂಚಿಸಿರುವ ಅರಮನೆ ಹಣ್ಣಿನ ತೋಟವೆಂದು ಕಾಣುತ್ತದೆ. ಹಳ್ಳವೇ ಆತ ಸೂಚಿಸುವ ಚಿಕ್ಕನದಿ ಇರಬಹುದು. ಯೂರೋಪಿಯನ್ ಸಮಾಜದಲ್ಲಿ ಕರಿಯ ಗುಲಾಮರಾಗಿದ್ದ ಮೂರರು ಎಂದರ್ಥದಲ್ಲಿ ಇಂಡಿಯಾದ ಸಾಮಾಜಿಕ ಶ್ರೇಣೀಕರಣದಲ್ಲಿ ಅಂದು ಊರ ಹೊರಗೆ ವಾಸಿಸುತ್ತಿದ್ದ ಪಂಚಮರು, ಅಂದರೆ ಇಂದಿನ ಅಸ್ಪೃಶ್ಯರನ್ನು ಪಯಸ್ ಸೂಚಿಸಿದ್ದಾನೆಂದು ತೋರುತ್ತದೆ.  

ಇಂದು ಹೂವಿನ ದ್ವಾರವೆಂದು ಕರೆಯುವ ಅರಮನೆಯ ಕೋಟೆ ಗೋಡೆಗೆ ಎದುರಿರುವ ಪ್ರವೇಶ ದ್ವಾರ ಬಹುಶಹ ಅಂದಿನ ಹಣ್ಣಿನ ತೋಟಕ್ಕೆ ಅರಮನೆಯ ಮಂದಿ ಹೋಗಿ ಬರುವ ಬಾಗಿಲಾಗಿರಬಹುದು. ಈ ದ್ವಾರ ಮತ್ತು ಅರವಂಟಿಗೆ ಹಿಂಭಾಗದಲ್ಲಿರುವ ಅರಮನೆಯಿಂದ ತೋಟದ ಕಡೆಗೆ ಹೊರ ಬರುವ ಸಣ್ಣ ಬಾಗಿಲು ಪರಸ್ಪರ ಸಂಬಂಧವಿರುವ ಮಾರ್ಗಗಳಾಗಿರಬಹುದು. ಈ ಎಲ್ಲ ಸಾಧ್ಯತೆಗಳನ್ನು ಒಪ್ಪಬಹುದಾದಲ್ಲಿ 'ಭೋಜನಶಾಲೆ' ಗೊಂದಲ ಮತ್ತು ಅಸ್ಪಷ್ಟತೆ ಕಡೆಗೆ ಹೊರಳಬಹುದು.

ಇಲಾಖೆಯ ಸಿಬ್ಬಂದಿ ಸಾಮಾನ್ಯವಾಗಿ ಭಾವಿಸುವಂತೆ ಭೋಜನಶಾಲೆ ಅರಮನೆ ಆರವಣದಲ್ಲಿ ಇದ್ದಿತೊ ಇಲ್ಲವೊ ಯಾವುದನ್ನೂ ಸಾಧಿಸಲು ಆಧಾರಗಳಿಲ್ಲ. ಆದರೆ ಗ್ರಾನೈಟ್ ಕಲ್ಲಿನ ನಾಲೆ, ಅರವಂಟಿಗೆ ಮತ್ತು ನೀರು ವ್ಯವಸ್ಥೆ ನಿಯಂತ್ರಕ ಕಟ್ಟಡ-ಇವೆಲ್ಲ ಕಮಲಾಪುರದಿಂದ ಹರಿಯುತ್ತಿದ್ದ ನೀರಿನ ನಾಲೆಗೆ ಸಂಬಂಧಿಸಿದ್ದಿರಬಹುದೆ ಹೊರತು ಗ್ರಾನೈಟ್ ಕಲ್ಲಿನ ನಾಲೆ ಮೇಲೆ ಜೋಡಿಸಿಟ್ಟಿರುವ ತಟ್ಟೆಗಳನ್ನು ಕೆತ್ತಿದ ಚಪ್ಪಡಿ ಕಲ್ಲುಗಳಿಗಲ್ಲ ಎಂಬುದು ಸ್ಪಷ್ಟ. ಹಾಗಿದ್ದರೆ ಏನಿದು ಈ ಭೋಜನಶಾಲೆ? 
ಇಲಾಖೆಯ ಸಿಬ್ಬಂದಿ ಸಾಮಾನ್ಯವಾಗಿ ಸೂಚಿಸುವಂತೆ, ಊಟದ ತಟ್ಟೆಯ ಕಲ್ಲುಗಳು ಹಂಪಿಯ ಆ ಪ್ರದೇಶದ ವಿವಿಧೆಡೆಗಳಲ್ಲಿ ಮತ್ತು ಆನೆಗೊಂದಿಯಲ್ಲಿ ಇರಬಹುದು. ಅವು ದೊರೆತ ಅಂಥ ಇನ್ನೊಂದು ಜಾಗ ಅರಮನೆಯ ಹಣ್ಣಿನ ತೋಟವೂ ಆಗಿದ್ದಿರಬಹುದು. ಡೊಮಿಂಗೊ ಪಯಸ್ ಹೇಳಿರುವ ಭಾರತೀಯ ಮೂರರು ತಮ್ಮ ಕೂಲಿ ಕೆಲಸಗಳಿಗಾಗಿ ಹೊರಹೋದ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಸಮತಟ್ಟಾದ ಕಲ್ಲನ್ನು ತೊಳೆದು ಅದರ ಮೇಲೆ ಊಟ ಮಾಡುವುದನ್ನು ಇಂದಿಗೂ ಅಪರೂಪಕ್ಕಾದರೂ ಉಳಿಸಿಕೊಂಡಿರುವುದು ಸುಳ್ಳಲ್ಲ. ಬಾಳೆ ಎಲೆಗಳನ್ನು ಸಮಾಜದ ಮೇಲು ವರ್ಗಗಳು ಊಟಕ್ಕೆ ಬಳಸುತ್ತಿರುವುದು ಉನ್ನತ ಸಂಸ್ಕೃತಿಯ ಹೆಮ್ಮೆಯ ಭಾಗವಾಗಿರುವ ಹಾಗೆಯೆ ಶೋಷಿತ ಸಮುದಾಯಗಳು ತಾರತಮ್ಯ ನೀತಿಗೆ ಒಳಗಾಗಿ ಬಾಳೆ ಎಲೆಗೂ ಎರವಾಗಿ ಬರಿಯ ಕಲ್ಲಿನ ಮೇಲೆ ಊಟ ಮಾಡುವಂಥ ಹೀನಸ್ಥಿತಿ ತಲುಪಿದ್ದಕ್ಕೆ  ಭಾರತೀಯ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆ ಎಂದು ಸೂಚಿಸುವಲ್ಲಿ ಯಾವುದೇ ವಿಶೇಷತೆ ಇಲ್ಲ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪಂಚಮರಾಗಿ ಊರ ಹೊರಗಿದ್ದ ಅಸ್ಪೃಶ್ಯರನ್ನು ಅರಮನೆ ವ್ಯವಸ್ಥೆ ತನ್ನ ಹಣ್ಣಿನ ತೋಟದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಿರಬೇಕು. ಅದನ್ನು ಪಯಸ್ ಚಿಕ್ಕ ನದಿಯ ಆಚೆಗೆ ವಾಸಿಸುತ್ತಿದ್ದ ಮೂರರು ಎಂದು ಹೇಳುವ ಮೂಲಕ ಸೂಚನೆ ನೀಡಿದ್ದಾನೆ. ಕಲ್ಲಿನ ಮೇಲೆ ಊಟ ಬಡಿಸುವ ಅಂದಿನ ಅರಮನೆ ವ್ಯವಸ್ಥೆ ಅವರಿಗೆ ಕಲ್ಲು ತಟ್ಟೆಗಳನ್ನು ಕೆತ್ತನೆ ಮಾಡಿಸಿದ್ದಿರಬೇಕು. ಶೋಷಣೆಯ ವ್ಯವಸ್ಥೆಯಲ್ಲೂ ಕಲೆಯ ಚಿತ್ತಾರ ಮೂಡಿಸಲು ಪ್ರಯತ್ನ ನಡೆದಿದ್ದಿರಬೇಕು. ಅದರ ಫಲವಾಗಿ ಊಟದ ತಟ್ಟೆಯ ಕಪ್ಪು ಕಲ್ಲಿನ ಚಪ್ಪಡಿಗಳು ನಮಗಿಂದು ದೊರಕುತ್ತಿರಬಹುದು.

ಹಂಪಿಯ ವಿವಿಧ ಕಡೆಗಳಲ್ಲಿದ್ದ ಇಂಥ ಊಟದ ಕಲ್ಲಿನ ಚಪ್ಪಡಿಗಳನ್ನು ಆಂಧ್ರ ಮೂಲದ ಸಂರಕ್ಷಣಾಧಿಕಾರಿಯೊಬ್ಬರು ಗ್ರಾನೈಟ್ ಕಲ್ಲಿನ ಕಟ್ಟಡದ ನಾಲೆಯ ಮೇಲೆ ಜೋಡಿಸಿಟ್ಟು ಸಂರಕ್ಷಿಸಿರಬಹುದು. ಅದರ ವಿಶೇಷತೆಯ ಕಡೆಗೆ ಜನರ ಗಮನ ಸೆಳೆಯಲು ಮತ್ತು ಈ ಮೂಲಕ ವಿಜಯನಗರದ ಕಲಾ ವೈಭವವನ್ನು ಮೆರೆಸಲು ನಾಲೆಯನ್ನು ಒಂದು ವೇದಿಕೆಯನ್ನಾಗಿ ರೂಪಿಸಿಕೊಂಡಿರಬಹುದು. ಅಲ್ಲದೆ ತಮ್ಮದೆ ಭಾಷಾ ಶೈಲಿಯಲ್ಲಿ ಆ ಸ್ಮಾರಕಗಳನ್ನು 'ಭೋಜನ ಶಾಲಾ' ಎಂದು ಕರೆದಿರಬಹುದು. ನೇರವಾಗಿಯೋ ಪರೋಕ್ಷವಾಗಿಯೋ ಇದು ಭಾರತೀಯ ಸಾಮಾಜಿಕ ಶ್ರೇಣಿ ವ್ಯವಸ್ಥೆಯ ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕವಾಗಿ ಬಿಂಬಿಸುವ ಕಾರ್ಯವಾಗಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರತೀಕವಾಗಿ 'ಭೋಜನ ಶಾಲೆ'ಯ ಅವಶೇಷ/ಸ್ಮಾರಕ ಇಂದಿಗೂ ಉಳಿದುಬಂದಿದೆ.
  













ಭಾನುವಾರ, ಮೇ 6, 2012

ವಿಜ್ಞಾನ ಮತ್ತು ಪ್ರಕೃತಿ/ಪರಿಸರ ಸಂಬಂಧ ಕುರಿತು


ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ, ಪ್ರಭಾವ ಮತ್ತು ಪರಿಣಾಮಗಳು ಭೂಮಿಯ ಇಡೀ ಪ್ರಕೃತಿ/ ಪರಿಸರ ಮತ್ತು ಮಾನವ ಸಮಾಜಕ್ಕೆ ಸಂಬಂಧಿಸಿವೆ. ಈ ಹಿನ್ನೆಲೆಯಲ್ಲಿ ವಿಜ್ಞಾನದ ಸಾಮಾನ್ಯ ವಿದ್ಯಾರ್ಥಿಯಲ್ಲದ ನನಗೂ ವೈಜ್ಞಾನಿಕ ಸಂಶೋಧನೆ ಮತ್ತು ಬೆಳವಣಿಗೆಯ ದಿಕ್ಕು ದಿಸೆಗಳನ್ನು ಕುರಿತು ಆಲೋಚಿಸುವ ಹಕ್ಕು, ಅಧಿಕಾರ, ಜವಾಬ್ದಾರಿ ಇದೆ ಎಂದು ನಂಬಿದ್ದೇನೆ. ಆರಂಭದ ಹೆಜ್ಜೆಯಲ್ಲೆ ವೈಜ್ಞಾನಿಕ ಮನೋಭಾವ ತನ್ನ ಪ್ರಯೋಗ ಸಾಧ್ಯ ವಿಧಾನದ ಮೂಲಕ ಹೊಸ ಸತ್ಯಗಳ ಸ್ಥಾಪನೆ ಮಾಡಿ ಯೂರೋಪಿಯನ್ ಮತಧರ್ಮ ಭೂಮಿ ಮತ್ತು ವಿಶ್ವ ವ್ಯವಸ್ಥೆಯ ಬಗ್ಗೆ ಹೊಂದಿದ್ದ ಮತ್ತು ರೂಢಿಸಿದ್ದ ನಂಬಿಕೆಯನ್ನು ಸಡಿಲಗೊಳಿಸಿ ತಲೆ ಎತ್ತಿ ನಿಂತಿತು. ಅದೀಗ ಅದೆಷ್ಟೋ ಬೆಳಕಿನ ವರ್ಷಗಳ ದೂರದಲ್ಲಿರುವ ಮತ್ತೊಂದು ಗೆಲಕ್ಸಿಯಲ್ಲಿರುವ ಇನ್ನೊಂದು ಸಜೀವ ಭೂಮಿಯನ್ನು ಪತ್ತೆ ಮಾಡಿರುವ ವೈಜ್ಞಾನಿಕ ಸಾಧನೆಯ ಸಂದರ್ಭದಲ್ಲಿದೆ.  ಇಂಥ ಅತ್ಯುನ್ನತ ಸಾಧನೆಯ ಈ ವಿಜ್ಞಾನ ಯುಗದಲ್ಲಿ ನಾವು ಜೀವಿಸುತ್ತಿರುವ ಭೂಮಿಯ ಸಜೀವತೆಯ ಸ್ಥಿತಿಗತಿಯಲ್ಲುಂಟಾದ ಬದಲಾವಣೆಯ ಸ್ಥೂಲಾವಲೋಕನವನ್ನು ಪ್ರಕೃತಿ-ಮಾನವ ಸಂಬಂಧದಲ್ಲಿ ಮಾಡಬೇಕಾದ ಅಗತ್ಯತೆ ಉಂಟಾಗಿದೆ. 

