ಶನಿವಾರ, ನವೆಂಬರ್ 19, 2011

ಹೇಗೆ?



ಕಲಿಸಬಹುದೆ
ಬಲಿತು ಸುತ್ತ
ಕರ ಈಟಿ ಸಿದ್ಧ ನಿಂತ
ಮುಳ್ಳುಕಂಟಿಗಳಿಗೆ
ಸ್ನೇಹವನ್ನ?

ಕಲಿಸದಿರಬಹುದೆ
ಗಾಳಿ ತಗುಲಿದರು ಮುರಕೊಂಡು ಬೇಲಿ
ರಸ ಒಸರುವ
ಕಳ್ಳಿ ಕ್ಯಾಕ್ಟಸ್ ಗಳಿಗೆ
ಮೆದುಮನಸನ್ನ?

ಇದನ್ನು ಬರೆದದ್ದು 02.09.2009ರಲ್ಲಿ. ಆಗ ಇದಕ್ಕೆ ಗೂಢ ಎಂದು ಹೆಸರಿಸಿದ್ದೆ. ನೆನ್ನೆ ಇದನ್ನು ಓದಿದಾಗ ಮಾನವ ಸ್ವಭಾವವನ್ನು ಬದಲಿಸಲು ಸಾಧ್ಯವೆ ಎಂರ್ಬಥದಲ್ಲಿ ಈ ಹೆಸರು ನೀಡಿದೆ. ಈ ಎರಡು ಸಾಲುಗಳು ನಿಮಗೆ ಇಷ್ಟವಾಗಬುದೆಂದು ಭಾವಿಸಿ ನಿಮ್ಮ ಮುಂದಿರಿಸುತ್ತಿದ್ದೇನೆ. ಬೈಗುಳಗಳಿಗೆ ಸದಾ ಸ್ವಾಗತ.

ಮಂಗಳವಾರ, ಅಕ್ಟೋಬರ್ 25, 2011

ಕಣ್ಣು

ಮುಸ್ಸಂಜೆ ಮುಂಜಾವು
ಒಂದು ಇರುಳು ಒಂದು ಹಗಲು

ಹರಿಯುವುವು ಎಳೆಗಳು
ಎಲ್ಲೊ ಬಿದ್ದ ಗರಿಗಳು
ಆಸೆ ಮೂಡಿ ಕನಸು ತೂರಿ
ಹಗುರ ಹಾರಿ ಬರುವುವು
ಒಂದು ಕಡ್ಡಿ ಒಂದು ಗರಿಕೆ
ಒಂದು ಹುಲ್ಲು ಒಂದು ಕುಣಿಕೆ
ಆಯ್ದು ತಂದು ಕಟ್ಟು ಗೂಡು
ಇಟ್ಟುಬಿಟ್ಟು ತತ್ತಿ ಜೋರು
ಇದ್ದುದಂತೆ ಇರುವುದಿಲ್ಲ
ಯಾವುದೂ ಇದ್ದಂತೆಯೆ
ಚಿಚಿಲಿ ಕುಕಿಲ ಸದ್ದು ಇಲ್ಲ
ಯಾವ ಹಾವೊ ಯಾವ ಬೆಕ್ಕೊ
ಹಗಲು ಇರುಳು ಒಂದೆಯಾನ
ಹಾಯಿಪಟವೆ ಹರಿದ ಗಾನ

ಬೆಳ್ದಿಂಗಳು ಕದ್ದಿಂಗಳು
ಅರಿಯದಾದ ಪಾಕಶಾಲೆ
ಹಗಲಿರುಳೂ ರಾಗವೊಂದೆ?

ಇದನ್ನು ಬರೆದದ್ದು 18-9-2008ರಂದು.  ಮನೆ ಬದಲಿಸಿದ ಮೇಲೆ ಬೇಡವಾದ  ಕಸದ ನಡುವೆ ಕಳೆದೆರಡು ವಾರದ ಹಿಂದೆ ಸಿಕ್ಕಿದ್ದು. ಈಗ ನಿಮ್ಮ ಮುಂದೆ ಇರಿಸುತ್ತಿದ್ದೇನೆ.

ಬುಧವಾರ, ಜುಲೈ 20, 2011

ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಏಕೆ?

ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿರುವ ಸುದ್ದಿ ಕಳೆದ 2011ರ ಜುಲೈ ತಿಂಗಳಿನಲ್ಲಿ ಪ್ರಕಟವಾದ ನಂತರ ಈ ಕುರಿತು ಸಾಕಷ್ಟು ವ್ಯಾಪಕವಾಗಿ ಚರ್ಚೆ ನಡೆದಿದೆ. ಅವಸಾನದ ಹಾದಿ ಹಿಡಿದಿರುವ ವಿಶ್ವದ ಹಲವು ಭಾಷೆಗಳಲ್ಲಿ ಕನ್ನಡವೂ ಒಂದೆಂಬ ವಿಶ್ವಸಂಸ್ಥೆಯ ವರದಿ ಪ್ರಕಟವಾದ ನಂತರದಲ್ಲಿ ಇದು ಕನ್ನಡಿಗರನ್ನು  ಆತಂಕಕ್ಕೆ ದೂಡಿತು. ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಸುಧಾರಿಸುವ ಬಗ್ಗೆ, ಈ ದಿಕ್ಕಿನಲ್ಲಿ ಸರಕಾರ ವಹಿಸಬೇಕಾದ ಪಾತ್ರದ ಬಗ್ಗೆ ಪುಂಖಾನುಪುಂಖವಾಗಿ ಪುಕ್ಕಟೆ ಸಲಹೆ ಸೂಚನೆಗಳು ವ್ಯಕ್ತವಾಗಿವೆ. ಇವನ್ನು ಮೂರು ವಿಧವಾಗಿ ಗುರುತಿಸಬಹುದು. 1. ಕನ್ನಡ ಪರ ಸಂಘ ಸಂಸ್ಥೆಗಳು ಮತ್ತು ಕನ್ನಡ ಪರ ಚಿಂತಕರ ವೇದಿಕೆಗಳು ಕನ್ನಡದ ಆತಂಕವನ್ನು ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿ ಕೈಗೆತ್ತಿಕೊಂಡಿದ್ದು, ಮತ್ತು ಕನ್ನಡ ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನೇ ಬಿಂಬಿಸಿಕೊಂಡು ಸ್ವಾಭಿಮಾನದ ಹೆಸರಿನಲ್ಲಿ ವಿವೇಚನಾರಹಿತ ದುರಭಿಮಾನ ವ್ಯಕ್ತಪಡಿಸಿದ್ದು.  2. ದೇಶಭಾಷೆ (ಕನ್ನಡ)ಅಭಿವೃದ್ಧಿ ಪರ ಚಿಂತನೆ ಕುರಿತು; ಉದಾಹರಣೆಗೆ-ಕನ್ನಡಿಗರಿಗೆ ಅಪ್ಪಟ ಕನ್ನಡ ಕಲಿಸುವ ಅಗತ್ಯ, ಗುಣಮಟ್ಟದ ಶಿಕ್ಷಣ, ಕನ್ನಡ ಮಾಧ್ಯಮದಲ್ಲೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ಆದ್ಯತೆ ಮೊದಲಾಗಿ ಮೇಲುಮಟ್ಟದ ತಾತ್ವಿಕ ಚರ್ಚೆ ಪ್ರಸಕ್ತ ಸಮಸ್ಯೆಯ ವಾಸ್ತವ ಸ್ಥಿತಿಗಳನ್ನು ಆಧರಿಸದೆ ಹೋದದ್ದು. 3. ಕನ್ನಡ ಅಭಿವೃದ್ಧಿಯ ಭಾಗವಾಗಿಯೆ ಇಂಗ್ಲಿಶ್ ಕಲಿಕೆಯ ಅಗತ್ಯತೆ ಪ್ರತಿಪಾದಿಸುವ ಅಭಿಪ್ರಾಯಗಳು ಇತ್ತೀಚೆಗೆ ಒಡಮೂಡತೊಡಗಿದ್ದು.
ಈ ನಡುವೆ ಸರಕಾರಿ ಪ್ರಾಥಮಿಕ ಶಾಲೆಯ ಮಟ್ಟದಲ್ಲಿಯೆ ಇಂಗ್ಲಿಶ್ ಕಲಿಸುವ ಉತ್ಸಾಹ ಪ್ರಕಟಿಸಿದ್ದ ಸರಕಾರ, ಮುಚ್ಚುತ್ತಿರುವ ಶಾಲೆಗಳ ಕುರಿತ ಚರ್ಚೆ ತಾರಕಕ್ಕೇರಿದಂತೆ ವಿಲೀನಗೊಳಿಸುವ ಕಾರ್ಯಕ್ರಮ ಮುಂದಿಟ್ಟು ಗೊಂದಲಕ್ಕೆ ಒಳಗಾಯಿತು. ಆಗ ಈ ಯಾವ ಕ್ರಮಗಳನ್ನು ತೆಗೆದುಕೊಳ್ಳದೆ ಸರಕಾರ ಶಾಲೆಗಳ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿತು. ಇದರಿಂದ ಸರಕಾರ ತನ್ನ ಮತ್ತು ಕನ್ನಡ ಪರ ಇಮೇಜನ್ನು ಉಳಿಸಿಕೊಳ್ಳುವ ಅವಸರದಲ್ಲಿ ತೆಗೆದುಕೊಳ್ಳುವ ಅಪಾಯಕಾರಿ ನಿಲುವನ್ನು ತಡೆಗಟ್ಟಿದಂತಾಗಿದೆ.
ಆದರೂ ಇವೆಲ್ಲವೂ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದ ಮೂಲ ಸಮಸ್ಯೆಯನ್ನು ಕಂಡುಕೊಂಡು ನಡೆಸಿದ ಕಾರ್ಯವಿಧಾನ ಎನ್ನುವಂತಿಲ್ಲ.     
ಸಾಂಸ್ಕೃತಿಕ ರಾಜಕಾರಣ
ಸಮಾಜದ ಬಡ ಮತ್ತು ಕೆಳ ಸಮುದಾಯಗಳಿಗೆ ಬಹುಪಾಲು ಸೀಮೀತವಾಗಿರುವ ಈಗಿನ ಸರಕಾರಿ ಶಾಲೆಗಳು ಸಮಾನ ಅವಕಾಶ ಕಲ್ಪಿಸುವ ಇಂದಿನ ಅಗತ್ಯ ಬೇಡಿಕೆಯನ್ನು ಪೂರೈಸುವ ಮಟ್ಟದಲ್ಲಿಲ್ಲ  ಎಂಬ ಆರೋಪ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿಯೆ ಸರಕಾರ ಇಂಗ್ಲಿಶ್  ಕಲಿಸುವ ನಿರ್ಧಾರ ಪ್ರಕಟಿಸಿದ್ದು ಕೂಡ. ಸಮಾಜದ ಬಡ ಮತ್ತು ಕೆಳ ಸಮುದಾಯಗಳಿಗೆ ಇಂಗ್ಲಿಶ್ ಕಲಿಯುವ ಅವಕಾಶವನ್ನು ಸಕಲ ಸೌಲಭ್ಯ ಹೊಂದಿರುವ ಮೇಲು ವರ್ಗಗಳು ವಿರೋಧಿಸುವ ಮೂಲಕ ಕನ್ನಡ ಅವನತಿಯ ಬಗ್ಗೆ ಗುಲ್ಲೆಬ್ಬಿಸುತ್ತಿವೆ ಎಂದು ಹೇಳಲಾಗಿದೆ. ಇದು ಕನ್ನಡ ಹೆಸರಿನಲ್ಲಿ ಸಮಾಜದ ಬಹು ಸಮುದಾಯಗಳ ನಡುವೆ ನಡೆಯುತ್ತಿರುವ ಸ್ವ ಕೇಂದ್ರಿತ ರಾಜಕಾರಣವಷ್ಟೆ. ಈ ಮನಸ್ಥಿತಿ ವಾಸ್ತವ ಸಾಂಸ್ಕೃತಿಕ ರಾಜಕಾರಣಕ್ಕೆ ದೂರವೆಂದು ಹೇಳಲು ಆಗದಿದ್ದರೂ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಲು ಕಾರಣವೆಂದು ಗುರುತಿಸಲಾಗದು.
ಈಗಿನ ಶಿಕ್ಷಣ ಪರಿಸ್ಥಿತಿ
ಶೈಕ್ಷಣಿಕ ಸಂಸ್ಥೆಯೊಂದರ ಉತ್ತಮ ಫಲಿತಾಂಶ ಆ ಸಂಸ್ಥೆಯಲ್ಲಿರುವ ಉತ್ತಮ  ಶೈಕ್ಷಣಿಕ ಗುಣಮಟ್ಟದ ಸಂಕೇತವೆಂದು ನಂಬಿಸಲಾಗಿದೆ. ಹಾಗೆಯೇ ಉತ್ತಮ ಫಲಿತಾಂಶ ಪಡೆಯುವ ಸಲುವಾಗಿ ಪರೀಕ್ಷೆಗಳಲ್ಲಿ ನಕಲು ಮಾಡಲು ನೇರವಾಗಿ ಉತ್ತೇಜಿಸಲಾಗುತ್ತಿದೆ. ಇದು ಸರಕಾರಿ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳೆಲ್ಲವಕ್ಕೂ ಅನ್ವಯವಾಗುವ ಅಂಶ. ಇದಕ್ಕೆ ಶಿಕ್ಷಣದ ಮುಖ್ಯ ಗುರಿ ಪರೀಕ್ಷೆ ಮತ್ತು ಫಲಿತಾಂಶ ಕೇಂದ್ರಿತವಾಗಿರುವುದೂ ಕಾರಣವಾಗಿದೆ. ಉದ್ಯೋಗ ನಿಮಿತ್ತ ಅಧ್ಯಾಪಕರಾದವರು ತಮ್ಮ ಜವಾಬ್ದಾರಿ ಮರೆತು ಸೋಮಾರಿಗಳಾಗಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ನಕಲು ಮಾಡಿಸಿ ಫಲಿತಾಂಶ ಪಡೆಯುವ ಮಾರ್ಗ ಅನುಸರಿಸಿದ್ದಾರೆ. ಹಾಗಾಗಿ ನಕಲು ಅಕ್ಷರ ಕಲಿಸದ ಅಧ್ಯಾಪಕರ ಮತ್ತು ಕಲಿಯದ ಮಕ್ಕಳಿಗೆ ಅತ್ಯುತ್ತಮವಾಗಿ ಸಹಾಯಕ್ಕೆ ಬಂದಿದೆ.
ಕಲಿಯುವ ಕಲಿಸುವ ಆಸಕ್ತಿಯನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡಿರದ ಈ ಶಿಕ್ಷಕ ವರ್ಗ ತಮ್ಮ ಹುಟ್ಟೂರಿಗೆ ವರ್ಗಾವಣೆ ಮಾಡಿಸಿಕೊಂಡು ಕೃಷಿ ಚಟುಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಇಲ್ಲ ಚೀಟಿ ವ್ಯವಹಾರ, ಅಂಗಡಿ ವ್ಯವಹಾರಗಳಲ್ಲಿ ನಿರತರಾಗುವುದು ಮುಂತಾದ ಗಳಿಕೆಯ ಇತರ ಕಾರ್ಯಗಳಲ್ಲಿ ಕಳೆದುಹೋಗಿದ್ದಾರೆ. ಕಾಲೇಜು ಮತ್ತು ಉನ್ನತ ಶಿಕ್ಷಣದಲ್ಲೂ ನಿರಾಸಕ್ತ ಅಧ್ಯಾಪಕ ವರ್ಗ ಮನೆಪಾಠ, ಚೀಟಿ ಮತ್ತಿತರ ವ್ಯವಹಾರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು  ಇಲ್ಲವೆ ಶಿಕ್ಷಣೇತರ ಹುದ್ದೆಗಳಿಗೆ ತಮ್ಮನ್ನು ನಿಯುಕ್ತಿ ಮಾಡಿಸಿಕೊಳ್ಳುವುದು ನಡೆಯುತ್ತಿದೆ. ಅಂದರೆ ಉಪಭೋಗ ಜೀವನ ನಡೆಸಲು ಅಗತ್ಯವಾದ ಸಂಪತ್ತಿನ ಶೇಖರಣೆಯಲ್ಲಿ ಶಿಕ್ಷಕ ವರ್ಗ ಮೈಮರೆತಿದೆ.
ಇದು ಸ.ರಘುನಾಥರಂಥ ಅತ್ಯುತ್ತಮ ಕ್ರಿಯಾಶೀಲ ಶಿಕ್ಷಕ ವರ್ಗ ಕಾಣೆಯಾಗುತ್ತಿರುವ ದ್ಯೋತಕವಾಗಿದೆ.

ಪ್ರಾಥಮಿಕ ಹಂತದಲ್ಲಿ ಅಕ್ಷರ ಕಲಿಯದೆ, ನಪಾಸಾಗದೆ ಮಾಧ್ಯಮಿಕ ಹಂತ ತಲುಪಿದ  ವಿದ್ಯಾರ್ಥಿಗೆ ಆ ಹಂತ ಕಲಿಕೆಯ ಮೇಲಿನ ಹಂತವಾಗುತ್ತದೆ. ಅವನಿಗೆ ಮಾಧ್ಯಮಿಕ ಹಂತದಲ್ಲೆ ಕಲಿಯುವಿಕೆ ಅಸಾಮಾನ್ಯವಾಗಿಬಿಡುತ್ತದೆ. ಆತ ಕಲಿಯುವ ಪ್ರಯತ್ನ ಮಾಡದೆ ಅಕ್ಷರಗಳ ಪರಿಚಯದೊಂದಿಗೆ ಪ್ರೌಢಶಾಲೆಯ ಮೆಟ್ಟಿಲು ಏರುತ್ತಾನೆ. ವಿದ್ಯಾರ್ಥಿಯ ಕಲಿಕೆ ಮತ್ತು ವಿಷಯ ಗ್ರಹಿಕೆಯ ಮಟ್ಟಕ್ಕೂ ಪ್ರೌಢ ಮಟ್ಟದ ಪಠ್ಯ ವಿಷಯ ಮತ್ತು ನಿರೂಪಣೆಗಳ ನಡುವೆ ಅಂತರ ಉಂಟಾಗಿ ಕಲಿಕೆಯ ಪ್ರಕ್ರಿಯೆ ಮುರುಟುತ್ತ ಹೋಗುತ್ತದೆ ಮತ್ತು ಪ್ರಾಮಾಣಿಕ ಅಧ್ಯಾಪಕರು ಕಲಿಕೆಯ ತರಬೇತು ನೀಡುವ ಹಂತವನ್ನೂ ಮೀರುತ್ತದೆ. ಪರೀಕ್ಷೆ ಮತ್ತು ಫಲಿತಾಂಶ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಪರೀಕ್ಷೆಯಲ್ಲಿ ನಕಲು ಮಾಡುವುದು ಅನಿವಾರ್ಯವಾಗಿಹೋಗಿದೆ.ಹಾಗಾಗಿಯೇ ಅವರಿಬ್ಬರ ನಡುವೆ ಸುಪ್ತ ಒಪ್ಪಂದ ಏರ್ಪಡುತ್ತದೆ. ಕಲಿಯದೆಯೂ ನಪಾಸಾಗದೆ ಇರುವ ಈ ಕಲೆ ವ್ಯಕ್ತಿಯ ಜೀವನದಲ್ಲಿ ಉತ್ತಮ ವಿದ್ಯಾವಂತನೆಂಬ ಸರ್ಟಿಫೀಕೇಟನ್ನು ತಂದುಕೊಡುತ್ತದೆ.
ವಿದ್ಯೆಯನ್ನು ಕಲಿಯದೆಯೆ ಅಡ್ಡ ಮತ್ತು ಸುಲಭದ ದಾರಿಯಲ್ಲಿ ಸರ್ಟಿಫಿಕೇಟುಗಳನ್ನು ಪಡೆದ ನಂತರದಲ್ಲಿ ಈ ಸರ್ಟಿಪೀಕೇಟುಗಳು ಉದ್ಯೋಗಕ್ಕಾಗಿ ಬೇಟೆ ನಡೆಸಲು ಅಗತ್ಯವಾದ ಆತ್ಮವಿಶ್ವಾಸ, ಉತ್ಸಾಹ, ಹುಮ್ಮಸ್ಸು ತಂದುಕೊಡುತ್ತದೆ. ಉದ್ಯೋಗ ಪಡೆಯಲು ವಿದ್ಯಾರ್ಹತೆ ನೆಪ ಮಾತ್ರವಾಗಿದ್ದು, ಹಣ ಮತ್ತು ರಾಜಕೀಯ ಶಿಫಾರಸ್ಸಿನ ಬಲ ಪ್ರಮುಖ ಪಾತ್ರ ವಹಿಸುತ್ತಿವೆ.  ಮುಂದಿನ ಜೀವನದಲ್ಲಿ  ಹಣ ಗಳಿಸುವುದು ಅತ್ಯಗತ್ಯ ಮತ್ತು ಜರೂರಿನದಾಗಿದ್ದು ಅದಕ್ಕಾಗಿ ನೌಕರಿಯೊಂದನ್ನು ಸರ್ವ ಪ್ರಯತ್ನಗಳೊಂದಿಗೆ ಪಡೆಯಲಾಗುತ್ತದೆ. ಇಂಥ ಅಭ್ಯರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಮಟ್ಟಗಳಲ್ಲಿ ಅಧ್ಯಾಪಕರಾಗಿಯೂ ನೇಮಕವಾಗುತ್ತಾರೆ. ಈ ಅಧ್ಯಾಪಕರು ತಾವೇ ಸರಿಯಾಗಿ ಕಲಿಯದಿದ್ದವರು, ಇನ್ನೂ ಶಾಲೆಗೆ ಬರುವ ಮಕ್ಕಳಿಗೆ ಕಲಿಸುವ ಮಾತು ದೂರವೇ ಉಳಿಯುತ್ತದೆ. ಶಾಲೆಗೆ ಸೇರಿದ ಮಕ್ಕಳ ಹೆಸರನ್ನು ಕಾಗುಣಿತ ತಪ್ಪಿಲ್ಲದೆ ಬರೆಯಲು ಬರದ ಅಧ್ಯಾಪಕರ ದೊಡ್ಡ ಸಂಖ್ಯೆಯೇ ಇಂದು ಪ್ರಾಥಮಿಕ ಶಾಲೆಗಳಲ್ಲಿ ಇರುವುದು ಮಕ್ಕಳ ದುರಾದೃಷ್ಟ. ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ, ಇಂಥ ಅಧ್ಯಾಪಕರೊಬ್ಬರು ಹಿರಿಯ ಅಧ್ಯಾಪಕರೆನಿಸಿ ಮುಖ್ಯೋಪಾಧ್ಯಾಯರಾಗಿ ಸಾಕಷ್ಟು ಕಾಲ ಸೇವೆ ಸಲ್ಲಿಸಿ ಮಕ್ಕಳ ಹೆಸರನ್ನು ದಾಖಲಾತಿ ಪುಸ್ತಕದಲ್ಲಿ ಸರಿಯಾಗಿ ನಮೂದಿಸದೆ ತದ ನಂತರದಲ್ಲಿ ತಿದ್ದಲೂ ಸಿದ್ಧವಿಲ್ಲದೆ ಆ ಮಕ್ಕಳ ಜೀವನದಲ್ಲಿ ಕಂಟಕರಾಗಿ ನಿಂತಿದ್ದಾರೆ, ಸರಕಾರಿ ಶಾಲೆಯಲ್ಲಿ ಇಂಥ ಅಧ್ಯಾಪಕರಿಂದ ಮಕ್ಕಳು ಏನನ್ನು ತಾನೇ ಕಲಿಯಲು ಸಾಧ್ಯ?
ಅಕ್ಷರ ಕಲಿತ ತಂದೆತಾಯಿಯರು ತಮ್ಮ ಮಕ್ಕಳ ಕಲಿಕೆಯ ಜವಾಬ್ದಾರಿಯನ್ನು ತಾವೇ ಹೊರಬೇಕು ಇಲ್ಲದಿದ್ದ ಪಕ್ಷದಲ್ಲಿ ಕಲಿಸುವ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ತಂದೆತಾಯಿಯರು ಸರಕಾರಿ ಶಾಲೆಯ  ಅಧ್ಯಾಪಕರಷ್ಟೆ ವಿದ್ಯಾವಂತರಾಗಿದ್ದರೆ ಅಥವಾ ತಾವು ಕೂಡ ಅರೆಬರೆ ವಿದ್ಯಾವಂತರಾಗಿದ್ದರೆ ಕಲಿಸುವ ಶಾಲೆಗೆ ಮಕ್ಕಳನ್ನು ಸೇರಿಸುವುದು ಅನಿವಾರ್ಯ. ಹೀಗೆ ಮಧ್ಯಮ ವರ್ಗದ ಮತ್ತು ನೌಕರಿದಾರರ ಮಕ್ಕಳು ಸರಕಾರಿ ಶಾಲೆಯಿಂದ ದೂರವಾದ ಮೇಲೆ ಇಂಗ್ಲಿಶ್ ಶಿಕ್ಷಣವೇ ಜೀವನದ ಹಾದಿಯೆಂದು ನಂಬಿರುವ ಬಡ ಮತ್ತು ತಳ ಸಮುದಾಯದ ಮಕ್ಕಳು ಸರಕಾರಿ ಶಾಲೆಯಿಂದ ದೂರವಾಗುತ್ತಿರುವುದು ಅಸಹಜವೇನಲ್ಲ. ಎಲ್ಲಿ ತಮ್ಮ ಮಕ್ಕಳಿಗೆ ನಿಜವಾದ ಕಲಿಕೆಯ ಅಗತ್ಯವಿದೆ ಎಂದು ಹೆತ್ತವರು ಮನಗಂಡಿದ್ದಾರೋ ಅಲ್ಲಿ ಅವರು ಸರಕಾರಿ ಶಾಲೆಗೆ ಸೇರಿಸದಿರುವ ಹಟವನ್ನೂ ತೊಟ್ಟಿರುತ್ತಾರೆ. ಹಾಗಾಗಿದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ತಗ್ಗಲು ಕಾರಣವಾಗಿದೆ.
ಅನರ್ಹ ಅಧ್ಯಾಪಕರ ನೇಮಕ ಮಾಡಿಕೊಂಡಿರುವ ಸರಕಾರ ತಾನು ಎಡವಿರುವುದೆಲ್ಲಿ ಎಂದು ಆತ್ಮಾವಲೋಕನ ಮಾಡಿಕೊಂಡಲ್ಲಿ ಈ ಸಮಸ್ಯೆಯನ್ನು ಸರಿಪಡಿಸುವ ದಾರಿಗಳು ಕಾಣುತ್ತವೆ. ಅಧ್ಯಾಪಕರಾಗಿ ನೇಮಕಗೊಂಡ ಯಾವುದೇ ಅಭ್ಯರ್ಥಿಯ ಅಂಕಪಟ್ಟಿ ಆತನ ವಿದ್ಯಾರ್ಹತೆಯ ಗುಣಮಟ್ಟವನ್ನು ಸಾರುವುದಿಲ್ಲ  ಎಂಬ ಸತ್ಯವನ್ನು ಮನಗಾಣಬೇಕಿದೆ. .
ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ನಮ್ಮೆಲ್ಲರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ನೈತಿಕತೆಯೆ ಇಲ್ಲದ  ಭ್ರಷ್ಟತೆ ತುಂಬಿಕೊಂಡಿರುವ ಸೂಚಕವಾಗಿದೆ.
ನಮ್ಮ ಜೀವನದ ಕ್ರಮ ವಿಧಾನಗಳಲ್ಲಿ, ಮೌಲ್ಯಗಳಲ್ಲಿ, ಆದ್ಯತೆಗಳಲ್ಲಿ ಬದಲಾವಣೆಯಾಗಬೇಕಿದೆ. ಅಗತ್ಯ ನೈತಿಕತೆ ಮತ್ತು ಪ್ರಾಮಾಣಿಕತೆ ನಮ್ಮ ಜೀವನದ ಉಸಿರಾಗ ಬೇಕಿದೆ. ಕೇವಲ ಸೋಗು ಸಂಸ್ಕೃತಿಯನ್ನಷ್ಟೆ ಪೋಷಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಅಧೋಗತಿಯ ಚಲನೆಯನ್ನೆ ಉನ್ನತಿ ಸಾಧನೆಯ ಚಲನೆಯೆಂದು ಭ್ರಮಿಸಲಾಗುತ್ತಿದೆ.
ಈ ಶೈಕ್ಷಣಿಕ ವಿಷಮ ಚಕ್ರದಿಂದ ಬಿಡುಗಡೆ ಹೊಂದುವ ಪ್ರಜ್ಞೆ, ಮೊಳೆತು, ಹೋರಾಟದ ಛಲ ಬೆಳೆದು ಸಾಧಕತನ ಮೈಗೂಡಿದಲ್ಲಿ ಮಾತ್ರ ಹೊಸಹಾದಿಯ ಕನಸು ಗರಿ ಕಟ್ಟುತ್ತದೆ.
ನಕಾರಾತ್ಮಕ ಮುಖವನ್ನೆ ಪ್ರಮುಖವಾಗಿ ಚಿತ್ರಿಸಿದಂತೆ ಇದು ಕಾಣಬಹುದು. ಆದರೆ  ನಕಾರಾತ್ಮಕ ಮುಖವೇ ನಮ್ಮ ಪ್ರಧಾನ ಮುಖವೂ ಆಗಿಬಿಟ್ಟಿರುವುದು ಸಮಸ್ಯೆಯ ಮೂಲವಾಗಿದೆ.

ಸೋಮವಾರ, ಜುಲೈ 18, 2011

ನಾನು ರೋಗಿಯಲ್ಲ, ಆದರೂ

ನಾನು ರೋಗಿಯಲ್ಲ
ಆದರೂ ನರಳುತ್ತೇನೆ ರೋಗಿಯ ಹಾಗೆ

ಮೈ ಮುಟ್ಟಿ ಡಾಕುಟರು
ಇರುಬು ಕಚ್ಚಿದಂತೆ ಸೂಜಿ ಚುಚ್ಚಿ
ಕೊಡದಿದ್ದಾಗ ಗುಡ್ಡೆ ಗುಡ್ಡೆ ಪಿಲ್ಸು

ಮನೆಮಂದಿ ನನ್ನ ಮಲಗಿಸಿ
ಬಿಸಿನೀರು ಹಾಲು ಬ್ರೆಡ್ಡು ಗಂಜಿ ಪಿಲ್ಸು
ಕುಡಿಸದಿದ್ದಾಗ ಕಾಲಕಾಲಕ್ಕೆ ನಿಗಾವಹಿಸಿ

ಹೋಗದಿದ್ದರೂ ಕೆಲಸಕ್ಕೆ
ಜೊತೆ ಕೆಲಸಗಾರರು ಸಂಜೆ ಮನೆಗೆ ಬಂದು
ವಿಚಾರಿಸಿಕೊಂಡು ಹೋಗದಿದ್ದಾಗ

ಅಕ್ಕಪಕ್ಕದ ಜನ ಕಿಟಕಿ ಬಾಗಿಲಲ್ಲಿಣುಕಿ
ಲೊಚಗುಟ್ಟಿ ಪಾಪ ಏನಾಯ್ತೆಂದು
ತೋರದಿದ್ದಾಗ ಒಣ ಕರುಣೆ

ಪಡುವಣದ ಪಡಖಾನೆಯಲ್ಲಿ ಸೂರ್ಯ
ಕೆಂಪೇರಿ ಹಿಂಬೆಳಗು ಚೆಲ್ಲದಿದ್ದಾಗ
ನರಳುತ್ತೇನೆ ನಾನೂ ಒಬ್ಬ ರೋಗಿಯ ಹಾಗೆ.
#  #


ಕಳೆದ ಒಂದೆರಡು ವರುಷಗಳ ಹಿಂದೆ ಇದನ್ನು ಬರೆದ ನೆನಪು. ತಾನು ನಂಬದೆ ಪರರನ್ನು ನಂಬಿಸುವ ಮತ ಜಾತಿ ಮನಸ್ಥಿತಿಯ ಭಾರತೀಯ ಸ್ವಭಾವಕ್ಕಿದು ಅಲಂಕಾರ ತೊಟ್ಟು ನಿಂತಂತೆ ನನಗೀಚೆಗೆ ಅನುಭವವಾಗತೊಡಗಿ ನಿಮ್ಮ ಮುಂದಿರಿಸುತ್ತಿದ್ದೇನೆ.

ಸೋಮವಾರ, ಜುಲೈ 11, 2011

ಶಾಲೆಯಲ್ಲಿ ಭಾಷಾ ಕಲಿಕೆಯ ನೀತಿ-ನಮಗೆ ಬೇಕಿರುವ ಇಂಗ್ಲಿಶ್

ರಾಜ್ಯ ಸರಕಾರ ಪ್ರಾಥಮಿಕ ಹಂತದಿಂದ ಇಂಗ್ಲಿಶ್ ಮಾಧ್ಯಮ ಆರಂಭಿಸುವ ಬಗ್ಗೆ ಹೇಳಿಕೆ ನೀಡಿದೆ. ಇದರಿಂದ ಕರ್ನಾಟಕದಲ್ಲಿ ಮತ್ತೆ ಕನ್ನಡ ಅಥವಾ ಇಂಗ್ಲಿಶ್ ಕಲಿಕೆಯಲ್ಲಿ ಭಾಷಾ ಸ್ಥಾನಮಾನದ ಬಗ್ಗೆ ಚರ್ಚೆ ಆರಂಭವಾಗಿದೆ. ಇದುವರೆಗೂ ಸರಕಾರಿ ಶಾಲೆಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ತ್ರಿಭಾಷಾ ನೀತಿಯನ್ನು ಅನುಸರಿಸಿಕೊಂಡು ಬರಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೂರನೆಯ ಭಾಷೆಯಾಗಿರುವ ಹಿಂದಿಯನ್ನು ಆಯಾ ರಾಜ್ಯದ ಜನರ ಇಷ್ಟಾನಿಷ್ಟಗಳನ್ನು ಕಡೆಗಣಿಸಿ ರಾಷ್ಟ್ರ ಭಾಷೆ ಎಂಬ ಹೆಸರಿನಲ್ಲಿ ಬಲವಂತವಾಗಿ ಕಲಿಸಲಾಗುತ್ತಿದೆ. ಇಂಗ್ಲಿಶ್ ಮಾಧ್ಯಮ ಶಾಲೆಗಳಲ್ಲಿ ಎರಡನೆಯ ಭಾಷೆಯಾಗಿದ್ದರೂ ಕನ್ನಡ/ಪ್ರಾದೇಶಿಕ ಭಾಷೆಯನ್ನು ಕಲಿಸುವಲ್ಲಿನ ಅವಜ್ಞೆ ಮತ್ತು ಇಂಗ್ಲಿಶ್ ಮೇಲಿನ ಅನಗತ್ಯ ಒತ್ತಿನಿಂದ ಮಕ್ಕಳಲ್ಲಿ ಕನ್ನಡ ಕಲಿಕೆ ಸಮರ್ಪಕವಾಗಿಲ್ಲ.  ಸರಕಾರಿ / ಕನ್ನಡ ಮಾಧ್ಯಮ ಶಾಲೆಗಳಲ್ಲಿ ಜಾಗತಿಕ ಭಾಷೆಯಾದ ಇಂಗ್ಲಿಶ್ ಕಲಿಕೆ ತೀರಾ ಕೆಳಮಟ್ಟದಲ್ಲಿದ್ದು ಇಂದಿನ ಅಗತ್ಯವನ್ನು ಪೂರೈಸಲು ಆಗುತ್ತಿಲ್ಲ. ಮಕ್ಕಳ ಕೊರತೆಯಿಂದ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹೊಸ ಬೆಳವಣಿಗೆಯೂ ಆರಂಭವಾಗಿದೆ. ನ್ಯಾಯಾಲಯ ಕೂಡ ತಂದೆತಾಯಿ/ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಶ್ ಕಲಿಸುವ ಹಕ್ಕನ್ನು ಎತ್ತಿಹಿಡಿದಿದೆ. ಶಾಲಾ ಮಟ್ಟದ ಭಾಷಾ ಕಲಿಕೆಯಲ್ಲಿನ ಇಂಥ ಸಂಗತಿಗಳಿಂದ ಮತ್ತೆ ಮತ್ತೆ ಭಾಷಾ ನೀತಿ ಪರಿಶೀಲನೆಗೆ ಒಳಗಾಗುತ್ತಿದೆ. ಇದಕ್ಕೆ ಕಾರಣಗಳೇನು ಮತ್ತು ಅನುಸರಿಸಬೇಕಾದ ನೀತಿ ಯಾವುದಿರಬೇಕು?