"ಪ್ರಕೃತಿಯಲ್ಲಿ ಅಡಗಿರುವ ರಹಸ್ಯಗಳನ್ನು ಬಯಲು ಮಾಡುತ್ತ ಅವುಗಳ ಸದುಪಯೋಗ ಮಾಡಿಕೊಂಡು ಬಂದಿರುವುದರಿಂದಲೇ ಶಿಲಾಯುಗದ ಪ್ರಾಣಿಯಂತಿದ್ದ ಮಾನವ ಸುಗುಣ ಸಂಪನ್ನನಾಗಿ ಸ್ವಾರಸ್ಯಮಯ ಜೀವನ ಸಾಗಿಸುವಲ್ಲಿ ಸಫಲನಾಗಿದ್ದಾನೆ. ಈ ರಹಸ್ಯಗಳನ್ನು ಪ್ರಾಯೋಗಿಕವಾಗಿ ಸಮರ್ಥಿಸಿ ಅವುಗಳನ್ನು ಮಾನವ ಕಲ್ಯಾಣಕ್ಕೆ ಉಪಯೋಗಿಸಿಕೊಳ್ಳಲು ಕಂಡುಹಿಡಿದ ಮಾರ್ಗೋಪಾಯಗಳನ್ನು ವೈಜ್ಞಾನಿಕ ಹೊಸ ಹೊಸ ತಂತ್ರಜ್ಞಾನಗಳೆಂದು ಗುರುತಿಸಿಕೊಂಡಿದ್ದೇವೆ." ಇದು ವಿಜ್ಞಾನದ ವಿದ್ಯಾರ್ಥಿ ತಳೆದಿರುವ ಅಚಲ ನಂಬಿಕೆಯಾಗಿದೆ. ಈ ಮಾತನ್ನು ಪರಿಶೀಲಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಕೃತಿಯ ರಹಸ್ಯವನ್ನು ಮಾನವ ಕೇಂದ್ರಿತವನ್ನಾಗಿ ದುಡಿಸಿಕೊಂಡಿದೆ; ಪ್ರಕೃತಿಯ ಭಾಗವಾಗಿದ್ದ ಮಾನವನನ್ನು ಅದರ ಯಜಮಾನನನ್ನಾಗಿ ಮಾಡಿ ಅವನ ಹಿಡಿತಕ್ಕೆ ಒಳಪಡಿಸಿದೆ; ಇದರಿಂದ ಶ್ರಮ ಸಂಸ್ಕೃತಿಯ ಜೀವಿಯಾಗಿದ್ದ ಮಾನವನನ್ನು ಶ್ರಮರಹಿತ ಸಂಸ್ಕೃತಿಯ ಜೀವಿಯನ್ನಾಗಿ ಬದಲಾಯಿಸಿದೆ, ಅದನ್ನೆ ನಾಗರಿಕತೆ ಎಂದೂ ಮಾನವ ಚರಿತ್ರೆಯ ಸಕಾರಾತ್ಮಕ ಗುಣವೆಂದೂ ನಂಬಿಸಿರುವುದು ತಿಳಿದು ಬರುತ್ತದೆ, ಅಲ್ಲವೆ?

ಪ್ರಕೃತಿಯ ಅಗಾಧ ರಹಸ್ಯದ ಮೂಲವನ್ನು ಬಯಲು ಮಾಡುವ ಕಾರ್ಯದಲ್ಲಿ ತೊಡಗಿದ್ದೇನೆಂದು ನಂಬಿರುವುದೇ ಪ್ರಕೃತಿಯ ಭಾಗವಾಗಿರುವ ಮಾನವನ ಅಪಾರ ಬೌದ್ಧಿಕ ಅಹಂಕಾರದ ಪ್ರದರ್ಶನ ಮಾತ್ರವಾಗಿದೆ. ಇದು ಕುರುಡ ಆನೆಯ ಒಂದೊಂದೆ ಅಂಗವನ್ನು ಮುಟ್ಟಿ ಅದನ್ನೆ ಆನೆಯೆಂದು ಭ್ರಮಿಸುವ ಕತೆಯಂತಿದೆ. ರಾಜಕೀಯ ಪ್ರಾಣಿಯಾದ ಮಾನವ ತನ್ನ ಸ್ವಭಾವದಂತೆ ಪ್ರಕೃತಿಯಲ್ಲಿ ಅಡಗಿರುವ ಅಗಾಧ ಅರಿವಿನ ಶೋಧವನ್ನು ತನ್ನ ಸ್ವಲಾಭಕ್ಕಾಗಿ ಮಾಡುತ್ತಿದ್ದಾನೆ, ಆದರೂ ಅಸಾಧ್ಯವಾದ ಹೊಸ ಜ್ಞಾನಕ್ಷೇತ್ರದ ಸೃಷ್ಟಿಕರ್ತನಂತೆ ಬಿಂಬಿಸಿಕೊಳ್ಳುತ್ತಿದ್ದಾನೆ.  ಹಾಗಾಗಿಯೇ ಅರಿವಿನ ಶೋಧ ಮಾನವನ ಬೌದ್ಧಿಕ ಜಗತ್ತಿನ ಇತಿಮಿತಿಯನ್ನೂ ಅದು ಇಡೀ ಪರಿಸರದ ಮೇಲೆ ಬೀರುವ ದುಷ್ಟ ಪ್ರಭಾವ ಮತ್ತು ಪರಿಣಾಮಗಳನ್ನೂ ತನ್ನ ಸೆರಗಲ್ಲೆ ಕಟ್ಟಿಕೊಂಡಿರುವುದು ನಮ್ಮ ಅನುಭವಕ್ಕೆ ಬರುತ್ತಿದೆ. ಮಾನವ ಕಲ್ಯಾಣಕ್ಕಾಗಿ ಇಡೀ ಪ್ರಕೃತಿಯನ್ನು ದುಡಿಸಿಕೊಳ್ಳುವ ಕಲ್ಪನೆಯೆ ಪರಿಸರದ ಅಪವ್ಯಾಖ್ಯಾನದಿಂದ ಹುಟ್ಟಿದುದಾಗಿದೆ. ಪರಿಸರವನ್ನು ಮಾನವ ಕೇಂದ್ರಿತವನ್ನಾಗಿ ನೋಡುವ ನೋಟದಲ್ಲೆ ಪ್ರಕೃತಿ ಮತ್ತು ಪರಿಸರದಲ್ಲಿ ಅಡಕವಾಗಿರುವ ಸಮತೋಲನ ತತ್ವ ವಿರೋಧಿ ನಿಲುವಿದೆ. ಇದು ಯುರೋಪಿನಲ್ಲಿ ಪುನರುತ್ಥಾನದೊಂದಿಗೆ ಮೊಳಕೆಯೊಡೆದ ಆಕ್ರಮಣಕಾರಿ ಪ್ರವೃತ್ತಿ ವೈಜ್ಞಾನಿಕ ಬೆಳವಣಿಗೆಯಲ್ಲೂ ನೆಲೆ ಕಂಡುಕೊಂಡ ಪರಿಣಾಮವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮಾರ್ಗೋಪಾಯದ ಮೂಲಕ ಪ್ರಕೃತಿಯನ್ನು ಮಾನವನ ಅನುಕೂಲಕ್ಕೆ ತಕ್ಕಂತೆ ಮಣಿಸಿದ ವಿಜಯೋತ್ಸಾಹ ಇಂದು ಅನುಭೋಗಿಸುತ್ತಿರುವ ವೈಜ್ಞಾನಿಕ ಸಾಫಲ್ಯತೆಯ ತುತ್ತತುದಿಯಲ್ಲಿ ಮಲಿನತೆಯೂ ತೀವ್ರತರವಾಗಿ ಹರಡಿ ಇಡೀ ಪರಿಸರ ಜೀವ ವಿರೋಧಿ ಸ್ವರೂಪ ಪಡೆಯಲು ಕಾರಣವಾಗಿದೆ. ಇಷ್ಟೆಲ್ಲ ವೈಜ್ಞಾನಿಕ, ನವನಾಗರಿಕತೆಗಳ ಸಾಧನೆಯ ನಂತರವೂ ಮಾನವ ತನ್ನ ಇರುವಿಕೆಗಾಗಿ ಹೋರಾಟ ಮಾಡುವ ಶಿಲಾಯುಗದ ಸ್ಥಿತಿಯಲ್ಲೇ ಇದ್ದಾನೆ ಎಂಬುದು ಕಪೋಲಕಲ್ಪಿತ ಸ್ಥಿತಿಯಾಗಿ ಉಳಿದಿಲ್ಲ. ಮಾನವ ಪ್ರವೃತ್ತಿಯಾದ ರಾಜಕೀಯ ಪ್ರಜ್ಞೆ ಮತ್ತು ಬೌದ್ಧಿಕ ಅಹಂಕಾರ ಅವನ ಅವಿವೇಕತನದ ಮಟ್ಟವನ್ನು ಮಾತ್ರ ಗುರುತಿಸುವ ಸಾಧನವಾಗಿದೆ ಎಂಬುದನ್ನು ವೈಜ್ಞಾನಿಕ ಸಾಧನೆಯ ಅಡ್ಡ ಪರಿಣಾಮಗಳು ಸೂಚಿಸುತ್ತಿವೆ. ಈ ಮಾತನ್ನು ಸಮರ್ಥಿಸಲು ಸಾಕಷ್ಟು ನಿದರ್ಶನಗಳು ಇಡೀ ಜಗತ್ತಿನ ಕಣ್ಣ ಮುಂದಿವೆ. ಸಾಮಾನ್ಯರ ನೆನಪಿಗೂ ಬರಬಹುದಾದ ಉದಾಹರಣೆಯೆಂದರೆ, ಹಿರೋಶಿಮಾ-ನಾಗಸಾಕಿ ದುರಂತ, ಚೆರ್ನೋಬಿಲ್ ದುರಂತ, ಭೂಪಾಲ್ ದುರಂತ, ಮಾತ್ರವಲ್ಲದೆ ಭೂಮಿಯ ಮೇಲಿನ ಸಕಲ ಜೀವಗಳ ಮೂಲಧಾತುಗಳಾದ ಅನ್ನ, ನೀರು, ವಾಯು, ಆಕಾಶ ಕ್ರಮೇಣ ವಿಷವಾಗಿ ಬದಲಾಗುತ್ತಿರುವ, ಅಗಾಧ ಪ್ರಮಾಣದಲ್ಲಿ ಜರುಗುತ್ತಿರುವ ಪರಿಸರ ಮಾಲಿನ್ಯ.

ಕ್ರಮಬದ್ಧ ಮತ್ತು ವಸ್ತುನಿಷ್ಟ ಅಧ್ಯಯನ ವಿಧಾನದಿಂದ ಜ್ಞಾನ ಕ್ಷೇತ್ರಗಳು ಅಪಾರವಾಗಿ ವಿಕಾಸವಾಗಲು ಕಾರಣವಾಗಿರುವ ವೈಜ್ಞಾನಿಕ ಮನೋಭಾವ ತನ್ನ ತರ್ಕಶುದ್ಧತೆಯಿಂದ ಮತ್ತು ಹೊಸ ಆವಿಷ್ಕಾರದತ್ತ ನಿರಂತರವಾಗಿ ದಿಟ್ಟಿ ನೆಟ್ಟ ಪ್ರಯೋಗಶೀಲತೆಯಿಂದ ತನ್ನ ವ್ಯಾಪ್ತಿಯ ಮಿತಿಯನ್ನು ಗುರುತಿಸಿಕೊಳ್ಳುವಲ್ಲಿ ಸೋತಿದ್ದು ಇದಕ್ಕೆ ಕಾರಣವಿದ್ದಿರಬಹುದು ಎಂದು ನನ್ನ ಊಹೆ. ಇದನ್ನು ಹೀಗೂ ಹೇಳಬಹುದೇನೋ. ವಸ್ತುವಿನ ಭೌತಿಕ ಮೂಲಘಟಕ ಒಡೆಯಲು ಮಾಡಿದ ಪ್ರಯತ್ನ ಅಥವಾ ಮೂಲ ಘಟಕ ರಾಸಾಯನಿಕ ರೂಪವಾಗಿದ್ದಲ್ಲಿ ಅದನ್ನು ಕೃತಕವಾಗಿ ಸೃಷ್ಟಿಸುವ ಪ್ರಯತ್ನ ಅಥವಾ ಜೈವಿಕ ಕ್ರಿಯೆಯನ್ನು ಭೌತಿಕ ವಸ್ತುವಿನಂತೆ ಮತ್ತು ರಾಸಾಯನಿಕ ಕ್ರಿಯೆಯಂತೆ ಮರುಸೃಷ್ಟಿಸುವ ಪ್ರಯತ್ನಗಳು ಕಾರಣವಾಗಿರಬಹುದು.
ಮೊದಲ ಪ್ರಯತ್ನದಲ್ಲಿ ಅಣುಬಾಂಬು ನಿರ್ಮಾಣವಾದದ್ದೆ ಅಲ್ಲದೆ ಅದರ ಉಪಯೋಗ ಮಾನವ ಕಲ್ಯಾಣ ಎಂಬ ಆದರ್ಶ ಬೊಂಬೆಯನ್ನು ಸಮಾಧಾನ ಪಡಿಸಲು ತೋರಿಸಲಾಗುತ್ತದೆಯಾದರೂ ಮಾನವನ ವಿನಾಶಕ್ಕೆ ಹೆಚ್ಚು ಬಳಕೆಯಾಗಿದೆ. ಭೂ ಪ್ರಕೃತಿಯ ವಿನಾಶಕ್ಕೂ ಕಾರಣವಾಗಬಲ್ಲಷ್ಟು ಶಕ್ತವಾಗಿರುವ ಅಣುಶಕ್ತಿಯನ್ನು ಮಾನವ ತನ್ನ ಕುಲದ ಸ್ವನಾಶಕ್ಕೆ ಬಳಸದಿರಲಿ ಎಂದು ಸದಾ ಪ್ರಾರ್ಥಿಸಬೇಕಾದ ಸ್ಥಿತಿ ತಲುಪಿದ್ದೇವೆ. ಇದು ಒಂದು ಹಂತವಾದರೆ ಅಣುಶಕ್ತಿಯನ್ನು ಪ್ರಗತಿಯ ಉದ್ದೇಶಕ್ಕಾಗಿ ಬಳಕೆ ಮಾಡುವ ಸಂದರ್ಭದಲ್ಲಿ ಉಂಟಾದ ಅಚಾತುರ್ಯದ ಚಣಗಳಲ್ಲಿ ಸುತ್ತಲ ಪ್ರದೇಶದ ಜನಜೀವನ ನರಕಮಯವಾಗಿರುವುದು ಅದಕ್ಕಿಂತಲೂ ದಾರುಣವಾದುದಾಗಿದೆ.

ಈ ಹಂತದ ನಂತರದಲ್ಲಿ ಕೃತಕ ನೂಲು (ಸಿಂಥೆಟಿಕ್) ತಯಾರಿಕೆಯ ಮೂಲಕ ಇಡೀ ಜಗತ್ತು ಪ್ಲಾಸ್ಟಿಕ್ ಯುಗವಾಗಿ ಪರಿವರ್ತನೆ ಹೊಂದಿತು. ಮಣ್ಣಿನಲ್ಲಿ ಕರಗುವ ಸಾವಯವ ಗುಣ ಕಳೆದುಕೊಂಡಿರುವ ಸಿಂಥೆಟಿಕ್ ನಿಂದ ಮಾನವನ ಕಲ್ಯಾಣವನ್ನು ಕೇಂದ್ರೀಕರಿಸಿರುವಂತೆ ತೋರುವ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಇಡೀ ಪರಿಸರಕ್ಕೆ ಸವಾಲಾಗಿ ಪರಿಣಮಿಸಿದೆ. ಬಿಸಿಲಿನ ಝಳದಿಂದ ಕಾಪಾಡಿ ನೆರಳು ನೀಡುವ ಛತ್ರಿಯಂತಿದ್ದು ಇಡೀ ಭೂಮಿಯನ್ನು ಸೂರ್ಯನ ಕ್ಷ ಕಿರಣಗಳಿಂದ ಸಂರಕ್ಷಣೆ ಒದಗಿಸಿರುವ ಓಜೋನ್ ವಲಯದಲ್ಲಿ ಪ್ಲಾಸಿಕ್ ಸುಡುವಿಕೆ ತೂತು ಬೀಳುವಂತೆ ಮಾಡಿದೆ. ಪ್ರಕೃತಿಯ ಕೂಸಾಗಿರುವ ಮಾನವನಿಗೀಗ ವಿಜ್ಞಾನದ ಮೂಲಕ ಪರಿಸರಕ್ಕೆದುರಾಗಿರುವ ಕುತ್ತು ಸಕಲ ಜೀವ ಸಂಕುಲಗಳಿಗೆ ಮುಖಾಮುಖಿಯಾಗಿರುವ ಅಪತ್ತಾಗಿ ಮನವರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನ ಬಳಕೆ ತ್ಯಜಿಸಿ ಪ್ಲಾಸಿಕ್ ಯುಗದ ಪೂರ್ವಕ್ಕೆ ಮರಳಲು ತಹತಹಿಸಲಾಗುತ್ತಿದೆ. ಆದರೆ ಅದು ಅಷ್ಟು ಸುಲಭ ಸಾಧ್ಯವಾದ ಕಾರ್ಯವೆಂದೇನೂ ತೋರುವುದಿಲ್ಲ.

ಹಸಿರು ಕ್ರಾಂತಿಗೆ ಕಾರಣವಾದ ಕೃತಕ ರಾಸಾಯನಿಕ ಗೊಬ್ಬರಗಳ ತಯಾರಿಕೆ ಕೃಷಿಕ್ಷೇತ್ರದಲ್ಲಿ ದೊಡ್ಡ ಭ್ರಮೆಯನ್ನು ಸೃಷ್ಟಿಸಿದುದು ಅದರ ಅನುಸರಣೆಯಲ್ಲಿರುವ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿರುವ ಸದ್ಯದ ಸ್ಥಿತಿಯಲ್ಲಿ ಅರ್ಥವಾಗುತ್ತಿದೆ. ಆ ನಂತರದ ಹಂತದಲ್ಲಿ ಬೆಳಕಿಗೆ ಬಂದ ಜೈವಿಕ ತಂತ್ರಜ್ಞಾನ, ಪ್ರಕೃತಿಯ ಸಂತಾನ ಪ್ರಕ್ರಿಯೆಯನ್ನು ಕೃತಕವಾಗಿ ಮರುಸೃಷ್ಟಿಸುವ ಜ್ಞಾನಶಾಖೆಯಾಗಿದೆ. ರಾಸಾಯನಿಕ ಗೊಬ್ಬರಗಳು ಭೂಮಿಯ ಫಲವಂತಿಕೆಯನ್ನು ಬಂಜರು ಭೂಮಿಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ, ಮತ್ತು ಮೂರನೆಯ ಜಗತ್ತಿನ ಆರ್ಥಿಕ ಬೆನ್ನೆಲುಬಾದ ಕೃಷಿಯನ್ನು ಬಹುರಾಷ್ಟ್ರೀಯ ಕಂಪನಿ ಮತ್ತದರ ಒಡೆಯ ದೇಶಗಳ ಹಿಡಿತಕ್ಕೆ ಸಿಗುವಂತೆ ಮಾಡುವಲ್ಲಿಯೂ ಯಶ ಪಡೆದಿವೆ.
ಜೈವಿಕ ತಂತ್ರಜ್ಞಾನದ ಮೂಲಕ ಇಡೀ ಸಸ್ಯ ಮತ್ತು ಪ್ರಾಣಿ ಸಂಕುಲಗಳೆಲ್ಲ ಸ್ವಾರ್ಥ ಮಾನವನ ದಾಳಗಳಾಗಿ ವಿನಾಶದ ಅಂಚಿಗೆ ತಳ್ಳಲಾಗುತ್ತದೆ. ವಿಶೇಷವೆಂದರೆ ಇದರಿಂದ ಮಾನವನೂ ಹೊರತಾಗದೆ ಹೋಗುವುದು ದೊಡ್ಡ ದುರಂತ. ಮಾನವ ಕೇಂದ್ರಿತವಾದ ವಿಜ್ಞಾನದ ಮಾನವ ಕಲ್ಯಾಣ ಕಲ್ಪನೆ ವೈರುಧ್ಯದ ತುಟ್ಟತುದಿ ತಲುಪಿದ್ದಕ್ಕೆ ಇದು ಉತ್ತಮ ನಿದರ್ಶನ ಎಂದು ಹೇಳಬಹುದು. ಇಷ್ಟಲ್ಲದೆ ಎಲ್ಲ ಕಾರ್ಖಾನೆಗಳೂ ಕೃತಕ ರಾಸಾಯನಿಕಗಳನ್ನೆ ಆಧರಿಸಿ ತಮ್ಮ ಚಟುವಟಿಕೆ ಮತ್ತು ಉತ್ಪನ್ನಗಳನ್ನು ಕೈಗೊಂಡಿವೆ. ಇದರಿಂದ ನದಿ ಸಾಗರಗಳು ಕೊಳಚೆ ಗುಂಡಿಗಳಾಗಿ ಬದಲಾಗುತ್ತಿವೆ. ಇವು ಈಗ ಉಂಟುಮಾಡುತ್ತಿರುವ ಮತ್ತು ಮುಂದೆ ಇನ್ನೂ ಹೆಚ್ಚು ಮಾಡಬಹುದಾದ ಪರಿಣಾಮಗಳು ಊಹೆಯನ್ನು ಮೀರಿದ್ದಾಗಿವೆ. ಕೃತಕ ರಾಸಾಯನಿಕಗಳ ಮೇಲಿನ ಅವಲಂಬನೆ ಮತ್ತು ಬಳಕೆ ಹೆಚ್ಚಿದಂತೆಲ್ಲ ಅದರ ಘೋರ ಪರಿಣಾಮಗಳು ಹೆಚ್ಚುತ್ತ ಸಾಗಿ ಭೂಲೋಕವೆ ನರಕ ಲೋಕವನ್ನು ಮೀರಿಸುವಂತಾಗುತ್ತದೆ.

ಮಾನವ ಕಲ್ಯಾಣಕ್ಕಾಗಿ ಪ್ರಕೃತಿ ಶಕ್ತಿಯನ್ನು ಬಯಲು ಮಾಡಲು ತೊಡಗಿದ ವಿಜ್ಞಾನ ಮತ್ತು ತಂತ್ರಜ್ಞಾನ ಎಡವಿದ್ದಾದರೂ ಎಲ್ಲಿ? ವೈಜ್ಞಾನಿಕ ಮನೋಭಾವದ ಬೌದ್ಧಿಕ ಅಸೀಮ ಸಾಹಸ ಮತ್ತು ತನ್ನ ಬಗ್ಗೆ ತಾನೇ ತಳೆದ ಸರ್ವಶಕ್ತತೆಯ ನಿಲುವು ಇದಕ್ಕೆ ಕಾರಣವೆ? ನನಗೊಂದು ಕತೆ ನೆನಪಿಗೆ ಬರುತ್ತಿದೆ. ಅದು ತೈತರೀಯ ಉಪನಿಷತ್ತೋ ಕಠೋಪನಿಷತ್ತೊ ಎಲ್ಲಿಯದೋ ಗೊತ್ತಿಲ್ಲ. ಆ ಕತೆಯ ನಾಯಕ ವಿದ್ಯೆ ಕಲಿಯುವ ಹುಡುಗ (ಹೆಸರು ನೆನಪಿನಲ್ಲಿಲ್ಲ). ಅವನು ಪಪ್ಪಾಯಿ ಮರ ನೋಡುತ್ತಾನೆ. ಆ ಮರದ ತುಂಬ ಹಣ್ಣು ಬಿಟ್ಟಿರುತ್ತದೆ. ಆ ಮರ ಹೇಗೆ ಹುಟ್ಟಿತು ಎಂಬ ಪ್ರಶ್ನೆಗೆ ಬೀಜದಿಂದ ಎಂದು ಉತ್ತರ ಸಿಗುತ್ತದೆ. ಅವನು ಪಪ್ಪಾಯಿ ಕುಯ್ದು ಅದರೊಳಗಿನ ಬೀಜ ನೋಡುತ್ತಾನೆ. ಬೀಜಗಳು ಕಪ್ಪಗೆ ಸಣ್ಣಗಿರುತ್ತವೆ. ಅಷ್ಟು ಸಣ್ಣ ಬೀಜದಿಂದ ಅಷ್ಟು ದೊಡ್ಡ ಗಿಡ ಹುಟ್ಟುತ್ತದೆಯೆ ಎಂದು ಅವನಿಗೆ ಅನುಮಾನವಾಗುತ್ತದೆ. ಇದು ನಿಜವೇ ಅಗಿದ್ದಲ್ಲಿ ಅದರೊಳಗೇನಿರಬಹುದು ಎಂದು ಬೀಜವನ್ನು ಕುಯ್ದು ಎರಡು ಹೋಳು ಮಾಡುತ್ತಾನೆ. ಆ ಬೀಜದೊಳಗೆ ಅವನಿಗೆ ಅಂಥ ವಿಶೇಷವಾದದ್ದು ಏನೂ ಕಾಣುವುದಿಲ್ಲ. ಕೊನೆಗೆ ಕತೆ ಶೂನ್ಯ ತತ್ವದೊಂದಿಗೆ ಮುಗಿತಾಯ ಕಾಣುತ್ತದೆ. ನಮಗಿಲ್ಲಿ ಕಾಣುವುದು ಪ್ರಕೃತಿಯ ರಹಸ್ಯವನ್ನು ಅರಿಯುವಲ್ಲಿ ನಮಗಿರುವ ದಾರಿಗಳು ಪರಿಮಿತವಾಗಿವೆ, ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು ಎಂಬುದು. ಆಗ ಮಾತ್ರ ನಾವು ಪ್ರಕೃತಿಗೆ ಹಾನಿಯಾಗದಂತೆ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯ. ಪ್ರಕೃತಿಯ ಭಾಗವಾಗಿದ್ದೂ ಪ್ರಕೃತಿಯ ರಹಸ್ಯ ಶಕ್ತಿಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಣಿಸುವುದು ಅತಿರೇಕದ್ದೆಂದು ಸೂಚಿತವಾಗುತ್ತದೆ.  ಅಂಥ ಪ್ರಯತ್ನದಿಂದ  ತೋರಿಕೆಗೆ ಅನುಕೂಲವಾದರೂ ಮೂಲದಲ್ಲಿ ನಮ್ಮ ಇರುವಿಕೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಇದಕ್ಕೆ ವೈಜ್ಞಾನಿಕ ಮನೋಭಾವವೆ ಪ್ರಕೃತಿ ಬಗ್ಗೆ ತಳೆದ ಪೂರ್ವ ನಿರ್ಲಕ್ಷಿತ ಧೋರಣೆ ಕಾರಣವಾಗಿರುವಂತೆ ತೋರುತ್ತದೆ. ಇದನ್ನು ವಿಜ್ಞಾನದ ಪರಿಸರ/ಪ್ರಕೃತಿ ವಿರೋಧಿ ನಿಲುವು ಎಂದು ಗುರುತಿಸಬಹುದು.

ಹಾಗಿದ್ದಲ್ಲಿ ವಿಜ್ಞಾನದ ಪರಿಸರ ಸ್ನೇಹಿ ನಿಲುವು ಅಥವಾ ಮನೋಭಾವ ಯಾವುದಿರಬಹುದು ಎಂಬ ಪ್ರಶ್ನೆ ಮುಂದೆ ಬರುತ್ತದೆ. ಪ್ರಕೃತಿ/ಪರಿಸರ ಸ್ನೇಹಿ ವಿಜ್ಞಾನಕ್ಕೆ ಒಂದು ಉದಾಹರಣೆ ನೀಡಿ ಈ ಬರೆಹ ಮುಗಿಸಬಹುದೆಂದುಕೊಳ್ಳುತ್ತೇನೆ. ಮುಕ್ಕಾಲು ಪಾಲು ನೀರಿರುವ ಮನುಷ್ಯನ ದೇಹ ಭೂಮಿಯ ಪ್ರತಿರೂಪವೆಂದು ನಾನು ತಿಳಿಯುತ್ತೇನೆ. ಭೂಮಿಯಲ್ಲಿರುವ ಎಲ್ಲ ಅಂಶಗಳು ಮನುಷ್ಯನ ದೇಹಕ್ಕೆ ಅಗತ್ಯವಿದೆ. ಯಾವುದೇ ಅಂಶವೊಂದರ ಕೊರತೆಯುಂಟಾದಲ್ಲಿ ಅನಾರೋಗ್ಯ ಉಂಟಾಗುತ್ತದೆ. ಮಾನವನ ರೋಗಗಳಿಗೆ ಕೃತಕ ರಾಸಾಯನಿಕ ಗುಳಿಗೆಗಳು ಸಮರ್ಪಕ ಔಷಧೋಪಚಾರವಾಗಿರಲಾರದು. ಆದ್ದರಿಂದಲೇ ಗುಳಿಗೆಗಳಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಸೂಕ್ತ ಔಷಧೋಪಚಾರ ಎನ್ನುವುದು ಗಿಡಮೂಲಿಕೆಗಳು (ಬೇರೆ, ಆಯುರ್ವೇದ ಬೇರೆ) ಮತ್ತಿತರ ಭೂಮಿಯ ಅಂಶಗಳಿಂದ ಮಾತ್ರ ಸಾಧ್ಯವಿದೆ. ಈ ಕುರಿತು ಅಧ್ಯಯನಗಳು ನಡೆದೇ ಇಲ್ಲ ಎಂದು ಹೇಳಬೇಕು. ಭಾರತದಲ್ಲಿ ಗಿಡಮೂಲಿಕೆ ಆಧರಿಸಿದ ಮನೆ ಮದ್ದು ಜನ ಸಾಮಾನ್ಯರ ಜೀವನದ ಭಾಗವಾಗಿ ಬಳಕೆಯಲ್ಲಿದೆ, ಆದರೂ ಅದೊಂದು ಆರೋಗ್ಯ ಶಾಸ್ತ್ರವಾಗಿ ಬೆಳವಣಿಗೆ ಹೊಂದಿಲ್ಲ. ಇತ್ತೀಚೆಗೆ ಕ್ಯಾನ್ಸರ್ ತಗುಲಿದ ಕೋಶಗಳನ್ನು ಕೊಲ್ಲಲು -ರೋಗ ಯಾವುದೇ ಹಂತದಲ್ಲಿರಲಿ- ಲಿಂಬೆಹಣ್ಣಿನ ಹುಳಿ ಕಿಮೊ ಥೆರಪಿಗಿಂತ ಹತ್ತು ಸಾವಿರ ಪಟ್ಟು ಹೆಚ್ಚು ಪರಿಣಾಮಕಾರಿ ಔಷಧವಾಗಿದೆ ಎಂದು ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, 819 ಎನ್ಎಲ್ಎಲ್ಸಿ, ಚಾರ್ಲ್ಸ್ ಸ್ಟ್ರೀಟ್, ಬಾಲ್ಟಿಮೋರ್, ಎಂಡಿ 1201 ವಿಳಾಸದ ಸಂಸ್ಥೆಯೊಂದು ಪ್ರಚಾರ ಮಾಡುತ್ತಿದೆ.