ಬ್ರಿಟಿಷರು ಆರಂಭಿಸಿದ ಶಾಲೆಗಳ ಉದ್ದೇಶವೇ ಭಾರತೀಯರು ಭಾರತೀಯರಂತೆ ಆಲೋಚಿಸಬಾರದು ಎಂಬುದಾಗಿತ್ತು. ಹಾಗಾಗಿ ಇಂಗ್ಲಿಶ್ ಶಾಲೆಗಳು ಇಂಗ್ಲಿಶ್ ಭಾಷೆಯೊಂದಿಗೆ ಇಂಗ್ಲಿಶ್ ವ್ಯವಹಾರಿಕ ಬುದ್ಧಿ, ವಿಜ್ಞಾನ, ಸಂಸ್ಕೃತಿ ಹಾಗೂ ಜೀವನ ಕ್ರಮವನ್ನೂ ಕಲಿಸಲು ಉತ್ಸುಕವಾಗಿತ್ತು. ಈ ಧೋರಣೆ ಆರಂಭಿಕ ಇಂಗ್ಲಿಶ್ ಶಾಲೆಗಷ್ಟೆ ಸೀಮೀತವಾಗಿರದೆ ಇಂದಿನ ಇಂಗ್ಲಿಶ್ ಮಾಧ್ಯಮ ಶಾಲೆಗೂ ಅನ್ವಯವಾಗುತ್ತದೆ. ಆದರೆ ಈ ವಾಸ್ತವ ಇಂಗ್ಲಿಶ್ ನಿಂದ ಉಪಕೃತರಾದವರಿಗೆ ಇಷ್ಟವಾಗುವುದಿಲ್ಲ. ಮಿಶನರಿ ಸಂಸ್ಥೆಗಳ ಬಿಗಿ ಹಿಡಿತದಿಂದಾಚೆಗೆ ಇಂಗ್ಲಿಶ್ ಮಾಧ್ಯಮ ಶಾಲೆಗಳು ಇಂದು ಬೆಳೆದಿದ್ದರೂ ಮೂಲ ಧೋರಣೆಯಲ್ಲಿ ವ್ಯತ್ಯಾಸ ಇಲ್ಲದಿರುವುದು ಅಚ್ಚರಿಯೇ ಸರಿ. ಏಕಾಕೃತಿ ಮಾದರಿ ಸಂಸ್ಕೃತಿಯನ್ನು ಆದರ್ಶವಾಗಿರಿಸಿಕೊಂಡಿರುವ ಇವು ಭಾರತದ ದೇಶೀಯ ಬಹುಭಾಷೆಗಳು ಮತ್ತು ಬಹು ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳುವ ಹಾದಿಯಲ್ಲೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿವೆ. ಆದರೂ ಜಾಗತಿಕ ಭಾಷೆಯಾಗಿ, ವ್ಯವಹಾರ ಭಾಷೆಯಾಗಿ, ಜ್ಞಾನ ಭಾಷೆಯಾಗಿ, ಶ್ರೀಮಂತ ಸಾಹಿತ್ಯ ಪಡೆದಿರುವ ಭಾಷೆಯಾಗಿ ತನ್ನದೇ ವಿಶಿಷ್ಟ ಸ್ಥಾನ ಹೊಂದಿರುವ ಇಂಗ್ಲಿಶ್ ನ ಅಗತ್ಯತೆ ಭಾರತೀಯರಿಗೆ ಖಂಡಿತ ಇದೆ. ಅದರ ಸ್ವರೂಪ ಯಾವ ಬಗೆಯದಾಗಿರಬೇಕು ಎಂಬುದರ ಬಗ್ಗೆ ನಮ್ಮಲ್ಲಿ ಖಚಿತತೆ ಇಲ್ಲ. ಇಂಗ್ಲಿಶ್ ಕಲಿಕೆಯ ಲಾಭವನ್ನು ಭಾರತೀಯ ಸಮಾಜದ ಮೇಲು ಜಾತಿಗಳು ಪಡೆದಿರುವುದು ನಿಜ. ಹಾಗೆಯೇ ಕೆಳ ಜಾತಿಗಳೂ ಇಂಗ್ಲಿಶ್ ಕಲಿಕೆಯ ಲಾಭವನ್ನು ಪಡೆಯಲು ಹಕ್ಕುಳ್ಳವರಾಗಿ ತಮ್ಮ ಬೇಡಿಕೆಯನ್ನಿಟ್ಟಿರುವುದು ಸಾಮಾಜಿಕ ನ್ಯಾಯಕ್ಕೆ ತಕ್ಕುದಾಗಿದೆ. ಈ ಬೆಳವಣಿಗೆ ಇಂಗ್ಲಿಶ್ ಕಲಿಕೆ ಭಾರತೀಯರಿಗೆ ಅನಿವಾರ್ಯವಾಗಿರುವುದರ ಸೂಚಕವಾಗಿದೆ. ಇಂಗ್ಲಿಶ್ ಕಲಿಕೆಯ ಲಾಭ ನಷ್ಟಗಳಾಚೆಗೆ ನಿಂತು ಆಧುನಿಕ ಯುಗದಲ್ಲಿ ಆ ಭಾಷೆಯ ಮೂಲಕ ನಮ್ಮನ್ನು ಗುರುತಿಸಿಕೊಳ್ಳುವ ಹಂತ ತಲುಪಿದ್ದೇವೆ. ಇಂದು ಇಂಗ್ಲಿಶ್ ನಮ್ಮ ಅಭಿವೃದ್ಧಿಯ ಭಾಗವಾಗಿದೆ. ಇದರಿಂದ ನಮ್ಮ ಮನೆ ಭಾಷೆ/ತಾಯಿ ಭಾಷೆ ಮತ್ತು ಬೀದಿ ಭಾಷೆಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿದ್ದೇವೆಯೆ?

ಭಾರತೀಯರಲ್ಲಿ ಏಕ ಭಾಷಿಕರು ದ್ವಿಭಾಷಿಕರು ಮತ್ತು ಬಹುಭಾಷಿಕರು ಎಂಬ ಗುಂಪುಗಳನ್ನು ಮಾಡಿದ್ದಲ್ಲಿ ಏಕಭಾಷಿಕರಿಗಿಂತ ದ್ವಿಭಾಷಿಕರು ಮತ್ತು ಬಹುಭಾಷಿಕರು ಬಹುಸಂಖ್ಯಾತರಾಗಿ ಹೊರಹೊಮ್ಮುತ್ತಾರೆ. ಭಾರತ ಬಹು ಸಂಸ್ಕೃತಿ ಮತ್ತು ಭಾಷಿಕ ಸಮುದಾಯಗಳ ನಾಡು. ಅನಿವಾರ್ಯವಾಗಿ ಮನೆ ಭಾಷೆಯೊಂದಿಗೆ ಬೀದಿ ಭಾಷೆಯನ್ನು ನಾವು ಕಲಿತಿದ್ದೇವೆ. ಭಾರತದ ಯಾವುದೇ ರಾಜ್ಯದ ಜನ ದೇಶದ ಯಾವುದೇ ಮೂಲೆಯಲ್ಲಿ ನೆಲೆಸುವ ಮತ್ತು ವ್ಯಾಪಾರ ವ್ಯವಹಾರ ವೃತ್ತಿ ನಡೆಸುವ ಹಕ್ಕುಳ್ಳುವರಾಗಿದ್ದಾರೆ. ಆದ್ದರಿಂದ ದ್ವಿಭಾಷಿಕತೆ ರಾಜ್ಯಗಳ ಗಡಿ ನಾಡುಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆನರಾ ಬ್ಯಾಂಕು ಮತ್ತು ಉಡುಪಿ ಹೋಟೆಲುಗಳನ್ನು ನಾವು ದೇಶದ ಯಾವುದೇ ಮೂಲೆಯಲ್ಲೂ ಕಾಣಬಹುದು, ಕನ್ನಡ ಭಾಷಿಕರನ್ನೂ ಗುರುತಿಸಬಹುದು. ಇಂದು  ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳೂ ದ್ವಿಭಾಷಿಕ/ಬಹುಭಾಷಿಕ ನೆಲೆಗಳಾಗಿವೆ. ಈ ಮಾತು ಎಲ್ಲ ಜಿಲ್ಲಾ  ಮತ್ತು ತಾಲೂಕು ಕೇಂದ್ರಗಳಿಗೂ ಅನ್ವಯಿಸುತ್ತದೆ.  ಕರ್ನಾಟಕದಲ್ಲಿರುವ ಮಲಯಾಳಿಗಳು, ತಮಿಳಿಗರು, ತೆಲುಗರು, ಮರಾಟಿಗರು, ರಾಜಸ್ತಾನಿಗಳು, ಪಂಜಾಬಿ, ಹಿಂದಿ, ಉರ್ದು ಭಾಷಿಕರು, ಕನ್ನಡಿಗರೇ ಆದ ಕೊಡಗರು, ಬಂಟರು, ಕೊಂಕಣಿಗರು, ಕರ್ನಾಟಕದ ಮೂಲನಿವಾಸಿಗಳಾದ ವಿವಿಧ ಭಾಷಿಕ ಬುಡಕಟ್ಟು ಜನಾಂಗಗಳು ಮೊದಲಾದವರು ದ್ವಿಭಾಷಿಕ/ಬಹುಭಾಷಿಕ ಸಮುದಾಯಗಳಾಗಿವೆ. ಇದು ದೇಶದ ಪ್ರತಿಯೊಂದೂ ರಾಜ್ಯದಲ್ಲಿ ಕಂಡುಬರುವ ಸ್ಥಿತಿಯೇ ಆಗಿದೆ. ಇವರೆಲ್ಲ ಪ್ರಾದೇಶಿಕ ಭಾಷೆಯನ್ನು ಹಣ ಸಂಪಾದನೆಗೊ, ತಾನು ಜೀವಿಸುವ ಪ್ರದೇಶದ ಸಾರ್ವಜನಿಕ ಸಂಪರ್ಕಕ್ಕೊ ಕಲಿಯಲೇಬೇಕು ಕಲಿತಿರುತ್ತಾರೆ. ತಮ್ಮ ಮಕ್ಕಳನ್ನು ಪ್ರಾದೇಶಿಕ ಭಾಷೆಯ ರಾಜ್ಯಗಳ ನಿಯಮದಡಿ ಆಯಾ ಭಾಷೆಗಳನ್ನು ಕಲಿಸಲೇಬೇಕು. ಅದರೊಂದಿಗೆ ರಾಷ್ಟ್ರೀಯ ಭಾಷೆಯಾಗಿ ಹಿಂದಿಯನ್ನೂ ಅಂತಾರಾಷ್ಟ್ರೀಯ ಭಾಷೆಯಾಗಿ ಇಂಗ್ಲಿಶನ್ನೂ ಕಲಿಯಬೇಕು. ಈ ಸಮುದಾಯಗಳಿಗೆ ತಮ್ಮ ಮನೆ ಭಾಷೆಯನ್ನು ಕಲಿಯುವ ಅವಕಾಶ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕಡೆಗಣಿಸಲಾಗಿದೆ. ಅನ್ಯ ಭಾಷಿಕ ರಾಜ್ಯಗಳಲ್ಲಿ ಮನೆ ಭಾಷೆಯನ್ನಾಗಿ ಉಳಿಸಿಕೊಂಡ ಜನ ಸಮುದಾಯಗಳು ಸ್ವಭಾಷಾ ಜನ ಸಂಪರ್ಕದಿಂದ, ಸಂಸ್ಕೃತಿಯಿಂದ ಮತ್ತು ಭಾಷೆಯಿಂದ ಪ್ರತ್ಯೇಕಿಸಲ್ಪಟ್ಟ ದ್ವೀಪವಾಗಿ ಉಳಿದಿವೆ. ಪ್ರತಿಯೊಬ್ಬರಿಗೂ ತಮ್ಮ ಸ್ವಭಾಷೆ/ತಾಯಿಭಾಷೆಯನ್ನು ಆಮೂಲಾಗ್ರವಾಗಿ ಕಲಿಯುವುದು ಪ್ರಕೃತಿ ಸಹಜ ಹಕ್ಕಾಗಿದೆ, ಅಲ್ಲವೆ?
ಹಿಂದಿ ಭಾಷಿಕರ ರಾಷ್ಟ್ರ ಭಾಷೆಯ ಹೆಮ್ಮೆಯನ್ನು ಗೌರವಿಸಲು ದೇಶದಾದ್ಯಂತ ಹರಡಿರುವ ವಿವಿಧ ಭಾಷಿಕ ಸಮುದಾಯಗಳು ಹಿಂದಿಯನ್ನು ಅನಗತ್ಯವಾಗಿ ಕಲಿಯುವ ಬದಲು ತಮ್ಮ ಸ್ವಭಾಷೆಯನ್ನು ಕಲಿಯುವುದು ಹೆಚ್ಚು ತರ್ಕಬದ್ಧವಲ್ಲವೆ?

ಆಗ ಪ್ರಾದೇಶಿಕ ಭಾಷೆಯನ್ನು ಮೊದಲ ಭಾಷೆಯಾಗಿಯೂ, ಸ್ವಭಾಷೆ/ಮನೆಭಾಷೆ/ತಾಯಿಭಾಷೆಯನ್ನು ಎರಡನೆಯ ಭಾಷೆಯಾಗಿಯೂ ಮತ್ತು ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಶನ್ನು ಮೂರನೆಯ ಭಾಷೆಯಾಗಿ ಕಲಿಯುವುದು ಹೆಚ್ಚು ಸೂಕ್ತ..
ಭಾರತ ಸರಕಾರ ಮಾನ್ಯ ಮಾಡಿರುವ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ.ಹಿಂದಿ ಭಾಷಿಕರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಾದೇಶಿಕ ಮೊದಲ ಭಾಷೆಯಾಗಿಯೂ ಇತರ ಭಾಷಿಕ ರಾಜ್ಯಗಳಲ್ಲಿ ಎರಡನೆಯಭಾಷೆಯಾಗಿಯೂ ಕಲಿಯುವುದು ಅಪಮಾನಕರವೇನಲ್ಲ. ಇತರ ಭಾಷೆಗಳೊಂದಿಗೆ ಸಮಾನವಾಗಿ  ಹಿಂದಿಯನ್ನು ಕಲಿಯಲು ಅವಕಾಶ ಮಾಡಿಕೊಡುವುದು ಯಾವ ರೀತಿಯಲ್ಲೂ ಹಿಂದಿಯ ಸ್ಥಾನವನ್ನು ಕಸಿದುಕೊಂಡಂತಲ್ಲ.