ಸಿಹಿ ರುಚಿ ನೀಡುವ ಮಾವು, ಕಬ್ಬು, ಹಲಸು ಅಲ್ಲದೆ ನಮಗೆ ತಿಳಿಯದ ಬಹಳಷ್ಟು ಗಿಡಮರಗಳ ಹಣ್ಣುಗಳಿವೆ. ಬೇವಿನ ಹಣ್ಣಿನ ಸವಿರುಚಿಯನ್ನು ನಾವಾರೂ ಸವಿದಿಲ್ಲ. ಪ್ರತಿಯೊಂದೂ ಹಣ್ಣು ಬೇರೆಯೆ, ಅದರ ರುಚಿಯೂ ಬೇರೆಯೇ ಆಗಿವೆ. ಅವುಗಳಲ್ಲಿನ ಭೂಮಿಯ ರಾಸಾಯನಿಕ ಸಾರಾಂಶಗಳು ಕೂಡ ಬೇರೆ ಬೇರೆಯಾಗಿದ್ದು ಅವೆಲ್ಲವೂ ಮನುಷ್ಯ ದೇಹಕ್ಕೆ ಅಗತ್ಯವಿವೆ. ಯಾವ ಅಂಶಗಳ ಕೊರತೆ ಯಾವ ರೋಗಗಳಿಗೆ ಕಾರಣವಾಗುತ್ತದೆ. ಅಂಥ ಯಾವ ಅಂಶಗಳು ಪ್ರಕೃತಿ/ಪರಿಸರದ ಯಾವ ಗಿಡ ಮೂಲಿಕೆ ಅಥವಾ ಇತರ ಸಸ್ಯ ಮತ್ತು ಪ್ರಾಣಿಗಳ ಅಂಶದಲ್ಲಿ ಅಡಗಿದೆ ಎಂಬುದು ಬಹುಶಹ ಇದುವರೆಗೂ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟಿಲ್ಲ. ಮಾನವ ಮತ್ತು ಪ್ರಕೃತಿಗೆ ಪೂರಕವಾದ ಇಂಥ ಕೃತಕ ರಾಸಾಯನಿಕಗಳ ನಿರ್ಮಾಣವನ್ನು ಒಳಗೊಳ್ಳದ ಅಧ್ಯಯನಗಳು ಪರಿಸರ ಸ್ನೇಹಿಯಾಗಿರಬಲ್ಲುದಾಗಿವೆ. ಇದೊಂದು ಸಣ್ಣ ಉದಾಹರಣೆಯಾಗಿದ್ದು ಯಾವುದೇ ಜ್ಞಾನದ ಶೋಧ ಪ್ರಕೃತಿ/ಪರಿಸರಕ್ಕೆ ಹಾನಿಯುಂಟಾಗಬಾರದೆಂಬ ಎಚ್ಚರದಿಂದ ಕೈಗೊಂಡಲ್ಲಿ ಅಂಥ ಎಲ್ಲ ಅಧ್ಯಯನಗಳು ಪರಿಸರ ಸ್ನೇಹಿಯಾಗಿರಬಹುದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ತನ್ನಿಂದ ಪ್ರಕೃತಿ/ಪರಿಸರಕ್ಕೆ ಹಾನಿಯಾಗದ ಆಶಯ, ಉದ್ದೇಶ ಮತ್ತು ವಿಧಾನಗಳನ್ನು ತುರ್ತಾಗಿ ಅಳಡಿಸಿಕೊಳ್ಳಬೇಕಾದುದು ಭೂಮಿ ಮೇಲಿನ ಇಡೀ ಜೀವ ಸಂಕುಲದ ಅವಶ್ಯಕತೆಯಾಗಿದೆ. ಇಂಥ ಧೋರಣೆಯ ಅಳವಡಿಕೆ ಮಾತ್ರ ಪ್ರಕೃತಿಯ ಭಾಗವಾದ ಮನುಷ್ಯಾದಿ ಸಕಲ ಜೀವ ಸಂಕುಲಗಳ ಕಲ್ಯಾಣದ ಹಾದಿಯಲ್ಲಿ ವಿಜ್ಞಾನವನ್ನು ಮುನ್ನಡೆಸಲು ಸಾಧ್ಯ.
    