ಮೊದಲ ಭಾಷೆಯಾದ ಪ್ರಾದೇಶಿಕ ಭಾಷೆ ಆಯಾ ರಾಜ್ಯದ ಆಡಳಿತ ಭಾಷೆ ಮಾತ್ರವಾಗಿರದೆ ಆಯಾ ರಾಜ್ಯದ ಸಾಹಿತ್ಯ, ಸಂಸ್ಕೃತಿ, ವ್ಯವಹಾರ ಮಾಧ್ಯಮವೂ ಆಗಿರುತ್ತದೆ. ಈ ಎಲ್ಲವೂ ಆಯಾ ರಾಜ್ಯ ಭಾಷೆಯಲ್ಲಿ ನಡೆಯಬೇಕಿರುವುದರಿಂದ ಆ ರಾಜ್ಯದ ಎಲ್ಲ ಭಾಷಿಕ ಜನ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಆಮೂಲಾಗ್ರವಾಗಿ ಕಲಿಯಲೇಬೇಕು. ಪ್ರಾದೇಶಿಕ ಭಾಷೆಗೆ ಶಾಲಾ ಕಲಿಕೆಯಲ್ಲಿ ಅಗ್ರಪಟ್ಟ ದೊರಕಲೇಬೇಕು.ಎರಡನೆಯ ಭಾಷೆಯಾದ  ಸ್ವಭಾಷೆ/ಮನೆ ಭಾಷೆ/ತಾಯಿ ಭಾಷೆ ಪ್ರಾದೇಶಿಕ ಭಾಷೆಯಷ್ಟೆ ಮುಖ್ಯ. ಈ ಭಾಷಿಕ ಸಮುದಾಯಗಳು ದೇಶದ ಮುಖ್ಯ ಭಾಷಿಕ ವಾಹಿನಿಯಾಗಿದ್ದರೂ ಅನ್ಯ ಕಾರಣಗಳಿಂದ ಬೇರೆ ಭಾಷೆಯ ರಾಜ್ಯಗಳಲ್ಲಿ ನೆಲೆಸಿದವರು.ಇವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅನ್ಯ ಭಾಷಿಕ ಪ್ರಧಾನ ಸಮುದಾಯದ ನಡುವೆಯೂ ಉಳಿಸಿ ಬೆಳೆಸಿಕೊಳ್ಳುವ ಅಗತ್ಯವಿದೆ. ಯಾವುದೇ ರಾಜ್ಯದಲ್ಲೂ ದೇಶದ ಇತರ ರಾಜ್ಯಗಳ ಜನ ಸಮುದಾಯ ಪರತಂತ್ರರಾಗಿರದೆ ತಮ್ಮ ಸೋದರ ಭಾಷೆಯೊಂದಿಗೆ  ಸಮಾನವಾಗಿರತಕ್ಕ ಪರಿಸರವನ್ನು ಶಾಲಾ ಕಲಿಕೆಯಲ್ಲಿ ಕಲ್ಪಿಸುವುದು ದೇಶದ ಗಣತಂತ್ರ ಕಲ್ಪನೆಗೆ ತಕ್ಕುದಾದುದು. ಮನೆ ಭಾಷೆಯನ್ನು ಶಾಲಾ ಕಲಿಕೆಯಲ್ಲಿ ಎರಡನೆಯ ಭಾಷೆಯನ್ನಾಗಿ ಪಡೆದವರು ತಮ್ಮ ಸ್ವಭಾಷಾ ಸಾಹಿತ್ಯ ಸಂಸ್ಕೃತಿಯನ್ನು ಅರಿಯಲು ಸೂಕ್ತವಾಗಿರಬೇಕು.
ಇನ್ನು ಮೂರನೆಯ ಭಾಷೆಯಾಗಿ ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಶಿನ ಕಲಿಕೆ ಇರಬೇಕು. ಇದನ್ನು ಕಲಿಯುವ  ಧ್ಯೇಯೋದ್ದೇಶಗಳು ಆ ಭಾಷೆಯಲ್ಲಿ ಸಮರ್ಪಕವಾಗಿ ವ್ಯವಹಾರ ನಡೆಸಲು ಮತ್ತು ಸಂಪರ್ಕ ಭಾಷೆಯಾಗಿ ಬಳಸಲು ತಕ್ಕ ಪರಿಣತಿ ನೀಡುವಂತಿರಬೇಕು  ಈಗ ಎದ್ದಿರುವ ಇಂಗ್ಲಿಶ್ ಮಾಧ್ಯಮದ ಅಗತ್ಯದ ಹುಯಿಲು ಆ ಭಾಷೆ ಕಲಿಕೆಯ ವಂಚಿತ ಸ್ಥಿತಿ ತಂದುಕೊಡುವ ಪಾರಂಪರಿಕ ಬಲಹೀನ ಸ್ಥಿತಿಯಿಂದ ಹುಟ್ಟಿದುದು. ಮೂರನೆಯ ಭಾಷೆಯಾಗಿ ಇಂಗ್ಲಿಶನ್ನು ಕಲಿತರೂ ಅದು ನಮ್ಮ ಅಗತ್ಯಗಳೆಲ್ಲವನ್ನು ಪೂರೈಸುವಂತಿರಬೇಕು. ಇಂಗ್ಲಿಶ್ ಅನ್ನು ಜ್ಞಾನದ ಭಾಷೆಯಾಗಿ, ಸಾಹಿತ್ಯದ ಭಾಷೆಯಾಗಿ ಕಲಿಯುವರಿಗೆ ಉನ್ನತ ಶಿಕ್ಷಣದಲ್ಲಿ ಮುಕ್ತ ಅವಕಾಶ ಇರಬೇಕು. ಆದರೆ ಇಂಗ್ಲಿಶ್ ಮಾಧ್ಯಮದ ಪರವಾದ ಅಂತಾರಾಷ್ಟ್ರೀಯ ಮಟ್ಟದ ಕಾಣದ ಕೈಗಳ ಲಾಬಿಗೆ ಮಣಿದು ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಶ್ ಮಾಧ್ಯಮವನ್ನು ಅಳವಡಿಸಿದರೆ ಅನರ್ಥವಾದಂತೆಯೆ ಸರಿ. ಇದರಿಂದ ದೇಶದ ಬಹು ಭಾಷಿಕ ಸಂಸ್ಕೃತಿಯ ಸ್ಥಾನದಲ್ಲಿ ಇಂಗ್ಲಿಶ್ ನ ಏಕಸಂಸ್ಕೃತಿಯನ್ನು ಮಾತ್ರ ನೆಲೆಗೊಳಿಸಲು ಸಹಾಯಕವಾಗುತ್ತದೆ.  ಇಂಗ್ಲಿಶಿನಲ್ಲಿ ವ್ಯವಹಾರ ಮಾಡಲು ಮತ್ತು ಸಂಪರ್ಕ ಮಾಧ್ಯಮದಲ್ಲಿ ಸುಗಮತೆ ಸಾಧಿಸಲು ಕಲಿಸಲಾಗುವ ಮೂರನೆಯ ಭಾಷೆಯ ಗುಣಮಟ್ಟ ಪರಿಪೂರ್ಣವಾಗಿರಬೇಕು. ಈ ಹಿಂದೆ ಹೇಳಿದಂತೆ ಅದು ಭಾರತದ ಬಹು ಭಾಷಿಕ ಸಮುದಾಯಗಳ ಬಹುಮುಖಿ ಅಗತ್ಯಗಳನ್ನು ಪೂರೈಸಬೇಕು. ಆಗ ನಮ್ಮ ಅಗತ್ಯದ ಇಂಗ್ಲಿಶ್ ಭಾಷೆ ಮತ್ತು ಇಂಗ್ಲಿಶ್ ಮಾಧ್ಯಮದ ಅನಗತ್ಯತೆ ನಡುವಿನ ಅಂತರ ನಮಗೆ ಅರ್ಥವಾಗುತ್ತದೆ. ಜಾಗತಿಕ ಭಾಷೆಯಾಗಿರುವ ಇಂಗ್ಲಿಶ್ ನ ಶಕ್ತಿ ಸಾಮರ್ಥ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಬಳಕೆಯ ವ್ಯಾಪ್ತಿ ಈಗಲೂ ಹೆಚ್ಚುತ್ತಿದೆ. ನಮ್ಮ ಆ ಅಗತ್ಯವನ್ನು ಪೂರೈಸದ ಇಂಗ್ಲಿಶ್ ನ ಅಸಮರ್ಪಕ ಕಲಿಕೆಯಿಂದ ಇಂಗ್ಲಿಶ್ ಮಾಧ್ಯಮದ ಬೇಡಿಕೆ ದಿನೇ ದಿನೇ ಹೆಚ್ಚುತ್ತದೆ. ಆಗ ಪ್ರಾಥಮಿಕ ಹಂತದ ಇಂಗ್ಲಿಶ್ ಮಾಧ್ಯಮದಿಂದ ಇಂಗ್ಲಿಶ್ ಸಂಸ್ಕೃತಿಯ ಪಾರಮ್ಯ ಸಾಧನೆಗೆ ನಾವೇ ರತ್ನಗಂಬಳಿಯನ್ನು ಹಾಸಿಕೊಟ್ಟಂತಾಗುತ್ತದೆ. ಇದರಿಂದ ಭಾರತೀಯರು ತಮ್ಮ ದಾಸ್ಯ ಮನೋಭಾವವನ್ನು  ಸ್ವತಂತ್ರ ಮನೋಭಾವವಾಗಿ ಬೆಳೆಸಿಕೊಳ್ಳಲು ಮುಂದಿನ ಹಲವು ಶತಮಾನಗಳ ಕಾಲ ಕಾಯಬೇಕಾಗಿ ಬರಬಹುದು. 

   
   

ಸೋಮವಾರ, ಜೂನ್ 20, 2011

ಪಕ್ಷ ರಾಜಕಾರಣ ಮತ್ತು ಭ್ರಷ್ಟತೆ

ಭ್ರಷ್ಟಾಚಾರ ವಿರುದ್ಧದ ಹುಸಿ ಚಳವಳಿ ಮುಂದುವರೆದಿದೆ. ಮರಿಗಾಂಧಿಯ ಪೋಸಿನಲ್ಲಿರುವ ಅಣ್ಣಾ ಹಜಾರೆ ಮಾತಿಗೆ ಕೇಂದ್ರದಲ್ಲಿರುವ ಕಾಂಗ್ರೆಸ್ ಮುಂದಾಳತ್ವದ ಯುಪಿಎ ಸರಕಾರ ಗೌರವ ಕೊಡುತ್ತಿರುವಂತೆ ತೋರಿಸಿಕೊಳ್ಳುತ್ತಿದೆ. ಬಾಬಾ ರಾಮದೇವ್ ಬಗೆಗಿನ ಅನುಮಾನಗಳು ಖಚಿತಗೊಳ್ಳುತ್ತಿವೆ.ಕರ್ನಾಟಕದಲ್ಲಿ ಮೂರೂ ರಾಜಕೀಯ ಪಕ್ಷಗಳು ತಾವೆಲ್ಲರೂ ಭ್ರಷ್ಟಾಚಾರ ವಿರೋಧಿಗಳು ಮತ್ತು ತಮಗಿಂತ ಅನ್ಯ ಪಕ್ಷಗಳು ಹೆಚ್ಚು ಭ್ರಷ್ಟರು ಎಂದು ಜನರನ್ನು ಸುಳ್ಳು ಸುಳ್ಳೇ ನಂಬಿಸುವ ಪೈಪೋಟಿಯಲ್ಲಿ ಜಿದ್ದಿಗೆ ಬಿದ್ದಿವೆ. ಈ ನಡುವೆ ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ವಿರೋಧಿ ಚಳವಳಿಯ ಸದಾಶಯಕ್ಕೆ ಮಸಿ ಬಳಿಯಲು ಇಡೀ ಚಳವಳಿಯಲ್ಲಿ ನಂಬಿಕೆಗೆ ಅರ್ಹರಾದ ನ್ಯಾ.ಸಂತೋಷ ಹೆಗಡೆಯವರ ಮೇಲೆ ರಾಜಕೀಯ ಪ್ರೇರಿತ ಆರೋಪ ಮಾಡಿದ್ದಾರೆ. ಇವೆಲ್ಲ ಪಕ್ಷ ರಾಜಕಾರಣದ ಭಾಗವಾಗಿದೆ.

ಆಧುನಿಕ ಭಾರತದ ರಾಜಕೀಯ ಕ್ಷೇತ್ರದಲ್ಲಿ ಪಕ್ಷ ರಾಜಕಾರಣ ಅಧಿಕಾರ ರಾಜಕಾರಣದ ಅಂಗವಾಗಿ ಒಡಮೂಡಿದೆ. ಭ್ರಷ್ಟತೆ ಇವೆರಡೂ ಅಂಗಗಳ ಮೂಲಾಧಾರವಾಗಿದೆ. ಸ್ವಾತಂತ್ರಪೂರ್ವ ಮತ್ತು ಸ್ವಾತಂತ್ರೋತ್ತರ ರಾಜಕೀಯ ಕ್ಷೇತ್ರವನ್ನು ಸಂಪೂರ್ಣ ಆವರಿಸಿಕೊಂಡಿರುವ ಕಾಂಗ್ರೆಸ್ ತಾನು ಪಾಲಿಸಿಕೊಂಡು ಬಂದಿರುವ ನೀತಿಯನ್ನು ದೇಶದ ಇತರ ಪಕ್ಷಗಳು ಅನಿವಾರ್ಯವಾಗಿ ಅನುಸರಿಸುವಂಥ ದಟ್ಟ ಪ್ರಭಾವ ಹುಟ್ಟುಹಾಕಿದೆ.  ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಪರಂಪರೆಯಲ್ಲಿ ಮೂಡಿದ ಕೆಲವು ಹೆಜ್ಜೆ ಗುರುತುಗಳನ್ನು ಗಮನಿಸಬಹುದು.

ಮೊದಲ ಹೆಜ್ಜೆ?
ರಾಜ್ಯ ವಿಧಾನಸಭೆಯ ಕೆಳಮನೆ, ಮೇಲ್ ಮನೆ ಮತ್ತದರ ಸದಸ್ಯ ಸಂಖ್ಯೆಯನ್ನು ನಿರ್ಣಯಿಸುವಾಗ ನೆಹರೂ ಅವರಿಗೆ ದೇಶದ ಸ್ವಾತಂತ್ರಕ್ಕೆ ಕಷ್ಟಪಟ್ಟ ಹೋರಾಟಗಾರರಿಗೆ ಅಧಿಕಾರದ ಸ್ಥಾನಗಳಲ್ಲಿ ಅನುಕೂಲವಾಗಿರಬೇಕೆಂಬ ಒಳಉದ್ದೇಶವಿತ್ತು; ಅದಕ್ಕಾಗಿ ಹೆಚ್ಚು ಸದಸ್ಯ ಸಂಖ್ಯಾಬಲವುಳ್ಳ ವಿಧಾನ ಮಂಡಲವನ್ನು ರಚಿಸಿದರು ಎಂದು ಹಿರಿಯರು ಹೇಳುತ್ತಿದ್ದರು. ಈ ಮಾತು ಐತಿಹಾತಿಸಿಕ ಅಂಶಗಳಿಂದ ಕೂಡಿದ್ದಲ್ಲಿ ಪಕ್ಷ ಉಳಿಸುವ ಮತ್ತು ಬೆಳೆಸುವ ದೃಷ್ಟಿಯಿಂದ ಸರಿಯಾದ ಕ್ರಮವಾಗಿ ಅಂದಿಗೆ ಕಂಡಿರಬಹುದು. ಆಡಳಿತರೂಢ ಪಕ್ಷದ ನಾಯಕರಾಗಿ ನೆಹರೂ ತಮ್ಮ ಪಕ್ಷ ಮತ್ತು ಸರಕಾರದ ಬೇರುಗಳನ್ನು ಭದ್ರ ಪಡಿಸಿಕೊಂಡಿದ್ದಾರೆ. ಇದು ಅಧಿಕಾರದಲ್ಲಿರುವ ಪಕ್ಷ ತಾನು ಮುಂದೆ ಯಾವುದೇ ಸಂದರ್ಭದಲ್ಲೂ ಅಧಿಕಾರದಲ್ಲಿ ಮುಂದುವರೆಯಲು ತಕ್ಕ ವೇದಿಕೆ ನಿರ್ಮಿಸಿಕೊಂಡ ಕ್ರಮ. ಹಾಗಾಗಿ ಪ್ರಜಾಪ್ರಭುತ್ವದ ಮೂಲ ಶಕ್ತಿಯಾದ ಜನತೆಯ ಅಭಿಪ್ರಾಯ ಮತ್ತು ಹಿತಾಸಕ್ತಿಯನ್ನು ಹಿಂದಿಕ್ಕಲು ಅನುಸರಿಸಿದ ಮೊದಲ ಹೆಜ್ಜೆಯಾಗಿದೆ.  ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡ ಸ್ವತಂತ್ರ ಭಾರತದ ಮೊದಲ ಘಟ್ಟದಲ್ಲೆ ನಡೆದುಹೋದ ಪ್ರಜಾಪ್ರಭುತ್ರ ವಿರೋಧಿ ನಡೆಯೂ ಆಗಿದೆ.

ಸಮಾಜಶಾಸ್ತ್ರದಲ್ಲಿ ಜಾತಿ ಮತ್ತು ರಾಜಕಾರಣ ಕುರಿತ ನಿರೂಪಣೆ
ನನ್ನ ಬಿಎ ತರಗತಿಯಲ್ಲಿ ಸಮಾಜಶಾಸ್ತ್ರ ಪಠ್ಯಕ್ರಮ ಅಧ್ಯಯನ ಮಾಡುವಾಗ ಮತ್ತಷ್ಟು ಸಂಗತಿಗಳು ತಿಳಿದುಬಂದವು..  ಆಂಧ್ರಪ್ರದೇಶದಲ್ಲಿ ಮೊದಲಿಗೆ ಸಿಪಿಐ ಸರಕಾರವಿತ್ತು. ನಂತರ ಅಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಾಟೀಲ ಎಂಬುವರಿಗೆ ಚುನಾವಣಾ ಉಸ್ತುವಾರಿ ವಹಿಸಿತು. ಅವರು ಆಂಧ್ರದ ಚುನಾವಣಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯಾ ಕ್ಷೇತ್ರದ ಪ್ರಬಲ ಜಾತಿ ಸಮುದಾಯದಿಂದ ಆರಿಸಿದರು. ಹೀಗೆ ಮೊದಲ ಬಾರಿಗೆ ಕಾಂಗ್ರೆಸ್ ಚುನಾವಣೆಯನ್ನು ಜಾತಿ ಆಧಾರದ ಮೇಲೆ ಎದುರಿಸಿತು. ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನಡೆಸಿದ ಈ ಪ್ರಯೋಗದಲ್ಲಿ ಅದ್ಭುತ ಫಲಿತಾಂಶವನ್ನೆ ಪಡೆಯಿತು.ಆಂಧ್ರಪ್ರದೇಶದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿಯಿತು..   