ಮಂಗಳವಾರ, ಮೇ 1, 2012

ಶಿಶುನಾಳ ಶರೀಫರ ಅನುಭಾವ ನೆಲೆ

ಶರೀಫರ ಪದಗಳು 1915ರಲ್ಲೆ ಪ್ರಕಟವಾಗಿದ್ದರೂ ಸರಿಸುಮಾರು 1980ರ ಹೊತ್ತಿಗೆ ಹೆಚ್ಚು ಪ್ರಚಾರ ಪಡೆದುಕೊಂಡಿತು. ಇದಕ್ಕೆ ಶರೀಫರ ಹೆಚ್ಚಿನ ಪಾಲು ಗೀತೆಗಳು 'ಬರಕೋ ಪದ ಬರಕೋ' ಸಂಗ್ರಹದಲ್ಲಿ ದೊರಕುವಂತಾಗಿದ್ದು, ಅಶ್ವತ್ಥರು ಸಂಗೀತ ಸಂಯೋಜನೆ ಮಾಡಿದ ಶರೀಫ ಗೀತೆಗಳ ಕ್ಯಾಸೆಟ್ ಹೊರಬಂದಿದ್ದು ಹಾಗೂ ಕನ್ನಡದ ಪ್ರಮುಖ ಪತ್ರಿಕೆಗಳು ತ್ಮಮ ವಿಶೇಷಾಂಕಗಳಲ್ಲಿ ಶರೀಫರ ಕುರಿತು ಲೇಖನಗಳನ್ನು ಪ್ರಕಟಿಸಿದ್ದು ಕಾರಣವಿದ್ದಿರಬಹುದು. ಇದರ ಫಲವಾಗಿ ಹತ್ತೊಂಬತ್ತನೆಯ ಶತಮಾನದ ಶರೀಫ್ ಸಾಹೇಬರು (1819-1889) ಕರ್ನಾಟಕದ ಜನಮನದಲ್ಲಿ ನೆಲೆ ನಿಂತರು. ನಂತರದಲ್ಲಿ ಅವರ ಜೀವನವನ್ನು ಬಿಂಬಿಸುವ ಚಲನಚಿತ್ರ ನಿರ್ಮಾಣಗೊಂಡು ಬಿಡುಗಡೆಯಾಯಿತು.
E¥ÀàvÀÛ£Éà ±ÀvÀªÀiÁ£ÀzÀ°è PÀ£ÁðlPÀzÀ ¸ÁªÀiÁfPÀ fêÀ£ÀzÀ°è »AzÀÆ ªÀÄvÀÄÛ ªÀÄĸÀ¯Áä£ÀgÀÄ C¥À£ÀA§ÄUÉ, C£ÀĪÀÄ£À, C«±Áé¸À ªÀÄvÀÄÛ MAzÀÄ §UÉAiÀÄ C¸ÀºÀ£É¬ÄAzÀ ¥ÀgÀ¸ÀàgÀ ªÉÊjUÀ¼ÀAvÉ PÁtÄwÛzÀÝ ¥Àj¸ÀgÀ«vÀÄÛ. F ªÀÄ£À¹Üw EA¢£À ¢£ÀªÀiÁ£ÀzÀ°è E£ÀÆß ºÉZÁÑUÀÄvÀÛ ¸ÁVzÉ. EAxÀ ¸ÀAzÀ¨sÀðzÀ°è  ªÉÊ¢PÀ ¨sÀlÖgÉÆ§ââgÀÄ ªÀÄĹèêÀģɯ§â£À£ÀÄß ²µÀå£À£ÁßV ¹éÃPÀj¹ CªÀ£À£ÀÄß C¥ÀæwªÀÄ ¸ÁzsÀPÀ£À£ÁßV ªÀiÁrzÀÄÝ CxÀªÁ ªÀÄĹèêÀÄ ¸ÁzsÀPÀ£ÉƧ⠨ÁæºÀät UÀÄgÀĪÀ£ÀÄß ¥ÀqÉzÀÄPÉÆArzÀÄÝ C¸ÀAUÀvÀªÁzÀ ¸ÀAUÀwAiÀiÁVvÀÄÛ. C£ÀåzsÀ«ÄÃðAiÀÄgÀ°è UÀÄgÀIJµÀå ¸ÀA§AzsÀ K¥ÀðnzÀÄÝ ºÉÃUÉ? ªÀÄvÀ ¸ÀAPÀÄavÀvÉ ªÀÄvÀÄÛ ªÀÄÆ®¨sÀÆvÀªÁ¢ PÀ®à£ÉAiÀiÁZÉ §ºÀÄ ¸ÀªÀÄÄzÁAiÀÄ PÉÃA¢æÃvÀ D¸ÀQÛ PÀÄrAiÉÆqÉ¢zÀÄÝ ºÉÃUÉ? CAzÀÄ EAxÀ ¥Àæ±ÉßUÀ¼ÀÄ PÀÄvÀƺÀ® PÉgÀ¼À®Ä PÁgÀtªÁVvÀÄÛ.
±ÀjÃ¥sÀgÀÄ fë¹zÀÝ ºÀvÉÆÛA§vÀÛ£ÉAiÀÄ ±ÀvÀªÀiÁ£ÀzÀ ¨sÁgÀvÀzÀ°è ©æn±ÀgÀÄ vÀªÀÄä ªÁå¥Áj ¸ÀA¸ÉÜAiÀiÁzÀ PÀA¥À¤ CqÀ½vÀzÀ ¸ÀgÀPÁgÀªÀ£ÀÄß ¸ÁªÀiÁædå±Á» DqÀ½vÀzÀ ¸ÀgÀPÁgÀªÀ£ÁßV §zÀ°¸ÀĪÀ ºÀAvÀzÀ°èzÀÝgÀÄ. D¢¯ï±Á»UÀ¼ÀÄ D½zÀ CA¢£À ©eÁ¥ÀÄgÀzÀ ²±ÀÄ£Á¼À ªÀÄvÀÄÛ CzÀgÀ ¸ÀÄvÀÛ® ¥ÀæzÉñÀzÀ UÁæªÀÄUÀ¼À°è «ÃgÀ±ÉʪÀ ªÀÄvÀÄÛ ªÀÄĹèA ¸ÀªÀÄÄzÁAiÀÄUÀ¼ÀÄ ¥ÀæzsÁ£ÀªÁVzÀݪÀÅ. C®èzÉ ¨ÁæºÀätgÀÄ, «ÃgÀ±ÉʪÀgÀÄ ªÀÄvÀÄÛ ªÀÄĹèêÀÄgÀÄ ¥ÀgÀ¸ÀàgÀ £ÀA§ÄUÉ ªÀÄvÀÄÛ ¸ÉßúÀ¨sÁªÀzÀ°è ¸ÀºÀfêÀ£À £ÀqɸÀÄwÛzÀÝgÀÄ.
EzÀgÀ ¥ÀjuÁªÀĪÁV vÀAzÉAiÀÄ ªÀÄÆ®PÀ E¸ÁèA zsÀªÀÄðzÀ CjªÀÅ ¥ÀqÉzÀ ±ÀjÃ¥sÀjUÉ «ÃgÀ±ÉʪÀgÀ PÀưªÀÄoÀzÀ°è DgÀA©üPÀ PÀ°PÉAiÀÄ£ÀÆß PÀ¼À¸ÀzÀ UÉÆÃ«AzÀ ¨sÀlÖgÀ ªÉÊ¢PÀ ±Á¯ÉAiÀÄ°è ºÉaÑ£À G£ÀßvÀ «zÉåAiÀÄ£ÀÆß ¥ÀqÉAiÀÄ®Ä CªÀPÁ±À MzÀVvÀÄ. C®èzÉ vÀªÀÄä ¸ÀªÀÄPÁ°Ã£À C£ÀĨsÁ« ¸ÁzsÀPÀgÁzÀ azÀA§gÀ ¢ÃQëvÀ, UÀgÀUÀzÀ ªÀÄrªÁ¼É¥Àà, ºÀħâ½AiÀÄ ¹zÁÞgÀÆqsÀgÀÄ, CUÀrAiÀÄ ±ÉõÁZÀ®, £ÀªÀ®UÀÄAzÀzÀ £ÁUÀ°AUÀ¸Áé«Ä, UÀÄqÀUÉÃjAiÀÄ ¸ÀAUÀªÉÄñÀégÀ¸Áé«Ä, ºÀÄ®UÀÆj£À ZÀ£Àß«ÃgÀ¸Áé«Ä, CAPÀ®VAiÀÄ CqÀ«¸Áé«Ä, ¸ÀPÀÌj ¨Á¼ÁZÁgÀågÉÆA¢UÉ ¸ÀAªÁzÀ £ÀqɸÀÄwÛzÀÝgÀÄ. (F ªÀiÁwUÉ ¥ÀÆgÀPÀªÁV UÀgÀUÀzÀ ªÀÄrªÁ¼À¸Áé«Ä, ºÉƸÀ½î §Æ¢¸Áé«Ä, D¢¹zÀÞgÀÄ, §¸ÀºÀnÖAiÀÄ gÀÄzÀæ¸Áé«Ä, ¹zÁÞgÀÆqsÀ¸Áé«Ä, D¢PÉñÀªÀ, £ÀªÀ®UÀÄAzÀzÀ £ÁUÀdÓ, UÉÆÃ«AzÀ ¨sÀlÖ, GUÀgÀUÉÆÃ¼À ¤ªÁðuÉ¥Àà, gÉêÀt ¹zÉÞñÀégÀ¸Áé«Ä, ªÉÃzÀªÁå¸À ºÁUÀÆ PÀ©ÃgÀzÁ¸ÀgÉÆA¢UÉ EgÀĪÀ C¥ÀgÀÆ¥ÀzÀ bÁAiÀiÁavÀæªÉÇAzÀ£ÀÄß ‘CgÀĺÀÄ PÀÄgÀĺÀÄ’ ¥ÀwæPÉ vÀ£Àß ªÉÆzÀ® ¸ÀAaPÉAiÀÄ ¨É£ÀÄߥÀÄlzÀ°è ¥ÀæPÀn¹zÉ.) EªÀgÀ°è §ºÀÄ¥Á®Ä ±ÀQÛ «²µÁÖzÉéöÊvÀ »£Éß¯É G¼ÀîªÀgÁVzÀÄÝ, §ºÀÄ ¸ÀªÀÄÄzÁAiÀÄUÀ¼À ¸ÀªÀiÁdzÀ°è CAzÀÄ «ÃgÀ±ÉʪÀ ¥Àæ¨sÁªÀ±Á°AiÀiÁVvÀÄÛ. ±ÀjÃ¥sÀgÀÄ UÀÄgÀÄ UÉÆÃ«AzÀ ¨sÀlÖ, §¸ÀªÀtÚ ªÀÄvÀÄÛ C®èªÀÄ¥Àæ¨sÀÄUÀ¼À ¥Àæ¨sÁªÀ½AiÉÆ¼ÀUÉ vÀªÀÄä ªÀåQÛvÀé gÀƦ¹PÉÆArzÀÝgÉAzÀÄ §ºÀÄ¥Á®Ä «zÁéA¸ÀgÀÄ C©ü¥ÁæAiÀÄ ¥ÀqÀÄvÁÛgÉ.
ºÀvÉÆÛA§vÀÛ£ÉAiÀÄ ±ÀvÀªÀiÁ£ÀzÀ°è PÉÆÃªÀÄÄ ¨sÁªÀ£É gÁdPÁgÀtzÀ zÁ¼ÀªÁV §¼ÀPÉAiÀiÁVgÀ°®è. §ºÀÄ ¸ÀªÀÄÄzÁAiÀÄUÀ¼À ¸ÀªÀiÁdzÀ°è CAzÀÄ ªÀÄĹèA ¸ÀªÀÄÄzÁAiÀĪÀÇ MAzÀÄ ¸ÀªÀÄÄzÁAiÀĪÁV ¸ÉÃjºÉÆÃVvÀÄÛ. EzÀjAzÀ ±ÀjÃ¥sÀgÀÄ ªÀÄĹèA PÀÄlÄA§zÀ°è ºÀÄnÖzÀÝgÀÆ ¨sÁgÀwÃAiÀÄ vÀvÀÛ÷é zÀ±Àð£ÀUÀ¼À£ÀÄß gÀPÀÛUÀvÀ ªÀiÁrPÉÆ¼Àî®Ä, §ºÀÄ ¸ÀªÀÄÄzÁAiÀÄUÀ¼À £ÀqÀÄªÉ ¸ÀªÀÄ£ÀéAiÀÄ ¸Á¢ü¸À®Ä, ¸ÀªÀÄÄzÁAiÀÄ ¥ÀævÉåÃPÀvÉ «ÄÃj ªÀiÁ£ÀªÀ ¸ÀªÀÄÄzÁAiÀÄ PÀlÖ®Ä ¸ÁzsÀåªÁ¬ÄvÀÄ. GvÀÛgÀ PÀ£ÁðlPÀzÀ°è §ºÀÄ ¸ÀªÀÄÄzÁAiÀÄUÀ½AzÀ DgÁzsÀ£ÉUÉ M¼ÀUÁVgÀĪÀ G¼À«AiÀÄ ZÀ£Àß§¸ÀªÉñÀégÀ, ¸ÀªÀzÀwÛAiÀÄ J®èªÀÄä, ºÀA¦AiÀÄ «gÀÆ¥ÁPÀë, ²gÀºÀnÖAiÀÄ ªÉÄʯÁgÀ ªÀÄÄAvÁzÀ zÉʪÀUÀ¼ÉÆA¢UÉ ¨sÁªÀ£ÁvÀßPÀ ¸ÀA§AzsÀ ºÉÆAzÀ®Ä ¸ÁzsÀåªÁ¬ÄvÀÄ. DzÀgÀÆ ±ÀjÃ¥sÀgÀ F vÀÄrvÀPÉÌ CªÀgÀ ªÀåQÛvÀéªÀ£ÀÄß gÀƦ¹zÀ ªÀÄÆ®vÀvÀÛ÷é AiÀiÁªÀÅzÀÄ JA§ ¥Àæ±Éß PÁqÀÄvÀÛzÉ. ±ÀjÃ¥sÀgÀ ¥ÀzÀUÀ¼À ªÀÄÆ®PÀ EzÀPÉÌ GvÀÛgÀ PÀAqÀÄPÉÆ¼ÀÄîªÀ ¥ÀæAiÀÄvÀß ªÀiÁqÀ§ºÀÄzÀÄ.
±ÀjÃ¥sÀgÀÄ UÀÄgÀÄ UÉÆÃ«AzÀ ¨sÀlÖgÀ°è PÉêÀ® ªÉÊ¢PÀ ¥ÀÄgÁt-EwºÁ¸ÀUÀ¼À£ÀÄß ªÀiÁvÀæ PÀ°AiÀİ®è. CzÀgÉÆA¢UÉ CªÀjUÉ CzÉéöÊvÀ vÀvÀÛ÷ézÀ vÀ¼ÀºÀ¢AiÀÄÆ zÉÆgÀQvÀÄ, ±ÁPÀÛ ¥ÀAxÀzÀ ¸ÁzsÀPÀ ªÀÄ£ÉÆÃ¥ÀæªÀÈwÛAiÀÄÆ ¨É¼É¬ÄvÀÄ. F CA±ÀªÀ£ÀÄß ¥Àæ¸ÁÛ¦¸ÀĪÀ°è «zÁéA¸ÀgÀ°è ©ü£Àß©ü¥ÁæAiÀÄ PÀAqÀħgÀĪÀÅ¢®è. ±ÁPÀÛ ¥ÀAxÀzÀ ²æÃZÀPÀæ PÀ®à£É DzsÁjvÀ ¸ÁzsÀ£ÉAiÀÄ PÀæªÀÄUÀ¼ÀÄ ªÀÄvÀÄÛ £ÁxÀ ¥ÀAxÀzÀ PÀÄAr°¤ PÀ®à£É DzsÁjvÀ ¸ÁzsÀ£ÉÆÃ¥ÀPÀæªÀÄzÀ ºÀAvÀUÀ¼ÀÄ ¸ÁªÀÄåvÉAiÀÄ£ÀÄß ¥ÀqÉ¢ªÉ. EzÀgÀ PÁgÀtªÀ£ÀÄß ¸ÁzsÀPÀ ¥ÀAxÀUÀ¼À ZÁjwæPÀ ¨É¼ÀªÀtÂUÉAiÀİè PÁt§ºÀÄzÀÄ. MAzÀÄ PÁ®PÉÌ £ÁxÀ ¥ÀAxÀzÀ EAxÀ ¸ÁzsÀ£Á ªÀiÁUÀðzÀ DZÀgÀuÉUÀ¼ÀÄ ªÁªÀiÁZÁgÀªÉA§ ºÉ¸Àj¤AzÀ PÀgɬĹPÉÆAqÀÄ ²µÀÖ ¸ÀªÀiÁdzÀ CªÀPÀÈ¥ÉUÉ M¼ÀUÁV zÀÆgÀªÀŽ¢vÀÄÛ. DzÀgÉ ±ÀQÛ «²µÁÖzÉéöÊvÀ DzsÁjvÀ «ÃgÀ±ÉʪÀ vÀ£Àß µÀlì÷Ü® ¹zÁÞAvÀªÉA§ ¸ÁzsÀ£À ªÀiÁUÀðªÀ£ÀÄß gÀƦ¹PÉÆArzÀÄÝ vÀ£ÀUÉ ¥ÉæÃgÀuÉAiÀÄÆ DzsÁgÀªÀÇ MzÀV¹zÀ £ÁxÀ ¥ÀAxÀzÀ PÀÄAr°¤ PÀ®à£ÉAiÀÄ ¥ÀjµÀÌgÀuɬÄAzÀ JA§ÄzÀÄ E°è ªÀÄÄRåªÁUÀÄvÀÛzÉ. ±ÀjÃ¥sÀjUÉ E¸ÁèA£À KPÉñÀégÀ PÀ®à£É, CzÉéöÊvÀ, ±ÁPÀÛ, ±ÀQÛ «²µÁÖzÉéöÊvÀ PÀ®à£ÉUÀ¼ÀÄ vÀªÀÄä fêÀzÀĹgÁVvÀÄÛ. EªÉ®èzÀgÀ ¨ÉÃgÀÄ £ÁxÀ ¥ÀAxÀzÀ°è DA²PÀªÁVAiÉÆÃ ¥ÀjµÀÌgÀt gÀÆ¥ÀzÀ°èAiÉÆÃ ¸ÁªÀÄåvÉAiÀÄ gÀÆ¥ÀzÀ°èAiÉÆÃ £É¯É¹vÀÄÛ. ±ÁPÀÛ ªÀÄvÀÄÛ £ÁxÀ ¥ÀAxÀUÀ¼ÀÄ vÁwÛ÷éPÀªÁV CªÉÊ¢PÀ ¸ÁARå zÀ±Àð£ÀPÉÌ gÀÄtÂAiÀiÁVgÀĪÀÅzÀÄ ªÀÄvÉÆÛAzÀÄ ªÀÄÄRå CA±ÀªÁVzÉ.
£ÁxÀ, ±ÁPÀÛzÀAvÀºÀ ¹zÀÞ ¸ÁzsÀPÀ ¥ÀAxÀUÀ¼ÀÄ vÀªÀÄä ¥ÀAxÀzÀ DZÁgÀ, «ZÁgÀ, vÀvÀÛ÷é PÀ®à£ÉUÀ¼À£ÀÄß vÀªÀÄä ªÀÄÄA¢£À ¥ÀgÀA¥ÀgÉUÉ zÁn¸ÀĪÀ°è d£À §¼ÀPÉAiÀÄ ¸ÁªÀiÁ£Àå ¨sÁµÁ ¥ÀzÀÞwAiÀÄ£ÀÄß §¼À¸ÀzÉ vÀªÀÄäzÉà DzÀ ¥ÀævÉåÃPÀ ¸ÀAPÉÃvÀ ¨sÁµÁ ¥ÀzÀÞwAiÀÄ£ÀÄß gÀÆrü¹PÉÆAqÀÄ §¼ÀPÉ ªÀiÁqÀÄwÛzÀݪÀÅ. F ¸ÀAPÉÃvÀ ¨sÁµÉAiÀÄ£ÀÄß `¸ÀAzsÁ’ JAzÀÄ PÀgÉAiÀįÁUÀÄwÛvÀÄÛ. ¥ÀAxÀzÀ DಚಾgÀ, «ZÁgÀUÀ¼À «µÀAiÀÄzÀ°è UË¥ÀåvÉAiÀÄ£ÀÄß PÁ¥ÁqÀĪÀÅzÀÄ ªÀÄvÀÄÛ vÀ£Àß ¥ÀgÀA¥ÀgÉAiÀÄ£ÀÄß G½¹ ¨É¼É¸ÀĪÀ zÀ馅 F ¸ÀAPÉÃvÀ ¨sÁµÉAiÀÄ GzÉÝñÀªÁVvÀÄÛ. ¸ÀAPÉÃvÀ ¨sÁµÁ §¼ÀPÉAiÀÄ ªÀÄÄAzÀĪÀgÉzÀ gÀÆ¥ÀªÁV ¨ÉqÀUÀÄ gÀZÀ£ÉUÀ¼ÀÄ ªÉÄÊ vÀ¼ÉzÀzÀÄÝ PÁtÄvÉÛêÉ. ²µÀÖ ¸ÀªÀiÁdzÀ C¥ÀªÁåSÁå£ÀUÀ½AzÀ vÀ¦à¹PÉÆ¼Àî®Ä ¹zÀÞ ¥ÀAxÀUÀ½UÉ ¸ÀAzsÁ ¨sÁµÉAiÀÄ §¼ÀPÉ C¤ªÁgÀåªÁV¢ÝgÀ§ºÀÄzÀÄ. EAxÀ ¸ÀAPÉÃvÀ ¨sÁµÉAiÀÄ CjªÀÅ ±ÀjÃ¥sÀjVvÀÄÛ JA§ ¸ÀļÀĺÀÄ CªÀgÀ `PÉÆÃqÀUÀ£À PÉÆÃ½ £ÀÄAVvÀÛ’ VÃvÉAiÀÄ gÀZÀ£Á P˱À®å¢AzÀ w½AiÀÄÄvÀÛzÉ.  
PÉÆÃqÀUÀ£À PÉÆÃ½ £ÀÄAVvÀÛ
£ÉÆÃqÀªÀé vÀAV

DqÀÄ C£ÉAiÀÄ £ÀÄAV
UÉÆÃqÉ ¸ÀÄtÚªÀ £ÀÄAV
DqÀ®Ä §AzÀ ¥ÁvÀgÀzÀªÀ¼À ªÀÄzÀÝ¼É £ÀÄAVvÀ

M¼ÀÄî M£ÀPÉAiÀÄ £ÀÄAV
©Ã¸ÀÄPÀ®Äè UÀÆlªÀ £ÀÄAV
PÀÄlÖ®Ä §AzÀ ªÀÄÄzÀÄQAiÀÄ £ÉÆtªÀ £ÀÄAVvÀ