ಮತದಾರರ ಮಗ್ಧತೆಯನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್, ಜಾತಿ ಅಭಿಮಾನವನ್ನು ತನ್ನ ಪಕ್ಷದ ಮತಗಳನ್ನಾಗಿ ಪರಿವರ್ತನೆ ಮಾಡಿಕೊಂಡಿತು. ಜಾತಿಯನ್ನು ಮೊದಲ ಬಾರಿಗೆ ಚುನಾವಣಾ ರಾಜಕೀಯದಲ್ಲಿ  ಬಳಸಿ ಮತದಾರರ ಮನಸ್ಸನ್ನು ಭ್ರಷ್ಟಗೊಳಿಸಿತು. ಜಾತಿ ಆಧಾರಿತ ರಾಜಕಾರಣವನ್ನು ಆರಂಭಿಸಿ ಸಾಮಾಜಿಕ ಶ್ರೇಣೀಕರಣದ ಬೇರುಗಳನ್ನು ಮತ್ತಷ್ಟು ಭದ್ರಪಡಿಸಿತು. ಮಾತ್ರವಲ್ಲ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ನಡುವಿದ್ದ ಅಂತರವನ್ನು ಅಳಿಸಿಹಾಕಿತು. ಸಾಮಾಜಿಕ ಜೀವನವನ್ನು ಮತ್ತಷ್ಟು ಜಟಿಲಗೊಳಿಸಿದ ಈ ರಾಜಕೀಯ ನಡೆ, ಅಂತಿಮವಾಗಿ ಚುನಾವಣೆಯಲ್ಲಿ ಅನ್ಯ ಪಕ್ಷಗಳ ಮೇಲೆ ಕಾಂಗ್ರೆಸ್ ಮೇಲುಗೈ ಸಾಧಿಸಲು ನೆರವಾಯಿತು.

ಮತ್ತೆ ಮತ್ತೆ ಕಿವಿಗೆ ಬಿದ್ದ ಕೇರಳದ ನಿದರ್ಶನ
ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಯಾಗಿದ್ದ  ಇಂದಿರಾಗಾಂಧಿ ತಮ್ಮ ಬೇಡಿಕೆಯನ್ನು ಅಂದಿನ ಪ್ರಧಾನಿ ನೆಹರೂ ಮುಂದಿಟ್ಟರು. ರಾಜಕೀಯ ಸಾಮರ್ಥ್ಯವನ್ನು ಸಾಬೀತು ಪಡಿಸದೆ ಪಕ್ಷದ ಕಾರ್ಯದರ್ಶಿ ಹುದ್ದೆ ಪಡೆಯಲು ಸಾಧ್ಯವಿಲ್ಲವೆಂದು ನೆಹರೂ ತಿಳಿಸಿದರು. ಆಗ ಕೇರಳದಲ್ಲಿ  ಇ ಎಂ ಎಸ್ ನಂಬೂದರಿಪಾಡ್ ನೇತೃತ್ವದ ಕಾಂಗ್ರೆಸ್ಸೇತರ ಸರಕಾರ ಆಡಳಿತದಲ್ಲಿತ್ತು. ಅಲ್ಲಿನ ಸಿಪಿಎಂ ಸರಕಾರವನ್ನು ಉರುಳಿಸಿ ಕಾಂಗ್ರೆಸ್ ಸರಕಾರ ಸ್ಥಾಪಿಸಿದಲ್ಲಿ ಇಂದಿರಾಗಾಂಧಿಗೆ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಹುದ್ದೆ ನೀಡುವ ಭರವಸೆ ನೀಡಿದರು.

ಇದಾದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿ ಕೇರಳಕ್ಕೆ ಭೇಟಿ ನೀಡಿದರು. ಅವರು ಮರಳಿ ದೆಹಲಿ ತಲುಪುವ ವೇಳೆಗೆ ಕೇರಳದ  ಆಡಳಿತರೂಢ ಸಿಪಿಎಂ ಪಕ್ಷದ ಕೆಲವು ಎಂ ಎಲ್ ಎ ಗಳು ಸರಕಾರದ ವಿರುದ್ಧ ಬಂಡೆದ್ದು ಪಕ್ಷಕ್ಕೆ ರಾಜಿನಾಮೆ ನೀಡಿದರು ಮತ್ತು ಇದರಿಂದ ಬಹುಮತ ಕಳೆದುಕೊಂಡ ಇ ಎಂ ಎಸ್ ಸರಕಾರ ಅಧಿಕಾರದಿಂದ ಕೆಳಗಿಳಿಯಿತು. ಬಂಡೆದ್ದ ಶಾಸಕರ ಬೆಂಬಲದಿಂದ ಕಾಂಗ್ರೆಸ್ ಸರಕಾರ ಕೇರಳದಲ್ಲಿ ಅಧಿಕಾರಕ್ಕೆ ಏರಿತು.ಭಾರತೀಯ ರಾಜಕಾರಣದಲ್ಲಿ ಪಕ್ಷಾಂತರ ರಾಜಕೀಯದ ಹಾವಳಿ ಮೊದಲಿಟ್ಟಿತು.

ಇಂದಿರಾಗಾಂಧಿ ತಿರುವನಂತಪುರಕ್ಕೆ ಭೇಟಿ ನೀಡಿದ್ದ ಈ ಸಮಯದಲ್ಲಿ ಸರಕಾರ ಬಹುಮತ ಕಳೆದುಕೊಳ್ಳಲು ಮತ್ತು ಕಾಂಗ್ರೆಸ್ ಸರಕಾರ ರಚಿಸಲು ಅಗತ್ಯವಾದ ಸಿಪಿಎಂ ಪಕ್ಷದ ಶಾಸಕರ ಕುದುರೆ ವ್ಯಾಪಾರ ನಡೆದದ್ದು ನಂತರ ಗುಟ್ಟಾಗಿ ಉಳಿಯಲಿಲ್ಲ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಭುವಾದ ಮತದಾರರು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳಿಗೆ ಅಧಿಕಾರ ನೀಡಿದರೂ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಜನತೆ ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಅನ್ಯ ಪಕ್ಷಗಳನ್ನು ಅಧಿಕಾರಕ್ಕೆ ತರುವಂತಿಲ್ಲ ಎಂಬ ಅಲಿಖಿತ ನಿಯಮವನ್ನು ಕಾಂಗ್ರೆಸ್ ಪಾಲಿಸಿಕೊಂಡು ಬಂದಿತು.  ಕಾಂಗ್ರೆಸ್ಸಿನ ಈ ನೀತಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಶಿಸ್ತು, ಸಂಯಮ, ಪಕ್ಷನೀತಿ ಬದ್ಧತೆ ಮರೆಯಾಗಲು ಮತ್ತು ಅಧಿಕಾರ ದಾಹ, ಭ್ರಷ್ಟತೆ ತುಂಬಿ ಅನೈತಿಕತೆ ಮೆರೆಯಲು ಕಾರಣವಾಯಿತು.  

ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ನಾಶ
1969ರಲ್ಲಿ ನಡೆದ ರಾಷ್ರಪತಿಗಳ ಹುದ್ದೆಗೆ ನಡೆದ ಚುನಾವಣೆಗೆ ಕಾಂಗ್ರೆಸ್ ನೀಲಂ ಸಂಜೀವರೆಡ್ಡಿಯವನ್ನು ಅಭ್ಯರ್ಥಿಯನ್ನಾಗಿ ಆರಿಸಿತು. ಈ ವಿಷಯದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿ ನಾಯಕರ ನಡುವೆ ಸಹಮತ ಏರ್ಪಡಲಿಲ್ಲ. ಆಗ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ತನ್ನ ಪಕ್ಷದ ಅರ್ಭ್ಯಥಿಯ ವಿರುದ್ಧ "ಆತ್ಮ ಸಾಕ್ಷಿ" ಮತ ಚಲಾಯಿಸುವಂತೆ ಕರೆ ನೀಡಿದ ಪ್ರಧಾನಿ  ಪಕ್ಷೇತರ ಅಭ್ಯರ್ಥಿ ವಿ ವಿ ಗಿರಿ ಅವರನ್ನು ಗೆಲ್ಲಿಸಿದರು ಮತ್ತು ಪಕ್ಷದ ಸಾಮೂಹಿಕ ನಾಯಕತ್ವ ಕಲ್ಪನೆಗೆ ದೊಡ್ಡ ಪೆಟ್ಟು ನೀಡಿದರು. ಇದರಿಂದ ಪಕ್ಷದ ಹುದ್ದೆಗಳು ಮತ್ತು ಆ ಹುದ್ದೆಯಲ್ಲಿದ್ದ ಪದಾಧಿಕಾರಿಗಳು ತಮ್ಮ ಘನತೆಯನ್ನು ಕಳೆದುಕೊಂಡರು.

ಕಾಂಗ್ರೆಸ್ ಪಕ್ಷದ ಆಡಳಿತ ರೂಢ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು  ತಮ್ಮ ಅಧಿಕಾರವೆ ಹೆಚ್ಚಿನದೆಂದು ಹಗ್ಗ ಜಗ್ಗಾಟ ನಡೆಸಿದ ಪರಿಣಾಮವಾಗಿ ಪಕ್ಷ ಎರಡು ಹೋಳಾಯಿತು. ಅಂದಿನಿಂದ ಪಕ್ಷದಲ್ಲಿ ಅಡ್ ಹಾಕ್ ಸಮಿತಿಗಳನ್ನು ನೇಮಕ ಮಾಡುವ ಚಾಳಿ ಆರಂಭವಾಯಿತು. ಕಾಂಗ್ರಸ್ ಪಕ್ಷ ಆಡಳಿತ ರೂಢ ನಾಯಕರ ಕೈಗೊಂಬೆಯಾಯಿತು. ಪಕ್ಷದ ವರಿಷ್ಟ ಮಂಡಳಿ (ಹೈಕಮಾಂಡ್) ಪಕ್ಷದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮಿತಿಯಿಂದ ಆಡಳಿರೂಢ ನಾಯಕರು ಮತ್ತು ಅವರಿಂದ ನೇಮಿತರಾದ ನಿಷ್ಟ  ಪದಾಧಿಕಾರಿಗಳ ಸಮಿತಿಗೆ ವರ್ಗಾವಣೆಯಾಯಿತು.ಅಂತಿಮವಾಗಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವ ನಾಶವಾಯಿತು. ಈಗ ಬಹುಪಾಲು ಎಲ್ಲ ರಾಜಕೀಯ ಪಕ್ಷಗಳಲ್ಲೂ ಆಂತರಿಕ ಪ್ರಜಾಪ್ರಭುತ್ವ ನೆಪ ಮಾತ್ರವಾಗಷ್ಟೆ ಉಳಿದಿದೆ.


ಮೇರೆ ಮೀರಿದ ಭ್ರಷ್ಟಾಚಾರ
ಕಾಂಗ್ರೆಸ್ ಪಕ್ಷದ ವಿಭಜನೆಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರಸ್ ನ ಎರಡೂ ಪಕ್ಷಗಳು ತಾವು ಅನುಸರಿಸಿದ ರಾಜಕೀಯ ನೀತಿ ನಿಲುವುಗಳಿಗೆ ಮತದಾರನ ಅಂಗೀಕಾರ ಪಡೆಯಲು ಹೋರಾಡಿದವು.  ಮತದಾರನಿಗೆ ದೇಶದ ರಾಜಕಾರಣದ ದಿಕ್ಕು ದೆಸೆಯಾಗಲೀ ಪ್ರಜಾಪ್ರಭುತ್ವದ ತಾತ್ವಿಕ ನೆಲೆಗಟ್ಟಾಗಲೀ ತಿಳಿದಿರಲಿಲ್ಲ. ಇದಕ್ಕೆ ಪ್ರಮುಖ ಕಾರಣಗಳನ್ನು ಹೀಗೆ ಗುರುತಿಸಬಹುದು. 1.ಪ್ರಜಾಪ್ರಭುತ್ವ ವ್ಯವಸ್ಥೆಯೇ ಜನತೆ ಪ್ರಜ್ಞಾಪೂರ್ವಕವಾಗಿ ಆರಿಸಿಕೊಂಡ ವ್ಯವಸ್ಥೆಯಾಗಿರಲಿಲ್ಲ. 2. ಬಹು ಸಂಖ್ಯಾತ ಮತದಾರರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಧೀನ ಸ್ಥಿತಿಯಲ್ಲಿದ್ದು ಸ್ವಾತಂತ್ರ್ದದ ಕಲ್ಪನೆ ಮತ್ತು ಅದರ ಅನುಭವದಿಂದ ಹೊರಗುಳಿದು ಬಿಟ್ಟಿದ್ದರು.

ಚುನಾವಣೆಗಳಲ್ಲಿ ಜಾತಿ ರಾಜಕಾರಣದ ಮೂಲಕ ವಿರೋಧ ಪಕ್ಷಗಳನ್ನು ಮಣಿಸಿದ್ದ ದೊಡ್ಡ ಅನುಭವ ಕಾಂಗ್ರೆಸ್ ಪಕ್ಷದ ಎರಡೂ ಬಣಗಳಲ್ಲಿತ್ತು. ಆದರೆ ಹಣ ಮತ್ತು ಅಧಿಕಾರದ ಅಧಿಕ ಬಲ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿತ್ತು.  ಮತದಾರರನ ಹೀನಸ್ಥಿತಿಯನ್ನು ತನ್ನ ಬಂಡವಾಳವನ್ನಾಗಿ ಮಾಡಿಕೊಂಡು ಚುನಾವವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ ಆಡಳಿತ ಕಾಂಗ್ರೆಸ್ ನ ಮೂಲ ಶಕ್ತಿಯೆ ಅಧಿಕಾರ ಮತ್ತು ಪಕ್ಷ ರಾಜಕಾರಣವಾಗಿತ್ತು. ಇದರ ಫಲವಾಗಿ ಚುನಾವಣೆ ಗೆಲ್ಲುವ ತಂತ್ರೋಪಾಯವಾಗಿ ಚುನಾವಣೆಯ ಹಿಂದಿನ ರಾತ್ರಿ  ಹಣ, ಸೀರೆ, ಹೆಂಡ ಹಂಚಿ, ಗ್ರಾಮದೈವಗಳ ಸಮಕ್ಷಮ ಪ್ರಮಾಣ ಮಾಡಿಸಿಕೊಳ್ಳುವ ಹೊಸಪರಿಯೊಂದು ಬೆಳವಣಿಗೆಯಾಯಿತು.ಇವು ಮುಗ್ಧ ಮತದಾರನ ನೈತಿಕತೆ ಪ್ರಜ್ಞೆಯನ್ನು ಭ್ರಷ್ಟಗೊಳಿಸಿತು ಮತ್ತು ಮತ ಖರೀದಿಯ ಪರಂಪರೆಯನ್ನು ಹುಟ್ಟುಹಾಕಿತು. ಅಲ್ಲದೆ ಪಕ್ಷ ನಿಷ್ಟ ಚುನಾವಣಾ ಅಧಿಕಾರಿಗಳ ನೆರವಿನಿಂದ ಮತಗಟ್ಟೆಯಲ್ಲಿ ಆಡಳಿತ ರೂಢ ಪಕ್ಷದ ಪರವಾಗಿ ಸಾರಾಸಗಟಾಗಿ ಅಕ್ರಮ ಮತ ಚಲಾವಣೆ ಎಸಗಿ ಓಟು ಲೂಟಿ ಮಾಡುವುದೂ ಮೊದಲಾಯಿತು. ಪಕ್ಷ ಮತ್ತು ಅಧಿಕಾರ ರಾಜಕಾರಣದ ಈ ಚುನಾವಣಾ ತಂತ್ರೋಪಾಪಾಯಗಳ ಪ್ರಯೋಗದಿಂದಲೇ ಇಂದಿಗೂ ಎಲ್ಲ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಚುನಾವಣಾ ಆಯುಕ್ತರಾಗಿದ್ದ ಶೇಷನ್ ಅವರು ಚುನಾವಣಾ ಅಕ್ರಮಗಳ ವಿರುದ್ಧ ಎಬ್ಬಿಸಿದ ಅಲೆ ಈಗ ಪರಿಣಾಮ ಶೂನ್ಯವಾಗಿದೆ.

1971ರ ಚುನಾವಣೆಯಲ್ಲಿ ಹೀಗೆ ಆಡಳಿತ ಕಾಂಗ್ರೆಸ್ ಜಯಭೇರಿ ಹೊಡೆದು ಪ್ರಜಾಪ್ರಭುತ್ವದ ಎಲ್ಲ ತತ್ವ ಚೌಕಟ್ಟುಗಳನ್ನು ಬಲಹೀನಗೊಳಿಸಿತು. ಆ ನಂತರದ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭಾರತ ಭ್ರಷ್ಟಾಚಾರ ದೇಶಗಳ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯಿತು. ಅದೇ ಕಾಲಕ್ಕೆ ಭ್ರಷ್ಟಾಚಾರ ತೊಡೆದು ಹಾಕುವುದು ಸುಲಭದ ಮಾತಲ್ಲ ಎಂಬ ಅರ್ಥದಲ್ಲಿ ಇಂದಿರಾಗಾಂಧಿಯವರೂ ಹೇಳಿಕೆ ನೀಡಿದರು. 1975ರ ಚುನಾವಣೆಯಲ್ಲಿ ಸ್ವತಃ ಇಂದಿರಾಗಾಂಧಿಯೇ ಅಕ್ರಮ ನಡೆಸಿದ್ದನ್ನು 1977ರಲ್ಲಿ ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದು ಅವರ ಆಯ್ಕೆಯನ್ನು ರದ್ದುಗೊಳಿಸಿತು. ಇದು ದೇಶದಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಹೇರಲು ಕಾರಣವಾಯಿತು.

ನಂತರ ಜನತಾ ಸರಕಾರದ ಅವಧಿಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್ ಪಕ್ಷ ಜನತಾ ಪಕ್ಷದ ನಾಯಕರ ರಾಜಕೀಯ ದೌರ್ಬಲ್ಯಗಳನ್ನೆ ಬಂಡವಾಳವಾಗಿಸಿಕೊಂಡು ಸರಕಾರದಲ್ಲಿ ಭಿನ್ನಾಭಿಪ್ರಾಯ ಬಿತ್ತಿ ಸರಕಾರ ಉರುಳಿಸಿತು. ಜನತೆಯ ಕಣ್ಣಲ್ಲಿ ವಿರೋಧ ಪಕ್ಷಗಳು ಆಡಳಿತ ನಡೆಸಲು ಅರ್ಹರಲ್ಲವೆಂದು ಬಿಂಬಿಸಿತು. ಕಾಂಗ್ರೆಸ್ ಪಕ್ದದ ವಿರುದ್ಧ ನೀಡಿದ್ದ ಜನತೆಯ ತೀರ್ಪನ್ನು ಅದು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ ಮತ್ತು ತನ್ನ ನಿರ್ಣಯವನ್ನು ಜನತೆ ಒಪ್ಪಿಕೊಳ್ಳಬೇಕು ಎಂಬು ನಿಲುವನ್ನು ಹೊಂದಿತ್ತು. ಇದು ಭಾರತದಲ್ಲಿ ನೆಲೆಗೊಂಡ ಪ್ರಜಾಪ್ರಭುತ್ವದ ಮಾದರಿಯಾಗಿದೆ. ನಂತರದ ಕಾಲದಲ್ಲಿ ಕಾಂಗ್ರೆಸ್ ನಾಯಕರು ಸ್ವಿಸ್ ಬ್ಯಾಂಕುಗಳಲ್ಲಿ ಹೇರಳ ಪ್ರಮಾಣದಲ್ಲಿ ಕಪ್ಪು ಹಣವನ್ನು ಗುಪ್ತವಾಗಿಟ್ಟಿದ್ದ ಸುದ್ದಿಗಳು ಹೊರಬರತೊಡಗಿದವು.

ಕೇಂದ್ರದಲ್ಲಿ ಜನತೆ ಅಧಿಕಾರಕ್ಕೆ ತಂದ ಜನತಾ ಸರಕಾರವನ್ನು ಅಸ್ಥಿರಗೊಳಿಸಲು ಅಂದು ವಿರೋಧ ಪಕ್ಷದಲ್ಲಿದ್ದ ಇಂದಿರಾಗಾಂಧಿಯವರು ಪಂಜಾಬ್ ಮತ್ತು ಅಸ್ಸಾಂನಲ್ಲಿ ಪ್ರತ್ಯೇಕತಾವಾದಿ ಚಳವಳಗಳಿಗೆ ಪ್ರೋತ್ಸಾಹ ನೀಡಿದರು. ಮುಂದಿನ ದಿನಗಳಲ್ಲಿ ಅಸ್ಸಾಂನ ಚಳವಳಿಗಾರರು ಎಜಿಪಿ ಪಕ್ಷ ಕಟ್ಟಿಕೊಂಡು ರಾಜ್ಯ ಅಧಿಕಾರದ ಚುಕ್ಕಾಣಿ ಹಿಡಿದರು. ಆದರೆ ಪಂಜಾಬಿನಲ್ಲಿ ಉಗ್ರವಾದಿಗಳನ್ನು ಮಣಿಸಲು ಸ್ವರ್ಣಮಂದಿರಕ್ಕೆ ಸೇನೆ ನುಗ್ಗಿಸಿದ ಇಂದಿರಾಗಾಂಧಿ, ಪಕ್ಷ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣದ ಹಿನ್ನೆಲೆಯಿಂದ ಕೈಗೊಂಡ ನಿಷ್ಟೂರ ನಿರ್ಣಯಗಳ ಫಲವಾಗಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಕಾಯಿತು.

ರಾಜೀವಗಾಂಧಿ ಅಧಿಕಾರದ ಅವಧಿಯಲ್ಲಿ ಬೋಫರ್ಸ್ ಹಗರಣ,  ಪಿವಿನರಸಿಂಹರಾವ್ ಕಾಲದಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳು ಕಾಂಗ್ರೆಸ್ ತನ್ನ ಹಾದಿಯಲ್ಲೆ ಹೆಜ್ಜೆ ಇಟ್ಟಿರುವ ನಿದರ್ಶನಗಳಾಗಿವೆ.  ಬಿಜೆಪಿಯ ಹಿಡನ್ ಅಜೆಂಡಾ ರೀತಿಯಲ್ಲಿ ಕಾಂಗ್ರೆಸ್ ದೇಶದ ಒಳಿತಿಗಿಂತ ತನ್ನ ಪಕ್ಷದ ಒಳಿತನ್ನು ಒಳ ಉದ್ದೇಶವಾಗಿ ಹೊಂದಿದೆ. ಕಾಂಗ್ರೆಸ್ ಪಕ್ಷ ಭಾರತದಲ್ಲಿ ನೆಲೆಯೂರಿರುವ ಪಕ್ಷ ರಾಜಕಾರಣ ಮತ್ತು ಅಧಿಕಾರ ರಾಜಕಾರಣದ ತಾಯಿ ಬೇರಾಗಿದೆ. ಕಾಂಗ್ರೆಸ್ ಹುಟ್ಟುಹಾಕಿರುವ ಪರಂಪರೆಯಲ್ಲಿ ಬಾರತದ ಬಹುಪಾಲು ರಾಜಕೀಯ ಪಕ್ಷಗಳು ತಮ್ಮ ಹಾದಿಯನ್ನು ಕ್ರಮಿಸಿವೆ. ಹಾಗಾಗಿ ದೇಶದ ಎಲ್ಲ ರಾಜಕೀಯ ಪಕ್ಷಗಳು ಪಕ್ಷ ಮತ್ತು ಅಧಿಕಾರ ರಾಜಕಾರಣವನ್ನು ತಮ್ಮ ಅಸ್ತಿತ್ವದ ಮೂಲನೆಲೆಯನ್ನಾಗಿ ಹೊಂದಿವೆ. ಇದರ ಪರಿಣಾಮವಾಗಿ ಇಂದು ನ್ಯಾಯಂಗವೂ ಒಳಗೊಂಡು ಶಾಸಕಾಂಗ ಮತ್ತು ಕಾರ್ಯಾಂಗಗಳು ಭ್ರಷ್ಟತೆಯ ಭದ್ರ ಬೇರುಗಳನ್ನು ತಮ್ಮಲ್ಲಿ ಅಡಕಗೊಳಿಸಿಕೊಂಡಿವೆ

ಪ್ರಸ್ತುತ ಕೇಂದ್ರದಲ್ಲಿ ಯುಪಿಎ ಸರಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ಭ್ರಷ್ಟಾಚಾರ ಮತ್ತು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣದ ವಿರುದ್ಧ ನಡೆದಿರುವ ಹೋರಾಟವನ್ನು ಹೇಗಾದರೂ ಮಾಡಿ ಮಣಿಸಲು ಪ್ರಯತ್ನಿಸುತ್ತಿದೆ. ಇದರಿಂದ ತನ್ನ ಪಕ್ಷದ ಹಿಂದಿನ ಮತ್ತು ಇಂದಿನ ಹಿರಿಯ ನಾಯಕರ ಬಣ್ಣ ಬಯಲಾಗುವ ಭಯ ಅದಕ್ಕಿದೆ  ಹಾಗಾಗಿ ಯುಪಿಎ ಸರಕಾರದ ಮಿತ್ರ ಪಕ್ಷಗಳು ಇದುವರೆಗೂ ಅನುಸರಿಸಿಕೊಂಡು ಬಂದಿರುವ ಪಕ್ಷ ಮತ್ತು ಅಧಿಕಾರ ರಾಜಕಾರಣದ ಹೆದ್ದಾರಿಯನ್ನು ಬಿಟ್ಟು ಅನ್ಯಮಾರ್ಗ ಹಿಡಿಯಲು ಕಾರಣವಿಲ್ಲ. ದೇಶದ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಯೇ ದೇಶದ ಹಿತಾಸಕ್ತಿಯೆಂದು ನಂಬಿರುವುದರಿಂದ ಈಗ ದೇಶದ ನಿಜವಾದ ಹಿತಾಸಕ್ತಿ ಅಮುಖ್ಯವಾಗಿದೆ. ಈ ಹೋರಾಟದ ನೇತೃತ್ವ ವಹಿಸಿರುವ ನಾಯಕರು ದುರ್ಬಲರೂ ದಾರಿತಪ್ಪಿದವರೂ ಆಗಿರುವುದರಿಂದ ಇದೊಂದು ಹುಸಿ ಹೋರಾಟವಾಗಿಯೆ ಕಂಡುಬರುತ್ತಿದೆ. ಇದನ್ನು ನಯವಾಗಿಯೆ ದಮನ ಮಾಡಲು ಯುಪಿಎ ಸರಕಾರ ಸಕಲ ಪ್ರಯತ್ನವನ್ನೂ ಮಾಡುತ್ತಿದೆ.

ಮಂಗಳವಾರ, ಜೂನ್ 7, 2011

ಭ್ರಷ್ಟಾಚಾರ: ರಾಜಕೀಯ, ಸಾಮಾಜಿಕ, ಧಾರ್ಮಿಕ ಹೋರಾಟಗಳ ಸುತ್ತ

ರ್ನಾಟಕ ರಾಜ್ಯದ ರಾಜಕೀಯ ವಲಯದಲ್ಲಿ ಕಳೆದ ಎಂಟು ಹತ್ತು ತಿಂಗಳುಗಳಿಂದ ಮುಂಚೂಣಿಗೆ ಬಂದಿರುವ ಸಂಗತಿಗಳು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮುನ್ನಡೆಯುತ್ತಿರುವ ದಿಕ್ಕನ್ನು ಸೂಚಿಸುತ್ತಿದೆ. ಇದು ದೇಶದ ಯಾವುದೊ ಒಂದು ರಾಜ್ಯದ ರಾಜಕೀಯ ಸಂಗತಿಯಾಗಿರದೆ ಒಟ್ಟು ದೇಶದ ರಾಜಕೀಯ ವಲಯ ಪಡೆದುಕೊಂಡಿರುವ ಚಾಲಕ ಶಕ್ತಿಯ ಪ್ರತೀಕವಾಗಿದೆ. ಈ ಮಾತಿಗೆ ಪೂರಕವಾಗಿ ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ ಮತ್ತು ಕೇಂದ್ರ ಸರಕಾರದ ಸಚಿವರು 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಎಸಗಿರುವ ಅಕ್ರಮಗಳು ಹೊರಬಿದ್ದಿವೆ.  ಇದರೊಂದಿಗೆ ದೇಶವನ್ನು ಆಳಿದ ನಮ್ಮ ಹೆಮ್ಮೆಯ ನಾಯಕರು ವಿದೇಶಿ ಬ್ಯಾಂಕುಗಳಲ್ಲಿ ಕೂಡಿಟ್ಟಿರುವ ಕಪ್ಪುಹಣ ವಾಪಸ್ಸು ತರಿಸುವ ಕುರಿತು ಆರಂಭವಾಗಿರುವ ಚರ್ಚೆ ಎಲ್ಲವನ್ನು ಸ್ಪಷ್ಟ ಮಾಡಿದೆ.
*
ಭ್ರಷ್ಟಾಚಾರ ವಿರೋಧಿ ಉಪವಾಸ ಚಳವಳಿ ನಡೆಸಿ ಲೋಕ ಪ್ರಸಿದ್ಧರಾಗಿರುವ ಅಣ್ಣಾ ಹಜಾರೆ ಲೋಕಪಾಲ ಮಸೂದೆ ಜಾರಿಗಾಗಿ ಆಗ್ರಹಿಸಿದ್ದಾರೆ. ಅದಕ್ಕೂ ಮೊದಲು ಅವರು ಯಾರು ಏನು ಎಂದು ಯಾರಿಗೂ ತಿಳಿದಿರಲಿಲ್ಲ. ಅವರ ಚಳವಳಿ ಜನಪ್ರಿಯಗೊಳಿಸಲು ಕಾರ್ಪೋರೇಟ್ ಸಂಸ್ಥೆಗಳು 10-20 ಕೋಟಿ ವೆಚ್ಚ ಮಾಡಿದ್ದಾವೆ.  ಭಾರತದ 120 ಕೋಟಿ ಜನರಲ್ಲಿ ಪ್ರತಿದಿನ 10 ಕೋಟಿ ಜನ ತಿನ್ನುವ ಅನ್ನ ಗಳಿಸಲಾರದ ಸ್ಥಿತಿಯಲ್ಲಿದ್ದು ಉಪವಾಸ ಮಲುಗುತ್ತಿದ್ದಾರೆ. ಅಣ್ಣಾ ಹಜಾರೆಗೆ ಮತ್ತೊಬ್ಬರಿಗೆ ದಾನ ಮಾಡುವಷ್ಟು ಸಂಪತ್ತು ಇದ್ದರೂ ಆತ ಸಮಾಜೋ-ರಾಜಕೀಯ ಸಾಧನೆಗಾಗಿ ಅನ್ನ ನೀರು ಬಿಟ್ಟಿದ್ದಾರೆ. ಈ ವಿಷಯವನ್ನು ಜಗತ್ತಿನ ಗಮನಕ್ಕೆ ತರಲು ಹತ್ತಾರು ಕೋಟಿಗಳು ಖರ್ಚು ಮಾಡಲಾಗಿದೆ. ಇದರ ಹಿಂದೆ ಕಾರ್ಪೋರೇಟ್ ಸಂಸ್ಥೆಗಳ ಹಿತಾಸಕ್ತಿ ಅಡಗಿಲ್ಲವೆಂಬುದನ್ನು ಈ ವ್ಯವಹಾರಿಕ ಜಗತ್ತಿನಲ್ಲಿ ನಂಬುವುದು ಹೇಗೆ? ಈ ಉಪವಾಸ ಚಳವಳಿ ದೇಶದ ಹಿತಾಸಕ್ತಿ ಮುಂದೊಡ್ಡಿ ವೈಯಕ್ತಿಕ ಹಿತಾಸಕ್ತಿ ಸಾಧಿಸುವ ಹಾದಿಯಲ್ಲವೆಂದು ಖಡಾಖಂಡಿತವಾಗಿ ಹೇಳುವುದು ಹೇಗೆ? ಇದು ಕೂಡ ಭ್ರಷ್ಟಾಚಾರವಲ್ಲವೆ?
ಈಗ ಈ ಸರದಿಯಲ್ಲಿ ರಾಮದೇವ್ ಸೇರಿದ್ದಾರೆ. ತಮ್ಮ ಯೋಗ ಕಸರತ್ತಿನ ಮೂಲಕ ದೇಶದಾದ್ಯಂತ ಯೋಗ ಗುರುವೆಂದೆ ಹೆಸರು ಗಳಿಸಿದ್ದಾರೆ. ಅವರ ಉಪದೇಶಗಳಲ್ಲಿ ಸುಪ್ತ ರಾಜಕೀಯ ವಾಸನೆ ಅಡರಿದ್ದು ಧರ್ಮ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸನ್ಯಾಸಿಗೆ ಯಾವುದೆ ಬಗೆಯ ಸ್ವಹಿತಾಸಕ್ತಿ ಇಲ್ಲದಿದ್ದಲ್ಲಿ ತಮ್ಮ ಉಪವಾಸ ಚಳವಳಿಯ ಅವಧಿಯಲ್ಲಿ ಬಂಧನಕ್ಕೆ ಒಳಗಾಗುವ ಸಂದರ್ಭದಲ್ಲಿ  ಹೆಣ್ಣುಮಕ್ಕಳ ವೇಷ ಧರಿಸಿ ಹೆಣ್ಣಮಕ್ಕಳ ನಡುವೆ ಅವಿತಿಟ್ಟುಕೊಳ್ಳಬೇಕಾದ ಅಗತ್ಯವೇನಿತ್ತು?  ಜನಪ್ರಿಯತೆಗಾಗಿ ಹಪಹಪಿಸುವ ಜನ ಮಾಡಬಾರದ ಕೆಲಸಗಳಿಲ್ಲ, ಹಿಡಿಯದ ಅಡ್ಡದಾರಿಗಳಿಲ್ಲ. ರಾಮದೇವ್ ಅವರಿಗೆ ಉಪವಾಸ ಚಳವಳಿ ಅಂಥ ಒಂದು ಸುಲಭದ ದಾರಿಯಾಗಿದೆ. ಈ ಮೂಲಕ ಅವರು ಸಾಧಿಸಬೇಕಿರುವ  ಸಮಾಜೋ-ರಾಜಕೀಯವಾದ ಧಾರ್ಮಿಕ ಉದ್ದೇಶಗಳು ಮೈ ಪಡೆದುಕೊಳ್ಳಬೇಕಿದೆ.  ಕಾವಿ ಬಟ್ಟೆ ತೊಟ್ಟ ಸನ್ಯಾಸಿಯ ಮಹತ್ವಾಕಾಂಕ್ಷೆ ತುಂಬಿದ ಈ ನಡವಳಿಕೆ ನೈತಿಕ ಭ್ರಷ್ಟತೆಯನ್ನು ಸೂಚಿಸುವುದಿಲ್ಲವೆ? ಕಳೆಗುಂದಿದ ಅಥವಾ ಮೂಲೆ ಗುಂಪಾದ ಪಟ್ಟಭದ್ತ ಹಿತಾಸಕ್ತಿಗಳ ಪರವಾದ ಹೋರಾಟವಾಗಿ ಕಾಣುವುದಿಲ್ಲವೆ?
ಅಣ್ಣಾ ಹಜಾರೆ ಮತ್ತು ರಾಮದೇವ್ ಅವರ ಉಪವಾಸ ಚಳವಳಿ ಸತ್ಯಕ್ಕಾಗಿ ಆಗ್ರಹ ಪಡಿಸಿದ ಪ್ರಾಮಾಣಿಕ ಪ್ರತಿರೋಧವೆ? ನನಗೇನೂ ಹಾಗೆ ಅನ್ನಿಸುವುದಿಲ್ಲ. ಅಣ್ಣಾ ಹಜಾರೆ ಒಬ್ಬ ಮೊದ್ದು, ರಾಮದೇವ್ ಒಬ್ಬ ಮತ್ತೊಬ್ಬರನ್ನು ಮರಳು ಮಾಡುವ ಚಾಲಾಕಿ. ಇವರಿಬ್ಬರಲ್ಲೂ ಯಥಾರ್ಥ ವಾಸ್ತವ ಸತ್ಯದ ಸಾಧನೆಗೆ ಅಗತ್ಯವಾದ ನೈತಿಕ ನಿಷ್ಟ ಮುಗ್ಧತೆ ಇಲ್ಲ.  
ಹಾಗಾಗಿ ಒಬ್ಬರು ಮತ್ತೊಬ್ಬರ ಬಳಕೆಗೆ ಸುಲಭವಾಗಿ ತುತ್ತಾದರೆ ಮತ್ತೊಬ್ಬರು ತಮ್ಮ ಸಂಕುಚಿತ ದೃಷ್ಟಿಕೋನದಿಂದ ಬಹು ಸಮುದಾಯಗಳ ಸಾಮೂಹಿಕ ಹಿತಾಸಕ್ತಿ ಪರವಾಗಿ ಕಾರ್ಯನಿರ್ವಹಿಸುವಲ್ಲಿ ಸೋಲುತ್ತಾರೆ.
*
ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ನಡೆದ ಎಲ್ಲ ರಾಜಕೀಯ ಪಕ್ಷಗಳ ಕೆಸರೆರಚಾಟ ಸ್ವಾತಂತ್ರ್ಯೋತ್ತರ  ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಗಳ ಹಿತಾಸಕ್ತಿಗಳ ಮುಂದೆ ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗಿರುವುದನ್ನು ಮುನ್ನೆಲೆಗೆ ತಂದಿರಿಸಿದೆ. ಕೇಂದ್ರದಲ್ಲಿ ಅಧಿಕಾರ ನೇತೃತ್ವ ವಹಿಸಿರುವ ಕಾಂಗ್ರೆಸ್ ಸರಕಾರ ಕರ್ನಾಟಕದ ರಾಜಕೀಯ ಕುರಿತ ಸೂಕ್ಷ್ಮ ನಡೆ,  ತನ್ನ ಅಂಗ ಪಕ್ಷಗಳ ಭ್ರಷ್ಟ ಸಚಿವರ ವಿಷಯದಲ್ಲಿ ತಳೆದ ಸಹಾನುಭೂತಿ ನಿಲುವು ಮತ್ತು ಭ್ರಷ್ಟಾಚಾರ ವಿರೋಧಿ ಉಪವಾಸ ಚಳವಳಿಗಳನ್ನು ಎದುರಿಸುತ್ತಿರುವ ರೀತಿ - ಅದಕ್ಕೆ ದೇಶದ ಹಿತಾಸಕ್ತಿಗಿಂತ ತನ್ನ ಪಕ್ಷದ ಹಿತಾಸಕ್ತಿಯೇ ಪ್ರಧಾನವಾಗಿರುವುದನ್ನು ಪ್ರತಿಪಾದಿಸಿದೆ.
ಇದು ಕಾಂಗ್ರೆಸ್ ಪಕ್ಷದ ಪರಂಪರೆಯೆ ಅಗಿರುವುದರಿಂದ ಆ ಪಕ್ಷದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದುರಂತವೆಂದರೆ ಬಹು ಪಕ್ಷ ಮಾದರಿ ಪ್ರಜಾಪ್ರಭತ್ವ ಒಪ್ಪಿಕೊಂಡರೂ ಇತರ ಪಕ್ಷಗಳು ಅಧಿಕಾರ ರಾಜಕಾರಣದ ಹಾದಿಯಲ್ಲಿ ತಮ್ಮ  ಗುರುತು ಕಳೆದುಕೊಂಡು ಕಾಂಗ್ರಸ್ ಪಕ್ಷದ ತುಂಡುಗಳಂತೆ ಆಗಿರುವುದು.
ನಮ್ಮ ಜೀವನ ವಿಧಾನ ಮತ್ತು ಜೀವನ ಮೌಲ್ಯಗಳು ಇದಕ್ಕೆ ಕಾರಣವಾಗಿವೆ. ನಾವಿಂದು ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ವ್ಯಕ್ತಿಗತವಾದ ಹಿತಾಸಕ್ತಿಗಳಲ್ಲಿ ಸಮುದಾಯದ ಹಿತಾಸಕ್ತಿಯನ್ನು ಅರಸುತ್ತಿದ್ದೇವೆ. ಹಾಗಾಯೇ ನಮ್ಮ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಹಿತಾಸಕ್ತಿಯಲ್ಲಿ ದೇಶದ ಹಿತಾಸಕ್ತಿಯನ್ನು ಕಾಣುತ್ತಿವೆ. ಇದು ಬದಲಾಗಬೇಕು. ಎಲ್ಲಿಯವರೆಗೆ ನಮ್ಮ ಜೀವನ ವಿಧಾನ ಮತ್ತು ಮೌಲ್ಯಗಳಲ್ಲಿ ಸಮುದಾಯದ ಹಿತಾಸಕ್ತಿಯಲ್ಲಿ ವೈಯಕ್ತಿಕ ಹಿತಾಸಕ್ತಿ ಕಾಣುವ ನೋಟ ಬೆಳೆಯುವುದಿಲ್ಲೋ ಎಲ್ಲಿಯವರೆಗೆ ನಮ್ಮ ರಾಜಕೀಯ ಪಕ್ಷಗಳು ದೇಶದ ಹಿತಾಸಕ್ತಿಯಲ್ಲಿ ತಮ್ಮ ಪಕ್ಷ ರಾಜಕಾರಣದ ಹಿತಾಸಕ್ತಿಯನ್ನು ಅರಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಭ್ರಷ್ಟತೆ ನಮ್ಮ ಜೀವನದ ಭಾಗವಾಗಿರುತ್ತದೆ, ನೈತಿಕತೆ ಗೌಣವಾಗಿರುತ್ತದೆ. ಈಗಿರುವಂತೆ ಭ್ರಷ್ಟಾಚಾರ ನಮ್ಮ ಜೀವನದ ತಾಯಿಬೇರಾಗಿದ್ದು ಎಲ್ಲರ ಕೈಯಿ ಮತ್ತೊಬ್ಬರ ಜೇಬಿನೊಳಗಿದೆ. ಇದಕ್ಕಾಗಿ ವಿಷಾದ ಪಡುವುದಾಗಲೀ ಚಳವಳಿ ನಡೆಸುವುದಾಗಲೀ ಹೊಳೆಯಲ್ಲಿ ಹುಣಿಸೆ ಕಿವುಚಿದಂತೆಯೆ ಸರಿ. ಲೋಕಾಯುಕ್ತ ಮತ್ತು ಲೋಕಪಾಲ ಸಂಸ್ಥೆಗಳೆಲ್ಲ ಆಡಳಿತ ನಡೆಸುವ ಪಕ್ಷಗಳ ರಾಜಕಾರಣದ ಭಾಗವಾಗಿ ಜನರ ಗಮನ ಬೇರೆಡೆ ಸೆಳೆಯುವ ಉಪಾಯವಾಗಿ ಇರುತ್ತವೆಯೆ ಹೊರತು ಅಷ್ಟರಿಂದಲೆ ಭ್ರಷ್ಟಾಚಾರ ತೊಲಗಿಸಲು ಖಂಡಿತ ಸಾಧ್ಯವಿಲ್ಲ.