ºÀUÀÎ ªÀÄUÀΪÀ £ÀÄAV
ªÀÄUÀÎ ¯Á¼ÀªÀ £ÀÄAV
ªÀÄUÀÎzÁVgÀĪÀ CtÚ£À PÀÄtÂAiÀÄÄ £ÀÄAVvÀ

JvÀÄÛ dvÀÛV £ÀÄAV
§vÀÛ ¨Á£ÀªÀ £ÀÄAV
PÀÄAn ºÉÆqÉAiÉÆÃ CtÚ£À ªÉÄüÀ £ÀÄAVvÀ

UÀÄqÀØ UÀAªÀígÀ £ÀÄAV
UÀAªÀígÀ EgÀÄªÉ £ÀÄAV 
UÀÄgÀÄ UÉÆÃ«AzÀ£À ¥ÁzÀ DvÀä (£À£ÀߣÉ?) £ÀÄAVvÀ
EzÀÄ C¸ÁzsÀå ªÀÄvÀÄÛ C¸ÁªÀiÁ£Àå ¸ÀAUÀwUÀ¼À §tÚ£ÉAiÀiÁV ¸ÁªÀiÁ£Àå ¯ÉÆÃPÀzÀ fëUÀ½UÉ PÀAqÀħgÀÄvÀÛzÉ. DzÀgÉ ¸ÁzsÀPÀ ¯ÉÆÃPÀzÀ fëUÀ½UÉ ¸ÁzsÀ£ÉAiÀÄ PÀæªÀÄ ªÀÄvÀÄÛ «zsÁ£ÀªÀ£ÀÄß w½¸ÀĪÀ ¸ÀAUÀwAiÀiÁVzÉ. DzÀgÀÆ EzÀÄ UÀÄ¥ÀÛ ¨sÁµÉAiÀİè gÀavÀªÁzÀ ¥ÀzÀªÀ®è. UÀÄ¥ÀÛ ¨sÁµÉAiÀÄ ¤UÀÆqsÀvÉ ªÀÄvÀÄÛ gÀºÀ¸ÀåªÀÄAiÀÄvÉ F gÀZÀ£ÉAiÀÄ C®APÀjPÀ ¨sÁµÉAiÀİèzÉAiÉÄ ºÉÆgÀvÀÄ ¸ÀAPÉÃvÀ ¨sÁµÉAiÀÄ ªÀÄlÖzÀ°è®è. ºÁUÁVAiÉÄà ±ÀjÃ¥sÀgÀ F gÀZÀ£ÉUÀÆ C®èªÀÄ ¥Àæ¨sÀÄ«£À ¨ÉqÀV£À ªÀZÀ£ÀUÀ½UÀÆ PÀ£ÀPÀzÁ¸ÀgÀ ªÀÄÄArUÉUÀ½UÀÆ ¸ÀàµÀÖ ªÀåvÁå¸ÀUÀ¼À£ÀÄß UÀÄgÀÄw¸À§ºÀÄzÀÄ. ¸ÀAzsÁ ¨sÁµÉAiÀÄ ªÀiÁzÀjAiÀÄ£ÀÄß E°è PÁªÀå ¨sÁµÉAiÀÄ ZÀªÀÄvÁÌgÀ UÀÄt ¸Á¢ü¸À®Ä §¼À¹PÉÆ¼Àî¯ÁVzÉ. F ªÀÄÆ®PÀ PÉüÀÄUÀgÀ°è PÀÄvÀƺÀ® GAlÄ ªÀiÁr vÀ£Àß PÀqÉ UÀªÀÄ£À PÉÃA¢æÃPÀj¸ÀĪÀAvÉ G¥ÁAiÀÄ/vÀAvÀæªÉÇAzÀÀ£ÀÄß §¼ÀPÉ ªÀiÁrPÉÆArzÉ. CeÕÁ£ÀzÀ CUÁzsÀvÉAiÀÄ£ÀÄß ¸ÀtÚ ¥ÀæªÀiÁtzÀ CjªÀÅ ºÉÃUÉ CvÁå±ÀÑgÀåPÀgÀªÁzÀ jÃwAiÀÄ°è ºÉÆÃUÀ¯Ár¸ÀÄvÀÛzÉ JA§ E°è£À PÀæªÀÄ «ªÀgÀ ±ÀjÃ¥sÀgÀÄ ¹zÀÞ ¥ÀAxÀUÀ¼À UÀgÀrAiÀÄ°è ¥À¼ÀVzÀªÀgÀÄ JA§ CA±ÀªÀ£ÀÄß ºÉÆgÀUÉqÀºÀÄvÀÛzÉ.
±ÀjÃ¥sÀgÀÄ KPÉñÀégÀªÁzÀ ªÀÄvÀÄÛ ¤UÀÄðt zÉʪÁgÁzsÀ£ÉAiÀÄ£ÀÄß §®èªÀgÀÄ. CzÉéöÊvÀªÀ£ÀÄß C¦àzÀªÀgÀÄ. ±ÀQÛ«²µÁÖzÉéöÊvÀªÀ£ÀÄß ¸ÀÄvÀÛ® ¥Àj¸ÀgÀzÀ°è ªÀÄ£ÀUÀAqÀªÀgÀÄ. EªÉ®èzÀgÀ°è UÀÄ¥ÀÛªÁV ºÀj¢gÀĪÀ ±ÁPÀÛ, £ÁxÀ, ¸ÁARå zÀ±Àð£ÀUÀ¼À ¸ÁzsÀ£ÉAiÀÄ ºÁ¢AiÀÄ°è £ÀqÉzÀªÀgÀÄ. EªÀ£Éß KPÀvÀæUÉÆ½¹ `¨ÉÆÃzsÀ’ PÀ®à£ÉAiÀİè PÀArgÀĪÀ PÀæªÀĪÀ£ÀÄß PɼÀV£À gÀZÀ£ÉAiÀİè PÁt§ºÀÄzÀÄ. 
¨ÉÆÃzsÀ MAzÉà §æºÀä
£ÁzÀ MAzÉÃ

¸ÁzsÀ£À ªÀiÁqÀĪÀ ºÁ¢ MAzÉÃ
D¢ ¥ÀzÀ MAzÉÃ

©AzÀÄ MAzÉÃ ¤eÁ
£ÀAzÀ MAzÉÃ
vÀAzÉ ¸ÀzÀÄÎgÀÄ UÉÆÃ«AzÀUÀ MAzÉÃ
CA¢VA¢UÉ MAzÉÃ

zÉÆÃµÀ MAzÉà ¤gÀ
zÉÆÃµÀ MAzÉÃ
²±ÀÄ£Á¼À¢üñÀ£À ¨sÁµÉ MAzÉà
¨sÀªÀ£Á±À MAzÉÃ
¸ÁzsÀ£ÉAiÀÄ F CzÉéöÊvÀ zÀ馅 ±ÀQÛ «²µÁÖzÉéöÊvÀzÀ ZÀºÀgÉ ¥ÀqÉzÁUÀ GAmÁUÀĪÀ ¹ÜwAiÀiÁVzÉ. «ÃgÀ±ÉʪÀ  ªÀiÁzÀjAiÀÄ µÀmï¸ÀÜ®UÀ¼À£ÀÄß C£ÀĸÀj¸ÀzÀ ±ÁPÀÛ ¥ÀAxÀ ²æÃZÀPÀæ ªÀiÁzÀjAiÀÄ£ÀÄß C£ÀĸÀj¸ÀÄvÀÛzÉ. EzÀ£ÀÄß `¸ÉßúÀ ªÀiÁqÀ¨ÉÃQAxÀªÀ¼À’ ªÀtÂð¸ÀÄvÀÛzÉ. 
¸ÉßúÀ ªÀiÁqÀ¨ÉÃQAxÀªÀ¼À M¼Éî
ªÉÆÃºÀ¢AzÀ° §AzÀÄ PÀÆqÀĪÀAxÀªÀ¼À

ZÀAzÀæUÁ« ²ÃjAiÀÄ£ÀÄlÄÖ
PÉAzÁªÀjAiÀÄ PÀÄ¥Àà¸À vÉÆlÄÖ
§AzÀ¼ÉÆÃ ªÀÄA¢gÀ ©lÄÖ £Á®ÄÌ
ªÀÄA¢AiÉÆ¼ÀUÀ §AzÀÄ £ÁZÀĪÀ¼ÉµÀÄÖ

CgÀV½UÀ¼À ¸À« £ÀÄrAiÀÄÄ
ZÀ®é ¸ÀĽ£Á©ü PÀÄZÀ PÀÄA¨sÀUÀ¼À ºÀA¸À £ÀqÉAiÀÄÄ
xÀ¼ÀxÀ½¸ÀĪÀ vÉÆÃ¼ÉÆÛqÉAiÀÄÄ M¼Éî
§¼ÀPÀĪÀ £ÀqÀÄ«£À vÀ½gÀrAiÀÄÄ

PÀĸÀĪÀĝɯÃZÀ£ÉAiÀļÀ £ÉÆÃr
PÁªÀÄ «µÀAiÀÄ ¸ÀÄgÀvÀ ¸ÀÄR zÀAiÀÄ¢AzÀ ¨ÉÃr
«£ÀAiÀÄ ªÀZÀ£À¢ ªÀiÁvÁr
zÉêÀ ²±ÀÄ£Á¼À¢üñÀ£À zÀAiÀÄ¢AzÀ PÀÆr
±ÁPÀÛzÀ ¥ÀjµÀÌøvÀ ªÀiÁzÀjAiÀÄ°è £ÁxÀzÀ UÀÄ¥ÀÛ ¸ÁzsÀ£ÉAiÀÄ PÀæªÀÄ E°èzÉ. EzÀgÀ ¸ÀÆPÀëöävÉ F JgÀqÀÆ ªÀiÁzÀjUÀ¼À PÀæªÀÄ ªÀåvÁå¸À §®èªÀjUÉ ªÀÄ£ÀªÀjPÉAiÀiÁUÀÄvÀÛzÉ. ºÁUÁV E°è ¸ÁzsÀ£ÉUÉ ¸ÀAUÁwAiÀÄzÀ ±ÀQÛAiÀÄ£ÀÄß zÉʪÀvÀéPÉÌÃj¸ÀzÉ ¦æAiÀÄvÀªÉÄAiÀiÁV PÀAqÀÄ £ÀqɹPÉÆArzÉ. C®èzÉ ¸ÁARå zÀ±Àð£ÀzÀ ¥ÀæPÀÈw ¥ÀÄgÀĵÀ PÀ®à£ÉUÀ¼ÀÄ ¨ÉÃgÉ ¨ÉÃgÉAiÀiÁVgÀzÉ MAzÀgÉÆ¼ÀUÉÆAzÀÄ EzÀÄÝ ¥ÀgÀ¸ÀàgÀ CªÀ®A§£ÉAiÀįÉè vÀªÀÄä ¥ÀgÀªÀÄ ¹ÜwAiÀÄ£ÀÄß G½¹PÉÆArgÀĪÀ PÀæªÀĪÀ£ÀÄß CgÀ¸À¯ÁVzÉ.
``fêÀ-²ªÀgÀ «Ä®£ÀªÀ£ÀÄß ¹Ûçà ¥ÀÄgÀĵÀ ¸ÀAUÀzÀ avÀætzÀ ªÀÄÆ®PÀªÉ ±ÀjÃ¥sÀ ¤ÃqÀÄvÁÛgÉ. `ªÀÄÄQÛ’ CxÀªÀ `¤ªÁðt’zÀ C£ÀĨsÀªÀªÀ£ÀÄß «Ä®£ÀzÀ GvÀÌl gÀvÁå¸ÀQÛAiÀÄ ªÀÄÆ®PÀªÉ PÉÆqÀ§AiÀĸÀÄvÁÛgÉ.
F ªÉÄð£À ¥ÀzÀzÀ°è ªÀÄÄQÛAiÀÄ£ÀÄß ºÉtÂÚUÉ ºÉÆÃ°¹ CªÀ¼À ªÀÄzsÀĸÀAUÀPÁÌV ºÁvÉÆgÉAiÀÄĪÀ ¥ÉæÃ«ÄAiÉÆ§â£ÀÄ CªÀ¼À£ÀÄß ªÀtÂð¸ÀĪÀ jÃwAiÀİèAiÉÄà §tÚ£É ªÀiÁrzÀÝ£ÀÄß PÁt§ºÀÄzÀÄ. ±ÀjÃ¥sÀgÀ zÀȶÖAiÀÄ°è ¨sÀPÀÛ£ÁzÀªÀ¤UÉ F `ªÀÄÄQÛ ®®£É’AiÀÄ ¸ÀAUÀ ¸ÁzsÀåªÁUÀĪÀÅzÀÄ ¨sÀUÀªÀAvÀ£À C£ÀÄUÀæºÀ¢AzÀ¯ÉÃ. ¨sÀUÀªÀAvÀ£À °Ã¯Á «£ÉÆÃzÀUÀ¼À£ÀÄß CjvÀÄ G¨sÀAiÀÄ ¨sÉÃzÀUÀ¼À£ÀÄß ªÀÄgÉAiÀħ®è ºÀAvÀ F ªÀÄÄQÛ PÁAvÉAiÀÄ ¸ÀÄR zÉÆgÀPÀÄvÀÛzÉ.
fêÀ£ÀÆ ²ªÀ£ÀÆ ¨ÉÃgÉAiÀÄ®è. ²ªÀ£À ªÀiÁAiÀiÁ±ÀQÛAiÀÄÄ ¸ÀȶֹzÀ DªÀgÀt¢AzÁV vÁ£ÀÄ ¨ÉÃgÉAiÉÄAzÀÄ w½zÀÄPÉÆ¼ÀÄîvÁÛ£É. ²ªÀ£À ±ÀQÛAiÉÄà ªÀiÁAiÉÄAiÀiÁV fêÀ-²ªÀjUÉ ¨sÉÃzÀªÀ£ÀÄßAlĪÀiÁqÀÄvÀÛzÉ. DzÀgÀÆ F ªÀiÁAiÉÄAiÀÄ ¤dªÁzÀ CjªÀÅ GAmÁzÀ ªÉÄÃ¯É F ±ÀQÛAiÉÄà ¨sÀQÛAiÀiÁV fêÀ£À£ÀÄß ²ªÀ£ÉÆqÀ£É ¸ÀªÀÄgÀ¸ÀUÉÆ½¸ÀÄvÀÛzÉ. fêÀ¤UÉ vÁ£Éà ²ªÀ£ÉA§ÄzÀÄ CjªÁzÁUÀ CªÀ¤AzÀ ¨ÉÃgÉAiÀÄV PÀAqÀ ªÀiÁAiÀiÁ±ÀQÛ CªÀ£À°èAiÉÄà °Ã£ÀªÁUÀÄvÀÛzÉ. F ¸ÀégÀÆ¥À zÀ±Àð£ÀªÉà ªÀÄÄQÛ CxÀªÁ ªÉÆÃPÀë. fêÀ¤UÉ vÁ£Éà ²ªÀ£ÉAzÀÄ w½zÀ ªÉÄÃ¯É vÀ£ÀßzÉà ±ÀQÛAiÀÄ£ÀÄß vÀ£ÉÆß¼ÀUÉ M¼ÀUÉÆ¼ÀÄîªÀ QæAiÉÄAiÀÄ£Éßà ±ÀjÃ¥sÀgÀÄ gÀw¨sÁªÀ¢AzÀ ªÀtÂð¹gÀ¨ÉÃPÀÄ,’’ JA§ Dgï.¦.ºÉUÀqÉAiÀĪÀgÀ ©ZÀÄÑ£ÉÆÃlzÀ°è ¥ËgÁtÂPÀ DAiÀiÁªÀÄ«zÉ. fêÀ-²ªÀ PÀ®à£ÉAiÀÄ£ÀÄß EªÀgÀÄ ¸ÁARåzÀ ¥ÀæPÀÈw-¥ÀÄgÀĵÀ PÀ®à£ÉUÉ ¥ÀgÁåAiÀĪÁV §¼ÀPÉ ªÀiÁrzÁÝgÉ. ªÀiÁ£ÀªÀ zÉúÀzÀ°è ¥ÀæPÀÈw ¤AiÀĪÀÄPÉÌ M¼À¥ÀlÄÖ £ÀqÉAiÀÄĪÀ zÉúÀ ªÀÄvÀÄÛ EZÁÒ±ÀQÛAiÀÄ£ÀÄß¼Àî ªÀÄ£À¸ÀÄì- EªÀÅ ¸ÁARå zÀ±Àð£ÀzÀ°è ¥ÀæPÀÈw-¥ÀÄgÀĵÀ PÀ®à£ÉAiÀÄ°è ¥ÀæwÃPÀÀUÀ¼ÁVªÉ. EµÀÄÖöß ¸ÀàµÀÖ¥Àr¹PÉÆAqÀgÉ, ¸ÁzsÀ£Á ªÀiÁUÀðzÀ°è C£ÀĸÀj¸ÀĪÀ ¤UÀæºÀ ªÀÄvÀÄÛ ±ÀQÛ ¸ÀAZÀAiÀÄ PÀ®à£ÉAiÀÄ ¸ÁªÀiÁfPÀ ªÁ¸ÀÛªÀ ªÀÄvÀÄÛ CzÀgÀ EvÀgÀ DAiÀiÁªÀÄUÀ¼À G¥ÀAiÀÄÄPÀÛ CA±ÀUÀ¼ÀÄ vÉgÉzÀÄPÉÆ¼ÀÄîvÀÛªÉ. zÉúÀ ªÀÄvÀÄÛ ªÀÄ£À¸ÀÄìUÀ¼À ¥ÀgÀ¸ÀàgÀ ¸ÀA§AzsÀ ªÀÄvÀÄÛ CªÀ£ÀÄß ¤AiÀÄAvÀætPÉÌ M¼À¥Àr¸ÀzÉ »rvÀzÀ°èlÄÖPÉÆ¼ÀÄîªÀ ¸ÁªÀiÁfPÀ G¥ÀAiÀÄÄPÀÛvÉ- EªÀÅ ªÀiÁ£ÀªÀ £ÁUÀjPÀ £ÀqɪÀ½PÉ ªÀÄvÀÄÛ ªÀåQÛvÀézÉÆA¢UÉ ªÉÄüÀUÉÆArªÉ.
CªÉÊ¢PÀ £ÁxÀ ¥ÀAxÀzÀ°è CªÉÊ¢PÀ ¸ÁARå zÀ±ÀÀð£ÀzÀ ªÀÄÄAzÀĪÀgÉzÀ ºÀAvÀªÀ£ÀÄß PÁtÄvÉÛêÉ. ¸ÁARåzÀAvÉ £ÁxÀªÀÇ ªÀiÁ£ÀªÀ zÉúÀzÉÆ¼ÀUÉ fêÀ ZÉÊvÀ£Àå ±ÀQÛAiÀÄ£ÀÄß PÀAqÀÄ CgÀ¸ÀÄvÀÛzÉ. zÉúÀ-fêÀ PÀ®à£ÉAiÉÄ §¸ÀªÀtÚ£ÀªÀgÀ°è ¸ÁܪÀgÀ-dAUÀªÀÄ PÀ®à£ÉAiÀiÁV MqÀªÀÄÆrgÀĪÀÅzÀÄ vÉÆÃj§gÀÄvÀÛzÉ. CzÀgÀ ªÀÄÄAzÀĪÀgÉzÀ gÀÆ¥ÀªÁV ±ÀjÃ¥sÀgÀ `UÀÄrAiÀÄ £ÉÆÃrgÀtÚ’ PÀAqÀħgÀÄvÀÛzÉ. E°è xÀlÖ£É §¸ÀªÀtÚ£ÀªÀgÀ `G¼ÀîªÀgÀÄ ²ªÁ®AiÀÄ ªÀiÁqÀĪÀgÀÄ’ ªÀZÀ£À £É£À¦UÉ §gÀÄvÀÛzÉ. EªÉgÀqÀgÀ £ÀqÀÄªÉ ¸ÁªÀÄåvÉ JzÀÄÝ PÁtĪÀAwgÀĪÀÅzÀÄ CZÀÑjAiÉÄãÀ®è. §¸ÀªÀtÚ£ÀªÀgÀ ¸ÁܪÀgÀ-dAUÀªÀÄ PÀ®à£ÉAiÀÄAvÉ ±ÀjÃ¥sÀgÀÄ `¥ÀgÁvÀàgÀ §æºÀägÀÆ¥À’ PÀ®à£ÉAiÀÄ£ÀÄß zÉúÀ fêÀ ZÉÊvÀ£ÀåzÀr §tÂÚ¹zÁÝgÉ. 
UÀÄrAiÀÄ £ÉÆÃrgÀtÚ
zÉúÀzÀ UÀÄrAiÀÄ £ÉÆÃrgÀtÚ