 

ಭಾನುವಾರ, ಜೂನ್ 5, 2011

ಎತ್ತರದಲ್ಲೆ ಇದ್ದಾರೆ ಇನ್ನೂ

ಕಳೆದು ಹೋಗಿದೆ
ಮಹತ್ತಿನ ಮಹಲು
ಅವಮಾನದ ಬಯಲು

ಎದುರಾದ ಹಾದಿ
ಮೈಮೇಲೆ ಬಿದ್ದಂತೆ ಆಗಿ
ಪಕ್ಕಕ್ಕೆ ಸರಿದೆ
ಕೈಮುಗಿದು ನಿಂತೆ
ತಲೆ ತಗ್ಗಿ ನಡು ಬಗ್ಗಿ
ಹುದುಗಿಯೂ ಹೋದೆ
ಬಿರುಕು ಬಿಟ್ಟ ನೆಲದೊಳಗೆ
ಈಗ ಇಲ್ಲವಾಗಿದ್ದೇನೆ
ನನ್ನನ್ನು ನಾನು ಕಳಕೊಂಡು

ನೋಡಿದಿರಲ್ಲ ನೀವೆಲ್ಲ!
ನನ್ನ ಹೆಗಲೇರಿದವರು
ತಲೆ ಮೇಲೆ ಕುಳಿತು
ಇಡೀ ಜಗತ್ತಿಗೆ ಕಾಣುವರು
ನಮ್ಮ ಸುತ್ತಲ ನಾಡಿನ ಯಜಮಾನರು


ಯಾರ ಕಣ್ಣಿಗೂ ಬೀಳದು ಅವರ ಭದ್ರ ಬುನಾದಿ
ತೊತ್ತಳ ತುಳಿತಕೆ ತತ್ತರ ನಲುಗಿ
ಅಲುಗಾಡಿ ಬಿಟ್ಟರೆ
ಭೂಮಿಗೆ ನಡುಕ ಉಂಟಾದಂತೆ
ಸುನಾಮಿ ಅಲೆಗಳು ಎದ್ದು ಬಂದಂತೆ
ಒಂದಾಗಿ ಬಿಡುವುವು
ಥರ ಥರ ನಡುಗಿ
ಮಹಲೂ ಮಣ್ಣೂ