UÀÄrAiÀÄ £ÉÆÃrjzÀÄ
¥ÉÆqÀ«UÉ MqÉAiÀÄ£ÀÄ
CqÀVPÉÆAqÀÄ PÀqÀÄ ¨ÉqÀV£ÉƽgÀÄwºÀ
UÀÄrAiÀÄ £ÉÆÃrgÀtÚ

ªÀÄÆgÀÄ ªÉÆ£ÉAiÀÄ PÀ®Äè CzÀgÉÆ¼ÀÄ
eÁgÀÄwgÀĪÀ PÀ®Äè
¢üÃgÀ ¤UÀÄðt£ÀÄ ¸ÁgÀ ¸ÀUÀÄtzÀ°
vÉÆÃj CqÀV vÁ ¨ÁågÁVgÀÄwºÀ
UÀÄrAiÀÄ £ÉÆÃrgÀtÚ

DgÀÄ ªÀÄÆgÀÄ PÀnÖ ªÉÄîPÉ
KjzÀªÀ£ÀÄ WÀnÖ
¨sÉÃj PÁ½  ±ÀAR
¨Áj¸ÀÄ £ÁzÀ¢
«ÄÃjzÁ£ÀAzÀ vÉÆÃj ºÉƼÉAiÀÄÄwºÀ
UÀÄrAiÀÄ £ÉÆÃrgÀtÚ

¸ÁgÀÄwºÀªÀÅ ¢ªÀ¸À §ºÀÄ¢£À
ºÉÆÃV ªÀiÁr ªÁ¸À
AiÉÆÃVgÁd ²±ÀÄ£Á¼À¢üñÀ vÁ-
£ÁV ¥ÀgÁvÀàgÀ §æºÀä gÀÆ¥À¤ºÀ 
UÀÄrAiÀÄ £ÉÆÃrgÀtÚ
¸ÁªÀiÁ£ÀåvÀé, ¸ÁzsÀ£ÀvÀé ªÀÄvÀÄÛ zÉʪÀvÀézÀ £É¯ÉUÀ¼É®èªÀ£ÀÄß ±ÀjÃ¥sÀgÀÄ zÉúÀzÀ¯Éè PÀArzÁÝgÉ. `K£À PÉÆqÀ K£À PÉÆqÀªÀ’ EAxÀzÉ ªÀÄvÉÆÛAzÀÄ gÀZÀ£ÉAiÀiÁVzÉ. ªÀiÁ£ÀªÀ zÉúÀªÀ£ÀÄß C°è UÀÄrAiÉÆA¢UÉ ºÉÆÃ°¹ zÉʪÁA±ÀzÀ ¥Á«vÀæöåªÀ£ÀÄß CgÀ¹zÀÝgÉ, E°è PÉÆqÀzÉÆA¢UÉ ¸À«ÄÃPÀj¹ ¸ÁªÀiÁfPÁA±ÀzÀ ªÁ¸ÀÛªÀªÀ£ÀÄß ªÀÄ£ÀUÁt¯ÁVzÉ. 
K£À PÉÆqÀ K£À PÉÆqÀªÀ
ºÀħâ½î ªÀiÁl K£À ZÉAzÀļÀî PÉÆqÀªÀ

wQÌ®è ¨É¼ÀV®è vÀ¼ÀvÀ¼À ºÉƽvÀzÀ
PÀAaAzÀ®è vÁªÀÄæzÀ®è «Äj«Äj «ÄAZÀvÀzÀ

DgÀÄ ªÀÄA¢ CPÀÌ-vÀAUÁågÀÄ «ÄÃj «ÄAazÀ PÉÆqÀ
ªÀÄÆgÀÄ ªÀÄA¢ ªÀÄÄvÉÛöÊ¢AiÀÄgÀÄ ¯ÉÆÃ¯ÁrzÀ PÉÆqÀ

²ªÀgÁwæ eÁvÉæUÉ ºÉÆÃV ¹zÀÞgÁªÀÄ£À zÀ±Àð£ÀªÁV
ªÀļÀªÀé ¨ÁeÁgÀzÀ°è ¨Á¼À ºÉÆÃvÀªÀé PÉÆqÀ

DgÀÄ ªÀÄA¢ CPÀÌ-vÀAUÁågÀÄ dwÛ¯É ¤ÃjUÉ ºÉÆÃV
dgÀæ£É eÁj ©zÀÄÝ ¹UÀzÀíAUÀ ºÉÆÃvÀªÀé PÉÆqÀ

²±ÀÄ£Á¼À¢üñÀ£ÀÄ w¢Ý ªÀiÁrzÀ PÉÆqÀ 
§Ä¢ÞªÀAvÀgÀÄ w½zÀÄ £ÉÆÃrj PÉÆqÀ 
F zÉúÀ DgÀÄ ªÀÄA¢ CPÀÌ vÀAVAiÀÄgÀ£ÀÄß «ÄÃj «ÄAZÀĪÀÅzÉAzÀgÉ, µÀmï¸ÀÜ® CxÀªÁ PÁªÀÄ PÉÆæÃzsÀ ¯ÉÆÃ¨sÀ ªÉÆÃºÀ ªÀÄzÀ ªÀÄvÀìgÀ UÀÄtUÀ¼À£ÀÄß ºÉÆA¢AiÀÄÆ «ÄÃjzÀÄzÀÄ. ªÀÄÆgÀÄ ªÀÄA¢ ªÀÄÄvÉÛöÊzÉAiÀÄgÀÄ zÉúÀzÀ ¸ÀÆÜ® ¸ÀÆPÀëöä ¸ÀA§A¢üvÀ PÀgÀt ±ÀjÃgÀUÀ¼ÀÄ EzÀgÀ »rvÀzÀ°èzÉAiÉÄAzÀÄ ºÉýzÉ. E°è ªÀÄvÉÆÛAzÀÄ JZÀÑjPÉ EzÉ. ªÀiÁ£ÀªÀ zÉúÀ vÀ£Àß DgÀÄ UÀÄtUÀ¼À£ÀÄß PÀ¼ÉzÀÄPÉÆAqÀÄ ©lÖgÉ vÀ£Àß C¹ÛvÀéªÀ£Éß PÀ¼ÉzÀÄPÉÆAzÀÄ©qÀÄvÀÛzÉ JAzÀÄ UÀA©üÃgÀ zÀ¤AiÀİè UÀªÀÄ£À ¸É¼ÉAiÀÄÄvÀÛzÉ. EzÀÄ F UÀÄtUÀ¼À£ÀÄß £Á±À ¥Àr¸ÀzÉ vÀ£Àß »rvÀzÀ°è ElÄÖPÉÆ¼Àî¨ÉÃPÀÄ JA§ÄzÀgÀ ¸ÀÆZÀ£É. CªÉÊ¢PÀ £ÁxÀ ¥ÀAxÀzÀ «ZÁgÀ PÀ®à£ÉUÀ½AzÀ ¥Àæ¨sÁ«vÀªÁVgÀĪÀ ªÉÊ¢PÀ ±ÉʪÀ ¥ÀAxÀ D «ZÁgÀzsÁgÉUÀ¼À£ÀÄß ¹éÃPÀj¹zÉ JA§ÄzÀ£ÀÄß E°è ¥ÀgÉÆÃPÀëªÁV ¸ÀÆa¹zÉ. `vÉÃgÀ£É¼ÉAiÀÄÄvÁgÉ vÀAV’ EAxÀzÉ ªÀÄvÉÆÛAzÀÄ gÀZÀ£ÉAiÀiÁVzÀÄÝ, zÉúÀªÀ£ÀÄß vÉÃjUÉ ¸ÀAPÉÃw¹zÉ. 
vÉÃgÀ£É¼ÉAiÀÄÄvÁgÉ vÀAV
£ÉÆÃqÀ°PÉÌ ºÉÆÃUÀÄ£ÀÄ §gÉ

£ÁPÀÄ UÁ°UÉ MAzÉà eÉÆÃr
D±Á JA¨ÉÆÃ CZÀÄÑ ªÀiÁr

JAlÄ PÀA§zÀ ªÀÄAl¥À PÀnÖ
§AlgÀÄ CªÀgÀÄ EªÀgÀÄ PÀÆr

²±ÀÄ«£Á¼À¢üñÀ zÉêÀ£À 
ªÀå¸À£À¢AzÀ J®è d£ÀgÀÄ PÀÆr
¸ÁzsÀ£ÀvÀé¢AzÀ zÉúÀ zÉʫà £É¯ÉUÉ ¥ÀÆdå ¨sÁªÀ£ÉUÉ M¼ÀUÁUÀÄvÀÛzÉ, DUÀ CzÀÄ ¸ÀªÀÄÄzÁAiÀÄzÀ ¨sÁUÀªÁUÀÄvÀÛzÉ JA¢°è ¸ÀÆavÀªÁVzÉ. ¸ÁzsÀ£ÀvÀé PÀ¼ÉzÀÄPÉÆAqÀ zÉúÀ CzsÉÆÃUÀwUÉ E½AiÀÄÄvÀÛzÉ JA§ CA±ÀªÀ£ÀÄß `¸ÉÆÃgÀÄwºÀÄzÀÄ ªÀÄ£ÉAiÀÄ ªÀiÁ½UÉ’ PÁt¸ÀÄvÀÛzÉ. 
¸ÉÆÃgÀÄwºÀÄzÀÄ ªÀÄ£ÉAiÀÄ ªÀĽUÉ CeÕÁ£À¢AzÀ
¸ÉÆÃgÀÄwºÀÄzÀÄ ªÀÄ£ÉAiÀÄ ªÀiÁ½V

¸ÉÆÃgÀÄwºÀÄzÀÄ ªÀÄ£ÉAiÀÄ ªÀiÁ½UÉ
zÁgÀÄUÀnÖ ªÀiÁ¼Ààj®è
PÁ® PÀvÀÛ¯ÉAiÉÆ¼ÀUÉ £Á£ÀÄ
ªÉÄîPÉÃj ªÉÄvÀÛ¯ÁgÀzÉ

ªÀÄÄgÀÄPÀÄ dAw ºÀļÀÄPÀÄ vÉÆ¼ÉAiÀÄÄ
ªÀÄÄjzÀÄ PÉÆjzÀÄ QÃl ¸ÀjzÀÄ
ªÀÄÄgÀÄPÀÄ ZÀ¥ÀàgÀ fÃgÀÄ VAr
ªÉÄîPÉÃj ªÉÄlÖ¯ÁgÉ