ಬೀಸುವ ಗಾಳಿಗೆ ಕಾದು ಕುಳಿತ
ಹಣ್ಣಾದ ಎಲೆಗಳ ಹಾಗೆ
ಎತ್ತರದಲ್ಲೆ ಇದ್ದಾರೆ ಇನ್ನೂ

ಮಂಗಳವಾರ, ಮೇ 17, 2011

ಫಲಿತಾಂಶಗಳ ಬೆನ್ನು ಹತ್ತಿ

ಕಳೆದ ವಾರ ಕರ್ನಾಟಕದ ಪಿಯು ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದೆ.
ಇದರ ಫಲವಾಗಿ ಒಂದು, ಪರೀಕ್ಷೆಯಲ್ಲಿ ಅಸಫಲರಾದ ಕೆಲವು ವಿದ್ಯಾರ್ಥಿಗಳು ತಮ್ಮ ಜೀವ ತೊರೆದಿದ್ದಾರೆ. ಇದು ಗಂಭೀರವಾದ ವಿಷಯ. ಎರಡು, ಪತ್ರಿಕೆಗಳು ಅತ್ಯುತ್ತಮ ಫಲಿತಾಂಶ ಪಡೆದ ಕೆಲವು ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಸಾರ್ವಜನಿಕರಿಗೆ ತೆರೆದಿಟ್ಟು ಅವರ ನೆರವಿಗೆ ನಿಲ್ಲುವ ಪ್ರಯತ್ನ ಮಾಡಿವೆ. ಇದು ಕನ್ನಡ ದಿನ ಪತ್ರಿಕೆಗಳು ಸಾಮಾಜಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಕುರುಹು.  ಮೂರು, ಒಟ್ಟು ಫಲಿತಾಂಶದ ಪ್ರಮಾಣವನ್ನು ಅನುಸರಿಸಿ ಈ ಎರಡೂ ಪರೀಕ್ಷಾ ವ್ಯವಸ್ಥೆ ಮತ್ತು ಶಿಕ್ಷಣ ಕ್ರಮಗಳ ಯಶಸ್ಸು - ಅಪಯಶಸ್ಸುಗಳ ತುಲನೆ ಮಾಡಲಾಗಿದೆ. ಈ ಕುರಿತು ಆಡಳಿತ ಮುಂದೆ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಹೇಳಿಕೆ ಹೊರಬಿದ್ದಿದೆ. ಈ ಎಲ್ಲ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿಗಳನ್ನು ತೆರೆದಿಡುತ್ತವೆ.
ಫಲಿತಾಂಶದ ಕಾರಣಕ್ಕೆ ಜೀವ ತೊರೆದ ವಿದ್ಯಾರ್ಥಿಗಳಲ್ಲಿ ಎಸ್ ಎಸ್ಎಲ್ ಸಿ ಗಿಂತ ಪಿಯು ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಎಸ್ ಎಸ್ ಎಲ್ ಸಿ ಫಲಿತಾಂಶದ ಒಟ್ಟು ಪ್ರಮಾಣ ಪಿಯು ಫಲಿತಾಂಶದ ಒಟ್ಟು ಪ್ರಮಾಣದ ಒಂದೂವರೆ ಪಟ್ಟಿಗಿಂತ ಹೆಚ್ಚು ಇದೆ. ಕಳೆದ ತಿಂಗಳಷ್ಟೆ ನಡೆದ ಈ ಪರೀಕ್ಷೆಗಳ ಕಾಲದಲ್ಲಿ ನಕಲು ಮಾಡಲು ಪ್ರಯತ್ನ ಪಟ್ಟ ಪಿಯು ವಿದ್ಯಾರ್ಥಿಗಳು ಡಿಬಾರ್ ಆದ ಸುದ್ದಿ ಪ್ರಕಟವಾದರೆ, ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಬಿಇಒ ಮತ್ತು ಪರಿಕ್ಷಾ ಮೇಲುಸ್ತುವಾರಿ ಅಧಿಕಾರಿಗಳೇ ಮೊದಲಾಗಿ ಶಿಕ್ಷಣ ವ್ಯವಸ್ಥೆಯ ಬೆಂಬಲದಲ್ಲಿ ಸಾಮೂಹಿಕ ನಕಲು  ನಡೆದ ಸಂಗತಿಯನ್ನು ದೃಶ್ಯ ಸುದ್ದಿ ಮಾಧ್ಯಮಗಳು ಬಿತ್ತರಿಸಿವೆ. ಇದು ಈ ಎರಡೂ ಪರೀಕ್ಷೆಗಳು ನಡೆದ ರೀತಿಯನ್ನು ತಿಳಿಸುತ್ತದೆ. ಈ ನಡುವೆ  ಕಳೆದ ಕೆಲವು ವರುಷಗಳಿಂದ ಶೂನ್ಯ ಅಥವಾ ಕಳಪೆ ಫಲಿತಾಂಶ ಪಡೆದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಹೇಳಿಕೆಗಳು ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದು ಈ ವರುಷವೂ ಮುಂದುವರೆದಿದೆ. ಇವೆಲ್ಲವೂ ನಮ್ಮ ಶಿಕ್ಷಣ ಎದುರಿಸುತ್ತಿರುವ ಸಮಸ್ಯೆಗಳನ್ನು ಸೂಚಿಸುತ್ತಿವೆ.
ನಪಾಸಾದ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುತ್ತಿರುವುದು ನಮ್ಮ ಶಿಕ್ಷಣ ಪರೀಕ್ಷಾ ಕೇಂದ್ರಿತವಾಗಿರುವ ಸಂಕೇತವಾಗಿದೆ. ಬ್ರಿಟಿಶರು ಆರಂಭಿಸಿದ ಅಕ್ಷರ ವಿದ್ಯೆಯ ಶಾಲಾ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುತ್ತಿಲ್ಲ, ಜೀವನವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನೀಡುತ್ತಿಲ್ಲ, ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆ ಬಗೆಹಿಸಿಕೊಳ್ಳುವ ಬಗೆಯನ್ನು ತಿಳಿಸಿಕೊಡುತ್ತಿಲ್ಲ. (ಇಂಥ ಹಲವು ಇಲ್ಲಗಳ ಪಟ್ಟಿಯನ್ನು ಬಹಳಷ್ಟು ಬೆಳೆಸಬಹುದು.)  ವಿದ್ಯಾರ್ಥಿ ಅಂತಿಮವಾಗಿ ಸಂಪೂರ್ಣ ಅಕ್ಷರ ವಿದ್ಯೆಯನ್ನು ಕಲಿಯದಿದ್ದರೂ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ದಾಟಿ, ಅವೆಲ್ಲದರ ಸರ್ಟಿಫಿಕೇಟ್ ಪಡೆದು ಮುನ್ನಡೆಯುವ ಅಡ್ಡ ಹಾದಿಯನ್ನಷ್ಟೆ ಕಲಿಸುತ್ತಿದೆ. ಈ ಮಾತು ನಮ್ಮ ಶಿಕ್ಷಣ ವ್ಯವಸ್ಥೆ ಕುರಿತ ಕೇವಲ ಆಕ್ಷೇಪಣೆಯಲ್ಲ. ಇಂದು ಎಸ್ ಎಸ್ ಎಲ್ ಸಿ ಪಾಸಾದ ಗ್ರಾಮೀಣ ಮಕ್ಕಳ ಕನ್ನಡ ಓದು ಬರೆಹದ ತಿಳುವಳಿಕೆಯ ಮಟ್ಟ ಪ್ರಾಥಮಿಕ ಹಂತದಲ್ಲಿದ್ದು ದಿಗಿಲು ಹುಟ್ಟಿಸುತ್ತದೆ. ಇನ್ನು ಅನ್ಯ ಭಾಷೆಗಳ ಅವರ ತಿಳುವಳಿಕೆ ಕೇಳುವುದೇ ಬೇಡ. ಇದೇಕೆ ಹೀಗಾಗುತ್ತಿದೆ?
ಕಳೆದ ಇಪ್ಪತ್ತು ವರುಷಗಳಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳು ಸರಿಯಾಗಿ ಅಕ್ಷರ ಕಲಿಯದಿದ್ದರೆ ಅವರನ್ನು ನಪಾಸು ಮಾಡುವ ರೂಢಿ ಇತ್ತು. ಕಾಲಕ್ರಮದಲ್ಲಿ ಅಕ್ಷರ ಕಲಿತ ಮತ್ತು ಕಲಿಯದ ಎಲ್ಲ ಮಕ್ಕಳನ್ನೂ ಪಾಸು ನಪಾಸು ಎಂಬ ಮಾಪನದಿಂದ ಹೊರಗಿಟ್ಟು ಮುಂದಿನ ತರಗತಿಗೆ ಕಳಿಸುವ ಕಾರ್ಯಕ್ರಮ ಜಾರಿಗೆ ಬಂದವು. ಕಳೆದ ಹತ್ತು ವರುಷಗಳ ವರೆಗೂ ಏಳನೆಯ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಕಲಿಯದೆ ಮುಂದಿನ ತರಗತಿಗೆ ಹೋದ ಮಕ್ಕಳು ಅಲ್ಲಿನ ಪಾಠ ಪ್ರವಚನಗಳನ್ನು ಗ್ರಹಿಸುವ ಶಕ್ತಿ ಪಡೆಯುವಲ್ಲಿ ವಿಫಲರಾದರು. ಮಕ್ಕಳ ಕಳಪೆ ಫಲಿತಾಂಶದ ಹೊಣೆಗಾರಿಕೆಯನ್ನು ಆಡಳಿತ ಶಿಕ್ಷಕರ ಮೇಲೆ ಹೇರಿತು. ಅದರ ಪರಿಣಾಮವಾಗಿಯೋ ಏನೋ ಶಿಕ್ಷಕ ವೃಂದ ತಮ್ಮದಲ್ಲದ ತಪ್ಪಿನ ಹೊಣೆಗಾರಿಕೆಯನ್ನು ಹೊರಲು ಸಿದ್ಧರಿಲ್ಲದೆ ಅನ್ಯಮಾರ್ಗ ಅನುಸರಿಸಿತು. ಉತ್ತಮ ಫಲಿತಾಂಶ ಬರುವಂತೆ ಮಾಡಲು ಪರೋಕ್ಷವಾಗಿ ಸಾಮೂಹಿಕ ನಕಲು ವ್ಯವಸ್ಥೆಯನ್ನು ಉತ್ತೇಜಿಸಿತು. ಹಾಗಾಗಿಯೆ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆ ಶಾಲಾ ಪರೀಕ್ಷಗಿಂತ ಕಳಪೆ ಮಟ್ಟ ತಲುಪಿತು. ಕೊನೆಗೆ ಸರಕಾರ ಮಾಧ್ಯಮಿಕ ಹಂತದಲ್ಲಿದ್ದ ಪಬ್ಲಿಕ್ ಪರೀಕ್ಷೆಯನ್ನು ರದ್ದು ಮಾಡಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಅಕ್ಷರ ಕಲಿಯದೆ ಮುಂದಿನ ತರಗತಿಗಳಿಗೆ ದಬ್ಬಲಾದ ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ಅಕ್ಷರ ಕಲಿಯುವುದು ದುಸ್ತರವಾಗತೊಡಗಿದೆ. ಕಳಪೆ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರ ಮೇಲೆ ಸರಕಾರ ದೊಣ್ಣೆ ಬೀಸುತ್ತದೆ. ಪ್ರೌಢಶಾಲಾ ಮಟ್ಟದ ಪಠ್ಯಪುಸ್ತಕಗಳ ವಿಷಯ ಗ್ರಹಣ ಮಾಡಲು ಅಗತ್ಯವಾದ ಪೂರ್ವ ಸಿದ್ಧತೆ ಇಲ್ಲದ ವಿದ್ಯಾರ್ಥಿಗಳು ಪಾಸಾಗಲು ನಕಲು ಮಾಡುವುದು ಇಂದು ಅನಿವಾರ್ಯವಾಗಿದೆ. (ಶೋಚನೀಯ ಸಂಗತಿ ಎಂದರೆ ಕೆಲವು ಮಕ್ಕಳು  ನಕಲು ಮಾಡಲು ಅಗತ್ಯವಾದ ಮೂಲಭೂತ ತಿಳುವಳಿಕೆಯನ್ನೂ ಪಡೆಯದವರಿದ್ದಾರೆ.) ಪ್ರೌಢಶಾಲೆಯ ಶಿಕ್ಷಕರು ಕಲಿಕೆ ಇಲ್ಲದ ಮಕ್ಕಳಿಗೆ ಪ್ರಾಥಮಿಕ ಅಥವಾ ಮಾಧ್ಯಮಿಕ ಮಟ್ಟಕ್ಕಿಳಿದು ಶಿಕ್ಷಣ ನೀಡಲು ಸಾಧ್ಯವಿಲ್ಲದಿರುವುದು ಮತ್ತು ಅಂಥ ಮಕ್ಕಳಿಗೆ ಪ್ರೌಢ ಪಠ್ಯ ವಿಷಯಗಳನ್ನು ಅರ್ಥೈಸಲು ಆಗದೆ ಅದರ ದುಷ್ಪರಿಣಾಮವನ್ನು ಅನುಭವಿಸುವ ಹಂತ ತಲುಪಿರುವುದು. ಇಂದು ಸಮುದಾಯ ಪರವಾದ ಮೌಲ್ಯಗಳಿಗಿಂತ ವ್ಯಕ್ತಿ ಪರವಾದ ಮೌಲ್ಯಗಳೇ ನಮ್ಮನ್ನು ಆಳುತ್ತಿರುವ ಸಂದರ್ಭದಲ್ಲಿ ಪ್ರೌಢ ಶಾಲಾ ಶಿಕ್ಷಕರು ಅನಗತ್ಯವಾಗಿ ತಮ್ಮ ಜೀವನದ ಸಲ್ಲದ ಸಂಕಷ್ಟಗಳಿಗೆ ಸಿಲುಕಿಕೊಳ್ಳಲು ಸಾಧ್ಯವಿಲ್ಲ. ಅವರು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡುವ ರಕ್ಷಣಾತ್ಮಕ ನಿಲುವಿನಿಂದ ತಮ್ಮ ಜೀವನವೂ ಸರಕಾರಕ್ಕೆ ಅಗತ್ಯವಾದ ಫಲಿತಾಂಶವೂ ಹೊಮ್ಮಲು ಸಹಕರಿಸುತ್ತಿದ್ದಾರೆ. ಇದರ ಫಲವಾಗಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂತದ ಒಟ್ಟು ಪ್ರಮಾಣ ಶೇಕಡ 75ರ ಬಳಿ ಇದೆ. ವಿದ್ಯಾರ್ಥಿಯ ಉತ್ತಮ ವಿಷಯ ಗ್ರಹಣ ಶಕ್ತಿ, ನೆನಪಿನ ಶಕ್ತಿ, ಮತ್ತು ಸಮರ್ಥ ಅಭಿವ್ಯಕ್ತಿ ಶಕ್ತಿ ಇಲ್ಲದ ನಕಲು ಶಕ್ತಿ ಮಾತ್ರದಿಂದ ಹೊರಬಿದ್ದ ಈ ಉತ್ತಮ ಫಲಿತಾಂಶ ಉತ್ತಮ ಶಿಕ್ಷಣ ಮಟ್ಟದ ಗುರುತೆಂದು ಹೆಮ್ಮ ಪಡಲು ಸಾಧ್ಯವೆ? ಎಸ್ ಎಸ್ ಎಲ್ ಸಿ ಮಟ್ಟದಲ್ಲಿ ನಕಲು ವ್ಯಾಪಕವಾಗಿ ಬೆಳೆದು ಎಳನೆಯ ತರಗತಿಯ ಹಾಗೆ ಈ ಹಂತದಲ್ಲಿರುವ ಈಗಿನ ಪಬ್ಲಿಕ್ ಪರೀಕ್ಷೆ ರದ್ದಾದರೆ ಅಚ್ಚರಿ ಪಡಬೇಕಾದ ಅಗತ್ಯವಿಲ್ಲ.
ನಕಲು ಶಕ್ತಿ ಆಧರಿಸಿ ಕಾಲೇಜು ಮೆಟ್ಟಲು ಹತ್ತಿದ ವಿದ್ಯಾರ್ಥಿಗಳನ್ನು ಪಿಯು ಪರೀಕ್ಷೆಯಲ್ಲಿ ಜರಡಿ ಹಿಡಿಯಲಾಗುತ್ತಿದೆ. ಅದರಿಂದಾಗಿ ಪಿಯು ಫಲಿತಾಂಶ ಶೇಕಡ 40ರ ಬಾಜೂನಲ್ಲಿದೆ. ತಮ್ಮ ಹುಸಿ ಬಲವನ್ನೆ ನಿಜ ಬಲವೆಂದು ನಂಬಿರುವ ವಿದ್ಯಾರ್ಥಿಗಳು ವಾಸ್ತವ ಸತ್ಯದ ಕಟುವನ್ನು ಅರಗಿಸಿಕೊಳ್ಳಲಾಗದ ಸ್ಥಿತಿ ತಲುಪಿದ್ದಾರೆ. ತಮ್ಮನ್ನು ತಾವು ಶೈಕ್ಷಣಿಕವಾಗಿ ಸುಧಾರಿಸಿಕೊಳ್ಳಲಾಗದ ಸ್ಥಿತಿ ತಲುಪಿದ ಘೋರ ಸತ್ಯ ವಿದ್ಯಾರ್ಥಿಗಳಿಗೆ ಗೋಚರವಾದ ಪರಿಣಾಮವಾಗಿ ಪಿಯು ಹಂತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಘಟಿಸಿವೆ.
ಮುಂದೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ರದ್ದಾದರೆ ಪಿಯು ಪರೀಕ್ಷೆ ಸಡಿಲಗೊಳ್ಳುತ್ತದೆ. ಪಿಯು ಪರೀಕ್ಷೆ ರದ್ದಾದರೆ ಸ್ನಾತಕ ಪರೀಕ್ಷೆಗಳ ಮೇಲೆ ಪರಿಣಾಮ ಬೀರುತ್ತದೆ. ತಳಹದಿ ಭದ್ರವಿಲ್ಲದ ದೇಶದ ಶಿಕ್ಷಣ ವ್ಯವಸ್ಥೆಯಿಂದ ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಇದ್ದೇ ಇರುತ್ತದೆ. ಈಗಾಗಲೇ ಹುಸಿ ಸಾಕ್ಷರರು ಉದ್ಯೋಗಸ್ಥರಾಗಿ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.   ಅಕ್ಷರಸ್ಥ ಭಾರತದಲ್ಲಿ ಹುಸಿ ಸಾಕ್ಷರರ ಸಂಖ್ಯೆ ಮುಂದಿನ ದಿನಗಳಲ್ಲಿ ಯಾವ ಬಗೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆಯೋ ನೋಡಬೇಕು.  
ಈ ಸಲದ ಎಸ್ ಎಸ್ ಎಲ್ ಸಿ ಮತ್ತು ಪಿಯು ಫಲಿತಾಂಶಗಳು ನಮ್ಮ ಶಿಕ್ಷಣ ವ್ಯವಸ್ಥೆ ದಿಕ್ಕು ತಪ್ಪಿ ಜನತೆಗೆ ಅಗತ್ಯವಾದ ವಿದ್ಯೆಯನ್ನು ನೀಡುವಲ್ಲಿ ವಿಫಲವಾಗಿರುವ ಸೂಚಿಯಾಗಿದೆ. ಭಾರತದ ಬಹುಸಮುದಾಯಗಳ ನಮ್ಮ ಸಮಾಜದ ಸ್ವರೂಪಕ್ಕೆ ಅನುಗುಣವಾಗಿ ಶಿಕ್ಷಣದ ಅಗತ್ಯಗಳನ್ನು ಗುರುತಿಸಿಕೊಳ್ಳುವ ಅಗತ್ಯವಿದೆ. ಅದಕ್ಕೆ ತಕ್ಕಂತೆ  ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸಿಕೊಳ್ಳಬೇಕಾದ ಜರೂರು ಇದೆ. ಇಲ್ಲದಿದ್ದಲ್ಲಿ ನಮ್ಮ ಸಮಸ್ಯೆಗಳನ್ನು ನಾವು ಬಿಡಿಸಿಕೊಳ್ಳಲಾಗದ ವಿಷಾದದ ಹಂತ ತಲುಪುವುದು ಸುಳ್ಳಲ್ಲ.
     
   

ಭಾನುವಾರ, ಮೇ 8, 2011

ಅನುಭವದ ಮಾತು

ಭಕ್ತರ ಸಮೂಹದಲ್ಲಿ ದೈವ ಮಾನವನೆಂದು ನಂಬಲಾಗಿದ್ದ ಸತ್ಯಸಾಯಿ ಬಾಬಾ ಅವರು ಕಳೆದ ವಾರ ಮರಣ ಹೊಂದಿ ನರಮಾನವರ ಜಗತ್ತನ್ನು ತೊರೆದ ನಂತರ ಕನ್ನಡದ ಕವಿಗಳೂ ಅನುಭಾವಿಗಳೆಂದೂ ಪ್ರಸಿದ್ಧರಾದ ಡಾ. ಎಚ್ .ಎಸ್.ಶಿವಪ್ರಕಾಶ್ ಅವರು ಪ್ರಜಾವಾಣಿಯಲ್ಲಿ 'ಮಹಾತ್ಮರೂ ಮನುಷ್ಯರೂ ಮರ್ತ್ಯರೂ' ಎಂಬ ಹೆಸರಿನ ಲೇಖನವನ್ನು ಅನುಸಂಧಾನ ಅಂಕಣದಲ್ಲಿ ಬರೆದರು. ನಾನು ಬೆಂಗಳೂರಿನಲ್ಲಿದ್ದ 1991ರಿಂದ1996ರ ಕೆಲಕಾಲ ಅವರ ನಿಕಟವರ್ತಿಯಾಗಿದ್ದೆ.  ಆ ಕಾಲಾವಧಿಯಲ್ಲಿ  ಅವರು ನನಗೆ ಹಲವು ಬಗೆಯಲ್ಲಿ ನೆರವು ನೀಡಿದ್ದಾರೆ.ನನ್ನ ಹಲವು ಸಮಸ್ಯೆಯಿಂದ ಹೊರಬರಲು ನನಗವರು ನೈತಿಕ ಸ್ಥೈರ್ಯ ನೀಡಿದ್ದಾರೆ. ಅನುಭಾವದ ಹಾದಿಯಲ್ಲಿ ಕ್ರಮಿಸಬೇಕಾದ ಕ್ರಮವನ್ನು ತಿಳಿಸಿ ಹೇಳಿದ್ದಾರೆ. ಅವರು ದೆಹಲಿಗೆ ಹೋದ ನಂತರ ಅವರೊಂದಿಗೆ ನಿಕಟ ಸಂಪರ್ಕ ಸಾಧ್ಯವಾಗಿಲ್ಲವಾದರೂ ಅವರ ಬಗ್ಗೆ ಗೌರವವಿದೆ. ಅವರ ಈ ಲೇಖನ ಓದಿದ ಮೇಲೆ ಅವರು ಅನುಸರಿಸಿರುವ ಬರೆಹದ ಭಿನ್ನ ಶೈಲಿ, ವಿಧಾನದ ಬಗ್ಗೆ ಬೆರಗಾಗಿದ್ದೇನೆ. ಹಲವು ಸಲ ಅವರ ಈ ಬರೆಹ ನನ್ನ ಮನಸ್ಸಿನಲ್ಲಿ ಸುಸುಳಿ ನೆನಪಿನಲ್ಲಿ ಮೇಲೆದ್ದು ಬಂದಿದೆ. ಒಂದು ವಾರದ ನಂತರ ಇಂದು ಬೆಳಗಿನ ಜಾವ ನನ್ನ ಮನಸ್ಸಿಗೆ ಬಂದ ಸಾಲುಗಳನ್ನು ಸ್ವಲ್ಪ ಹೊತ್ತಿನ ಮುಂಚೆ ಹೀಗೆ ಬರೆದಿಟ್ಟಿದ್ದೇನೆ. ಇದನ್ನು ಸುಮ್ಮನೆ ನಿಮ್ಮ ಮುಂದೆ ಇರಿಸುತ್ತಿದ್ದೇನೆ.
#





ಸಾವಿನ ಹೆದರಿಕೆಯ ನೆರಳಲ್ಲಿ
ಅರಳಿದ ಪರಿಮಳದ ಹೂವೆಂದು
ನಂಬಿಸಿದ ಸಂತರು ಮಹಾತ್ಮರು

ನಂಬಿಕೆಯ ನೀರಲ್ಲಿ ಮುಳುಗಿ
ಆ ನೀರೆ ಹಾಲೆಂದು ನಂಬಿ ಕುಡಿದ
ನರ ಕುನ್ನಿಗಳು ಮನುಷ್ಯರು

ಕ್ರಿಮಿಕೀಟಾದಿ ಸಸ್ಯ ಲೋಕ
ತನ್ನಂತೆ ಜನಮನ ಪ್ರೀತಿಸಿ
ಬೆದರದೆ ಸತ್ತವರು ಮರ್ತ್ಯರು

ಶಿವಪ್ರಕಾಶರ ಆನುಭವದ ವಾಣಿ
ಜಗದ ಕಣ್ಣಲ್ಲಿ ಅನುಭಾವಿ
ತನಗೆ ತಾನೇ ಶಿವಯೋಗಿ