PÀgÀQ ºÀÄ®Äè PÀ¸ÀªÀÅ ºÀwÛ
zÀÄjvÀ ¨sÀªÀ¢ EgÀÄªÉ ªÀÄÄwÛ
C¼À® ªÀļÀ® w½AiÀÄ ªÀÄtÄÚ
PɼÀUÉ ªÉÄÃ¯É ºÁPÀ¯ÁgÀzÉ

PÁAvÉ PÉÃ¼É PÀgÀÄt¢AzÀ
§AvÀÄ PÁuÉ ºÀĩ⠪ÀļÉAiÀÄÄ
FUÀ ²±ÀÄ«£Á¼À UÁæªÀÄPÉ 
ªÉÄÃWÀgÁd M¯ÉzÀÄ §AzÀ
F ¥ÀzÀ §¸ÀªÀtÚ£À `ªÀÄ£ÉAiÉÆ¼ÀUÉ ªÀÄನೆÀAiÉÆqÉAiÀĤzÁÝ£ÉÆ E®èªÉÇ’ ªÀZÀ£ÀªÀ£ÀÄß vÀ£Àß aAvÀ£Á PÀæªÀÄzÀ°è ºÉÆÃ®ÄvÀÛzÉ. EªÉgÀqÀÆ gÀZÀ£ÉUÀ¼ÀÄ zÉúÀzÀ°è ZÉÊvÀ£Àå ±ÀQÛ £É¯É¹gÀĪÀÅzÀ£ÀÄß M¦àvÀ £É¯ÉAiÀÄ°è ¥Àæ¸ÁÛ¦¸ÀÄvÀÛªÉ. ¸ÁzsÀ£ÉUÉ M¼ÀUÁzÀ QæAiÀiÁ»Ã£À ¹ÜwAiÀÄ°è ¤µÀá®vÉUÉ ¸ÀA¢gÀĪÀÅzÀ£ÀÄß PÁt¸ÀÄvÀÛªÉ. DzÀgÀÆ ±ÀjÃ¥sÀgÀ ¥ÀzÀzÀ°è zÉʪÁ£ÀÄPÀÈ¥ÉAiÀÄ ¨sÀgÀªÀ¸É ªÀåPÀÛªÁVzÉ. EzÀÄ E°è£À «±ÉõÀ CA±À.
ºÁ¢ vÀ¦àzÀ ¸ÁzsÀPÀ£À ¸ÀjzÁj AiÀiÁªÀÅzÀÄ? UÀÄgÀÄಸ್ಥಾ£ÀzÀ°ègÀĪÀ ªÀåQÛAiÀÄ ¸ÀÆPÀÛ ªÀiÁUÀðzÀ±Àð£À, vÀ¥ÀÄà wzÀÄݪÀ PÀæªÀÄ AiÀiÁªÀ §UÉAiÀÄzÀÄ? EAxÀ ¥Àæ±ÉßUÀ½UÉ GvÀÛgÀ gÀÆ¥ÀzÀ°èzÉ `vÀgÀªÀ®è vÀV ¤£Àß vÀA§Æj’ ¥ÀzÀ. 
vÀgÀªÀ®è vÀV ¤£Àß vÀA§Æj
¸ÀégÀ §gÀzÉ ¨Áj¸À¢gÀÄ vÀA§Æj
¸ÀgÀ¸À ¸ÀAVÃvÀzÀ PÀÄgÀĺÀÄUÀ¼ÀjAiÀÄzÉ
PÀgÀzÉÆ½ír¨ÁåqÀ vÀA§Æj

ªÀÄzsÀåzÉÆ¼ÉüÀÄ £ÁzÀzÀ vÀA§Æj CzÀß
w¢Ý £ÀÄr¸À¨ÉÃPÀÄ vÀA§Æj
¹zÀÞ ¸ÁzsÀPÀgÀ ¸ÀÄ«zÀåPÉÌ MzÀUÀĪÀ
§Ä¢ÞªÀAvÀUÉ vÀPÀÌ vÀA§Æj

¨Á¼À§®èªÀjUÉ vÀA§Æj zÉêÀ
¨Á¼ÁPÀë gÀa¹zÀ vÀA§Æj
ºÉüÀ° K¤zÀgÀ ºÀAaPÉAiÀÄjAiÀÄzÀAxÀ
vÁ¼ÀUÉÃrUÉ ¸À®è vÀA§Æj

¸ÀvÀå ¸ÀÄUÀÄtªÀAvÀjUÉ vÀA§Æj EzÀ
¤vÀå GvÀÛªÀÄgÁíqÀĪÀ vÀA§Æj
§wÛøÀgÁUÀzÀ §UÉAiÀÄ£ÀjAiÀÄzÀAxÀ
PÀwÛÃV£ÁåvÀPÉ vÀA§Æj

C¸ÀªÀÄ ¸ÀĪÀiÁå¼ÀPÀ vÀA§Æj EzÀÄ
PÀıÀ®jUÉÆ¥ÀÄàªÀ vÀA§Æj
²±ÀÄ£Á¼À UÁæªÀÄzÉÆ¼ÀÄ NzÀĪÀ ¥ÀÄgÁt¢ 
ºÀ¸À£ÁV ¨Áj¸ÀÄ vÀA§Æj
¸ÀAVÃvÀ ¸ÁzsÀ£ÉAiÀÄ CqÉvÀqÉUÀ¼ÀÄ, ¸ÀÄUÀªÀÄvÉUÀ¼ÀÄ ªÀÄÆ®PÀ ¹¢Þ ¸ÁzsÀ£ÉAiÀÄ jÃw-¤Ãw, Ew-«ÄwUÀ¼À£ÀÄß w½AiÀÄ¥Àr¸À¯ÁVzÉ. ¸ÀAVÃvÀ ¸ÁzsÀ£É C£Àå «zÉå ¸ÁzsÀ£ÉVAvÀ ¨ÉÃgÉ §UÉAiÀÄzÁVgÀĪÀ ºÁUÉAiÉÄà C£ÀĨsÁªÀzÀ ¹¢Þ ¸ÁzsÀ£É PÀÆqÀ ¨ÉÃgÉ vÉgÀ£ÁzÀÄzÉ DVzÉ.  ¸ÁzsÀ£ÉAiÀÄ ¢ÃPÉë vÉÆqÀzÀ ¸ÁªÀiÁ£Àå ªÀåQÛUÉ AiÀiÁªÀ §UÉAiÀÄ ¸ÁzsÀ£ÉAiÀÄÆ zÀPÀÄ̪ÀAvÀºÀzÀ®è. ¸ÁzsÀPÀgÀÄ ¸ÁªÀiÁ£ÀågÀAvÉ vÀªÀÄä ºÁ¢AiÀİè C¥À¸ÀégÀ ºÉÆgÀr¹zÀgÉ `vÀvÀÛ÷é¨ÉÆÃzsÀzÉÆ¼ÀVzÀÄÝ ¨sÀªÀ¨ÁzsÉAiÀÄ£ÀÄ UÉzÀÄÝ’ ªÀÄÄAzÀĪÀgÉAiÀÄ®Ä ¸ÁzsÀå«®è. »ÃUÉ E°è C£ÀĨsÁªÀ ¸ÁzsÀ£É / zÉúÀ - fêÀ ¸ÁzsÀ£ÉAiÀÄ «¢ü «zsÁ£ÀUÀ¼À£ÀÄß ©r¹nÖzÉ.  
¸ÁªÀiÁ£Àå ªÀåQÛ ¹¢Þ ¸ÁzsÀPÀ£ÁV ¥ÀjªÀvÀð£É ºÉÆAzÀ¨ÉÃPÁzÀ°è F «¢ü «zsÁ£ÀUÀ¼À£ÀÄß C£ÀĸÀj¸ÀĪÀÅzÀÄ, zÉúÀ-fêÀ vÀvÀÛ÷éªÀ£ÀÄß ¸ÁzsÀ£É ªÀiÁqÀĪÀÅzÀÄ dgÀÆgÁVzÉ. DUÀ ©¢gÀÄ PÀÆqÀ PÉÆ¼À®Ä DV §zÀ¯ÁUÀÄvÀÛzÉ JA§ D±ÀAiÀÄ `©¢gÀÄ £Á£ÁjUÀ®èzÀªÀ¼ÀÄ’ ¥ÀzÀzÀ°è ¸ÁgÀ¯ÁVzÉ. 
©¢gÀÄ £Á£ÁjUÀ®èzÀªÀ¼ÀÄ

ºÀÄlÄÖvÀ ºÀįÁèzÉ
¨É¼ÉAiÀÄÄvÀ ªÀÄgÀªÁzÉ
¸ÀÄAzÀgÀ ¹ÛçÃAiÀÄjUÉ PÉÃgÀĪÀ ªÉÆgÀªÁzÉ

ªÀÄÄzÀÄPÀUÉ §rUÁåzÉ
ªÀÄÄvÁåUÉ ¨ÉvÀÛªÁzÉ
zÉÆqÀØ zÉÆqÀØ ªÀĺÁvÀäjUÉ PÉÊAiÉÆ¼ÀV£À ¨ÉvÀÛªÁzÉ

CA©UÀ¤UÉ PÉÆÃ¯ÁzÉ
zÀArV £Á£ÁzÉ
¤ÃlļÀî ºÀÄqÀÄUÀjUÉ ¨ÉÃmÉAiÀÄ §rUÁåzÉ

¥À®èQ zÀArVAiÀiÁzÉ
¥ÀwæUÉ §ÄnÖAiÀiÁzÉ
J®èªÀÄä£À UÀÄqÀØzÉÆ¼ÀUÉ CrèV £Á£ÁzÉ

ºÀAzÀgÀ ºÁ®ÄUÀA§£ÁzÉ
zÀAr ¨Á¹AUÀ£ÁzÉ
zÉÆqÀØ zÉÆqÀØ ªÀÄgÀzÉÆ¼ÀUÉ PÀeÁÓAiÀÄ §ÄnÖAiÀiÁzÉ

w¦àAiÀÄ vɼÀVzÀÝ
CzÀgÀÄzÀÝ ¨É¼É¢zÀÝ
¹zÀÞgÁªÉÄñÀégÀ¤UÉ £ÀA¢PÉÆÃ¯ÁzÉ

zÉñÀzÉÆ¼ÀÄ ²±ÀÄ£Á¼À-
¢üñÀ£Àß ªÀÄoÀzÉÆ¼ÀUÉ 
¸ÁzsÀÄgÀ PÉÊAiÉÆ¼ÀUÉ KPÀ zÁj PÉÆ¼ÀªÉAiÀiÁzÉ
©¢gÀÄ E°è ªÀiÁ£ÀªÀ zÉúÀzÀ ¸ÀAPÉÃvÀªÁVzÉ. ©¢j£À ¸ÁªÀiÁfPÀ G¥ÀAiÀÄÄPÀÛvÉAiÀÄ §tÚ£É ªÀÄÆ®PÀ zÉúÀzÀ G¥ÀAiÀÄÄPÀÛvÉAiÀÄ£ÀÆß ¸ÁjzÉ. C£ÀĨsÁªÀ ¸ÁzsÀ£ÉAiÀİè EªÉgÀqÀÆ ¸À®PÀgÀtªÁVgÀĪÀÅzÀ£ÀÄß PÁt¹zÉ. F ªÀÄÆ®PÀ £ÁxÀ ¥ÀAxÀzÀ ¸ÁzsÀ£ÉAiÀÄ PÀ®à£ÉAiÀÄ£ÀÄß vÀ£Àß gÀZÀ£ÉAiÀÄ M¼À£ÉAiÉÄÎAiÀiÁV ºÉuÉ¢zÉ.
F J®è CA±ÀUÀ¼ÀÄ ±ÀjÃ¥sÀgÀ°è ªÀÄÄRåªÁV PÁtĪÀ ªÀÄvÀzsÀªÀÄðUÀ¼ÁZÉV£À ¤®Ä«UÉ CªÀgÀÄ ºÀÄnÖzÀ ¥ÀæzÉñÀzÀ ¸ÁªÀiÁfPÀ ªÀÄvÀÄÛ gÁdQÃAiÀÄ ¥Àj¸ÀgÀ ªÀiÁvÀæ PÁgÀtªÁVgÀzÉ CzÉéöÊvÀ, ±ÁPÀÛ, £ÁxÀ, ¸ÁARå zÀ±Àð£ÀzÀ ¨ÉÃgÀÄUÀ¼ÀÄ ºÉÃUÉ ªÀÄÆ¯ÁzsÁgÀªÁVªÉ JA§ÄzÀ£ÀÄß PÁt¸ÀÄvÀÛªÉ.


DzsÁgÀ UÀæAxÀUÀ¼ÀÄ
1. ²ªÁ£ÀAzÀ UÀħâtÚ£ÀªÀgÀ, 1993, ²±ÀÄ£Á¼À ±ÀjÃ¥sï VÃvÉUÀ¼ÀÄ, CPÀëAiÀÄ ¥ÀæPÁ±À£À, zsÁgÀªÁqÀ
2.  ²ªÁ£ÀAzÀ UÀħâtÚ£ÀªÀgÀ, 1992, ²±ÀÄ£Á¼À ±ÀjÃ¥sï ¸ÁºÉçgÀÄ, ¸Á»vÀå CPÁqÉ«Ä, ¨ÉAUÀ¼ÀÆgÀÄ
3. Dgï.¦.ºÉUÀqÉ, 1995, ²±ÀÄ£Á¼À ±ÀjÃ¥sï ªÀÄvÀÄÛ ¸ÀAvÀ PÀ©Ãgï: MAzÀÄ vË®¤PÀ CzsÀåAiÀÄ£À, ¸ÀªÀiÁd PÀ¯Áåt «±Àé¸ÀÜ ¸À«Äw, ¹zÁÞ¥ÀÄgÀ (G.PÀ.)
4. ®QëöäãÁgÁAiÀÄt ¨sÀlÖ J£ï.J¸ï., 1985, ²±ÀÄ£Á¼À ±ÀjÃ¥sï ¸ÁºÉçgÀ VÃvÉUÀ¼ÀÄ, PÀëªÀiÁ ¥ÀæPÁ¸À£À, ¨ÉAUÀ¼ÀÆgÀÄ
5. ²ªÀ£ÁUÀ¥Àà gÀÄzÀæ¥Àà, C©âUÉÃj, 1915, ±ÀjÃ¥sï ¸ÁºÉç PÀÈvÀ ²±ÀÄ£Á¼À vÀvÀé ¥ÀzÀUÀ¼ÀÄ ¨sÁUÀ - 1,2,3, ªÁV鮸À §ÄPï r¥ÉÆÃ, ºÀħâ½î
6. PÁªÀåfë, ?, ±ÀjÃ¥sï ¸ÁºÉçgÀ ¥ÀzÀUÀ¼ÀÄ, ¸ÀªÀiÁd ¥ÀĸÀÛPÁ®AiÀÄ, zsÁgÀªÁqÀ